"10 ಸಿನಿಮಾ ಮಾಡಿರೋ ಕಂಗನಾಗೆ ಪದ್ಮಶ್ರೀ.. ನಾವು ಮಾತ್ರ ಲೆಕ್ಕಕ್ಕೇ ಇಲ್ಲ" ನಟಿ ಜಯಸುಧಾ ಬೇಸರ!
ದಕ್ಷಿಣ ಭಾರತದ ಸಿನಿಮಾಗಳು ಇಂಡಿಯನ್ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿವೆ. ನಾಲ್ಕೂ ಭಾಷೆಯಲ್ಲೂ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದ ಸಿನಿಮಾ ಹಾಗೂ ಬಾಲಿವುಡ್ ಸಿನಿಮಾಗಳ ನಡುವೆ ಪೈಪೋಟಿ ನಡೆಯುತ್ತಿದೆ.
ಸಿನಿಪ್ರೇಮಿಗಳು ಭಾಷೆಯ ಭೇದ ಮರೆತು ದಕ್ಷಿಣ ಭಾರತದ ಸಿನಿಮಾಗಳನ್ನೂ ನೋಡುತ್ತಿದ್ದಾರೆ. ಈ ವರ್ಷ ಬಿಡುಗಡೆಯಾದ RRR,'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ', 'ವಿಕ್ರಾಂತ್ ರೋಣ' ಸಿನಿಮಾಗಳೇ ಸಾಕ್ಷಿ. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಬಾಲಿವುಡ್ vs ದಕ್ಷಿಣ ಭಾರತದ ಸಿನಿಮಾದ ಟ್ರೆಂಡ್ ನಡೆಯುತ್ತಿದೆ.
ಕೆಲ ದಕ್ಷಿಣ ಭಾರತದ ಕಲಾವಿದರು ಬಾಲಿವುಡ್ ನಟರಿಗೆ ಸಿಗುತ್ತಿರುವ ಗೌರವ ಬಗ್ಗೆ ಚಕಾರವೆತ್ತುತ್ತಿದ್ದಾರೆ. ಇತ್ತೀಚೆಗೆ ಬಾಲಕೃಷ್ಣ ಟಾಕ್ ಶೋ ಅನ್ಸ್ಟಾಪಬಲ್ ಸೀಸನ್ 2ನಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಜಯಸುಧಾ ಭಾರತದ ಸರ್ಕಾರದ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಕಾರಣವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕಂಗನಾಗೆ ಪದ್ಮಶ್ರೀ.. ನಾವು ಲೆಕ್ಕಕ್ಕಿಲ್ಲ'
ಭಾರತ ಸರ್ಕಾರ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಕಲಾವಿದರ ನಡುವೆ ತಾರತಮ್ಯ ಮಾಡುತ್ತಿದೆ ಎಂದು ಹಿರಿಯ ನಟಿ ಜಯಸುಧಾ ಆರೋಪಿಸಿದ್ದಾರೆ. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರೋ ಜಯಸುಧಾ ಈಗ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಕಂಗನಾಗೆ 10 ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನಾವು ಲೆಕ್ಕಕ್ಕೆ ಇಲ್ಲ ಅಂತ ಭಾರತದ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

ನಟಿ ಜಯಸುಧಾ ಹೇಳಿದ್ದೇನು?
ಇತ್ತೀಚೆಗೆ ಹಿರಿಯ ನಟಿ ಜಯಸುಧಾ ಆಹಾ ಓಟಿಟಿಯಲ್ಲಿ ಪ್ರಸಾರ ಆಗುವ ಅನ್ಸ್ಟಾಪಬಲ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ 'ಲೆಜೆಂಡ್' ನಂದಮುರಿ ಬಾಲಕೃಷ್ಣ ನಡೆಸಿಕೊಡುವ 'ಅನ್ಸ್ಟಾಪಬಲ್' ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಭಾರತದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಕಂಗನಾ ರನೌತ್ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಕ್ಕೆ ನನ್ನ ಅಭ್ಯಂತರವಿಲ್ಲ. ಅವರು ಅದ್ಭುತ ನಟಿ. ಹೀಗಾಗಿ 10 ಸಿನಿಮಾಗಳ ಒಳಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ, ಇಲ್ಲಿ ನಾವು ಹಲವು ಸಿನಿಮಾಗಳಲ್ಲಿ ನಟಿಸಿದ್ದೇವೆ. ಆದರೂ ಭಾರತ ಸರ್ಕಾರ ನಮ್ಮನ್ನು ಗುರುತಿಸುತ್ತಿಲ್ಲ." ಎಂದು ಜಯಸುಧಾ ಹೇಳಿದ್ದಾರೆ.

ಮಹಿಳಾ ನಿರ್ದೇಶಕಿಗೂ ಸಿಕ್ಕಿಲ್ಲ ಗೌರವ
"ಗಿನ್ನಿಸ್ ದಾಖಲೆ ಬರೆದ ಮಹಿಳಾ ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಇಂತಹದ್ದೊಂದು ಪ್ರೋತ್ಸಾಹ ಸಿಕ್ಕಿಲ್ಲ. ಕೆಲವೊಮ್ಮೆ ನನಗೆ ಹೀಗೂ ಅನಿಸುತ್ತೆ. ದಕ್ಷಿಣ ಭಾರತಕ್ಕೆ ಸಿಗಬೇಕಾದ ಪ್ರೋತ್ಸಾಹವನ್ನು ಸರ್ಕಾರ ನೀಡಿಲ್ಲ." ಎಂದು ಹಿರಿಯ ನಟಿ ಜಯಸುಧಾ ಹೇಳಿಕೆ ನೀಡಿದ್ದಾರೆ. ಆಹಾ ಓಟಿಟಿಯಲ್ಲಿ ಬಾಲಕೃಷ್ಣ ನಡೆಸಿಕೊಡುವ ಅನ್ಸ್ಟಾಪಬಲ್ ಟಾಕ್ ಶೋನಲ್ಲಿ ಬಹುಭಾಷಾ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

'ಜಯಸುಧಾ ಮಾತಿಗೆ ಬಾಲಕೃಷ್ಣ ಸಮ್ಮತಿ'
ಜಯಸುಧಾ ಬೇಸರ ವ್ಯಕ್ತಪಡಿಸುತ್ತಿದ್ದಂತೆ ಬಾಲಕೃಷ್ಣ ಕೂಡ ಸಮ್ಮತಿ ನೀಡಿದ್ದಾರೆ. ಜಯಪ್ರಧಾ ಎಂಪಿಯಾಗಿದ್ದಾಗ ಟಾಲಿವುಡ್ನ ಮೇರು ನಟ ಎನ್ಟಿಆರ್ಗೆ ಭಾರತ ರತ್ನ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಾನವಿ ಮಾಡಿಕೊಂಡಿದ್ದರು. ಇಂದಿಗೂ ಮನವಿ ಮಾಡುತ್ತಲೇ ಇದ್ದಾರೆ. ಜಯಸುಧಾ ಅವರ ಈ ವಾದವನ್ನು ನಿರೂಪಕ ಬಾಲಕೃಷ್ಣ ಕೂಡ ಸಮ್ಮತಿಸಿದ್ದು, ದಕ್ಷಿಣ ಭಾರತದ ನಟರನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications










