"OTTಯಲ್ಲಿ ಕನ್ನಡಿಗರೇ ಕನ್ನಡ ಸಿನಿಮಾ ನೋಡುತ್ತಿಲ್ಲ"; ನಿರ್ಮಾಪಕ ಉಮಾಪತಿ ಹೇಳಿದ್ಧೇನು?
ಕಳೆದ ಒಂದು ವರ್ಷದಿಂದ ಕನ್ನಡ ಸಿನಿಮಾಗಳ ನಿರ್ಮಾಪಕರು ಆತಂಕದಲ್ಲಿದ್ದಾರೆ. ಥಿಯೇಟರ್ಗಳಿಗಾಗಿಯೇ ಸಿನಿಮಾ ನಿರ್ಮಾಣ ಮಾಡಿದ್ದರೂ, ಬೇರೆ ಬೇರೆ ರೈಟ್ಸ್ನಿಂದ ನಿರ್ಮಾಪಕ ಜೇಬು ತುಂಬುತ್ತಿತ್ತು. ಇದೇ ಧೈರ್ಯದ ಮೇಲೆ ನಿರ್ಮಾಪಕರು ಕೋಟಿಗಳ ಲೆಕ್ಕದಲ್ಲಿ ಹಣ ಸುರಿದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು.
ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್', 'ಕಾಂತಾರ', 'ವಿಕ್ರಾಂತ್ ರೋಣ', '777 ಚಾರ್ಲಿ' ಬಳಿಕ ಕನ್ನಡ ಸಿನಿಮಾಗಳ ವ್ಯಾಪಾರ ದುಪ್ಪಟ್ಟು ಆಗಬೇಕಿತ್ತು. ಆದರೆ, ದುರಂತ ಅಂದರೆ ಕನ್ನಡ ಸಿನಿಮಾಗಳು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾರಾಟ ಆಗುತ್ತಿಲ್ಲ. ಸ್ಯಾಟಲೈಟ್ ಸೇಲ್ ಆಗುತ್ತಿಲ್ಲ. ಓಟಿಟಿ ವೇದಿಕೆಗಳು ಸಿನಿಮಾವನ್ನು ಖರೀದಿ ಮಾಡುತ್ತಿಲ್ಲ.

ಕಳೆದ ಐದಾರು ತಿಂಗಳಿನಿಂದ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು ಇದೇ ವಿಚಾರದ ಬಗ್ಗೆ ಹಲವು ಬಾರಿ ಆತಂಕ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ, ರಮ್ಯಾ, ಧನಂಜಯ್ ಸೇರಿದಂತೆ ಹಲವರು ಕನ್ನಡ ಸಿನಿಮಾಗಳನ್ನು ಓಟಿಟಿ ವೇದಿಕೆಗಳು ಖರೀದಿ ಮಾಡುತ್ತಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ದರು. ಈಗ 'ಉಪಾಧ್ಯಕ್ಷ' ಸಿನಿಮಾದ ನಿರ್ಮಾಪಕ ಉಮಾಪತಿ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಕನ್ನಡ ಸಿನಿಮಾ ಖರೀದಿ ಮಾಡ್ತಿಲ್ಲ
ಕಳೆದ ಕೆಲವು ತಿಂಗಳುಗಳಿಂದ ಕನ್ನಡ ಸಿನಿಮಾಗಳ ಖರೀದಿಗೆ ಓಟಿಟಿ ವೇದಿಕೆಗಳು ಹಿಂದೇಟು ಹಾಕುತ್ತಿವೆ. ಕನ್ನಡದ ಹೆಚ್ಚು ಸಿನಿಮಾಗಳನ್ನು ಖರೀದಿ ಮಾಡುತ್ತಿದ್ದ ಅಮೆಜಾನ್ ಪ್ರೈಮ್ ಅಂತ ವೇದಿಕೆನೇ ಕನ್ನಡ ಸಿನಿಮಾವನ್ನು ಖರೀದಿ ಮಾಡುವುದನ್ನು ನಿಲ್ಲಿಸಿದೆ. ಇದು ಕನ್ನಡ ನಿರ್ಮಾಪಕ ಆತಂಕಕ್ಕೆ ಕಾರಣವಾಗಿದೆ. ಓಟಿಟಿ ವೇದಿಕೆಗಳಿಂದ ಕನ್ನಡ ನಿರ್ಮಾಪಕರ ಜೇಬು ತುಂಬುತ್ತಿತ್ತು. ಬೇರೊಂದು ಮೂಲದಿಂದ ಬರುತ್ತಿದ್ದ ಹಣ ಕೂಡ ನಿಂತು ಹೋಗಿದೆ.

