ಈ ಮರ್ಡರ್ ಮಿಸ್ಟ್ರಿಯಲ್ಲಿ ವಿಕ್ರಮ್ ರವಿಚಂದ್ರನ್ ಮಾಡರ್ನ್ ರಾವಣ: "ಕ್ಲೈಮ್ಯಾಕ್ಸ್ ಮಿಸ್ ಮಾಡ್ಬೇಡಿ""
ಇದು ವೆಬ್ ಸೀರಿಸ್ಗಳ ಜಮಾನ. ಇತ್ತೀಚೆಗೆ ಸಿನಿಮಾಗಳಿಗಿಂತ ವೆಬ್ ಸೀರಿಸ್ ಅನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಓಟಿಟಿ ಸಂಸ್ಥೆಗಳು ಎಲ್ಲಾ ಪ್ರಮುಖ ಭಾಷೆಯಲ್ಲೂ ವೆಬ್ ಸೀರಿಸ್ ಅನ್ನು ಆರಂಭಿಸಿವೆ. ಆದರೆ, ಕನ್ನಡದಲ್ಲಿ ಮಾತ್ರ ಈ ಸಾಹಸಕ್ಕೆ ಕೈ ಹಾಕಿಲ್ಲ. ಆದ್ರೀಗ ಅದೂ ನೆರವೇರುತ್ತಿದೆ.
ಕೊನೆಗೂ ಕನ್ನಡದಲ್ಲೊಂದು ಥ್ರಿಲ್ಲರ್ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಕಾಳಿ ವೇಲಾಯುಧಂ 'ಲವ್ ಯು ಅಭಿ' ಅನ್ನೋ ವೆಬ್ ಸೀರಿಸ್ ಅನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ಇದು Jio Cinemaದಲ್ಲಿ ಬಿಡುಗಡೆಯಾಗುತ್ತಿದೆ. ಈ ಒರಿಜಿನಲ್ ವೆಬ್ ಸೀರಿಸ್ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್ ಹಾಗೂ ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಲವ್ ಯು ಅಭಿ' ಕನ್ನಡ ವೆಬ್ ಸೀರಿಸ್ನಲ್ಲಿ ಅಂತಹದ್ದೇನಿದೆ? ಇದರ ಕಥೆಯೇನು? ಇಷ್ಟೊಂದು ಕಾಂಪಿಟೇಷನ್ ಇರುವಾಗ ಕನ್ನಡದ ಈ ವೆಬ್ ಸೀರಿಸ್ ಹೇಗೆ ವಿಭಿನ್ನವಾಗಿ ನಿಲ್ಲುತ್ತೆ? ಅನ್ನೋ ಬಗ್ಗೆ ನಿರ್ದೇಶಕ ಕಾಳಿ ವೇಲಾಯುಧಂ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.
ವೆಬ್ ಸೀರಿಸ್ನಲ್ಲಿ ವಿಕ್ರಮ್ ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ಗೆ 'ಲವ್ ಯು ಅಭಿ' ಮೊದಲ ವೆಬ್ ಸೀರಿಸ್. ಹಾಗೇ ಅದಿತಿ ಪ್ರಭುದೇವ ಕೂಡ ಇದು ಮೊದಲ ವೆಬ್ ಸೀರಿಸ್. ಇವರಿಬ್ಬರ ಕಾಂಬಿನೇಷನ್ ತೀರಾ ಹೊಸತು. ಹೀಗಾಗಿ ಎರಡು ಪಾತ್ರಗಳ ಆಯ್ಕೆ ಹೇಗಾಯ್ತು? ಅನ್ನೋದನ್ನು ನಿರ್ದೇಶಕರೇ ವಿವರಿಸಿದ್ದಾರೆ.
"ರಾವಣ ಒಳ್ಳೆಯ ವ್ಯಕ್ತಿ. ಆದರೆ, ತುಂಬಾನೇ ಅಹಂಕಾರ, ಅವನೊಬ್ಬ ಎಸ್ಕೇಪಿಸ್ಟ್. ಕೋಪ ಕೂಡ ಜಾಸ್ತಿ. ಹೀರೊ ಪಾತ್ರದಲ್ಲಿ ಇಂತಹ ಗುಣಗಳಿವೆ. ಈ ಪಾತ್ರಕ್ಕೆ ವಿಕ್ರಮ್ ರವಿಚಂದ್ರನ್ ಸೂಕ್ತ ವ್ಯಕ್ತಿ ಅಂತ ಅನಿಸಿತ್ತು. ಈ ಸೀರಿಸ್ ನೋಡಿದಾಗ ನಿಮಗೂ ಹಾಗೇ ಅನಿಸುತ್ತೆ." ಎನ್ನುತ್ತಾರೆ ನಿರ್ದೇಶಕ ಕಾಳಿ ವೇಲಾಯುಧಮ್.

"ಕ್ಲೈಮ್ಯಾಕ್ಸ್ ಮಿಸ್ ಮಾಡ್ವೇಡಿ"
'ಲವ್ ಯು ಅಭಿ' ವೆಬ್ ಸೀರಿಸ್ನಲ್ಲಿ ಪ್ರೇಮ, ವಿರಹ, ಕೊಲೆ, ತನಿಖೆ ಇವೆಲ್ಲವೂ ಇವೆ. ವೀಕ್ಷಕರನ್ನು ಈ ಎಲ್ಲಾ ಎಲಿಮೆಂಟ್ಸ್ ಹಿಡಿತ್ತವೆ. ಆದರೆ, ಕ್ಲೈಮ್ಯಾಕ್ಸ್ ಈ ಸೀರಿಸ್ನ ಹೈಲೈಟ್ ಎಂದು ನಿರ್ದೇಶಕರು ಹೇಳುತ್ತಾರೆ.
