ನಾ ನೋಡಿದ ಸಿನಿಮಾ 'ಒಡೆಯ' ವಿಮರ್ಶೆ: ಇಷ್ಟವಾಗಿದ್ದು, ಕಷ್ಟವಾಗಿದ್ದು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿರುವ ಮಾಸ್ ಪ್ರೇಕ್ಷಕರಿಗಾಗಿಯೇ ವೀರಂ ಚಿತ್ರದ ರಿಮೇಕ್ ರೈಟ್ಸ್ ಅನ್ನು ನಿರ್ಮಾಪಕ ಸಂದೇಶ್ ನಾಗರಾಜ್ ತಂದಿರಬಹುದು.
'ಒಡೆಯ' ಚಿತ್ರ 2014ರಲ್ಲಿ ಬಿಡುಗಡೆಯಾಗಿದ್ದ, ಅಜಿತ್, ತಮನ್ನಾ ನಟನೆಯ ತಮಿಳಿನ ವೀರಂ ಚಿತ್ರದ ರಿಮೇಕ್. ಕನ್ನಡದ ನೇಟಿವಿಟಿಗೆ ತಕ್ಕಂತೆ, ಭಟ್ಟಿ ಇಳಿಸಿರುವ ಚಿತ್ರವಾಗಿರುವುದರಿಂದ, ಕಥೆಯಲ್ಲಿ ಯಾವುದೇ ಬದಲಾವಣೆ ಮಾಡುವ ಕೆಲಸಕ್ಕೆ ನಿರ್ದೇಶ ಎಂ.ಡಿ.ಶ್ರೀಧರ್ ಕೈಹಾಕಿಲ್ಲ.
ಒಡೆಯ ಚಿತ್ರದಲ್ಲಿ ಕ್ಲಾಸ್, ಮಾಸ್, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಹದವಾಗಿ ಬೆಸೆದಿದೆ. ಸಾಹಸ ದೃಶ್ಯಗಳು ತುಸು ಹೆಚ್ಚಾಯಿತು ಎಂದನಿಸಿದರೂ, ದರ್ಶನ್ ಅವರಿಗಿರುವ ಇಮೇಜ್ ಗಾಗಿ, ನಿರ್ದೇಶಕರು, ಇದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರಬಹುದು.
ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಸಿದರೆ, ದರ್ಶನ್ ತಮ್ಮ ದೇಹದಾರ್ಢ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಹಿಂದಿನ ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಕ್ಕೆ ಹೋಲಿಸಿದರೆ, ದರ್ಶನ್ ದಪ್ಪವಾಗಿದ್ದಾರೆ. ನಾಯಕ ಈ ರೀತಿ ಇರಬೇಕಾಗಿರುವುದು ಚಿತ್ರಕಥೆ ಡಿಮಾಂಡ್ ಮಾಡುತ್ತೆ ಎಂದು ಹೇಳಿದರೆ, ಅದು ಒಪ್ಪುವುದು ಕಷ್ಟ.
ಸಹೋದರರ ಪಾತ್ರವನ್ನು ಮಾಡಿದವರಿಗೆ, ಹೆಚ್ಚಿನ ಅವಕಾಶವನ್ನು ನೀಡಲಾಗಿದೆ
ಚಿತ್ರದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನಂದರೆ, ಕಲಾವಿದರಿಗೆ , ಅದರಲ್ಲೂ ಪ್ರಮುಖವಾಗಿ ಸಹೋದರರ ಪಾತ್ರವನ್ನು ಮಾಡಿದವರಿಗೆ, ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಆದರೆ, ಸಿಕ್ಕ ಅವಕಾಶವನ್ನು ಇವರೆಲ್ಲಾ ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಲು ಬರುವುದಿಲ್ಲ. ಪಂಕಜ್ ನಾರಾಯಣ್ ಮತ್ತು ಯಶಸ್ ಸೂರ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಮೊದಲ ಪ್ರಯತ್ನದಲ್ಲಿ ನಾಯಕಿ ಸನಾ ತಿಮ್ಮಯ್ಯ ಅವರ ನಟನೆ
ಮೊದಲ ಪ್ರಯತ್ನದಲ್ಲಿ ನಾಯಕಿ ಸನಾ ತಿಮ್ಮಯ್ಯ ಅವರ ನಟನೆ above ಎವರೇಜ್. ಖಳನಾಯಕನ ಪಾತ್ರದಲ್ಲಿ ನಟಿಸಿರುವ ಶರತ್ ಲೋಹಿತಾಶ್ವ ಮತ್ತು ರವಿಶಂಕರ್ ಅವರ ನಟನೆಯ ಬಗ್ಗೆ ಕೆಮ್ಮಂಗಿಲ್ಲ. ಇನ್ನು, ನಾಯಕಿಗ ತಂದೆಯ ಪಾತ್ರದಲ್ಲಿ ನಟಿಸಿರುವ ದೇವರಾಜ್, ತಾಯಿಯ ಪಾತ್ರದಲ್ಲಿ ನಟಿಸಿದ ಚಿತ್ರಾ ಶೆಣೈ ಅವರದ್ದು ಉತ್ತಮ ಅಭಿನಯ. ಇನ್ನು, ಡಿಸಿಯಾಗಿ, ನಾಯಕನ ಸ್ನೇಹಿತನಾಗಿ ನಟಿಸಿರುವ ರವಿಶಂಕರ್ ಗೌಡ ಅವರ ನಟನೆಯೂ ಚೆನ್ನಾಗಿದೆ.
