Karataka Damanaka Review: ನೀರು.. ಬೇರು.. ತೇರಿಗಾಗಿ ಭಟ್ಟರ 'ಪಂಚತಂತ್ರ'.. ಕುತಂತ್ರಿ ನರಿಗಳ ಕುತಂತ್ರ
ಈ ವಾರ ಎರಡು ಸಿನಿಮಾಗಳು ಥಿಯೇಟರ್ಗೆ ಲಗ್ಗೆ ಇಟ್ಟಿವೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ'. ಇನ್ನೊಂದು ಗುರು ಪ್ರಸಾದ್ ನಿರ್ದೇಶಿಸಿದ 'ರಂಗನಾಯಕ'. ಎರಡೂ ಸಿನಿಮಾಗಳ ಮೇಲೂ ನಿರೀಕ್ಷೆಗಳೇನು ಕಮ್ಮಿಯಿರಲಿಲ್ಲ. ಅದರಲ್ಲೂ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಕಾಂಬಿನೇಷನ್ ಸಿನಿಮಾ 'ಕರಟಕ ದಮನಕ' ಸಿನಿಮಾ ಮೇಲೆ ಎಲ್ಲಿಲ್ಲದ ನಿರೀಕ್ಷೆಯಿದೆ.
ಈ ಸಿನಿಮಾದಲ್ಲಿ ಸಾಕಷ್ಟು ಮೊದಲುಗಳಿವೆ. ಶಿವಣ್ಣನಿಗೆ ಯೋಗರಾಜ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ. ಹಾಗೇ ಶಿವಣ್ಣ ಹಾಗೂ ಪ್ರಭದೇವ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ. ಹಾಗೇ ಪ್ರಭುದೇವಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ. ಹೀಗಾಗಿ 'ಕರಟಕ ದಮನಕ' ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಕಾದು ಕೂತಿದ್ದವರು ಅದೆಷ್ಟೋ ಮಂದಿ.

ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡುವ ರಾಕ್ಲೈನ್ ಪ್ರೊಡಕ್ಷನ್ಸ್ ಅಂತಹ ಈ ಪ್ರಾಜೆಕ್ಟ್ಗೆ ಹಣ ಹೂಡಲಾಗಿದೆ. ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ಕಾಮಿಡಿ ಕಿಲಾಡಿಗಳು. ರವಿಶಂಕರ್, ರಂಗಯಾಣ ರಘು ಅಂತಹ ಕಲಾವಿದರ ಸಂಗಮ ಆಗಿದೆ. ಹಾಗಿದ್ದರೆ, ಯೋಗರಾಜ್ ಭಟ್ಟರ ಹೊಸ ಸಿನಿಮಾ ಹೇಗಿದೆ? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯಲು ಮುಂದೆ ಓದಿ.
'ಕರಟಕ ದಮನಕ' ಕಥೆಯೇನು?
'ಕರಟಕ ದಮನಕ' ಇದೊಂದು ಕುತಂತ್ರಿ ನರಿಗಳ ಸ್ವಭಾವವನ್ನು ಹೋಲುವ ಕಥೆ. ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಆ ಕುತಂತ್ರಿ ನರಿಗಳು. ಊರು ತುಂಬಾ ಮೋಸ ಮಾಡುತ್ತಾ? ಕಳ್ಳತನ ಮಾಡುತ್ತಾ ಬದುಕು ಸಾಗಿಸುವ ಕುತಂತ್ರಿಗಳು. ಇನ್ನೊಂದು ಕಡೆ ನೀರಿಗಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ಒಂದೂರಿನ ಜನರು. ನೀರಿಗಾಗಿ ನಡೆಯುವ ರಾಜಕೀಯ. ನೀರು ಸಿಗದೆ ನಗರಗಳಲ್ಲಿ ಬದುಕು ಕಟ್ಟಿ ಕೊಂಡ ಕೆಲವು ಜನರು. ಏನೇ ಕಷ್ಟ ಬಂದರೂ ಅದೇ ನನ್ನೂರು ಅನ್ನೋ ಮತ್ತೊಂದಿಷ್ಟು ಮಂದಿ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿ ನರಿಗಳು ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಸಿನಿಮಾದ ಕಥೆ.
ಭಟ್ಟರ ಧ್ಯೇಯ ಏನು?
ಯೋಗರಾಜ್ ಭಟ್ ಕಥೆ ಹೇಳುವ ಪರಿ ಸಿನಿಪ್ರಿಯರಿಗೆ ಪರಿಚಯವಿದೆ. ಕಥೆಯ ಜೊತೆಗೆ ಡೈಲಾಗ್ಗಳಿಗೂ ಹೆಚ್ಚು ಪ್ರಾಮುಖ್ಯತೆ ನೀಡುವ ಶೈಲಿ ಇವರದ್ದು. ಮೂರು ಅಂಶಗಳ ಮೇಲೆ 'ಕರಟಕ ದಮಕ' ಸಿನಿಮಾ ಕಥೆ ನಿಂತಿದೆ. ನೀರು, ಬೇರು, ತೇರು ಈ ಮೂರನ್ನೂ ಉಳಿಸುವುದು, ಅದನ್ನೇ ಇಟ್ಟುಕೊಂಡು ಪ್ರೇಕ್ಷಕರಿಗೊಂದು ಸಂದೇಶ ನೀಡುವುದು, ಆ ಸಂದೇಶದ ಜೊತೆಗೆ ಮನರಂಜನೆ ಕೊಡುವುದು ನಿರ್ದೇಶಕ ಯೋಗರಾಜ್ ಭಟ್ಟರ ಮುಖ್ಯ ಧ್ಯೆಯವಾಗಿತ್ತು ಎಂದಿನಿಸುತ್ತೆ.
ಶಿವಣ್ಣ-ಪ್ರಭುದೇವ ಕಾಂಬಿನೇಷನ್ ಹೇಗಿದೆ?
ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಅನುಭವಿ ನಟರೇ.. ಹೀಗಾಗಿ ಇವರ ನಟನಾ ಸಾಮರ್ಥ್ಯದ ಬಗ್ಗೆ ದುಸರಾ ಮಾತಿಲ್ಲ. ಆದರೆ, ಪ್ರೇಕ್ಷಕರಿಗೆ ಈ ಕಾಂಬಿನೇಷನ್ ತೀರಾ ಹೊಸದು. ಎಂದಿನಂತೆ ಶಿವಣ್ಣ ಎನರ್ಜಿ ಈ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಆಕ್ಷನ್, ಡೈಲಾಗ್, ಡ್ಯಾನ್ಸ್ ಎಲ್ಲದರೂ ಸೆಂಚುರಿ ಸ್ಟಾರ್ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಇನ್ನೊಂದು ಕಡೆ ಪ್ರಭುದೇವ ಪ್ರೇಕ್ಷಕರ ಮನಗೆಲ್ಲುತ್ತಾರೆ. ಹಾಸ್ಯದ ಸನ್ನಿವೇಶಗಳಲ್ಲಿ ಪ್ರಭುದೇವ ಮಿಂಚಿದ್ದಾರೆ. ಇನ್ನು ಹಾಡುಗಳಲ್ಲಿ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಇವರಿಬ್ಬರ ಜೋಡಿ ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು.

