ನಾ ನೋಡಿದ 'ಕಾಂತಾರ': ಅಕ್ಷರಶ: ರಿಷಬ್ ಶೆಟ್ಟಿ ಆವರಿಸಿತೇ 'ಪಂಜುರ್ಲಿ ದೈವ'
ಸಾಮಾನ್ಯವಾಗಿ ಕಲಾವಿದ ಅದ್ಭುತ ಪ್ರದರ್ಶನ ನೀಡಿದರೆ ಪರಕಾಯ ಪ್ರವೇಶ ಎನ್ನುವ ಪದವನ್ನು ಬಳಸಲಾಗುತ್ತದೆ. ಆದರೆ, 'ಕಾಂತಾರ' ಚಿತ್ರದ ಕೊನೆಯ ಹತ್ತು ನಿಮಿಷದ ರಿಷಬ್ ಶೆಟ್ಟಿಯವರ ನಟನೆಗೆ ಹೊಸ ಪದವನ್ನು ಹುಡುಕ ಬೇಕಾಗಬಹುದು.
ಕಾಡು, ಕಾಡಿನ ಜನರ ಬದುಕು, ಕಂಬಳ, ಕರಾವಳಿಯ ಕೋಲದ ಸನ್ನಿವೇಶದ ಸುತ್ತ ಸಾಗುವ ಈ ಚಿತ್ರದಲ್ಲಿ ನಿರ್ದೇಶಕ ಎನ್ನುವುದಕ್ಕಿಂತ ಹೆಚ್ಚಾಗಿ ರಿಷಬ್ ಶೆಟ್ಟಿ ತನ್ನಲ್ಲಿರುವ ಕಲಾವಿದನ ತಾಕತ್ತನ್ನು ಅಕ್ಷರಶ: ಧಾರೆ ಎರೆದಿದ್ದಾರೆ. ಅದೆಂತಹ, ಪರ್ಫಾರ್ಮೆನ್ಸ್ ಅಂದರೆ 'ವಾವ್' ಎಂದರೆ ತಪ್ಪಾಗಲಾರದು.
ಒಬ್ಬ ನಿರ್ದೇಶಕನಾಗಿ ಸಹ ಕಲಾವಿದರು, ತಂತ್ರಜ್ಞರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ 'ಕಾಂತಾರ' ಚಿತ್ರ ಉದಾಹರಣೆಯಾಗಬಲ್ಲದು. ಒಂದೊಂದು ಪಾತ್ರವನ್ನೂ ರಿಷಬ್ ಕಟ್ಟಿಕೊಟ್ಟ ರೀತಿ ಯಾವ ಪರಿಯಿದೆ ಎನ್ನುವುದಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಈಗ ಉತ್ತರ ಕೊಡುತ್ತಿದೆ. ಯಾವುದೇ ಭಾಗದ ಸಿನಿಮಾ, ಸಂಪ್ರದಾಯವಿರಲಿ, ಚಿತ್ರದಲ್ಲಿ ಕಂಟೆಂಟ್, ಚಿತ್ರಕಥೆ ಇದ್ದರೆ ಕನ್ನಡಿಗರು ಕೈಬಿಡುವುದಿಲ್ಲ ಎನ್ನುವುದಕ್ಕೆ 'ಕಾಂತಾರ' ಮತ್ತೊಂದು ಪಟ್ಟಿ ಆಗಬಹುದು.

ಪ್ರತೀ ಸನ್ನಿವೇಶವೂ ಕಾಮಿಡಿ ಕಚಗುಳಿಯಿಂದ ಸಾಗುವ ಸಂಭಾಷಣೆ, ಹಳ್ಳಿನ ಸೊಗಡು, ಕಾಡಿನ ಸೊಬಗು, ಕಾಡಿನ ನಿವಾಸಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗಿರುವ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಹಾಸ್ಯದ ಮೂಲಕವೇ ರಿಷಬ್ ತೆರೆಯ ಮೇಲೆ ತಂದಿದ್ದಾರೆ.
ಅಲ್ಲಲ್ಲಿ ತುಳು, ಕುಂದಾಪ್ರ ಕನ್ನಡ ಭಾಷೆಯಲ್ಲಿ ಸಾಗುವ ಸಿನಿಮಾ ಮಧ್ಯಂತರದ ವೇಳೆ ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಚಿತ್ರ ಮೊದಲಾರ್ಧದಲ್ಲಿ ಸಾಗುವ ರೀತಿ ಒಂದು, ದ್ವಿತೀಯಾರ್ಧದಲ್ಲಿ ಸಾಗುವ ರೀತಿ ಇನ್ನೊಂದು. ಪ್ರೇಕ್ಷಕರ ಕಣ್ಣು ಪರದೆ ಬಿಟ್ಟು ಮೊಬೈಲ್ ಕಡೆಗೆ ಹೋಗದಂತೆ ನೋಡಿಕೊಳ್ಳುತ್ತೆ ಸಿನಿಮಾ. ನಿರ್ದೇಶಕನಾಗಿ ರಿಷಬ್ ಗೆಲ್ಲುವುದೇ ಇಲ್ಲಿ.
ಪ್ರಮುಖವಾಗಿ ಕರಾವಳಿ ಭಾಗದ ಕಲಾವಿದರ ದಂಡೇ ಸಿನಿಮಾದಲ್ಲಿದೆ, ಅದರಲ್ಲೂ ರಿಷಬ್ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳು ಇನ್ನೊಂದು ರೂಪದಲ್ಲಿ ಸಿನಿಮಾದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಇವರ ಡೈಲಾಗ್ ಡೆಲಿವರಿ ಕರಾವಳಿ ಭಾಗದ ಜನರಿಗೆ ಮಾತ್ರ ಪ್ರಿಯವಾಗಬೇಕೆಂದೇನೂ ಇಲ್ಲ.

