Gurudev Hoysala Review: ನಟರಾಕ್ಷಸನ ಹಿಡಿಯೋಕು ಆಗಲ್ಲ, ತಡೆಯೋಕೂ ಆಗಲ್ಲ.. ಆದ್ರೂ ಶೋ ಗೆದ್ದಿದ್ದು ನವೀನ್ ಶಂಕರ್!
ಶ್ರೀರಾಮ ನವಮಿಯಂದೇ ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ ಥಿಯೇಟರ್ಗೆ ಎಂಟ್ರಿ ಕೊಟ್ಟಿದೆ. ಮತ್ತೆ ಖಾಕಿ ತೊಟ್ಟು ಮಾಸ್ ಅವತಾರದಲ್ಲಿ ಧನಂಜಯ್ ಚಿತ್ರಮಂದಿರಕ್ಕೆ ನುಗ್ಗಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯೋ ಕಥೆಯಲ್ಲಿ ಪೊಲೀಸ್ ಅಧಿಕಾರಿ ಅಂದ್ರೆ, ಹೀಗೆ ಇರಬೇಕು ಅಂತ ತೋರಿಸಿಕೊಟ್ಟಿದ್ದಾರೆ.
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿಯ 'ದಸರಾ', ಸಿಂಬು ಸಿನಿಮಾ 'ಪತ್ತು ಥಲಾ', ಅಜಯ್ ದೇವಗನ್ ಸಿನಿಮಾ 'ಭೋಲಾ'ನೂ ರಿಲೀಸ್ ಆಗಿದೆ. ಆದರೆ, ಕರ್ನಾಟಕದಲ್ಲಿ ಹೊಯ್ಸಳನ ಮುಂದೆ ಇವು ನಿಲ್ಲೋದಿಲ್ಲ. 'ಗುರುದೇವ್ ಹೊಯ್ಸಳ' ಹೇಗಿದೆ ಅಂತ ಹೇಳುವುದಕ್ಕೂ ಮುನ್ನ ಸಿನಿಮಾ ಬಗ್ಗೆ ಚಿಕ್ಕದೊಂದು ಹಿಂಟ್.

ಖಾಕಿಗೂ.. ಡಾಲಿಗೂ, ಡಾಲಿಗೂ.. ಖಾಕಿಗೂ ಏನೋ ಒಂದು ನಂಟು. ಇದು ಈ ಹಿಂದೆನೂ ಪ್ರೇಕ್ಷಕರ ಅನುಭವಕ್ಕೆ ಬಂದಿದೆ. ಅದು ಗುರುದೇವ್ ಹೊಯ್ಸಳ ನೋಡಿದ ಸಿನಿಪ್ರಿಯರಿಗೂ ಕಾಡದೇ ಇರುವುದಿಲ್ಲ. ಯಾಕಂದ್ರೆ, ಇಲ್ಲೂ ಡಾಲಿ ಧನಂಜಯ್ ಖಾಕಿ ತೊಟ್ಟು ಪ್ರೇಕ್ಷಕರನ್ನು ರೊಚ್ಚಿಗೆಬ್ಬಿಸುತ್ತಾರೆ. ಹಾಗಿದ್ರೆ, ಸಿನಿಮಾದ ಎಳೆ ಏನು? ಯಾರ ಪಾತ್ರ ಹೇಗಿದೆ? ಮ್ಯೂಸಿಕ್, ಆಕ್ಷನ್ ಎಲ್ಲದರ ಬಗ್ಗೆ ಪಿನ್ ಟು ಪಿನ್ ಡಿಟೈಲ್ಸ್ಗೆ ಮುಂದೆ ಓದಿ.
ಯಾರೀ ಗುರುದೇವ್ ಹೊಯ್ಸಳ?
'ಗುರುದೇವ್ ಹೊಯ್ಸಳ' ಖಡಕ್ ಪೊಲೀಸ್ ಆಫೀಸರ್. ಈಗಾಗಲೇ ಕರ್ನಾಟಕದಲ್ಲಿ ಹೆಸರು ಮಾಡಿದ್ದ ಪೊಲೀಸ್ ಅಧಿಕಾರಿ ಯಾರಾದರೂ ಇಬ್ಬರು ನೆನಪಿಗೆ ಬರಬಹುದು. ಪ್ರಾಮಾಣಿಕ, ಸ್ಟ್ರಿಕ್ಟ್, ಆಕ್ರಮಣಕಾರಿ ಅಧಿಕಾರಿ. ಮಾಸ್ ಸಾಂಗಿನ ಮೂಲಕ ಸಿನಿಮಾ ಆರಂಭ. ಇಡೀ ಹಾಡು ಹೊಯ್ಸಳನ ಪವರ್, ಖದರ್, ದರ್ಬಾರ್ ಅನ್ನು ಎತ್ತಿ ಹಿಡಿಯುತ್ತಾ ಮುಂದೆ ಸಾಗುತ್ತೆ. ಅನ್ಯಾಯ ಸಹಿಸಲ್ಲ. ಕೋಪ ತಡೆಯೋಕೆ ಆಗೋಲ್ಲ.
