ರಾಜ ಮಯೂರ ವರ್ಮಾನಾಗಿ 'ಅಪ್ಪು' ಪ್ರತ್ಯಕ್ಷ; ಪವರ್ಸ್ಟಾರ್ ಅಭಿಮಾನಿಗಳ ಮನಗೆದ್ದ 'ಮಾರಿಗಲ್ಲು'
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳು ಹಾಗೂ ಆಪ್ತರನ್ನು ಅಗಲಿದ್ದರೂ ಜನ ಮಾನಸದಿಂದ ಮರೆಯಾಗಿಲ್ಲ. ಪ್ರತಿ ಕ್ಷಣವೂ ಅವರನ್ನು ನೆನಪಿಸುವ ಪ್ರಯತ್ನಗಳು ಆಗುತ್ತಲೇ ಇವೆ. ಅಪ್ಪು ಬರ್ತ್ಡೇ ದಿನ, ಪುಣ್ಯತಿಥಿಯಂದು ಹೀಗೆ ವಿಶೇಷ ದಿನಗಳಂದು ಪವರ್ಸ್ಟಾರ್ ನೆನಪು ಆಗುತ್ತಲೇ ಇರುತ್ತೆ. ಇದೇ ತಿಂಗಳು ಪುನೀತ್ ಪುಣ್ಯತಿಥಿಯಿದ್ದು, ಆ ವೇಳೆ ಅಭಿಮಾನಿಗಳ ಮುಂದೆ ಜೀವಂತವಾಗಿಸುವ ಪ್ರಯತ್ನ ನಡೆಯುತ್ತಿದೆ.
ಎಐ ತಂತ್ರಜ್ಞಾನ ಬಂದ್ಮೇಲೆ ಅಸಾಧ್ಯವಾದದನ್ನು ಸಾಧ್ಯವಾಗುವಂತೆ ಮಾಡುತ್ತಿದೆ. ಪಿಆರ್ಕೆ ಪ್ರೊಡಕ್ಷನ್ ಹಾಗೂ ಜೀ 5 ಜಂಟಿಯಾಗಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅನ್ನು ಅಷ್ಟೇ ಪವರ್ಫುಲ್ ಆಗಿ ಜೀವಂತವಾಗಿಸುವ ಪ್ರಯತ್ನ ಮಾಡಿದೆ. ಈ ಎರಡೂ ಸಂಸ್ಥೆಗಳು ಸೇರಿ ಹೊರತರುತ್ತಿರುವ 'ಮಾರಿಗಲ್ಲು' ವೆಬ್ ಸೀರಿಸ್ನ ಒಂದು ಝಲಕ್ ಅಪ್ಪು ಅಭಿಮಾನಿಗಳ ಮನಗೆದ್ದಿದೆ.

ಈ ಹಿಂದೆನೇ ಪಿಆರ್ಕೆ ಪ್ರೊಡಕ್ಷನ್ಸ್ ಹಾಗೂ ಜೀ 5 ಎರಡೂ ಸಂಸ್ಥೆಗಳು 'ಮಾರಿಗಲ್ಲು' ವೆಬ್ ಸೀರಿಸ್ ಅನ್ನು ಅನೌನ್ಸ್ ಮಾಡಿದ್ದವು. ಆದರೆ, ಈ ಸೀರಿಸ್ನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಜೀವಂತವಾಗಿಸುವ ಪ್ರಯತ್ನದ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಬಿಟ್ಟಿರಲಿಲ್ಲ. ಇತ್ತೀಚೆಗೆ ರಿಲೀಸ್ ಆಗಿರುವ 'ಮಾರಿಗಲ್ಲು' ಟೀಸರ್ ಸಿನಿಪ್ರಿಯರನ್ನು, ಅಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.
'ಮಾರಿಗಲ್ಲು' ವೆಬ್ ಸೀರಿಸ್ ಇದೇ ಅಕ್ಟೋಬರ್ 31ರಂದು ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವಿಶೇಷ ವೆಬ್ ಸೀರಿಸ್ಗೆ ಡಾಲಿ ಧನಂಜಯ್ ನಿರೂಪಣೆ ಮಾಡಿರೋದು ಮತ್ತೊಂದು ಹೈಲೈಟ್. ಟೀಸರ್ ಆರಂಭದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಸೃಷ್ಟಿಸಲಾಗಿದೆ. ಪುನೀತ್ ಎಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಬಿಂಬಿಸಲಾಗಿದೆ.
'ಮಾರಿಗಲ್ಲು' ಟೀಸರ್ನಲ್ಲಿ ಕದಂಬ ರಾಜವಂಶದ ಸ್ಥಾಪಕ ಮತ್ತು ಕರ್ನಾಟಕದ ಮೊದಲ ರಾಜ ಮಯೂರ ವರ್ಮಾನಾಗಿ ಪುನೀತ್ ರಾಜ್ಕುಮಾರ್ ಅನ್ನು ತೋರಿಸಲಾಗಿದೆ. ಸಿಕ್ಸ್ ಪ್ಯಾಕ್ನಲ್ಲಿ ಖಡಕ್ ರಾಜನ ಅವತಾರದಲ್ಲಿ ಅಪ್ಪು ಕಾಣಿಸಿಕೊಂಡಿದ್ದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ 'ಮಾರಿಗಲ್ಲು' ಸೀರಿಸ್ನಲ್ಲಿ ನೋಡಬಹುದು.
