Don't Miss!
- Finance ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್: 73 ಕಿಮೀ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದು ಕಂಪನಿ!
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- News ಕೈ ತಪ್ಪಿದ ಬಿಜೆಪಿ ಟಿಕೆಟ್: ಮಹತ್ವದ ಸಭೆ ಕರೆದ ಸಂಗಣ್ಣ ಕರಡಿ!
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Automobiles Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
- Lifestyle ನಿಮಗೆ ಬೀಳುವ ಕನಸುಗಳ ಹಿಂದಿರುವ ಅರ್ಥ, ಉದ್ದೇಶವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿ 2 Unknown ನೋಡಿ, ಯೋಚ್ನೆ ಮಾಡ್ಬೇಡಿ
ಇವನ್ಯಾರೋ ಡಿಫರೆಂಟೂ ವೆರಿ ವೆರಿ ಡಿಫರೆಂಟೂ ಬಹುಕೃತ ವೇಷಧಾರಿ 'ನಾನು- ನೀನು' ಕಲ್ಪನೆಯ ಸೃಷ್ಟಿಕರ್ತ ಉಪೇಂದ್ರ ಉಪ್ಪಿ 2 ಚಿತ್ರ ನೋಡಿ ಮರೆತುಬಿಡಿ. ಏನ್ರಿ ಹೀಗೆ ಹೇಳ್ತೀರಿ ಎನ್ನಬೇಡಿ.. ಯೋಚನೆ ಮಾಡೇ ಹೇಳಿದ್ದು, ಯೋಚ್ನೆ ಮಾಡ್ಬೇಡಿ.
ಚಿತ್ರ ನೋಡಿ ಆ ಸಮಯಕ್ಕೆ ಅಂದರೆ ವರ್ತಮಾನಕ್ಕೆ ಅಲ್ಲಿ ಕಂಡಿದ್ದೆಲ್ಲ ಸತ್ಯವಾಗಿ ಗೋಚರಿಸಿದರೆ ಖುಷಿಯಾಗಿರಿ ಚಿತ್ರ ಹಾಗಿತ್ತು, ಹೀಗಿರಬೇಕು ಎಂದು ಯೋಚನೆ ಮಾಡಬೇಡಿ, ಆಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ನೀವು ಉಪ್ಪಿ ಫ್ಯಾನ್ ಆಗಿದ್ರೆ ಅಷ್ಟು ಮಾಡಿ.
ಉಪೇಂದ್ರ ಅವರ ಎಲ್ಲಾ ಚಿತ್ರದ ಶಕ್ತಿಯಾಗಿದ್ದ ಗಣೇಶ್ ಇಲ್ಲಿಲ್ಲ. ಇಲ್ಲಿ ಉಪ್ಪಿಯೇ ಸಮಾಹಿತ(ಗಣೇಶ) ನಾಗಿ ಸ್ಥಿತ ಪ್ರಜ್ಞತೆಯನ್ನು ಮೈಗೂಡಿಸಿಕೊಂಡ ಪಾತ್ರಧಾರಿಯಾಗಿದ್ದಾರೆ. ಸೂತ್ರಧಾರಿಯಾಗಿದ್ದಾರೆ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]
ಆದರೆ, ಉಪೇಂದ್ರ ಚಿತ್ರದಲ್ಲಿದ್ದ ಪಂಚಿಂಗ್ ಡೈಲಾಗ್ ಉಪ್ಪಿ 2 ನಲ್ಲಿ ನಿರೀಕ್ಷಿಸಿದರೆ ನಿರಾಶೆ ಖಚಿತ. ನಿರೀಕ್ಷೆ, ಯೋಚನೆ ಇಲ್ಲದೆ ಸಿನಿಮಾ ನೋಡಬಹುದು ಅದರೆ, ವಿಮರ್ಶೆ ಮಾಡದೆ ಇರಲು ಆಗದು. ವಿಮರ್ಶೆ ಅಥವಾ ಅನಿಸಿಕೆ ಏನಿದ್ದರೂ ಉಪೇಂದ್ರ ಅವರ ಪರಿಪೂರ್ಣತೆಗಾಗಿ ಮಾತ್ರ.
