'ಬಾಹುಬಲಿ'ಯ ಕೈ ಬಿಟ್ಟ ನೆಟ್ಫ್ಲಿಕ್ಸ್ನ ಕೈಹಿಡಿದ 'ಮಗಧೀರ'
ನೆಟ್ಫ್ಲಿಕ್ಸ್ನಲ್ಲಿ ವಿದೇಶದ ಹಲವು ಅತ್ಯುತ್ತಮ ವೆಬ್ ಸರಣಿಗಳು ಈಗಾಗಲೇ ಸ್ಟ್ರೀಮ್ ಆಗುತ್ತಿವೆ. ಭಾರತದ ಕೆಲವು ವೆಬ್ ಸರಣಿಗಳೂ ಸಹ ನೆಟ್ಫ್ಲಿಕ್ಸ್ನಲ್ಲಿ ಇವೆಯಾದರೂ 'ಸೇಕ್ರೆಡ್ ಗೇಮ್ಸ್' ಬಳಿಕ ಇನ್ನಾವುದೇ ಭಾರತೀಯ ವೆಬ್ ಸರಣಿ ಜನಪ್ರಿಯಗೊಳ್ಳಲಿಲ್ಲ.
ಭಾರತೀಯ ವೆಬ್ ಸರಣಿಯೊಂದನ್ನು ಲಾಂಚ್ ಮಾಡಲು ನೆಟ್ಫ್ಲಿಕ್ಸ್ ಬಹುವಾಗಿ ಯತ್ನಿಸುತ್ತಲೇ ಇದೆ. ಇದೇ ಕಾರಣಕ್ಕೆ 'ಬಾಹುಬಲಿ' ಸಿನಿಮಾದ ಕತೆಯನ್ನು ಆಧರಿಸಿ ವೆಬ್ ಸರಣಿ ನಿರ್ಮಿಸಲು ಮುಂದಾಯಿತಾದರೂ ಆ ಪ್ರಾಜೆಕ್ಟ್ ಅರ್ಧದಲ್ಲಿಯೇ ನಿಂತು ಹೋಯಿತು. ಕೋಟ್ಯಂತರ ರೂಪಾಯಿ ಹಣವನ್ನು ನೆಟ್ಫ್ಲಿಕ್ಸ್ ಮಣ್ಣುಪಾಲು ಮಾಡಿಕೊಂಡಿತು.
ಮುಂಬೈಗೆ ವಾಸ್ತವ್ಯ ಬದಲಿಸಿದ ರಾಮ್ ಚರಣ್ ತೇಜ: ಕಾರಣ ಬಾಲಿವುಡ್ ಅಲ್ಲ
ಇದೀಗ ನೆಟ್ಫ್ಲಿಕ್ಸ್ ಹೊಸ ವೆಬ್ ಸರಣಿ ನಿರ್ಮಾಣಕ್ಕೆ ಮುಂದಾಗಿದ್ದು ಈ ಬಾರಿ 'ಮಗಧೀರ'ನ ಜೊತೆ ಕೈ ಜೋಡಿಸಿದೆ. ಹೌದು, ತೆಲುಗಿನ ಸ್ಟಾರ್ ನಟ ರಾಮ್ ಚರಣ್ ತೇಜ ಜೊತೆ ಒಪ್ಪಂದ ಮಾಡಿಕೊಳ್ಳಲಿರುವ ನೆಟ್ಫ್ಲಿಕ್ಸ್ ಹೊಸ ವೆಬ್ ಸರಣಿ ಒಂದನ್ನು ನಿರ್ಮಾಣ ಮಾಡುತ್ತಿದೆ.

ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ
ಅಮೆರಿಕದ ಜನಪ್ರಿಯ ವೆಬ್ ಸರಣಿ ಒಂದರ ಹಿಂದಿ ರೀಮೇಕ್ ಅನ್ನು ನೆಟ್ಫ್ಲಿಕ್ಸ್ ನಿರ್ಮಾಣ ಮಾಡಲಿದ್ದು ಈ ವೆಬ್ ಸರಣಿಯ ನಾಯಕ ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಲಿದ್ದಾರೆ. ಇದೇ ವಿಷಯವಾಗಿ ಚರ್ಚಿಸಲೆಂದೇ ಇತ್ತೀಚೆಗೆ ರಾಮ್ ಚರಣ್ ತೇಜ ಮುಂಬೈಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ. ರಾಮ್ ಚರಣ್ ಈ ಹಿಂದೆ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಜೊತೆ 'ಝಂಜೀರ್' ಸಿನಿಮಾದಲ್ಲಿ ರಾಮ್ ಚರಣ್ ತೇಜ ನಟಿಸಿದ್ದರು. ಆ ಸಿನಿಮಾ ಅಷ್ಟೇನೂ ಹಿಟ್ ಆಗಿರಲಿಲ್ಲ.

ಮೊದಲ ಒಟಿಟಿ ಎಂಟ್ರಿ ಆಗಲಿದೆ
ರಾಮ್ ಚರಣ್ ತೇಜ ಈ ವರೆಗೆ ಯಾವುದೇ ಒಟಿಟಿ ಅಥವಾ ಕಿರುತೆರೆ ಶೋಗಳನ್ನು ಸಹ ಮಾಡಿಲ್ಲ. ಒಂದೊಮ್ಮೆ ಈ ಡೀಲ್ ಪಕ್ಕಾ ಆದಲ್ಲಿ ಇದು ಅವರ ಮೊದಲ ಒಟಿಟಿ ಎಂಟ್ರಿ ಆಗಲಿದೆ. ರಾಮ್ ಚರಣ್ ಅವರ ಸಹೋದರಿ ಈಗಾಗಲೇ ಒಟಿಟಿಗಾಗಿ ಕಂಟೆಂಟ್ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ರಾಮ್ ಚರಣ್ ಹಾಗೂ ಅವರ ಸಹೋದರಿ ಒಟ್ಟಿಗೆ ನೆಟ್ಫ್ಲಿಕ್ಸ್ ಜೊತೆಗೆ ಮಾತುಕತೆಯಲ್ಲಿ ನಿರತರಾಗಿದ್ದಾರೆ.

'RRR' ಸಿನಿಮಾದ ಮೇಲೆ ಭಾರಿ ನಿರೀಕ್ಷೆ
ರಾಮ್ ಚರಣ್ ತೇಜ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರಾದರೂ ಅವರನ್ನು ಪೂರ್ಣ ಪ್ರಮಾಣದ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಒಪ್ಪಲಾಗಿಲ್ಲ. ಆದರೆ ಅವರ ನಟನೆಯ 'RRR' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಆ ಸಿನಿಮಾ ಬಳಿಕ ಅವರ ಖ್ಯಾತಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಬ್ಬಲಿದೆ ಹಾಗಾಗಿ ಈಗಲೇ ನೆಟ್ಫ್ಲಿಕ್ಸ್ನವರು ರಾಮ್ ಚರಣ್ ಜೊತೆ ಒಪ್ಪಂದಕ್ಕೆ ಕೂತಿದ್ದಾರೆ.

ಎರಡು ಸಿನಿಮಾ ಬಿಡುಗಡೆಗೆ ರೆಡಿ
ರಾಮ್ ಚರಣ್, ಜೂ ಎನ್ಟಿಆರ್, ಆಲಿಯಾ, ಅಜಯ್ ದೇವಗನ್ ನಟಿಸಿ ರಾಜಮೌಳಿ ನಿರ್ದೇಶಿಸಿರುವ 'RRR' ಸಿನಿಮಾ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ. ಇದರ ಜೊತೆಗೆ ರಾಮ್ ಚರಣ್ ತಮ್ಮ ತಂದೆ ಚಿರಂಜೀವಿ ಜೊತೆ ನಟಿಸಿರುವ 'ಆಚಾರ್ಯ' ಸಿನಿಮಾ ಸಹ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. 'ಆಚಾರ್ಯ' ಸಿನಿಮಾಕ್ಕೆ ಬಂಡವಾಳ ಸಹ ರಾಮ್ ಚರಣ್ ಅವರದ್ದೇ. ಇವುಗಳ ಜೊತೆಗೆ ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ ತೇಜ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ.


Click it and Unblock the Notifications











