ಪತಿಬೇಕು.ಕಾಂ ವಿಮರ್ಶೆ: ಹಾಸ್ಯವೇ ಜೀವ, ಹಾಸ್ಯವೇ ಎಲ್ಲ
ಗಂಭೀರ ಸಾಮಾಜಿಕ ಸಂಗತಿಯನ್ನು ಹಾಸ್ಯಮಯವಾಗಿ ಚಿತ್ರಿಸುವ ಪ್ರಯತ್ನದ ಸಿನಿಮಾ 'ಪತಿಬೇಕು.ಕಾಂ'.
ಮದುವೆ ಲಘುವಾದ ವಿಷಯವಲ್ಲ. ಮದುವೆಮನೆ ಎಂದರೆ ಅದರಲ್ಲಿ ಸಂಭ್ರಮ ಇದ್ದರೂ, ಅದರ ಹಿಂದೆ ನೂರಾರು ಸಂಕಟಗಳು, ಒದ್ದಾಟಗಳಿರುತ್ತವೆ. ಮಿಗಿಲಾಗಿ ಮದುವೆಗೆ ಗಂಡು/ಹೆಣ್ಣು ಹುಡುಕುವುದೇ ಪೋಷಕರಿಗೆ ಹರಸಾಹಸ.
ವಯಸ್ಸು ಮೀರುತ್ತಿರುವ ಮಗಳಿಗೆ ಗಂಡು ಹುಡುಕಲು ಹೆಣಗಾಡುವ ಪೋಷಕರ ಗಂಭೀರ ಸಮಸ್ಯೆಯನ್ನೇ ಮನರಂಜನಾತ್ಮಕವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್. ಸೂಕ್ಷ್ಮ ಸಂಗತಿಯನ್ನು ತಮಾಷೆಯನ್ನಾಗಿಸುವ ಪ್ರಯತ್ನ ಚಿತ್ರದ ಮಿತಿಯೂ ಹೌದು.
ಚಿತ್ರ: ಪತಿಬೇಕು.ಕಾಂ
ನಿರ್ದೇಶನ: ರಾಕೇಶ್
ನಿರ್ಮಾಣ: ರಾಕೇಶ್, ಶ್ರೀನಿವಾಸ್, ಮಂಜುನಾಥ್
ಛಾಯಾಗ್ರಹಣ: ಯೋಗಿ
ಸಂಕಲನ: ವಿಜಯ್ ಎಂ. ಕುಮಾರ್
ಹಿನ್ನೆಲೆ ಸಂಗೀತ: ಹರ್ಷವರ್ಧನ್ ರಾಜ್
ಕಲಾವಿದರು: ಶೀತಲ್ ಶೆಟ್ಟಿ, ಕೃಷ್ಣ ಅಡಿಗ, ಹರಿಣಿ, ಇತರರು.
ಅನೇಕರ ಕಥೆಯಿದು
ಮದುವೆ ವಯಸ್ಸಿಗೆ ಬಂದ ಮಗಳಿಗೆ ಗಂಡು ಹುಡುಕುವುದರಲ್ಲಿ ಬಸವಳಿಯುವ ಬಹುತೇಕ ಅಪ್ಪ ಅಮ್ಮಂದಿರ ಕಥೆಯಿದು. ಮಧ್ಯಮವರ್ಗದ ಕುಟುಂಬವೊಂದು ವರದಕ್ಷಿಣೆಯ ಬೇಡಿಕೆಯಿಂದಾಗಿ ಮಗಳ ಮದುವೆ ಮಾಡಲಾಗದೆ ಕಂಗೆಟ್ಟಿದ್ದಾರೆ. ಸಿನಿಮಾದ ಕಥೆ ಪೋಷಕರ (ಕೃಷ್ಣ ಅಡಿಗ, ಹರಿಣಿ) ಪಡಿಪಾಟಲಿಗಿಂತಲೂ ಮಗಳ ಸುತ್ತವೇ ಸುತ್ತುತ್ತದೆ. ಭಾಗ್ಯಳನ್ನು (ಶೀತಲ್ ಶೆಟ್ಟಿ) ನೋಡಲು ಬರುವ ಗಂಡುಗಳೆಲ್ಲರದೂ ವರದಕ್ಷಿಣೆಯದ್ದೇ ಬೇಡಿಕೆ.
ಹಾಸ್ಯವೇ ಜೀವಾಳ
ಹಾಸ್ಯ ಚಿತ್ರದ ಜೀವಾಳ. ಪ್ರತಿ ಪಾತ್ರವನ್ನೂ ಹಾಸ್ಯದ ದೃಷ್ಟಿಯಿಂದಲೇ ಸೃಷ್ಟಿಸಿರುವುದು ಮನರಂಜನೆ ನೀಡುವ ನಿರ್ದೇಶಕರ ತುಡಿತಕ್ಕೆ ಪೂರಕವಾಗಿದೆ. ಸಿನಿಮಾಕ್ಕೆ ಕೊಡಬಹುದಾಗಿದ್ದ ಗಾಂಭೀರ್ಯವನ್ನ ಕೂಡ ಹಾಸ್ಯದ ಅಮುಲಿನಲ್ಲಿ ಮುಳುಗಿಸಿದ್ದಾರೆ.