ಉಪೇಂದ್ರ ಚಿತ್ರಕ್ಕೆ ಹೋಲಿಸಿದರೆ ಉಪ್ಪಿ 2 ಮೊದಲಾರ್ಧ ಸಪ್ಪೆ ನಂತರ ನಿರೀಕ್ಷಿತ ತಿರುವುಗಳಲ್ಲಿ ಫ್ಲಾಶ್ ಬ್ಲಾಕ್ ಪಯಣ ಮತ್ತೆ ಹಳೆ ಕನ್ ಫ್ಯೂಷನ್ ಫಾರ್ಮುಲಾ ಬಳಕೆ. ಉಪ್ಪಿಗೆ ಪೊಲೀಸರಿಗಿಂತ (Future) ರೌಡಿ (past ) ಗಳೇ ಹತ್ತಿರವಾಗಿದ್ದಾರೆ. ಈ ವಿಷಯದಲ್ಲಿ.. ತಮ್ಮ ಹಳೆ ಯಶಸ್ವಿ ಫಾರ್ಮುಲಾ ಮತ್ತೆ ಬಳಸಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಸ್ಕ್ರಿಪ್ಟ್, ನಿರ್ದೇಶನದಲ್ಲಿ ಉಪ್ಪಿಯೇ ಇಲ್ಲಿ 'ಇಂದ್ರ'
ಹೌದು ಸ್ಕ್ರಿಪ್ಟ್ ರೈಟರ್ ಆಗಿ, ನಿರ್ದೇಶಕನಾಗಿ ಕಥೆ ನಿರೂಪಣೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಉಪ್ಪಿ 2 ನೀನು unknown ಆಪ್ತನಾಗುತ್ತಾನೆ. ಅದರೆ, ಯಾವುದೋ ಮಠದ ಸ್ವಾಮೀಜಿಯಂತೆ ಬಿಳಿ ಬಟ್ಟೆ ತೊಟ್ಟು ಯೋಚನೆ ಮಾಡ್ಬೇಡಿ ಎಂದು ಊರಿಗೆಲ್ಲ ಸಾರುವ ಉಪ್ಪಿಗೆ ಮೊದಲಾರ್ಧದಲ್ಲಿ ನಟನೆಗೆ ಯಾವುದೇ ಸ್ಕೋಪ್ ಇಲ್ಲ.
ಹಾಡುಗಳ ಚಿತ್ರೀಕರಣದ ಬಗ್ಗೆ
ರಷ್ಯಾದ ಕೇಸರಿಬಾತ್ ಜೊತೆ ಹೊಲ ಗದ್ದೆ ತೋಟ, ಊರು ಕೇರಿ ರಸ್ತೆಯಲ್ಲಿ ಹಾಡು ಕುಣಿತ ಯಾರ ಮೆಚ್ಚುಗೆಗೋ ಗೊತ್ತಿಲ್ಲ. ಮಿಕ್ಕೆಲ್ಲ ಹಾಡು ಕುಣಿತಕ್ಕೆ ಕಥೆಯ ಲಿಂಕ್ ಸಿಗುತ್ತದೆ. ಹಾಡುಗಳ ಚಿತ್ರೀಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಿದಂತೆ ಕಾಣಿಸುವುದಿಲ್ಲ. ಉಪ್ಪಿ ಫೇವರೀಟ್ ಸ್ಟೆಪ್ಸ್ ಆಗಲಿ, ಲೋಕೇಷನ್ ಆಗಲಿ ನೆನಪಲ್ಲಿ ಉಳಿಯುವುದಿಲ್ಲ. ನಾಯಕಿಗೊಂದು, ನಾನು-ನೀನು ಗೊಂದು ಹಾಡು ಲೆಕ್ಕಾಚಾರ ಇರಬಹುದು.