ಗುರುದೇವ್ ಹೊಯ್ಸಳನ ಕಥೆಯೇನು?
ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಭಾರ್ಗವ್ ಕಾಣೆಯಾಗಿರುತ್ತಾರೆ. ಅದರ ತನಿಖೆಗೆ ಅಂತ ಹೊರಡುವ ಹೊಯ್ಸಳನಿಗೆ ಹಲವು ಸವಾಲು ಎದುರಾಗುತ್ತೆ. ಭಾರ್ಗವ್ ಎಲ್ಲಿ ಅಂತ ಹುಡುಕೋಕೆ ಹೋದ ಹೊಯ್ಸಳ ಯುವ ಪ್ರೇಮಿಗಳನ್ನು ಒಂದು ಮಾಡುತ್ತಾನೆ. ಅಲ್ಲಿಂದ ಕಥೆ ಆ ಯುವ ಪ್ರೇಮಿಗಳನ್ನು ಸುತ್ತಿಕೊಂಡು, ಮತ್ತೆ ಭಾರ್ಗವನ ಬಳಿ ಬಂದು ನಿಲ್ಲುತ್ತೆ. ಬೆಳಗಾವಿ ಸುತ್ತಮುತ್ತಲಿನ ಕಥೆ ಅಂದಾಕ್ಷಣ, ಕನ್ನಡಿಗರು ಮರಾಠಿಗರ ನಡುವಿನ ಹೋರಾಟ ಇಲ್ಲ. ಹಾಗಂತ ಚಿಕ್ಕದೊಂದು ಝಲಕ್ ಕೊಡುವುದನ್ನು ಮರೆತಿಲ್ಲ. ಹೀಗಾಗಿ ಹೊಯ್ಸಳನ ಕಥೆ ಮೂಲ ಇದ್ಯಾವುದೂ ಅಲ್ಲ.

ಮರ್ಯಾದಾ ಹತ್ಯೆಯೇ ಮೂಲ
ಪೊಲೀಸ್ ಅಧಿಕಾರಿ ಭಾರ್ಗವನನ್ನು ಹುಡುಕೋಕೆ ಹೋದ ಗುರುದೇವ್ ಹೊಯ್ಸಳ ಮರ್ಯಾದಾ ಹತ್ಯೆ ಕೇಸ್ನಲ್ಲಿ ಸಿಕ್ಕಿಕೊಳ್ಳುತ್ತಾನೆ. ಕೊನೆಗೆ ಅದನ್ನು ಧೈರ್ಯದಿಂದ ಚಾಣಾಕ್ಷ್ಯ ತನದಿಂದ ಹೇಗೆ ಮೆಟ್ಟಿ ನಿಲ್ಲುತ್ತಾನೆ ಅನ್ನೋದು ಕಥೆ. ಇಡೀ ಸಿನಿಮಾದ ಉದ್ದಕ್ಕೂ ನೋಡುಗರಿಗೆ ಪಾಠ ಹೇಳುತ್ತಿದ್ದಾರೆ ಎಂದು ಅನಿಸದೇ, ಎಂಟರ್ಟೈನಿಂಗ್ ಆಗಿ ಮಾಸ್ ಫೀಲ್ ಕೊಡುತ್ತಾ ಕಥೆ ಹೆಣೆದಿರೋದನ್ನು ಮೆಚ್ಚಲೇಬೇಕು. ಹೀಗಾಗಿ ಕಥೆ, ಚಿತ್ರಕಥೆ ನೀಟ್ ಆಗಿದೆ.
ಖಾಕಿ ತೊಟ್ಟೋರು ಹೊಯ್ಸಳನಂತೆ ಇರಬೇಕು
ಬಹುತೇಕ ಸಿನಿಮಾಗಳಲ್ಲಿ ಒಂದಲ್ಲ ಒಂದು ಖಾಕಿ ಪಾತ್ರ ಇದ್ದೇ ಇರುತ್ತೆ. ಗುರುದೇವ್ ಹೊಯ್ಸಳನಿಗೆ ಖಾಕಿ ಹೊಂದಿಕೊಂಡಿದೆ. ಇಲ್ಲ ಖಾಕಿಗೇ ಹೊಯ್ಸಳ ಹೊಂದಿಕೊಂಡಿದ್ದಾನೆ. ಇಂತಹ ಒಬ್ಬ ಪೊಲೀಸ್ ಅಧಿಕಾರಿ ಇರಬೇಕು ಅಂತ ಅನಿಸುವಷ್ಟು ಸಹಜವಾಗಿ ಡಾಲಿ ನಟಿಸಿದ್ದಾರೆ. 25ನೇ ಸಿನಿಮಾಗೆ ತಕ್ಕಂತಹ ಮಾಸ್ ಸ್ಕ್ರೀಪ್ಟ್ ಆಯ್ಕೆ ಮಾಡಿಕೊಂಡಿದ್ದು ಅವರ ಜಾಣ್ಮೆಯನ್ನು ತೋರಿತ್ತೆ. ಒಟ್ನಲ್ಲಿ ಟಾಲಿಯ ಖಾಕಿ ಖದರ್ ಮತ್ತೊಮ್ಮೆ ಗೆದ್ದಿಗೆ ಎನ್ನಬಹುದು.
