Tere Ishq Mein Review: ನಾಯಕನ ಕೋಪ.. ತಂದೆಯ ಆತಂಕ.. ಪ್ರೇಮಿಯ ಗೊಂದಲ; ಮತ್ತೆ ಗೆದ್ದರೇ ಧನುಷ್?
ರಜನಿಕಾಂತ್ ಮಾಜಿ ಅಳಿಯ ಧನುಷ್ ನಟಿಸಿರುವ ಮತ್ತೊಂದು ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಈ ವಾರ ಅದ್ಧೂರಿಯಾಗಿ ರಿಲೀಸ್ ಆಗಿದೆ. ಧನುಷ್ ಹಾಗೂ ಆನಂದ್ ಎಲ್. ರಾಯ್ ಮತ್ತೊಮ್ಮೆ ಜೊತೆಯಾಗಿದ್ದು, ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ವರ್ಷದ ಕೊನೆಯಲ್ಲಿ ಬಾಲಿವುಡ್ಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದಾರೆ.
'ತೇರೆ ಇಷ್ಕ್ ಮೇ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಧನುಷ್ ನಟಿಸಿದ್ದರೆ, ನಾಯಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್, ಪ್ರಿಯಾಂಶು ಪೈನೌಲಿ, ತೋತಾ ರಾಯ್ ಚೌಧರಿ ಹಾಗೂ ವಿನೀತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆನಂದ್ ಎಲ್. ರಾಯ್ ಆಕ್ಷನ್ ಕಟ್ ಹೇಳಿದರೆ, ಹಿಮಾಂಶು ಶರ್ಮಾ ಹಾಗೂ ನೀರಜ್ ಯಾದವ್ ಕಥೆ ಹೆಣೆದಿದ್ದಾರೆ. ಭೂಷಣ್ ಕುಮಾರ್, ಕಿಶನ್ ಕುಮಾರ್, ಹಿಮಾಂಶು ಶರ್ಮಾ ಜೊತೆಗೆ ಆನಂದ್ ಎಲ್. ರಾಯ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಎ ಆರ್ ರೆಹಮಾನ್ ಕಂಪೋಸ್ ಮಾಡಿದ ಹಾಡುಗಳನ್ನು ಈಗಾಗಲೇ ಜನರು ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಮೊದಲ ದಿನವೇ ಬಾಕ್ಸಾಫೀಸ್ನಲ್ಲಿ ₹15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಈ ಸಿನಿಮಾದ ಕಥೆಯೇನು? ಹೈಲೈಟ್ಗಳೇನು? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ತೇರೆ ಇಷ್ಕ್ ಮೇ' ಕಥೆಯೇನು?
ಶಂಕರ್ ಗುರುಕ್ಕಲ್ (ಧನುಷ್) ಕಾಲೇಜಿನಲ್ಲಿರೋ ಅತ್ಯಂತ ಕೋಪಿಷ್ಠ ವಿದ್ಯಾರ್ಥಿ. ಇವನ ತಂದೆ ಪ್ರಕಾಶ್ ರಾಜ್. ಮಗನನನ್ನು ಅತಿಯಾಗಿ ಪ್ರೀತಿಸುತ್ತಾರೆ. ಆದರೆ, ತಂದೆ ಹಾಗೂ ಮಗನ ನಡುವಿನ ವರ್ತನೆಯಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ. ಈ ಕಾಲೇಜಿಗೆ ಪಿಎಚ್ಡಿ ಪ್ರಬಂಧ ಸಲ್ಲಿಸಲು ಬರುವ ಮುಕ್ತಿ ಬೆಹ್ನಿವಾಲ್ಗೆ (ಕೃತಿ ಸನೋನ್) ಶಂಕರ್ ಕೇಸ್ ಸ್ಟಡಿಯಾಗಿ ಕಾಣಿಸುತ್ತಾನೆ. "ಮನುಷ್ಯನ ಹಿಂಸಾತ್ಮಕ ಪ್ರವೃತ್ತಿಯನ್ನು ನಿಯಂತ್ರಿಸಬಹುದು" ಎಂಬುವುದೇ ಮುಕ್ತಿಯ ಪ್ರಬಂಧ ವಿಷಯವಾಗಿರುತ್ತೆ. ಹೀಗಾಗಿ ಶಂಕರ್ನನ್ನು ಕೇಸ್ ಸ್ಟಡಿ ಆಗಿ ಆರಿಸಿಕೊಳ್ಳುತ್ತಾಳೆ. ಇತ್ತ ಮುಕ್ತಿಯನ್ನು ನೋಡಿದ ಮೊದಲ ನೋಟದಲ್ಲೇ ಶಂಕರ್ಗೆ ಪ್ರೀತಿ ಹುಟ್ಟುತ್ತೆ. ಮುಂದೇನಾಗುತ್ತೆ ಅನ್ನೋದೇ ಸಿನಿಮಾದ ತಿರುಳು.
'ತೇರೆ ಇಷ್ಕ್ ಮೇ' ಹೈಲೈಟ್ಸ್ ಏನು?