ನಾನು ಎಂಟ್ರಿ ಕೊಟ್ಟಮೇಲೆ ಚಿತ್ರಕ್ಕೆ ಕಿಕ್
ಉಪೇಂದ್ರ ಚಿತ್ರ ನಾನು ಎಂಟ್ರಿ ಕೊಟ್ಟಮೇಲೆ ಚಿತ್ರಕ್ಕೆ ಕಿಕ್ ಸಿಗುತ್ತದೆ. ಉಳಿದಂತೆ ಚಿತ್ರದ ಕಥೆ ಬಗ್ಗೆ ಹೇಳಬೇಕಾಗಿಲ್ಲ. ನಾನು ನೀನುಗಳ ನಡುವೆ ಖುಷಿ ಲಕ್ಷ್ಮಿಗಳ ನಡುವೆ ಭೂತ ಭವಿಷ್ಯಗಳ ನಡುವೆ ವರ್ತಮಾನದಲ್ಲಿ ನೀವು ನೋಡುವ ಸತ್ಯ ಅರಗಿಸಿಕೊಂಡರೆ ಸಾಕು. ಮಧ್ಯೆ ಬರುವ ಡಾನ್, ಶ್ರೀಮಂತೆ, ಶೀಲಾ ಉಪಕಥೆ ಉಪ್ಪಿನಕಾಯಿನಂತೆ.
ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಇಲ್ಲ ಎನ್ನುವುದನ್ನು ನಂಬುವುದಿಲ್ಲ
ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಚಿತ್ರದಲ್ಲಿ ಹಲವು ಬಾರಿ ಸುಳಿವು ನೀಡಲಾಗಿದೆ. ಖುಷಿ ಹಾಗೂ ಲಕ್ಷ್ಮಿ ಬಗ್ಗೆ 'ನೀನು' ನೀಡುವ ವಿವರಣೆ, ಬ್ಲಾಂಕ್ ಸ್ಕ್ರೀನ್ ಬಂದಾಗ ಜನರ ಮನಸ್ಥಿತಿ ಬಗ್ಗೆ ಪ್ರೊಫೆಸರ್ ವಿವರಣೆ, ರೌಡಿಗಳು ಹುಡುಕುವಾಗ ನಾನು -ನೀನು ಎಂದು 'ಉಳಿದವರು ಕಂಡಂತೆ' ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸುವುದು ರೌಡಿಗಳಂತೆ ಭೂತದಲ್ಲಿ ಬದುಕದೆ, ಪೊಲೀಸರಂತೆ ಭವಿಷ್ಯದ ನಿರೀಕ್ಷೆಯಲ್ಲಿರದೆ ನೀನು ಚಿತ್ರ ವೀಕ್ಷಿಸಿದರೆ ಖುಷಿ ಸಿಗುತ್ತದೆ, ಖುಷಿ ಇದ್ದ ಕಡೆ ಲಕ್ಷ್ಮಿಯೂ ಬರುತ್ತಾಳೆ.
ಹಾಡುಗಳ ಸಾಹಿತ್ಯ ಓಕೆ ಗುನುಗುವ ಟ್ಯೂನಿಲ್ಲ
ಹಾಡುಗಳ ಸಾಹಿತ್ಯ ಎಂದಿನಂತೆ ಕಥೆಗೆ ಪೂರಕ, ಎರಡು ಅರ್ಥ ನೀಡುತ್ತದೆ. ಗುರುಕಿರಣ್ ಸಂಗೀತದ ಬಗ್ಗೆ ಏನು ಹೇಳುವಂತಿಲ್ಲ, ಎಂಟಿವಿ ಸುಬ್ಬಲಕ್ಷ್ಮಿಯಂಥ ನೆನಪಲ್ಲಿ ಉಳಿಯುವಂಥ ಟ್ಯೂನ್ ಇಲ್ಲಿಲ್ಲ. ಏನಿಲ್ಲ ಏನಿಲ್ಲ ಎಂಬ ಕಾಡುವ ಹಾಡಿಲ್ಲ, ಉಪ್ಪಿ ಬಿಟ್ಟರೆ ಸಂಕಲನಕಾರ ಶ್ರೀಕ್ರೇಜಿ ಮೈಂಡ್ಸ್ ಅವರಿಗೆ ಕೆಲಸ ಅಧಿಕ, ಉಪೇಂದ್ರ ಚಿತ್ರದ ಕೆಮರಾ ವರ್ಕ್ ಗೆ ಹೋಲಿಸಿದರೆ ಅಶೋಕ್ ಕಶ್ಯಪ್ ಅವರಿಗೆ ಹೆಚ್ಚಿನ ಕೆಲಸ ಇಲ್ಲಿ ಸಿಕ್ಕಿಲ್ಲ.