ಚಿತ್ರದ ಮೊದಲಾರ್ಧದ ಒಂದು ಹತ್ತು ನಿಮಿಷಕ್ಕೆ ಅಲ್ಲಲ್ಲಿ ಕತ್ತರಿ (ಎಡಿಟಿಂಗ್) ಪ್ರಯೋಗಿಸಬೇಗಿಸಬಹುದಾಗಿತ್ತು. ಜೊತೆಗೆ, ಬ್ಯಾಕ್ ಗ್ರೌಂಡ್ ಸಂಗೀತ ಇನ್ನಷ್ಟು ಎಫೆಕ್ಟಿವ್ ಆಗಿರಬಹುದಿತ್ತು. ಆದರೆ, ಈ ಎರಡೂ ಡಿಪಾರ್ಟ್ಮೆಂಟ್ ದ್ವಿತೀಯಾರ್ಧದಲ್ಲಿ ಕೊಟ್ಟ ರಿಸಲ್ಟ್ ಮಾತ್ರ ಅಲ್ಟಿಮೇಟ್.
ಚಿತ್ರದಲ್ಲಿ ಬರುವ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ವಿನಯ್ ಬಿಡ್ಡಪ್ಪ, ಶೈನ್ ಶೆಟ್ಟಿ, ಉಗ್ರಂ ರವಿ, ಪ್ರಕಾಶ್ ತೂಮಿನಾಡ್ ಮುಂತಾದವರು ತಮ್ಮ ತಮ್ಮ ಪಾತ್ರಕ್ಕೆ ದಿ ಬೆಸ್ಟ್ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಸಿನಿಮಾಟೋಗ್ರಾಫಿ. ಚಿತ್ರದ ಕೊನೆಯ ಹತ್ತು ನಿಮಿಷದ ರಿಷಬ್ ಶೆಟ್ಟಿ ನಟನೆಯನ್ನು ಪದದಲ್ಲಿ ಹೋಲಿಸಲು ಸಾಧ್ಯವಿಲ್ಲ ಎಂದರೆ ಅತಿಶಯೋಕ್ತಿಯಾಲಾರದು.
ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಆಚರಿಸಲಾಗುವ ಧಾರ್ಮಿಕ ಸಂಪ್ರದಾಯದ ಸುತ್ತ ಸಾಗುವ ಸಿನಿಮಾವನ್ನು ದೇಶದೆಲ್ಲಡೆ ಪಸರಿಸುವ ಪ್ರಯತ್ನ. ಈ ಸಿನಿಮಾವನ್ನು ಜನರು ಸದ್ಯ ಕನ್ನಡದಲ್ಲೇ ನೋಡಲಿ ಎನ್ನುವ ರಿಷಬ್ ಶೆಟ್ಟಿಯವರ ಭಾಷಾಭಿಮಾನ. ರಿಷಬ್ ಮೇಲೆ ನಂಬಿಕೆಯಿಟ್ಟು ಚಿತ್ರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲಂಸ್ ಎಲ್ಲರನ್ನೂ ಅಭಿನಂದಿಸಲೇ ಬೇಕು. 'ಕಾಂತಾರ' ಒಂದು ಸಿನಿಮಾವಲ್ಲ, ಅದೊಂದು ಅನುಭವ. ಹಾಗಾಗಿ.. ರೇಟಿಂಗ್ಸ್ ಕೊಡುವುದು ಸೂಕ್ತವಲ್ಲ.


Click it and Unblock the Notifications











