Akhanda 2 Review: ಸನಾತನ ಧರ್ಮದ ಬೋಧನೆ.. ಚೀನಾ,ಟಿಬೆಟ್ ಗಡಿ ಸಂಘರ್ಷ.. 'ಅಖಂಡ 2' ಏನಿಲ್ಲ ಏನಿಲ್ಲ!
ನಂದಮೂರಿ ಬಾಲಕೃಷ್ಣ ಹಾಗೂ ಬೋಯಪಾಟಿ ಶ್ರೀನು ಈ ಜೋಡಿಯ 'ಅಖಂಡ' ಬಾಕ್ಸಾಫೀಸ್ನಲ್ಲಿ ಗದ್ದಲ ಎಬ್ಬಿಸಿತ್ತು. ಸೋಲಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಇವರಿಬ್ಬರಿಗೂ ಮತ್ತೆ ಯಶಸ್ಸಿನ ರುಚಿ ತೋರಿಸಿದ್ದೇ 'ಅಖಂಡ'. ಇದೇ ಯಶಸ್ಸಿನ ಬೆನ್ನತ್ತಿ ಹೊರಟಿತ್ತು ಈ ಜೋಡಿ. ಅದುವೇ 'ಅಖಂಡ 2'. ಬಾಲಯ್ಯನ ಲುಕ್, ಖದರ್, ಸಿನಿಮಾದ ಟ್ರೈಲರ್ಗಳು ಕಣ್ಣಿಗೆ ಹಬ್ಬವನ್ನೇ ನೀಡಿದ್ದವು.
'ಅಖಂಡ 2'ನಲ್ಲಿ ನಂದಮೂರಿ ಬಾಲಕೃಷ್ಣ, ಸಂಯುಕ್ತಾ, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಆಚಂಟ ಮತ್ತು ಗೋಪಿ ಆಚಂಟ 14 ರೀಲ್ಸ್ ಪ್ಲಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ, ಬಾಲಕೃಷ್ಣ ಪುತ್ರಿ ತೇಜಸ್ವಿನಿ ನಂದಮೂರಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ.

ಬೋಯಪಾಟಿ ಶ್ರೀನು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರೆ, ಥಮನ್. ಎಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿ. ರಾಂಪ್ರಸಾದ್ ಮತ್ತು ಸಂತೋಷ್ ಕ್ಯಾಮರಾ ವರ್ಕ್ ಮಾಡಿದ್ದು, ತಮ್ಮಿರಾಜು ಎಡಿಟಿಂಗ್ ಇದೆ. ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ. ಹಾಗಿದ್ದರೆ, 'ಅಖಂಡ 2' ಸಿನಿಮಾ ಹೇಗಿದೆ? ಸಿನಿಮಾದ ಕಥೆಯೇನು? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಅಖಂಡ 2' ಕಥೆಯೇನು?
ಚೀನಾದ ಸೇನೆ ಭಾರತದ ಸಮಗ್ರತೆಗೆ ಧಕ್ಕೆ ತರಲು ಸಂಚು ರೂಪಿಸುತ್ತದೆ. ಇಲ್ಲಿಂದ 'ಅಖಂಡ 2' ಸಿನಿಮಾದ ಕಥೆ ಶುರುವಾಗುತ್ತೆ. ಮಹಾ ಕುಂಭಮೇಳದ ವೇಳೆ ಗಂಗಾ ನದಿಯಲ್ಲಿ ವೈರಸ್ ಸೇರಿಸಿ ದಾಳಿ ಮಾಡಿಸಲಾಗುತ್ತೆ. ಇದಕ್ಕೆ ಭಾರತದ ರಾಜಕೀಯ ಮುಖಂಡ (ಕಬೀರ್ ಸಿಂಗ್) ಸಹಕಾರ ನೀಡುತ್ತಾನೆ. ಈ ವೈರಸ್ ದಾಳಿಗೆ ತುತ್ತಾದ ಜನರಿಗಾಗಿ ಬಾಲಮುರಳಿ ಕೃಷ್ಣ (ಬಾಲಕೃಷ್ಣ) ಪುತ್ರಿ ಜನನಿ (ಹರ್ಷಾಲಿ) ಲಸಿಕೆ ಕಂಡು ಹಿಡಿಯುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಲಸಿಕೆ ತಯಾರಿಸುವುದನ್ನು ತಡೆಯುವುದಕ್ಕೆ ಪ್ರಯತ್ನ ಮಾಡುತ್ತೆ. ಆಗ ಅಖಂಡ (ಬಾಲಕೃಷ್ಣ) ಎಂಟ್ರಿ ಕೊಡುತ್ತಾನೆ. ಇಲ್ಲಿಂದ ಸಿನಿಮಾದಲ್ಲಿ ಅಖಂಡನ ಅಸ್ತಿತ್ವ ಹಾಗೂ ಸನಾತನ ಧರ್ಮಕ್ಕಾಗಿ ನಡೆಸುವ ಹೋರಾಟವೇ ಕಥೆಯೇ ಕೇಂದ್ರಬಿಂದುವಾಗಿ ಮುಂದಕ್ಕೆ ಸಾಗುತ್ತೆ.