ನಿರ್ದೇಶಕ ಉಪ್ಪಿಗೆ ಅಂಜಿಕೆ ಕಾಡಿತ್ತಾ?
ಉಪ್ಪಿ ಸ್ವಲ್ಪ ಅಂಜಿಕೆಯಿಂದಲೇ ತಮ್ಮ ತತ್ವ್ಚ ಚಿಂತನೆ ಪ್ರತಿಪಾದನೆಗೆ ಇಳಿದಿದ್ದಾರೆ, Expectation ಇಟ್ಕೋ ಬೇಡಿ ಎನ್ನುತ್ತಾ ಉಪ್ಪಿ 2 ನೋಡಲು ಬಂದ ಪ್ರೇಕ್ಷಕರನ್ನು ಉಪೇಂದ್ರ ಚಿತ್ರದ ಮೂಡ್ ಗೆ ತರಲು ಚಿತ್ರದ ಅರ್ಧ ಭಾಗವನ್ನೇ ಬಲಿ ಕೊಟ್ಟಿದ್ದಾರೆ. ಉಪೇಂದ್ರ, ಎ , ಶ್ ಸೇರಿದಂತೆ ಹಳೆ ಚಿತ್ರ, ಹಳೆ ಜನಗಳನ್ನು ಬಳಸಿಕೊಂಡಿದ್ದರಲ್ಲಿ ತಪ್ಪಿಲ್ಲ, ಅದರೆ, ಕಾಲಕ್ಕೆ ತಕ್ಕಂತೆ ಅಪ್ಗ್ರೇಡ್ ಆಗಲು ಎಲ್ಲರಿಗೂ ಆಗಿಲ್ಲ.
ಉಪ್ಪಿಟ್ಟು 2 : ಇದು ಪ್ಯೂರ್ ವೆಜ್ ಚಿತ್ರ ಎಂದಿದ್ದಾರೆ
ಜೊತೆಗೆ ಚಿತ್ರದಲ್ಲಿ ಉಪೇಂದ್ರ ಚಿತ್ರದಲ್ಲಿದ್ದಂತೆ ಹಸಿಬಿಸಿ ದೃಶ್ಯ ನಿರೀಕ್ಷಿಸಬೇಡಿ ಎಂದು ಚಿತ್ರದ ಆರಂಭದಲ್ಲೇ ಪುನೀತ್ ಹಾಡಿರುವ ಹಾಡಲ್ಲಿ ಹೇಳಲಾಗಿದೆ. ಹೀಗಾಗಿ ಪ್ರೇಕ್ಷಕರನ್ನು ಸರಿಯಾಗಿ ಪ್ರಿಪೇರ್ ಮಾಡಿ ಎಕ್ಸಾಂಗೆ ಉಪ್ಪಿ ಕೂರಿಸಿದ್ದಾರೆ. ಪಾಸಾಗುವುದು, ನಪಾಸಾಗುವುದು ನಿಮಗೆ ಬಿಟ್ಟಿದ್ದು. ಇದರಿಂದ ಹೊಸ ಫ್ಯಾನ್ಸ್ ಗಳು ಹುಟ್ಟಿಕೊಳ್ಳಬಹುದು, ಅದರೆ, ಹಳೆ ಫ್ಯಾನ್ಸಿಗೆ ಹೊಸ ರುಚಿ ಸಿಗುವುದಿಲ್ಲ.
