ಅರ್ಜುನ್ ಸರ್ಜಾ ನಿರ್ದೇಶಿಸಿದ 'ಸೀತಾ ಪಯಣ' ಮೊದಲ ವಿಮರ್ಶೆ ಹೇಗಿದೆ?
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾ ಅರ್ಜುನ್ಗಾಗಿ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇವರದ್ದೇ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಕೂಡ ಆಗಿದೆ. ಅದುವೇ 'ಸೀತಾ ಪಯಣ'. ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ, ಒಂದ್ಕಡೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ನಾಯಕಿಯಾಗಿದ್ದರೆ, ಇನ್ನೊಂದು ಕಡೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದ್ದಾರೆ.
ಈ ಸಿನಿಮಾ ಇದೇ ಪ್ರೇಮಿಗಳ ದಿನದಂದು ತೆರೆಗೆ ಬರಲಿದೆ. ಅರ್ಜುನ್ ಸರ್ಜಾ ಈ ಸಿನಿಮಾದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಲ್ಲದೆ, ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

'ಸೀತಾ ಪಯಣ' ಸಿನಿಮಾದಲ್ಲಿ ಇವರಷ್ಟೇ ಅಲ್ಲದೆ ದಿಗ್ಗಜ ದಂಡೇ ಇದೆ. ಪ್ರಕಾಶ್ ರಾಜ್, ಸತ್ಯರಾಜ್, ಕೋವೈ ಸರಳ, ಬಿತ್ತಿರಿ ಸತ್ತಿ, ಸಿರಿ ಹನ್ಮಂತು, ನರ್ರಾ ಶ್ರೀನು, ರಾಜ್ ಕುಮಾರ್ ಸೇರಿದಂತೆ ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆ, ಸಂಭಾಷಣೆಗಳನ್ನು ಸಾಯಿ ಮಾಧವ್ ಬುರ್ರಾ ಬರೆದಿದ್ದಾರೆ. ತೆಲುಗಿನಲ್ಲಿ ಮೆಲೋಡಿ ಹಾಡುಗಳನ್ನು ಕೊಟ್ಟಿರುವ ಅನೂಪ್ ರೂಬೆನ್ಸ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
'ಸೀತಾ ಪಯಣ' ಸಿನಿಮಾ ಸೀತಾ (ಐಶ್ವರ್ಯ ಅರ್ಜುನ್) ಎಂಬ ಚೆಫ್ನ (ಬಾಣಸಿಗ) ಕಥೆಯಾಗಿದೆ. ಸೀತಾಳ ಜೀವನದಲ್ಲಿ ಒಂದು ಭೀಕರ ಅಪಘಾತ ಸಂಭವಿಸುತ್ತದೆ. ಇದು ಆಕೆಯ ಬದುಕಿಗೆ ಮಹತ್ವದ ತಿರುವು ನೀಡುತ್ತದೆ. ಅಪಘಾತವಾದ ವೇಳೆ ತನ್ನನ್ನು ರಕ್ಷಿಸಿದ ಅಪರಿಚಿತ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಲು ಸೀತಾ ಮುಂದಾಗುತ್ತಾಳೆ. ಈ ವೇಳೆ ಅಭಿಷೇಕ್ (ನಿರಂಜನ್) ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ. ಆದರೆ, ಈ ಹಾದಿಯಲ್ಲಿ ಸೀತಾ ಮುಂದೆ ಎರಡು ಪ್ರಶ್ನೆ ಎದುರಾಗುತ್ತೆ. ಅದುವೇ ಸಿನಿಮಾದ ತಿರುಳು.
ಲವ್ ಸ್ಟೋರಿ ಜೊತೆ ತಂದೆ (ಸತ್ಯರಾಜ್) ಹಾಗೂ ಮಗಳ ಭಾವನಾತ್ಮಕ ಸನ್ನಿವೇಶಗಳು ಕೂಡ ಈ ಸಿನಿಮಾದಲ್ಲಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿದ ನಂತರ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರದ್ದು ಕೇವಲ ಅತಿಥಿ ಪಾತ್ರಗಳಲ್ಲ ಅನ್ನೋದು ಗೊತ್ತಾಗಿದೆ. ಈ ಕಥೆಯನ್ನು ಭಾವನಾತ್ಮಕವಾಗಿ ಮುನ್ನಡೆಸುವ ಪ್ರಮುಖ ಪಾತ್ರಗಳು ಎಂದು ಹೇಳಲಾಗಿದೆ. ಇಂತಹ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅರ್ಜುನ್ ಸರ್ಜಾರನ್ನು ಸೆನ್ಸಾರ್ ಮಂಡಳೀ ಅಧಿಕಾರಿಗಳು ಶ್ಲಾಘಿಸಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
'ಸೀತಾ ಪಯಣ' ಸಿನಿಮಾ ಬಗ್ಗೆ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರಂತೆ. ಮನೆಗಳೆಂದರೆ ಕೇವಲ ಗೋಡೆಗಳಲ್ಲ, ಅವು ಬಾಂಧವ್ಯಗಳ ಗೂಡು ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತಿದೆ. ಪರಿಶುದ್ಧ ಪ್ರೇಮ ಕಥೆ ಮತ್ತು ಕುಟುಂಬದ ಭಾವನೆಗಳನ್ನು ಈ ಸಿನಿಮಾ ತೆರೆದಿಟ್ಟಿದೆ. ಹಾಗಾಗಿ, 'ಸೀತಾ ಪಯಣ' ಸಿನಿಮಾಗೆ CBFC U ಸರ್ಟಿಫಿಕೇಟ್ ಸಿಕ್ಕಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಸಿನಿಮಾ ಪ್ರೇಮಿಗಳ ದಿನ, ಅಂದರೆ ಫೆಬ್ರವರಿ 14 ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಅರ್ಜುನ್ ಸರ್ಜಾ ಅವರ ಜೀವನದ ಕೆಲವು ಘಟನೆಗಳಿಂದ ಪ್ರೇರಿತರಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಆಯೂಬ್ ಖಾನ್ ಅವರ ಚುರುಕಾದ ಎಡಿಟಿಂಗ್ ವಿಶಿಷ್ಠ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಒಟ್ಟಾರೆ 2 ಗಂಟೆ 32 ನಿಮಿಷಗಳು (152 ನಿಮಿಷಗಳು) ಇರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ? ಅನ್ನೋದು ಸಿನಿಮಾ ತೆರೆಕಂಡ ಬಳಿಕ ಗೊತ್ತಾಗಲಿದೆ.


Click it and Unblock the Notifications