ಶೋ ಗೆದ್ದಿದ್ದು ನವೀನ್ ಶಂಕರ್
'ಗುಲ್ಟು' ಸಿನಿಮಾದಲ್ಲೇ ನವೀನ್ ಶಂಕರ್ ತಾನೇನು ಅನ್ನೋ ಅರ್ಥ ಮಾಡಿಸಿದ್ದು ಆಗಿತ್ತು. ಆದರೆ, ಗುರುದೇವ್ ಹೊಯ್ಸಳದಲ್ಲಿ ಗಮನ ಸೆಳೆಯೋದು ಇದೇ ನಟ. ಖಳನಾಯಕನಾಗಿ ಇಡೀ ಸಿನಿಮಾದುದ್ದಕ್ಕೂ ರೊಚ್ಚಿಗೆಬ್ಬಿಸುತ್ತಾರೆ. ಬಾಲಿ ನಿಜಕ್ಕೂ ರಗಡ್. ಹೀರೊ ಇಲ್ಲದ ಎಂಟ್ರಿ.. ಆಕ್ಷನ್ ಇವರಿಗಿದೆ. ಆ ಅವಕಾಶವನ್ನು ಅಷ್ಟೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಹೊಯ್ಸಳನಿಗೆ ಸಮನಾಗಿ ನಿಲ್ಲುವ ಪಾತ್ರ ಬಾಲಿಯದ್ದು. ಹೀಗಾಗಿ ಈ ಶೋ ಗೆದ್ದಿದ್ದು ನವೀನ್ ಅಂತ ನಿಸ್ಸಂದೇಹವಾಗಿ ಹೇಳಬಹುದು.
ಡೈರೆಕ್ಷನ್, ಮ್ಯೂಸಿಕ್.. ಇತ್ಯಾದಿ ಹೇಗಿದೆ?
ವಿಜಯ್ ಎನ್ ಡೈರೆಕ್ಷನ್ ಸೂಪರ್. ಪ್ರೇಕ್ಷಕರಲ್ಲಿ ಮಾಸ್ ಫೀಲ್ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಸಿನಿಮಾದ ಹೈಲೈಟ್. ಕಾರ್ತಿಕ್ ಕ್ಯಾಮರಾ, ದೀಪು ಎಸ್ ಕುಮಾರ್ ಎಡಿಟಿಂಗ್ ಓಕೆ. ಮಾಸ್ತಿ ಡೈಲಾಗ್ ಮಾಸ್ ಆಗಿದೆ. ಅಮೃತಾ ಇಷ್ಟವಾಗುತ್ತಾರೆ. ಅಚ್ಯುತ್ ಕುಮಾರ್, ಅವಿನಾಶ್ ಬಿಎಸ್, ಅನಿರುದ್ಧ್ ಭಟ್, ರಾಜೇಶ್ ನಟರಾಜ್ ಸಹಜ ನಟನೆ ಈ ಸಿನಿಮಾದಲ್ಲಿದೆ.
ಮೈನಸ್ ಏನು?
ಡಾಲಿ ಪಾತ್ರಕ್ಕೆ ಇನ್ನೊಂದು ಸ್ವಲ್ಪ ಪವರ್ ತುಂಬಬೇಕಿತ್ತು ಅನಿಸುತ್ತೆ. ಅಮೃತಾ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿದೆ. ಹಿಟ್ ಈ ಜೋಡಿ ದೃಶ್ಯಗಳು ಇನ್ನೂ ಸ್ಪಲ್ಪ ಇರಬೇಕಿತ್ತು ಅಂತ ಅನಿಸುತ್ತೆ. ನಾಗಭೂಷಣ್ ಕಾಮಿಡಿ ಪಾತ್ರವನ್ನು ಇನ್ನೂ ಹೆಚ್ಚು ಕ್ಯಾರಿ ಮಾಡಿದ್ದರೆ, ಇನ್ನಷ್ಟು ಎಂಟರ್ಟೈನಿಂಗ್ ಆಗಿರುತ್ತಿತ್ತು. ಇವು ಸಿನಿಮಾ ನೋಡುವಾಗ ಮ್ಯಾಟರ್ ಅನಿಸದೇ ಹೋದರೂ, ಹೊರಬಂದ್ಮೇಲೆ ಬೇಕು ಅನಿಸುತ್ತೆ. ಒಟ್ನಲ್ಲಿ ಡಾಲಿ 25ನೇ ಸಿನಿಮಾ ಪ್ರೇಕ್ಷಕನಿಗೆ ಕಂಡಿತಾ ಮೋಸ ಮಾಡಲ್ಲ.


Click it and Unblock the Notifications