ಕ್ರಿಯೇಟೇವಿಟಿ, ಸ್ಪೂರ್ತಿ ಗೆ ಉಪ್ಪಿಗೆ ಸಲಾಂ
Inception ಚಿತ್ರದ ಬಗ್ಗೆ ಉಪ್ಪಿ ಸೀನ್ ಕ್ರಿಯೇಟ್ ಮಾಡಿರುವುದು ಅದ್ಭುತ. ತತ್ತ್ವ ಪದ ಹೇಳಿದರೂ ಅದನ್ನು ಈ ಮೊದಲು ಯಾರು ಹೇಳಿದ್ದು ಎಂಬುದನ್ನು ಉಲ್ಲೇಖಿಸಿದ್ದಾರೆ. ಏನಿಲ್ಲ ಏನಿಲ್ಲ ಎಂದು ಉಪ್ಪಿ 2 ಚಿತ್ರದ ಬಗ್ಗೆ ಮೂದಲಿಸುವವರು ಇನ್ನು 10 ವರ್ಷವಾದರೂ ಉಪ್ಪಿ ರೀತಿ ಒಂದು ಸ್ಕ್ರಿಪ್ಟ್ ಸೃಷ್ಟಿ ಸಲಾರರು.ರಿಮೇಕ್, ಸ್ವಮೇಕ್, ರೀಮಿಕ್ಸ್, ಡಬ್ಬಿಂಗ್ ನಡುವೆ ಆನೆ ನಡೆದಿದ್ದೇ ಹಾದಿ ಎಂಬಂತೆ ಉಪ್ಪಿ ಬರೆದಿದ್ದೇ ಸ್ಕ್ರಿಪ್ಟ್,.
ಬುದ್ಧಿ ಬೆಳೆಸಿಕೊಳ್ಳಿ, ಇದು ಉಪ್ಪಿಗೂ ಅವರ ಫ್ಯಾನ್ಸಿಗೂ
ಐಯಾಮ್ ಗಾಡ್, ಗಾಡ್ ಇಸ್ ಗ್ರೇಟ್. ಎನ್ನುವ ಉಪ್ಪಿ ಹೇಳಿಕೊಡುವ ಪಾಠಗಳಿಗಿಂತ ಅವರ ಮ್ಯಾನರಿಸಂ, ವೇಷಭೂಷಣಗಳೇ ಯುವಕರಿಗೆ ಮೆಚ್ಚುಗೆಯಾಗುತ್ತಾ ಬಂದಿದೆ. 'ದೇಹ ಬೆಳೆಸಿಕೊಂಡರೆ ಸಾಲದು, ಬುದ್ಧಿ ಬೆಳೆಸಿಕೊಳ್ಳಿ', ಜ್ಞಾನ ವೃದ್ಧಿಯಾದರೆ ಎಲ್ಲವೂ ಅರ್ಥವಾಗುತ್ತೆ.ಉಪೇಂದ್ರ ಎರಡು ಆಯಾಮದ ಸಿನಿಮಾವಾಗಿತ್ತು. ಉಪ್ಪಿ 2 ಯಾವ ಆಯಾಮಕ್ಕೆ ಹೊಂದುತ್ತದೆ ಬಲ್ಲವರೇ ಹೇಳಿ. ಉಪ್ಪಿ ರಿಯಲ್ ಫ್ಯಾನ್ಸ್ ಉಪ್ಪಿಗಿಂತ ಅಪ್ಗ್ರೇಡ್ ಆಗಿರುವುದು ಸುಳ್ಳಲ್ಲ. ವಂದೇ ನಾನೇಶ್ವರಃ ನಮಃ