Good Bad Ugly Review: ಅಜಿತ್ ಓಕೆ.. ಆಕ್ಷನ್ ಓಕೆ.. ವಿಡಾಮುಯಾರ್ಚಿ ಸೋಲಿ ಕಹಿ ಮರೆಸಬಲ್ಲದೇ?
ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿದ ಮತ್ತೊಂದು ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ' ಇಂದು (ಏಪ್ರಿಲ್ 10) ರಿಲೀಸ್ ಆಗಿದೆ. ಈ ಹಿಂದೆ ಇವರೇ ನಟಿಸಿದ್ದ 'ವಿಡಾಮುಯಾರ್ಚಿ' ಸಿನಿಮಾ ಅವರ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ನಿರಾಸೆಯನ್ನು ಮಾಡಿತ್ತು. ಹೀಗಾಗಿ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಗೆಲ್ಲಬಹುದೆಂದು ಅವರ ಫ್ಯಾನ್ಸ್ ನಿರೀಕ್ಷೆಯಲ್ಲಿದ್ದರು. ಅದಕ್ಕೀಗ ತಾರ್ಕಿಕ ಉತ್ತರ ಸಿಕ್ಕಿದೆ.
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ಅಜಿತ್ ಕುಮಾರ್ ಅವರ ಅಪ್ಪಟ ಅಭಿಮಾನಿ ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಹೀಗಾಗಿ ಅಜಿತ್ ಫ್ಯಾನ್ಸ್ ಪಕ್ಕಾ ಕಮರ್ಷಿಯಲ್ ಮಾಸ್ ಸಿನಿಮಾವನ್ನು ನಿರೀಕ್ಷೆ ಮಾಡಿದ್ದರು. ಈಗಾಗಲೇ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೊರ ಬಂದಿದ್ದಾರೆ. ಎಲ್ಲಾ ಕಡೆಗೂ ಸಿನಿಮಾ ಟಾಕ್ ಶುರುವಾಗಿದೆ.

'ವಿಡಾಮುಯಾರ್ಚಿ' ಬಳಿಕ ಅಜಿತ್ ಕುಮಾರ್ ಜೊತೆ ಮತ್ತೆ ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಅರ್ಜುನ್ ದಾಸ್, ಸುನಿಲ್, ಜಾಕಿ ಶ್ರಾಫ್, ಸಯಾಜಿ ಶಿಂಧೆ, ಟಿನು ಆನಂದ್, ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್, ಯೋಗಿ ಬಾಬು ಸೇರಿದಂತೆ ಹಲವು ಮಂದಿ ದೊಡ್ಡ ಕಲಾವಿದರೇ ಇದ್ದಾರೆ. ಹಾಗಿದ್ದರೆ, 'ಗುಡ್ ಬ್ಯಾಡ್ ಅಗ್ಲಿ' ಹೇಗಿದೆ? ಸಿನಿಮಾ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ನೋಡೋಣ ಬನ್ನಿ.
'ಗುಡ್ ಬ್ಯಾಡ್ ಅಗ್ಲಿ' ಕತೆಯೇನು?
ಅಜಿತ್ ಕುಮಾರ್ ಬಿಗ್ ಗ್ಯಾಂಗ್ಸ್ಟರ್. ಒಂದು ದಿನ ತನ್ನ ಕುಟುಂಬಕ್ಕಾಗಿ, ಪತ್ನಿ ರಮ್ಯಾ (ತ್ರಿಶಾ)ಗಾಗಿ ತನ್ನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವ ನಿರ್ಧಾರಕ್ಕೆ ಬರುತ್ತಾನೆ. ಹೀಗಾಗಿ ಪೊಲೀಸರಿಗೆ ಶರಣಾಗಿ ತಾನು ಮಾಡಿದ ತಪ್ಪುಗಳುಗೆ ಶಿಕ್ಷೆಯನ್ನೂ ಅನುಭವಿಸುತ್ತಾನೆ. ಆದರೆ, ಇಲ್ಲಿಗೆ ಎಲ್ಲವೂ ನಿಲ್ಲುವುದಿಲ್ಲ. ಈಗ ಗ್ಯಾಂಗ್ಸ್ಟಾರ್ ಅಲ್ಲದೇ ಇದ್ದರೂ, ಹಿಂದೆ ಮಾಡಿದ ತಪ್ಪುಗಳು ದ್ವೇಷವಾಗಿ ಬದಲಾಗಿರುತ್ತೆ. ಆಗ ಈತನ ಪುತ್ರ ದೊಡ್ಡ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾನೆ. ಅಲ್ಲಿಂದ ಮತ್ತೆ ಗ್ಯಾಂಗ್ಸ್ಟರ್ ಆಗಿ ಬದಲಾಗುವ ಅಜಿತ್, ತನ್ನ ಮಗನನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಒಂದೆಳೆ ಕಥೆ.
