Maryade Prashne Review; ಮಧ್ಯಮ ವರ್ಗದ್ದು ಬರೀ 'ಮರ್ಯಾದೆ ಪ್ರಶ್ನೆ' ಅಷ್ಟೇ
ಒಂದು ಸಿನಿಮಾ ಆಗುವುದಕ್ಕೆ ಕಥೆ ಎಲ್ಲೆಲ್ಲಿಂದ ಬೇಕಾದರೂ ಹುಟ್ಟಬಹುದು. ಯಾರದ್ದೋ ಬದುಕನ್ನು ನೋಡಿ ಕಥೆ ಹುಟ್ಟಿಕೊಳ್ಳಬಹುದು. ಇಲ್ಲ ನಮ್ಮ ಸುತ್ತಮುತ್ತವೇ ನಡೆಯುವ ಘಟನೆಗಳೇ ಸಿನಿಮಾಗಳಿಗೆ ಕಥೆಯಾಗಬಹುದು. ಒಟ್ನಲ್ಲಿ ಕಥೆ ಬರೆಯೋನ ಕಣ್ಣಿಗೆ ಯಾರಿಗೂ ಸಿಗದ ಘಟನೆಗಳು ಸಿಕ್ಕಿ ಬಿಟ್ಟರೆ ಅಲ್ಲಿಗೆ ಮುಗೀತು. ಮುಂದೆ ಎಲ್ಲವೂ ಸರಾಗವಾಗಿ ನಡೆಯುತ್ತೆ. ಸಿನಿಮಾ ನೋಡಿದ ಮೇಲೆ ಇಂತಹದ್ದೊಂದು ಭಾವನೆ ಮೂಡಿಸುತ್ತೆ 'ಮರ್ಯಾದೆ ಪ್ರಶ್ನೆ'.
ಹೌದು, ಇದೊಂದು ಮಿಡಲ್ ಕ್ಲಾಸ್ ಕುಟುಂಬ ನೂರೆಂಟು ಕನಸುಗಳಲ್ಲಿ ಕೆಲವನ್ನು ಆಯ್ದು ಮಾಡಿದ ಕಥೆ. ಮಧ್ಯಮ ವರ್ಗದ ಜನರಿಗೆ ಆ ಜಂಜಾಟದ ಬದುಕಿನಿಂದ ಮೇಲೆ ಬರೆಬೇಕು. ಹಣ ಮಾಡಬೇಕು. ಆಸ್ತಿ ಮಾಡಬೇಕು. ಹೀಗೆ ನೂರೆಂಟು ಕನಸು. ಆದರೆ ಹಾಗಾಗುವುದಕ್ಕೆ ಬೀದಿಗೆ ಇಳಿದು ವ್ಯಾಪಾರ ಮಾಡುವುದಕ್ಕೆ ಆಗಲ್ಲ. ಸ್ವಂತ ಉದ್ಯಮಕ್ಕೆ ಕೈ ಹಾಕುವುದಕ್ಕೆ ಆಗಲ್ಲ. ಯಾಕಂದ್ರೆ ಏನಾದರೂ ಯಡವಟ್ಟಾದರೆ 'ಮರ್ಯಾದೆ ಪ್ರಶ್ನೆ'.

ಹೀಗೆ ಮಧ್ಯಮ ವರ್ಗದ ಮನಸ್ಥಿತಿಯನ್ನು ಇಟ್ಟುಕೊಂಡು ಒಂದು ಭಾವನಾತ್ಮಕ ಕಥೆಯನ್ನು ಆರ್ಜೆ ಪ್ರದೀಪ ಹೆಣೆದಿದ್ದಾರೆ. ನಾಗರಾಜ್ ಸೋಮಯಾಜಿ ಆಕ್ಷನ್ ಕಟ್ ಹೇಳಿದ್ದಾರೆ. ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು ಸೇರಿದಂತೆ ಹಲವು ಬಣ್ಣ ಹಚ್ಚಿದ್ದಾರೆ. ಟೈಟಲ್ನಿಂದಲೇ ಗಮನ ಸೆಳೆದಿದ್ದ ಈ ತಂಡಕ್ಕೂ ಗೆಲ್ಲಲೇ ಬೇಕು.. ಯಾಕಂದ್ರೆ 'ಮರ್ಯಾದೆ ಪ್ರಶ್ನೆ'.