ಟೆಕ್ನಿಕಲ್ ಹೈಲೈಟ್ಸ್ ಏನು?
'ಅಖಂಡ'ದಲ್ಲಿ ಅಬ್ಬರಿಸಿದ್ದ ಸಂಗೀತ ನಿರ್ದೇಶಕ ಥಮನ್ 'ಅಖಂಡ 2'ನಲ್ಲಿ ನಿರಾಶೆ ಮೂಡಿಸಿದ್ದಾರೆ. ಹಿನ್ನೆಲೆ ಸಂಗೀತದಲ್ಲೂ ಹೊಸದೇನು ಕಾಣುವುದಿಲ್ಲ. ರಾಮ್-ಲಕ್ಷ್ಮಣ್ ನಿರ್ದೇಶಿಸಿದ ಆಕ್ಷನ್ ಸೀನ್ಗಳು ಬಾಲಕೃಷ್ಣನ ಇಮೇಜ್ಗೆ ತಕ್ಕಂತೆ ಇಲ್ಲ. ಇನ್ನು ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಕೂಡ ಕಳಪೆಯಾಗಿದೆ. ಸಿ.ರಾಂಪ್ರಸಾದ್ ಮತ್ತು ಸಂತೋಷ್ ಕ್ಯಾಮರಾ ವರ್ಕ್ ಕಣ್ಣಿಗೆ ತಂಪುಕೊಡುತ್ತದೆ.
'ಅಖಂಡ 2' ಪ್ಲಸ್ ಪಾಯಿಂಟ್ ಏನು?
'ಅಖಂಡ 2'ದಲ್ಲಿ ನಂದಮೂರಿ ಬಾಲಕೃಷ್ಣ ಅವರೇ ಹೈಲೈಟ್. ಫಸ್ಟ್ ಹಾಫ್ನಲ್ಲಿ ಬಾಲಯ್ಯನ ಪ್ರಭಾವ ಅಷ್ಟಾಗಿ ಕಾಣುವುದಿಲ್ಲ. ಅದೇ ದ್ವಿತೀಯಾರ್ಧದಲ್ಲಿ ಬಾಲಕೃಷ್ಣ ಅವರ ಮಾಸ್ ಸೀನ್ಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತವೆ. ಬಾಲಯ್ಯ ಅವರ ಮಾಸ್ ಡೈಲಾಗ್ಗಳು ಮಜಾ ಕೊಡುತ್ತವೆ. ಕನ್ನಡದ ಬಗ್ಗೆ ಬಾಲಕೃಷ್ಣ ಬಿಡುವ ಡೈಲಾಗ್ ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳುತ್ತವೆ. ಇಷ್ಟು ಬಿಟ್ಟರೆ, ಸಿನಿಮಾದಲ್ಲಿ ಪಾಸಿಟಿವ್ ಅನ್ನುವಂತಹದ್ದು ಏನೂ ಇಲ್ಲ.
'ಅಖಂಡ 2' ಮೈನಸ್ ಪಾಯಿಂಟ್ ಏನು?