ಪರ್ಫಾಮೆನ್ಸ್ ಹೇಗಿದೆ?
'ವಿಡಾಮುಯಾರ್ಚಿ' ಸಿನಿಮಾ ನೋಡಿ ಗರಂ ಆಗಿದ್ದ ಅಜಿತ್ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಅಜಿತ್ ಕುಮಾರ್ ಅವರ ನಿರೀಕ್ಷೆಯಂತೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ಸ್ಟರ್ ಲುಕ್ನಲ್ಲಿ ಅಜಿತ್ ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಇನ್ನು ತ್ರಿಶಾಗೆ ಈ ಸಿನಿಮಾ ಹೆಚ್ಚಿನ ಸ್ಕೋಪ್ ಇಲ್ಲ. ಕಡಿಮೆ ಸ್ಕ್ರಿನ್ ಸ್ಪೇಸ್ ಇದ್ದರೂ ಗಮನ ಸೆಳೆಯುತ್ತಾರೆ. ಇಲ್ಲಿ ನಟ ಸುನೀಲ್ಗೆ ಹೆಚ್ಚು ಸೀನ್ಗಳನ್ನು ನೀಡಲಾಗಿದ್ದು, ಈ ಪಾತ್ರ ಕೂಡ ಇಷ್ಟ ಆಗುತ್ತದೆ. ಇನ್ನು ವಿಲನ್ ಆಗಿ ಕಾಣಿಸಿಕೊಂಡಿರುವ ಅರ್ಜುನ್ ದಾಸ್ ಮತ್ತಷ್ಟು ಪವರ್ಫುಲ್ ಆಗಿ ಕಾಣಿಸಿಕೊಳ್ಳಬೇಕಿತ್ತು ಅಂತ ಅನಿಸುತ್ತೆ. ಜಾಕಿ ಶ್ರಾಫ್ ಹಾಗೂ ಟಿನು ಆನಂದ್ ಅವರ ಅಭಿನಯದ ಬಗ್ಗೆ ದೂಸ್ರಾ ಮಾತೇ ಇಲ್ಲ. ಇನ್ನು ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ.
ನಿರ್ದೇಶನಕ್ಕೆ ಎಷ್ಟು ಮಾರ್ಕ್ಸ್?
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಧಿಕ್ ರವಿಚಂದ್ರನ್. ಅಪ್ಪಟ ಅಜಿತ್ ಕುಮಾರ್ ಅಭಿಮಾನಿಯಾಗಿದ್ದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿತ್ತು. ಅಲ್ಲದೆ 'ಪುಷ್ಪ 2' ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದರಿಂದ ಅಜಿತ್ಗೆ ಮತ್ತೆ ದೊಡ್ಡ ಸಕ್ಸಸ್ ಸಿಗಬಹುದೆಂದು ಗೆಸ್ ಮಾಡಲಾಗಿತ್ತು. ಅದನ್ನು ಅಧಿಕ್ ರವಿಚಂದ್ರನ್ ಹುಸಿಗೊಳಿಸಿದ್ದಾರೆ. ಹಳೆ ಕಥೆಯನ್ನೇ ವೈಭವೀಕರಿಸಿ ಹೇಳುವುದಕ್ಕೆ ಹೊರಟಿದ್ದಾರೆ. ಕತೆಯಲ್ಲಿ ಧಮ್ ಇಲ್ಲ. ಇನ್ನು ಸ್ಕ್ರೀನ್ ಪ್ಲೇಯಾದರೂ ಅದ್ಭುತವಾಗಿದ್ದರೆ, ಸಿನಿಮಾ ಗೆಲ್ಲುತ್ತಿತ್ತೋ ಏನೋ? ಅಜಿತ್ ಅಂತಹ ಸೂಪರ್ ಸ್ಟಾರ್ ಇಟ್ಟುಕೊಂಡು ನಿರ್ದೇಶಕ ಅಧಿಕ್ ರವಿಚಂದ್ರನ್ ಸೋತಿದ್ದಾರೆ.
ತಂತ್ರಜ್ಞಾನದ ಕಥೆಯೇನು?