ಉಳಿದ ಪಾತ್ರಗಳು ಹೇಗಿವೆ?
ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಇಬ್ಬರು ನಾಯಕಿಯರು. ಇವರ ಪಾತ್ರವನ್ನು ಯೋಗರಾಜ್ ಭಟ್ಟರು ಅಚ್ಚು ಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಚಂದ್ರು ಕೇವಲ ಎರಡು ಸೀನ್ಗಳಿಗೆ ಸೀಮಿತ. ರಂಗಾಯಣ ರಘುಗೆ ಪಾತ್ರವೂ ಕಮ್ಮಿಯಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ರವಿಶಂಕರ್ ಖಳನಾಯಕನಾಗಿ ಮಿಂಚಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ತನಿಕೆಲ್ಲ ಭರಣಿ ಕನ್ನಡಿಗರಿಗೆ ಇಷ್ಟ ಆಗುತ್ತಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳ ತಂಡವೇ ಇಲ್ಲಿದೆ.
'ಕರಟಕ ದಮನಕ' ಪ್ಲಸ್ ಏನು?
ಶಿವಣ್ಣ ಹಾಗೂ ಪ್ರಭುದೇವ ಕಾಂಬಿನೇಷನ್ ಸಿನಿಮಾ ಹೈಲೈಟ್ಗಳಲ್ಲೊಂದು. ವಿ ಹರಿಕೃಷ್ಣ ಕಂಪೋಸ್ ಹಾಕಿದ ಮೂರು ಹಾಡುಗಳನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ. ಯೋಗರಾಜ್ ಭಟ್ಟರ ಡೈಲಾಗ್ಸ್ ಕ್ಲಿಕ್ ಆಗಿದೆ. ಅದರಲ್ಲೂ ಪ್ರಭುದೇವಗಾಗಿ ಬರೆದ ಡೈಲಾಗ್ ಪ್ರೇಕ್ಷಕರನ್ನು ನಗಿಸುತ್ತದೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಚೆನ್ನಾಗಿದೆ.
'ಕರಟಕ ದಮನಕ' ಮೈನಸ್ ಏನು?
'ಕರಟಕ ದಮನಕ' ಸಿನಿಮಾದ ಕಥೆಯ ಎಳೆ ಚೆನ್ನಾಗಿದೆ. ಸಮಾಜಕ್ಕೆ ಭಟ್ಟರು ಮನರಂಜನೆಯ ಜೊತೆಗೆ ಸಂದೇಶ ನೀಡುವುದಕ್ಕೆ ಹೊರಟಿದ್ದಾರೆ ಅನ್ನೋದು ಹೌದು. ಈ ಬಾರಿ ಕೂಡ ಸ್ಕ್ರೀನ್ ಪ್ಲೇನಲ್ಲಿ ಸೋತಿದ್ದಾರೆ ಅನಿಸುತ್ತೆ. ಅಲ್ಲದೆ ಕಥೆಯ ಮೇಲೆ ಇನ್ನಷ್ಟು ವರ್ಕ್ಔಟ್ ಮಾಡಬೇಕಿತ್ತು. ಒಂದು ಎಳೆ ಕಥೆಯನ್ನು ಎಳೆದು ಅದಕ್ಕೆ ತಮ್ಮ ಟಿಪಿಕಲ್ ಡೈಲಾಗ್ಗಳನ್ನು ತುಂಬಿಸಿ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇದು ಸಿನಿಮಾ ಮೇಜರ್ ಮೈನಸ್ ಪಾಯಿಂಟ್. ಕಥೆ ಹಾಗೂ ಸ್ಕ್ರೀನ್ ಪ್ಲೇ ಮೇಲೆ ಇನ್ನೂ ಹೆಚ್ಚು ಗಮನ ಹರಿಸಿದ್ದರೆ, ಇದೊಂದು ಅದ್ಬುತ ಸಿನಿಮಾ ಆಗುತ್ತಿತ್ತು. ಯೋಗ್ರಾಜ್ ಭಟ್ಟರು ಆ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ ಅನ್ನಬಹುದು.


Click it and Unblock the Notifications