'ಮರ್ಯಾದೆ ಪ್ರಶ್ನೆ' ಕಥೆ ಏನು?
ಮಿಡಲ್ ಕ್ಲಾಸ್ ಕುಟುಂಬದ ಮೂವರು ಯುವಕರ ಕನಸಿನ ಕಥೆ. ಸತೀಶ, ಸೂರಿ ಹಾಗೂ ಮಂಜ ಈ ಮೂವರ ಮೇಲೆ ಈ ಸಿನಿಮಾದ ಕಥೆ ಸಾಗುತ್ತೆ. ಸೂರಿ ಪಾತ್ರದಲ್ಲಿ ರಾಕೇಶ್ ಅಡಿಗ, ಸತೀಶ್ ಪಾತ್ರದಲ್ಲಿ ಸುನಿಲ್ ರಾವ್, ಮಂಜನಾಗಿ ಪೂರ್ಣಚಂದ್ರ ಮೈಸೂರು ನಟಿಸಿದ್ದಾರೆ. ಈ ಮೂವರು ಬಾಲ್ಯದ ಗೆಳೆಯರು. ಒಬ್ಬೊಬ್ಬರದ್ದು ಒಂದೊಂದು ಕನಸು. ಆದರೆ, ಹಣ ಮಾಡಬೇಕು ಅನ್ನೋದು ಎಲ್ಲರ ಅಂತಿಮ ಗುರಿ. ಏನಾದರೂ ಕೆಲಸ ಮಾಡಿ ಹಣ ಮಾಡುವುದು ಮರ್ಯಾದೆ ಅಡ್ಡ ಬರುತ್ತೆ. ಹೀಗಿರುವಾಗ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇರುತ್ತೆ. ಈ ವೇಳೆ ಈ ಮೂವರ ಬದುಕಿನಲ್ಲಿ ಒಂದು ದುರ್ಘಟನೆ ನಡೆಯುತ್ತೆ. ಅಲ್ಲಿಂದ ಅಸಲಿಗೆ ಕಥೆ ಇನ್ನೊಂದು ವೇಗದಲ್ಲಿ ಸಾಗುತ್ತೆ.
ನಟನೆ ಹೇಗಿದೆ?
ರಾಕೇಶ್ ಅಡಿಗ, ಸುನೀಲ್ ರಾವ್ ಹಾಗೂ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿ ನಟಿಸಿದವರು ಇವರೇ. ಈ ಮೂವರಲ್ಲಿ ಸ್ವಲ್ಪ ಜಾಸ್ತಿ ಸ್ಕೋಪ್ ಸಿಕ್ಕಿದ್ದು ರಾಕೇಶ್ ಅಡಿಗಗೆ. ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಾರ್ಪೊರೇಟರ್ ಆಗಬೇಕು ಅನ್ನುವ ಕನಸು ಹೊತ್ತ ರಾಕೇಶ್ ನಟನೆ ಇಷ್ಟ ಆಗುತ್ತೆ. ಡಿಲೆವರಿ ಬಾಯ್ ಆಗಿ ಸುನೀಲ್ ರಾವ್, ಕ್ಯಾಬ್ ಡ್ರೈವರ್ ಆಗಿ ಪೂರ್ಣಚಂದ್ರ ಮೈಸೂರು ನಟನೆ ಬಗ್ಗೆ ಕೆಮ್ಮುವ ಹಾಗಿಲ್ಲ. ಈ ಮೂವರ ಮಧ್ಯೆ ತೇಜು ಬೆಳವಾಡಿಯ ನೈಜ ಅಭಿನಯ ಹೈಲೈಟ್ ಆಗುತ್ತೆ. ಹಾಗೇ ನಾಗೇಂದ್ರ ಶಾ, ಟಿ ಎಸ್ ನಾಗಾಭರಣ, ಪ್ರಕಾಶ್ ತುಮ್ಮಿನಾಡು ಪ್ರಮುಖ ಪಾತ್ರಗಳಿಗೆ ಬೆನ್ನೆಲುಬಾಗಿದ್ದಾರೆ.