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದ ಹಿನ್ನೆಲೆ ಸಂಗೀತ ಚೆನ್ನಾಗಿಲ್ಲ. ಅಜಿತ್ ಕುಮಾರ್ ಬಿಲ್ಡಪ್ ಸೀನ್ಗಳಲ್ಲಿ ಹಿನ್ನೆಲೆ ಸಂಗೀತ ಮೋಡಿ ಮಾಡಿಲ್ಲ. ಆಕ್ಷನ್ ಸೀನ್ಗಳಲ್ಲೂ ಹಿನ್ನೆಲೆ ಸಂಗೀತದ ಕತೆ ಇದೇನೆ. ಇನ್ನು ಸಿನಿಮಾದ ಹೈಲೈಟ್ ಅಂದರೆ, ಛಾಯಾಗ್ರಹಣ. ಅಜಿತ್ ಕುಮಾರ್ ಬಿಲ್ಡಪ್ ಸೀನ್ಗಳು, ಆಕ್ಷನ್ ಅನ್ನು ಅದ್ಭುತವಾಗಿ ಶೂಟ್ ಮಾಡಲಾಗಿದೆ. ಇನ್ನೂ ಸ್ಕ್ರೀನ್ಪ್ಲೇ ಅದ್ಭುತವಾಗಿಲ್ಲ. ಹಾಗೇ ಡೈಲಾಗ್ಗಳು ಮ್ಯಾನರಿಸಂಗೆ ತಕ್ಕಂತೆ ಪಂಚ್ ಕೊಡುವುದಿಲ್ಲ. ಜಿವಿ ಪ್ರಕಾಶ್ ಕುಮಾರ್ ಕಂಪೋಸ್ ಮಾಡಿದ ಹಾಡುಗಳು ಇಷ್ಟ ಆಗುವುದಿಲ್ಲ.

ಪ್ಲಸ್ ಏನು?
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ಇಷ್ಟ ಆಗುವುದು ಅಜಿತ್.. ಅಜಿತ್.. ಅಜಿತ್ ಮಾತ್ರ. ಇದರೊಂದಿಗೆ ಸಿನಿಮಾ ಆಕ್ಷನ್ ಸೀನ್ಗಳು, ಕ್ಯಾಮರಾ ವರ್ಕ್ ಇಷ್ಟ ಆಗುತ್ತೆ. ಅದು ಬಿಟ್ಟರೆ, ಅದ್ಭುತ ಅನ್ನುವಂತಹದ್ದನ್ನು ಏನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ.
ಮೈನಸ್ ಏನು?
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ಸಾಕಷ್ಟು ಮೈನಸ್ ಪಾಯಿಂಟ್ಗಳು ಸಿಗುತ್ತವೆ. ಅದರಲ್ಲಿ ಕಥೆ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತೆ. ಚಿತ್ರಕಥೆ ಮಜ ಕೊಡುವುದಿಲ್ಲ. ಡೈಲಾಗ್ನಲ್ಲಿ ಕಿಕ್ ಇಲ್ಲ. ಹಿನ್ನೆಲೆ ಸಂಗೀತ ಸಿನಿಮಾವನ್ನು ಹಿಡಿದಿಡುವುದಿಲ್ಲ. ಸಿನಿಮಾ ಪ್ರೇಕ್ಷಕನಿಗೆ ಎಮೋಷನಲ್ ಆಗಿ ಕನೆಕ್ಟ್ ಆಗುವುದಿಲ್ಲ.
ಕೊನೆಯಲ್ಲಿ...?
ಅಜಿತ್ ಕುಮಾರ್ ನಟಿಸಿದ 'ಗುಡ್ ಬ್ಯಾಡ್ ಅಗ್ಲಿ' ತೆರೆಮೇಲೆ ಶ್ರೀಮಂತವಾಗಿ ಕಾಣಿಸುತ್ತೆ. ಆದರೆ, ಸಿನಿಮಾದೊಳಗೆ ಇನೂ ಇಲ್ಲ ಅಂತ ಅನಿಸುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಮೊದಲಾರ್ಥಕ್ಕಿಂತ ದ್ವಿತೀಯಾರ್ಥ ಉತ್ತಮ ಅಂತ ಹೇಳಬಹುದು. ಯಾಕಂದ್ರೆ, ಫಸ್ಟ್ ಹಾಫ್ನಲ್ಲಿ ಬರೀ ಬಿಲ್ಡಪ್ ಸೀನ್ಗಳಿಗೆ ಹೆಚ್ಚು ಗಮನ ಹರಿಸಲಾಗಿದೆ. ಇಲ್ಲಿ ನಿರ್ದೇಶಕರು ಅಜಿತ್ ಕುಮಾರ್ ಅವರ ಸ್ಟಾರ್ಡಮ್ ಹೆಚ್ಚು ಡಿಪೆಂಡ್ ಆಗಿದ್ದಾರೆ ಅನ್ನೋದು ಸುಲಭವಾಗಿ ಗುರುತಿಸಬಹುದು.