ಕನ್ನಡದಲ್ಲಿ ಸದ್ದು ಮಾಡುವುದಕ್ಕೆ ಹೊರಟಿರುವ ಮತ್ತೊಂದು ವೆಬ್ ಸೀರಿಸ್ 'ಮಾರಿಗಲ್ಲು' ಕದಂಬರ ಪ್ರಥಮ ರಾಜನಾದ ಮಯೂರ ವರ್ಮನ ಪರಂಪರೆಯನ್ನು ಹೇಳುವುದಕ್ಕೆ ಹೊರಟಿದೆ. ಕದಂಬರ ಕಾಲದಲ್ಲಿದ್ದ ನಿಧಿ ಹುಡುಕಲು ಹೊರಟಿರುವ ಶಿರಸಿ ಹುಡುಗರ ರೋಚಕ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಇಂತಹ ಹಲವು ಭಾವನೆಗಳನ್ನು ಹೊಂದಿರುವ ಪಾತ್ರಗಳು ಈ ವೆಬ್ ಸರಣಿಯಲ್ಲಿ ಇವೆ. ಈ ವೆಬ್ ಸೀರಿಸ್ನಲ್ಲಿ ಶಿರಸಿಯ ಜನಪ್ರಿಯ ಬೇಡರ ವೇಷ ವೆಬ್ ಸೀರೀಸ್ನಲ್ಲಿ ನೋಡಬಹುದಾಗಿದೆ.
ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿರುವ 'ಮಾರಿಗಲ್ಲು' ವೆಬ್ ಸೀರಿಸ್ನ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ಹಾಗೂ ಪ್ರವೀಣ್ ತೇಜ್ ನಟಿಸಿದ್ದಾರೆ. ಇವರೊಂದಿಗೆ ಜೀ ಕನ್ನಡದ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ, ನಿನಾದ ಹೃತ್ಸಾ ಈ ವೆಬ್ ಸೀರಿಸ್ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಮಾರಿಗಲ್ಲು' ವೆಬ್ ಸೀರಿಸ್ ಅನ್ನು ಪಿಆರ್ಕೆ ವತಿಯಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದು, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
"ಪಿಆರ್ಕೆ ಪ್ರೊಡಕ್ಷನ್ಸ್ನಲ್ಲಿ ಬರುತ್ತಿರುವ ಮಾರಿಗಲ್ಲು ವೆಬ್ ಸೀರಿಸ್ ತುಂಬಾ ವಿಶೇಷವಾಗಿದೆ. ಇದು ಅಪ್ಪು ಅವರ ಕನಸುಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ ಸರಣಿಯ ಜಾಗಕ್ಕೆ ಕೊಂಡೊಯ್ಯಲು ಬಯಸುತ್ತಿದ್ದರು. ನಮ್ಮ ನೆಲದ ಕಥೆಗಳನ್ನು ವೆಬ್ ಸೀರಿಸ್ ಮಾಡುವುದಕ್ಕೆ ಬಯಸಿದ್ದರು. ಮಾರಿಗಲ್ಲು ಮೂಲಕ ಅವರ ಕನಸನ್ನು ಜೀವಂತಗೊಳಿಸಲು ಪ್ರಯತ್ನಿಸಿದ್ದೇವೆ. ಈ ವೆಬ್ ಸೀರಿಸ್ ಭಕ್ತಿ, ರಹಸ್ಯ, ಭಾವುಕತೆಯ ಜೊತೆಗೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಸಾರವನ್ನು ಹೊಂದಿದೆ. ಈ ಕಥೆಯನ್ನು ಹೇಳಲು ಜೀ5 ಜೊತೆ ಸಹಯೋಗ ಮಾಡುವುದು ಇನ್ನಷ್ಟು ಅರ್ಥಪೂರ್ಣ ಎನಿಸುತ್ತದೆ. ಏಕೆಂದರೆ ಅದು ಅಪ್ಪು ನಂಬಿದ್ದನ್ನು ಸಾಕಾರಗೊಳಿಸುತ್ತದೆ." ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
ಹಾಗೇ "ಮಾರಿಗಲ್ಲು ಚಿತ್ರದ ಭಾಗವಾಗಿರುವುದು ಅದ್ಭುತ ಅನುಭವ. ದೈವಿಕ ಸಸ್ಪೆನ್ಸ್ ಮತ್ತು ಆಳವಾದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಸಂಯೋಜಿಸುವ ಕಥೆಯನ್ನು ನೋಡುವುದು ಅಪರೂಪ. ಸರಣಿಯ ಪ್ರತಿಯೊಂದು ಪಾತ್ರವು ಮಾನವೀಯತೆ ಮತ್ತು ಸಂಘರ್ಷದ ಛಾಯೆಗಳನ್ನು ಹೊಂದಿದ್ದು, ಇದು ಅದನ್ನು ತುಂಬಾ ನೈಜವಾಗಿರುತ್ತೆ" ಎಂದು ನಟ ರಂಗಾಯಣ ರಘು ಹೇಳಿದ್ದಾರೆ.
ಇವರೊಂದಿಗೆ "ನಮ್ಮ ಭಾಷೆ ನಮ್ಮ ಕಥೆಗಳು ಎಂಬ ನಮ್ಮ ಭರವಸೆಯಂತೆ, ಮಾರಿಗಲ್ಲು ನಾವು ಇದುವರೆಗೆ ಮಾಡಿದ ವೆಬ್ ಸರಣಿಗಿಂತ ಭಿನ್ನವಾಗಿದೆ. ಕರ್ನಾಟಕದ ದಂತಕಥೆಗಳನ್ನು ನಿಗೂಢ, ಭಾವನಾತ್ಮಕ ಮತ್ತು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದನ್ನು ಜೀವಂತಗೊಳಿಸುವ ಜಾನಪದ ಥ್ರಿಲ್ಲರ್ ಇದು" ಎಂದು ಜೀ5ನ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.


Click it and Unblock the Notifications