ತಂತ್ರಜ್ಞರ ಕೆಲಸ ಹೇಗಿದೆ?
ನಾಗರಾಜ್ ಸೋಮಾಯಾಜಿ ನಿರ್ದೇಶನ ಇಷ್ಟ ಆಗುತ್ತೆ. ಮೊದಲ ಸಿನಿಮಾ ಆಗಿದ್ದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರು ಹಾಕಿದ ಶ್ರಮ ಎದ್ದು ಕಾಣುತ್ತೆ. ಆರ್ಜೆ ಪ್ರದೀಪ್ ಕಥೆ ಚೆನ್ನಾಗಿದೆ. ಅರ್ಜುನ್ ರಾಮು ಸಂಗೀತ ಮತ್ತು ಸಂದೀಪ್ ವಲ್ಲೂರಿ ಛಾಯಾಗ್ರಹಣ ಈ ಸಿನಿಮಾದ ಮತ್ತೊಂದು ಹೈಲೈಟ್.

ಪ್ಲಸ್ ಏನು?
ಈ ಸಿನಿಮಾ ನಿರ್ಮಾಣದ ವೇಳೆ ಕಲಾವಿದರಿಗಿಂತ ಹೆಚ್ಚಾಗಿ ಕಂಟೆಂಟ್ಗೆ ಒತ್ತು ಕೊಟ್ಟಿದ್ದು ಎದ್ದು ಕಾಣುತ್ತೆ. ಕಥೆ ತಕ್ಕಂತೆ ಪಾತ್ರವರ್ಗದ ಆಯ್ಕೆ ನಡೆದಿದೆ. ಈ ಮಾತನ್ನು ಚಿತ್ರತಂಡ ಹೇಳಿಕೊಂಡಿತ್ತು. ಅದು ಸಿನಿಮಾ ನೋಡಿದ ಮೇಲೆ ಸತ್ಯ ಅನಿಸುತ್ತೆ. ಸಂಗೀತ ಹಾಗೂ ಛಾಯಾಗ್ರಹಣ ಸಖತ್ ಆಗಿದೆ. ಕಲಾವಿದರ ನಟನೆ ತಳ್ಳಿ ಹಾಕುವ ಹಾಗಿಲ್ಲ. ಒಂದೊಳ್ಳೆ ಸಿನಿಮಾ ಮಾಡುವುದಕ್ಕೆ ಹಾಕಿರುವ ಶ್ರಮ ಎದ್ದು ಕಾಣುತ್ತೆ.
ಮೈನಸ್ ಏನು?
ಯಾವ ಸಿನಿಮಾನೂ ಪರ್ಫೆಕ್ಟ್ ಆಗಿರಲು ಸಾಧ್ಯವೇ ಇಲ್ಲ. ಏನಾದರೂ ಚಿಕ್ಕ ಪುಟ್ಟ ತಪ್ಪು ನಡೆದಿರುತ್ತೆ. ಈ ಸಿನಿಮಾ ಯುವಕರನ್ನು ಸೆಳೆಯಲೆಂದು ಮಾಡಿದಂತೆ ಭಾಸವಾಗುತ್ತೆ. ಹೀಗಾಗಿ ಡೈಲಾಗ್ಗಳಲ್ಲಿ ಬೀಪ್ ಸೌಂಡ್ಗಳು, ಆಗಾಗ ಎದ್ದು ಕಾಣುವ ಸೂಚನೆಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತವೆ. ಒಂದೆರಡು ಕಡೆಯಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡುವ ದೃಶ್ಯಗಳಿವೆ. ಅದು ಅಷ್ಟೊಂದು ಎಫೆಕ್ಟ್ ಆಗುವುದಿಲ್ಲ ಅನಿಸುತ್ತೆ. ಒಟ್ಟಿನಲ್ಲಿ ಒಂದೊಳ್ಳೆ ಸಿನಿಮಾ ಅಂತ ಹೇಳಬಹುದು.


Click it and Unblock the Notifications