ಹಾಸ್ಯನಟರಾದ ಚಿಕ್ಕಣ್ಣ, ಸಾಧು ಕೋಕಿಲಾ ಅವರ ನಟನೆ
ಚಿತ್ರದಲ್ಲಿನ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ, ಹಾಸ್ಯನಟರಾದ ಚಿಕ್ಕಣ್ಣ, ಸಾಧು ಕೋಕಿಲಾ ಅವರ ನಟನೆ. ಆರಂಭದ ಸೀನ್ ಗಳಲ್ಲಿ ಬರುವ ಹಾಸ್ಯನಟ ಭೋಜರಾಜ್ ವಾಮಂಜೂರು ಅವರ ನಟನೆಯೂ ಚೆನ್ನಾಗಿದೆ. ಚಿತ್ರದಲ್ಲಿ ಅಲ್ಲಲ್ಲಿ ಬೆಲ್ಟ್ ಕೆಳಗಿನ ಡೈಲಾಗುಗಳಿದ್ದರೂ, ಅದು, ಪ್ರೇಕ್ಷಕರಿಗೆ ಅಸಹ್ಯ ಎನ್ನಿಸುವುದಿಲ್ಲ.
ಎರಡೂ ಶೇಡ್ ಗಲ್ಲಿ ದರ್ಶನ್ ಅಭಿನಯ ಚೆನ್ನಾಗಿದೆ
ಇನ್ನು ದರ್ಶನ್ ಅವರದ್ದು ಎಂದಿನಂತೆ ಲೀಲಾಜಾಲ ನಟನೆ, ಡೈಲಾಗ್ ಡೆಲಿವರಿ. ಸಾಹಸ ದೃಶ್ಯಗಳಲ್ಲಿ ದರ್ಶನ್ ತಮ್ಮ ಎಂದಿನ ಖದರ್ ಅನ್ನು ಮುಂದುವರಿಸಿದ್ದಾರೆ. ಪ್ರೀತಿಯ ಅಣ್ಣನಾಗಿ, ರೌಡಿಗಳಿಗೆ ಸಿಂಹಸ್ವಪ್ನನಾಗಿ, ಈ ಎರಡೂ ಶೇಡ್ ಗಲ್ಲಿ ದರ್ಶನ್ ಅಭಿನಯ ಚೆನ್ನಾಗಿದೆ.
ಚಿತ್ರದ ಮೈನಸ್ ಪಾಯಿಂಟ್
ಚಿತ್ರದ ಮೈನಸ್ ಪಾಯಿಂಟ್, ಹಾಡುಗಳು ಮತ್ತು ಹಾಡಿನ ಕೊರಿಯೋಗ್ರಫಿ. ಮೊದಲಾರ್ಧದಲ್ಲಿ ಕೆಲವೊಂದು ದೃಶ್ಯಗಳಿಗೆ ಕೆ.ಎಂ.ಪ್ರಕಾಶ್ ಕತ್ತರಿ ಪ್ರಯೋಗಿಸಬಹುದಿತ್ತು. ಹೊಡೆದಾಟ ನಡೆಯುತ್ತಿದ್ದರೂ, ಅದನ್ನು ನೋಡಿ, ಖುಷಿ ಪಡುವ ಜಿಲ್ಲಾಧಿಕಾರಿಯ ಪಾತ್ರ ಜೀರ್ಣಿಸಲು ಕಷ್ಟವಾಗುತ್ತದೆ. ಹಾಡುಗಳು, ಚಿತ್ರದ ವೇಗಕ್ಕೆ ಬ್ರೇಕ್ ಹಾಕುತ್ತದೆ.
ಚಿತ್ರದ ಪ್ಲಸ್ ಪಾಯಿಂಟ್
ಚಿತ್ರದ ಪ್ಲಸ್ ಪಾಯಿಂಟ್, ಹಿನ್ನಲೆ ಸಂಗೀತ ಮತ್ತು ಫೋಟೋಗ್ರಾಫಿ ಕಣ್ಮನ ಸೆಳೆಯುತ್ತದೆ. ವಿದೇಶೀ ಲೋಕೇಶನ್ ಗಳನ್ನು ಉತ್ತಮವಾಗಿ ಆಯ್ಕೆಮಾಡಲಾಗಿದೆ. ಒಟ್ಟಿನಲ್ಲಿ. ರಿಮೇಕ್ ಎನ್ನುವುದನ್ನು ಬಿಟ್ಟರೆ, ಎಲ್ಲಾ ವರ್ಗದ ಪ್ರೇಕ್ಷಕರಿಗೆ ನಿರ್ದೇಶಕ ಶ್ರೀಧರ್ ನ್ಯಾಯ ಒದಗಿಸಿದ್ದಾರೆ.


Click it and Unblock the Notifications