"ಕನ್ನಡಿಗರೇ ಕನ್ನಡ ಸಿನಿಮಾ ನೋಡುತ್ತಿಲ್ಲ"
'ಉಪಾದ್ಯಕ್ಷ' ನಿರ್ಮಾಪಕ ಉಮಾಪತಿ ಇತ್ತೀಚೆಗೆ ತಮ್ಮ ಸಿನಿಮಾ ಟ್ರೈಲರ್ ಲಾಂಚ್ ಮಾಡಿದ್ದರು. ಈ ವೇಳೆ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಓಟಿಟಿ ವೇದಿಕೆ ಅಮೆಜಾನ್ ಪ್ರೈಂನ ಮುಖ್ಯಸ್ಥರೊಬ್ಬರನ್ನು ಭೇಟಿ ಮಾಡಿದ್ದರು. ಅವರು ಕನ್ನಡಿಗರೇ ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದಾರೆ ಅನ್ನೋ ಅಂಕಿಗಳನ್ನು ಮುಂದಿಟ್ಟಿದ್ದರು. ಈ ವಿಷಯವನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ.
ಉಮಾಪತಿ ಹೇಳಿದ್ದೇನು?
"ಅಮೆಜಾನ್ ಚೀಫ್ ಬೆಂಗಳೂರಿಗೆ ಬಂದಿದ್ದರು. ಅವರು ನನ್ನನ್ನು ಮೀಟ್ ಆದರು. ಆಗ ಅವರು ಒಂದು ಬೇಸರದ ಸಂಗತಿ ಹೇಳಿದ್ರು. ಕನ್ನಡ ಮತ್ತು ಮಲಯಾಳಂ ಎರಡೂ ಇಂಡಸ್ಟ್ರಿಯಲ್ಲಿ ಅಲ್ಲಿನ ಜನರೇ ಸಿನಿಮಾ ನೋಡುತ್ತಿಲ್ಲ. ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಓಟಿಟಿಯಲ್ಲಿ ಕನ್ನಡದವರೇ ಕನ್ನಡ ಸಿನಿಮಾ ನೋಡುತ್ತಿಲ್ಲ ಎಂದು ಹೇಳಿದ್ರು." ಎಂದು ಉಪಾಧ್ಯಕ್ಷ ನಿರ್ಮಾಪಕ ಉಮಾಪತಿ ವೇದಿಕೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಿಷಬ್, ರಮ್ಯಾ ಹೇಳಿದ್ದಿದ್ದೇನು?
ಕಳೆದ ವರ್ಷ ಭಾರತದ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಕೂಡ ಓಟಿಟಿ ವೇದಿಕೆಗಳು ಸಿನಿಮಾ ಖರೀದಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಒಂದು ಕನ್ನಡ ಸಿನಿಮಾದಿಂದ ಹಿನ್ನಡೆಯಾಗಿದ್ದಕ್ಕೆ ಕನ್ನಡ ಸಿನಿಮಾ ಖರೀದಿ ಮಾಡುವುದನ್ನು ನಿಲ್ಲಿಸಬಾರದು ಎಂದಿದ್ದರು. ಹಾಗೇ ರಮ್ಯಾ ನಿರ್ಮಾಣ ಮಾಡಿದ್ದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ಕೂಡ ಓಟಿಟಿ ಖರೀದಿ ಮಾಡಿರಲಿಲ್ಲ.


Click it and Unblock the Notifications