'ಅಖಂಡ 2' ಪ್ಲಸ್ ಪಾಯಿಂಟ್ಗಿಂತ ಮೈನಸ್ ಪಾಯಿಂಟ್ಗಳೇ ಹೆಚ್ಚು. ಫಸ್ಟ್ ಹಾಫ್ನಲ್ಲಿ ಏನಂದ್ರೆ ಏನೂ ಇಲ್ಲ. ಇನ್ನು ಬಾಲಯ್ಯನ ಪಾತ್ರಕ್ಕೆ ಸ್ಕೋಪ್ ಇಲ್ಲವೇನೋ ಅಂತ ಅನಿಸುತ್ತೆ. 'ಅಖಂಡ' ಪಾತ್ರದಲ್ಲಿ ಬಾಲಯ್ಯ ಇಷ್ಟ ಆಗೋದು ಬಿಟ್ಟರೆ, ಉಳಿದ ಸನ್ನಿವೇಶಗಳಲ್ಲಿ ಇಷ್ಟ ಆಗುವುದಿಲ್ಲ. ಒಂದು ಫೈಟ್ ಮತ್ತು ಹಾಡಿಗೆ ಸೀಮಿತವಾಗಿಟ್ಟರೇ ಅಂತ ಅನಿಸುತ್ತೆ. ಚೀನಾ, ಟಿಬೆಟ್, ಮಣಿಪುರ ಗಡಿ ಸಂಘರ್ಷದ ದೃಶ್ಯಗಳಲ್ಲಿ ಗೊಂದಲವಿದೆ. ದ್ವಿತೀಯಾರ್ಧದಲ್ಲೂ ಅದೇ ಚೀನಾ ಕುತಂತ್ರಗಳ ಹಳೆಯ ಸರಕನ್ನು ನೀಡಿದ್ದಾರೆ. ಖಳನಾಯಕನಾಗಿ ಆದಿ ಪಿನಿಸೆಟ್ಟಿ ಸೀನ್ಗಳು ತಾಳ್ಮೆಯನ್ನು ಕೆರಳಿಸುತ್ತವೆ. ಇನ್ನು ನಿರ್ದೇಶಕ ಬೋಯಪಾಟಿ ಶ್ರೀನು ಅಖಂಡ ಪಾತ್ರದ ಸನಾತನ ಧರ್ಮದ ಬೋಧನೆ ಮಾಡುತ್ತಿದ್ದಾರೆಂದು ಅನಿಸುತ್ತೆ. ಸಂಯುಕ್ತಾ ಮೆನನ್ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ. ಹರ್ಷಾಲಿ ಮಲ್ಹೋತ್ರಾ ಪಾತ್ರವೂ ಅಷ್ಟಕ್ಕಷ್ಟೇ. ಕೆಲವೆಡೆ ಸಂಭಾಷಣೆಗಳಿಗೆ ಲಿಪ್ ಸಿಂಕ್ ಆಗಿಲ್ಲ.
ಕೊನೆಯಲ್ಲಿ
'ಅಖಂಡ ತಾಂಡವಂ' (ಅಖಂಡ 2) ಬಗ್ಗೆ ಕೊನೆಯಲ್ಲಿ ಹೇಳುವುದಾರೇ, 'ಅಖಂಡ' ಪ್ರೇಕ್ಷಕರಿಗೆ ನಿರಾಸೆ ಮೂಡಿಸುತ್ತವೆ. ಈ ಸಿನಿಮಾದಲ್ಲಿ ಪ್ಲಸ್ಗಿಂತ ಮೈಸನ್ ಪಾಯಿಂಟ್ಗಳೇ ಹೆಚ್ಚಿರುತ್ತವೆ. ನಿರ್ದೇಶಕ ಬೋಯಪಾಟಿ ಶ್ರೀನು ನಿರ್ದೇಶನ ಚೆನ್ನಾಗಿಲ್ಲ. ಬಾಲಕೃಷ್ಣ ಅವರ ಎಲಿವೇಶನ್ಗಳನ್ನು ಹೊರತುಪಡಿಸಿದರೆ ಈ ಸಿನಿಮಾದಲ್ಲಿ ವಾವ್ಹ್ ಅನ್ನುವಂತಹದ್ದು ಏನಿಲ್ಲ.


Click it and Unblock the Notifications