"ಯಾರು ಕ್ಲೈಮ್ಯಾಕ್ಸ್ ಅನ್ನು ಯಾರು ಮಿಸ್ ಮಾಡಿಕೊಳ್ಳಬಾರದು. ನನಗೆ ಇದೊಂದು ಅದ್ಭುತ ಕ್ಲೈಮ್ಯಾಕ್ಸ್ ಅಂತ ಅನಿಸುತ್ತಿದೆ. ಈ ಕಾರಣಕ್ಕೆ ಯಾರೂ ಕ್ಲೈಮ್ಯಾಕ್ಸ್ ಅನ್ನು ಮಿಸ್ ಮಾಡಿಕೊಳ್ಳಬೇಡಿ ಅಂತ ಹೇಳುತ್ತೇನೆ" ಎಂದು ಕಾಳಿ ವೇಲಾಯುಧಂ ಫಿಲ್ಮಿಬೀಟ್ಗೆ ಹೇಳಿದ್ದಾರೆ.
ಸಂಗೀತ ಹಾಗೂ ನಟನೆಯೇ ಡಿಫ್ರೆಂಟ್
ಒಂದು ಸಾವಿನ ಸುತ್ತ ನಡೆಯುವ ಕಥೆ. ಹಾಗಂತ ತನಿಖೆಗೆ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ದಾಂಪತ್ಯದ ಮಧುರ ಕ್ಷಣಗಳು, ಪ್ರೇಮದ ವ್ಯಾಮೋಹ, ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲವೂ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪಾತ್ರಧಾರಿಗಳ ಅಭಿನಯ ಅದಕ್ಕೆ ತಕ್ಕಂತೆ ಮ್ಯೂಸಿಕ್ ಅನ್ನು ಅಳವಡಿಸಲಾಗಿದೆ. ಮೂವತ್ತು ನಿಮಿಷಗಳ ಏಳು ಎಪಿಸೋಡ್ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.
"ಈ ವೆಬ್ ಸೀರಿಸ್ನಲ್ಲಿ ಎರಡು ವಿಷಯಗಳ ಬಗ್ಗೆ ತುಂಬಾನೇ ಗಮನ ಹರಿಸಿದ್ದೇವೆ. ಒಂದು ಮ್ಯೂಸಿಕ್. ಇನ್ನೊಂದು ಪಾತ್ರಧಾರಿಗಳ ಪರ್ಫಾಮೆನ್ಸ್. ಒಂದೊಂದು ಪಾತ್ರಗಳಿಗೂ ವಿಭಿನ್ನ ಮ್ಯೂಸಿಕ್ ಬಳಸಲಾಗಿದೆ. ನೀವು ಮ್ಯೂಟ್ ಮಾಡಿ ವೆಬ್ ಸೀರಿಸ್ ನೋಡಿದರೆ, ಪಾತ್ರಧಾರಿಗಳ ಭಾವನೆಗಳು ಬೇರೆನೇ ಇದೆಯಲ್ಲ ಅಂತ ಅನಿಸುತ್ತೆ. ಇವು ನಿಮ್ಮನ್ನು ಕಾಡದೇ ಇರುವುದಿಲ್ಲ." ಎಂದು ನಿರ್ದೇಶಕ ಕಾಳಿ ವೇಲಾಯುಧಮ್ ಹೇಳುತ್ತಾರೆ.
"ಇದೊಂದು ಮರ್ಡರ್ ಮಿಸ್ಟರಿ ಸ್ಟೋರಿ"
'ಲವ್ ಯು ಅಭಿ' ಸಿನಿಮಾ ಹೊಸ ಬಗೆಯ ಸಿನಿಮಾ. ಈ ಮರ್ಡರ್ ಮಿಸ್ಟರಿ ಸ್ಟೋರಿ ವೀಕ್ಷಕರಿಗೆ ಇಷ್ಟ ಆಗಲಿದೆ ಅನ್ನೋ ಭರವಸೆ ತಂಡದ್ದು. "ಇದೊಂದು ಮರ್ಡರ್ ಮಿಸ್ಟರಿ ಸ್ಟೋರಿನೇ.. ಥ್ರಿಲ್ಲಿಂಗ್ ಆಗಿರುತ್ತೆ. ಆದರೆ, ನಮ್ಮ ಅಪ್ರೋಚ್ ಮಾರ್ಡರ್ ಮಾಡಿದವನನ್ನು ಹುಡುಕುವುದಕ್ಕಿಂತ ಹೆಚ್ಚಾಗಿ, ಆ ಪಾತ್ರದ ವರ್ತನೆಗಳು ಹೇಗೆ ಕ್ಷಣಕ್ಕೂ ಬದಲಾಗುತ್ತವೆ ಅನ್ನೋದನ್ನು ತೋರಿಸುತ್ತಿದ್ದೇವೆ. ಅದು, ವೀಕ್ಷಕರಿಗೆ ವಿಶಿಷ್ಟ ಅನುಭವ ನೀಡಲಿದೆ." ಎನ್ನುತ್ತಾರೆ ಕಾಳಿ ವೇಲಾಯುಧಮ್.
ಇನ್ನು ವಿಕ್ರಮ್ ರವಿಚಂದ್ರನ್, ಅದಿತಿ ಪ್ರಭುದೇವ ಜೊತೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ ರಾಜ್ ನಟಿಸಿದ್ದಾರೆ. ಮೇ 19ರಿಂದ ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಲು ಸಿಗಿದೆ.


Click it and Unblock the Notifications