ಶಂಕರ್ನ ಕೋಪಕ್ಕೆ ಕಾರಣವೇನು? ತಂದೆಯೊಂದಿಗೆ ಶಂಕರನ ಸಂಬಂಧ ಹೇಗಿದೆ? ತಾಯಿಯ ನಿಧನದ ಬಳಿಕ ಆತನ ಮೇಲೆ ಬಿದ್ದ ಪರಿಣಾಮವೇನು? ಆತ ತಾಯಿಯ ಸಾವಿಗೆ ಕಾರಣವೇನು? ಶಂಕರ್ನನ್ನು ಕೇಸ್ ಸ್ಟಡಿಯಾಗಿಟ್ಟುಕೊಂಡು ಮುಕ್ತಿ ತನ್ನ ಪ್ರಬಂಧವನ್ನು ಸಾಬೀತು ಮಾಡುತ್ತಾಳಾ? ಶಂಕರ್ನ ಪ್ರೀತಿಯನ್ನು ಮುಕ್ತಿ ಸ್ವೀಕರಿಸುತ್ತಾಳಾ? ಶಂಕರ್ ಏಕೆ ಭಾರತೀಯ ವಾಯುಪಡೆ ಸೇರುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೂ ಸಿಗುವ ಉತ್ತರ 'ತೇರೆ ಇಷ್ಕ್ ಮೇ' ಸಿನಿಮಾದ ಹೈಲೈಟ್.

ಸಿನಿಮಾದ ಪ್ಲಸ್ ಪಾಯಿಂಟ್ ಏನು?
'ತೇರೆ ಇಷ್ಕ್ ಮೇ' ಸಿನಿಮಾಗೆ ಆನಂದ್ ಎಲ್. ರಾಯ್ ಅವರ ಸ್ಕ್ರೀನ್ಪ್ಲೇ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದೆ. ಧನುಷ್ ಮತ್ತು ಕೃತಿ ಸನೋನ್ ಕಾಂಬಿನೇಷನ್ ತೆರೆಮೇಲೆ ವರ್ಕ್ ಆಗಿದೆ. ಈ ಸಿನಿಮಾದ ಫ್ಲ್ಯಾಶ್ಬ್ಯಾಕ್ ಹಾಗೂ ವಾಸ್ತವದ ಸನ್ನಿವೇಶಗಳನ್ನು ಬ್ಲೆಂಡ್ ಮಾಡಿರುವ ರೀತಿ ಪ್ರೇಕ್ಷಕರನ್ನು ಸೆಳೆಯುತ್ತೆ. ಇನ್ನು ಸೆಕೆಂಡ್ ಹಾಫ್ನಲ್ಲಿ ಸಿಗುವ ಟ್ವಿಸ್ಟ್ಗಳು ಸಿನಿಮಾ ಪ್ಲಸ್ ಪಾಯಿಂಟ್ಗಳಲ್ಲೊಂದು. ಕೋಪಿಷ್ಠನಾಗಿ ಧನುಷ್ ಯುವಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವುದು ಗ್ಯಾರಂಟಿ. ಧನುಷ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿ ಸನೋನ್ ಕೂಡ ಎಮೋಷನಲ್ ಸೀನ್ಗಳಲ್ಲಿ ಇಷ್ಟ ಆಗುತ್ತಾರೆ. ಎ.ಆರ್. ರೆಹಮಾನ್ ಸಂಗೀತ ಈ ಲವ್ ಸ್ಟೋರಿಗೆ ಜೀವ ತುಂಬಿದೆ. ಟೈಟಲ್ ಸಾಂಗ್ ಬಿಗ್ ಸ್ಕ್ರೀನ್ನಲ್ಲಿ ನೋಡುವುದಕ್ಕೆ ಇನ್ನಷ್ಟು ಮಜಾ ಕೊಡುತ್ತೆ.
ಸಿನಿಮಾದ ಮೈನಸ್ ಪಾಯಿಂಟ್ ಏನು?
ಆನಂದ್ ಎಲ್.ರಾಯ್ ಸ್ಕ್ರೀನ್ಪ್ಲೇ ಕಡೆಗೆ ಗಮನ ಕೊಟ್ಟಂತೆ ಕಥೆಯನ್ನು ಇನ್ನೂ ಪವರ್ಫುಲ್ ಮಾಡಬಹುದಿತ್ತು. ಟಾಕ್ಸಿಕ್ ಲವ್ ಸ್ಟೋರಿ ಎಲ್ಲಾ ಪ್ರಕಾರದ ಆಡಿಯನ್ಸ್ಗೂ ಇಷ್ಟ ಆಗುವುದಿಲ್ಲ. ಸೆಕೆಂಡ್ ಹಾಫ್ನಲ್ಲಿ ಟ್ವಿಸ್ಟ್ಗಳು ಇದ್ದರೂ, ಅಲ್ಲಲ್ಲಿ ಕ್ಲಾರಿಟಿ ಸಿಗುವುದಿಲ್ಲ. ಇವಿಷ್ಟು ಬಿಟ್ಟರೆ, ಯುವ ಸಮುದಾಯಕ್ಕೆ ಈ ಸಿನಿಮಾ ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