ಇದೂವರೆಗೂ ನಿರ್ಮಾಣ ಆಗಿರುವ ಸೂಪರ್ ಹಿಟ್ ಗ್ಯಾಂಗ್ಸ್ಟರ್ ಸಿನಿಮಾಗಳಲ್ಲಿ ಎಮೋಷನಲ್ ಎಲಿಮೆಂಟ್ಸ್ ಹೈಲೈಟ್ ಆಗಿವೆ. ಎಷ್ಟೇ ಹಿಂಸೆಗಳು ಇದ್ದರೂ, ಜನರನ್ನು ಕೊನೆಯಲ್ಲಿ ಕನೆಕ್ಟ್ ಮಾಡಿದ್ದು ಭಾವನಾತ್ಮಕ ಸನ್ನಿವೇಶಗಳೇ. ಇಲ್ಲಿ ಪ್ರಮುಖವಾಗಿ ಮಿಸ್ ಆಗಿದ್ದು ಅದೇ. ಕುಟುಂಬದಿಂದ ದೂರವಿದ್ದು, ಎಷ್ಟೋ ವರ್ಷಗಳಾದ್ಮೇಲೆ ಕುಟುಂಬವನ್ನು ಸೇರಿಕೊಳ್ಳುವ ದೃಶ್ಯದಲ್ಲಿ ಭಾವನೆಗಳು ಮಿಸ್ಸಿಂಗ್ ಅಂತ ಅನಿಸುತ್ತವೆ. ಕೊನೆಯ ಪಕ್ಷ ಇಂಟರ್ವಲ್ನಲ್ಲಿ ಕೊಟ್ಟಿರುವ ಟ್ವಿಸ್ಟ್ ಅನ್ನು ಹಾಗೇ ಕುತೂಹಲದಲ್ಲಿ ಇಟ್ಟುಕೊಂಡು ಮುಂದೆ ಸಾಗಬಹುದಿತ್ತು. ಅದೂ ಆಗಿಲ್ಲ. ಒಟ್ಟಿನಲ್ಲಿ ಈ ಸಿನಿಮಾವನ್ನು ಅಜಿತ್ ಅಭಿಮಾನಿಗಳು ಎಂಜಾಯ್ ಮಾಡಬಹುದೇನೋ? ಆದರೆ, ಕಾಮನ್ ಆಡಿಯನ್ಸ್ಗೆ ಸಿನಿಮಾ ಬೋರ್ ಹೊಡೆಸುತ್ತೆ.
ಈ ಸಿನಿಮಾಗೆ ನಿರ್ಮಾಣ ಸಂಸ್ಥೆ ಸಿಕ್ಕಾಪಟ್ಟೆ ಖರ್ಚು ಮಾಡಿದೆ. ಅದು ಪರದೆಯ ಮೇಲೆ ಎದ್ದು ಕಾಣಿಸುತ್ತೆ. ಆದರೆ, ಅದಕ್ಕೆ ತಕ್ಕಂತೆ ಕ್ರಿಯೆಟಿವ್ ವರ್ಕ್ ಕಾಣುವುದಿಲ್ಲ. ಸಿನಿಮಾದ ಒಂದೆರಡು ಡಿಪಾರ್ಟ್ಮೆಂಟ್ ಬಿಟ್ಟರೆ, ಮತ್ತೆ ಎಲ್ಲಾ ವಿಭಾಗದಲ್ಲೂ ಸಾಕಷ್ಟು ನ್ಯೂನ್ಯತೆಯನ್ನು ಕಾಣಬಹುದು. ಇಡೀ ಸಿನಿಮಾವನ್ನು ಅಜಿತ್ ಒಬ್ಬರೇ ಎಷ್ಟು ದೂರದವರೆಗೂ ಹೊತ್ತುಕೊಂಡು ಹೋಗುವುದಕ್ಕೆ ಸಾಧ್ಯ? ಪ್ರೇಕ್ಷಕರಿಗೆ ಇದು ಅರ್ಧ ಆಗುವುದಕ್ಕೆ ಹೆಚ್ಚು ಸಮಯ ಹಿಡಿಯೋದಿಲ್ಲ. ಅದೇ ವಿಪರ್ಯಾಸ.


Click it and Unblock the Notifications