ನಗುವೇ ಮೂಲ ಮಂತ್ರ
ತನ್ನ ಮದುವೆಗೆ ಬೇಕಾದ ಹಣವನ್ನು ಸಂಗ್ರಹಿಸಲು ನಾಯಕಿ ಅನುಸರಿಸುವ ತಂತ್ರಗಳು, ತಾನೇ ಮದುವೆ ಬ್ರೋಕರ್ ಕಾರ್ಯಕ್ಕೆ ಇಳಿದು ಹಣ ಸಂಪಾದಿಸುವುದು, ಲವ್ ಮ್ಯಾರೇಜ್ ಮಾಡಿಕೊಳ್ಳುವುದಕ್ಕಾಗಿಯೇ ಹುಡುಗರನ್ನು ಹುಡುಕುವುದು, ಕೊನೆಗೆ ಮದುವೆಗಾಗಿ ಇಡೀ ಕುಟುಂಬವೇ ನಾಟಕ ಮಾಡುವುದು ಅಲ್ಲಲ್ಲಿ ನಗು ಮೂಡಿಸಿದರೂ, ಹಾಸ್ಯದ ಪರಿಣಾಮ ಹೆಚ್ಚುಕಾಲ ಉಳಿಯುವುದಿಲ್ಲ.
ಪತಿ ಸಿಗುತ್ತಾನೆಯೇ?
ವರದಕ್ಷಿಣೆ ಬಯಸದ, ಒಳ್ಳೆಯ ಗುಣಗಳನ್ನು ಹೊಂದಿರುವ ಗಂಡನ್ನು ಹುಡುಕಲು ಸ್ವತಃ ಅಖಾಡಕ್ಕೆ ಇಳಿಯುವ ನಾಯಕಿ, ತನಗೆ ಸೂಕ್ತನಾದ ಪತಿಯನ್ನು ಹುಡುಕಿಕೊಳ್ಳುತ್ತಾಳೆಯೇ? ಮಗಳಿಗೆ 61 ಗಂಡುಗಳನ್ನು ನೋಡಿ ಸುಸ್ತಾದ ಪೋಷಕರು, ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಳ್ಳುವ ಮಗಳಿಗೆ ಬೆಂಬಲ ನೀಡುತ್ತಾರೆಯೇ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಿ.
ನಾಯಕಿ ಶೀತಲ್ ಶೆಟ್ಟಿ
ಇಡೀ ಚಿತ್ರವನ್ನು ಶೀತಲ್ ಶೆಟ್ಟಿ ಆವರಿಸಿಕೊಳ್ಳುತ್ತಾರೆ. ಚಿತ್ರಕ್ಕೆ ಒಬ್ಬ ಹೀರೊ ಸ್ಕ್ರಿಪ್ಟ್, ಇನ್ನೊಂದು ಹೀರೋ ಶೀತಲ್. ಮೋಸ, ವಂಚನೆಯೂ ಇಲ್ಲಿ ಒಪ್ಪಿತ ಅಂಶ ಎಂಬಂತೆ ನಿರ್ದೇಶಕರು ಭಾವಿಸಿದ್ದಾರೆ.
ಸರಳ ಪಾತ್ರಗಳು
ಮನರಂಜನೆಯೇ ಪ್ರಧಾನವಾಗಿರುವುದರಿಂದ ಎಲ್ಲ ಪಾತ್ರಗಳಿಗೂ ನಗಿಸುವ ಹೊಣೆ ಹಂಚಲಾಗಿದೆ. ಹಲವು ಮಿತಿಗಳ ನಡುವೆಯೇ ಶೀತಲ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದ ಕಲಾವಿದರು ಸಹ ನಿರ್ದೇಶಕರ ಆಶಯಕ್ಕೆ ಅನುಗುಣವಾಗಿ ಪಾತ್ರವನ್ನು ನಿಭಾಯಿಸಿದ್ದಾರೆ.
ತಾಂತ್ರಿಕ ಕಾರ್ಯ
ನಿರ್ದೇಶನದ ಜತೆಗೆ ಕಥೆಯನ್ನೂ ಹೊಸೆದಿರುವ ರಾಕೇಶ್, ಚಿತ್ರಕಥೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರೆ ಸಿನಿಮಾ ಹೆಚ್ಚು ಅಚ್ಚುಕಟ್ಟಾಗುತ್ತಿತ್ತು. ಹಿನ್ನೆಲೆ ಸಂಗೀತ ಮತ್ತು ಏಕೈಕ ಹಾಡಿನ ಸಂಗೀತ ಮೆಚ್ಚುವಂತಿದೆ.


Click it and Unblock the Notifications











