Maa Inti Bangaram Review:'ಬಂಗಾರ'ದಂತಹ ಮಗಳಾಗಲು ಬಂದ ಸಮಂತಾ 'ಕಾಳಿ'ಯಾಗುವುದೇ ರೋಚಕ
ವಿಚ್ಚೇದನ, ಅನಾರೋಗ್ಯ ಅಂತ ಕಳೆದ ಕೆಲವು ವರ್ಷಗಳಿಂದ ಬಹುಭಾಷಾ ಸಮಂತಾ ಸೈಲೆಂಟ್ ಆಗಿದ್ದರು. ಆದರೆ, ಎರಡನೇ ವಿವಾಹದ ಬಳಿಕ ಸಮಂತಾ ಬದುಕಿನಲ್ಲಿ ಮತ್ತೆ ಬೆಳಕು ಮೂಡಿದೆ. ಮತ್ತೆ ನಿಧಾನವಾಗಿ ಸಿನಿಮಾ ಕಡೆಗೆ ಮುಖ ಮಾಡುತ್ತಿದ್ದಾರೆ. ವೆಬ್ ಸೀರಿಸ್ ಬಳಿಕ ಮತ್ತೆ ಸಿನಿಮಾ ಕಡೆಗೆ ಮುಖ ಮಾಡಿದ್ದು, ಈ ವಾರ 'ಮಾ ಇಂಟಿ ಬಂಗಾರಂ' ರಿಲೀಸ್ ಆಗಿದೆ.
ಸಮಂತಾ ಪತಿ ರಾಜ್ ನಿಡಿಮೋರು ಬರೆದಿರುವ ಕಥೆಯನ್ನು ಇಷ್ಟ ಪಟ್ಟು ನಟಿಸಿದ್ದಾರೆ. ಈ ಹಿಂದೆ ಸಮಂತಾಗೆ 'ಓ ಬೇಬಿ' ಅಂತಹ ಯಶಸ್ವಿ ಸಿನಿಮಾ ನೀಡಿದ್ದ ನಂದಿನಿ ರೆಡ್ಡಿ 'ಮಾ ಇಂಟಿ ಬಂಗಾರಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಮಹಿಳಾ ಪ್ರಧಾನ ಸಿನಿಮಾ 'ಮಾ ಇಂಟಿ ಬಂಗಾರಂ' ಬಿಡುಗಡೆಗೂ ದೃಶ್ಯದ ತುಣುಕುಗಳಿಂದಲೇ ಮುನ್ನ ಗಮನ ಸೆಳೆದಿತ್ತು.

ಈ ಸಿನಿಮಾದಲ್ಲಿ ನಮ್ಮ ಕನ್ನಡದ ದೂದ್ ಪೇಡಾ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಮಂತಾ ಪತಿಯ ಪಾತ್ರದಲ್ಲಿ ದಿಗಂತ್ ನಟಿಸಿದ್ದು, ಈ ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರಬಹುದೇ? ಮತ್ತೆ ಸಮಂತಾ ಈ ಸಿನಿಮಾ ಮೂಲಕ ಗೆಲುವಿನ ನಗೆ ಬೀರಬಹುದೇ? ಎರಡು ಶೇಡ್ಗಳಲ್ಲಿ ಸಮಂತಾ ಇಷ್ಟ ಆಗುತ್ತಾರಾ? ಸಿನಿಮಾ ಪ್ಲಸ್ ಪಾಯಿಂಟ್ ಏನು? ಸಿನಿಮಾದ ಮೈನಸ್ ಪಾಯಿಂಟ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಮಾ ಇಂಟಿ ಬಂಗಾರಂ' ಕಥೆ ಏನು?
ಸ್ವರ್ಣ (ಸಮಂತಾ) ಚಿಕ್ಕ ವಯಸ್ಸಿನಲ್ಲೇ ಅನಾಥಳಾಗಿ ಆಶ್ರಮದಲ್ಲಿ ಬೆಳೆಯುತ್ತಾಳೆ. ಮದುವೆ ವಯಸ್ಸಿಗೆ ಬಂದ ಸ್ವರ್ಣಗೆ ಅನಿರುದ್ಧ್ (ದಿಗಂತ್) ಇಷ್ಟ ಆಗುತ್ತಾನೆ. ಆತ ಶ್ರೀಮಂತ ಮನೆಯ ಹುಡುಗ. ಇಬ್ಬರೂ ಪ್ರೀತಿಸಿ ಮದುವೆ ಆಗುತ್ತಾರೆ. ಮನೆಯವರ ಒಪ್ಪಿಗೆ ಇಲ್ಲದ ಕಾರಣ ಅನಿರುದ್ಧ್ನನ್ನು ಅವನ ಕುಟುಂಬ ದೂರ ಇಟ್ಟಿರುತ್ತೆ. ಹೀಗೊಮ್ಮೆ ತನ್ನ ಗಂಡನ ಮನೆಯಲ್ಲಿ ನಡೆದ ಶುಭ ಕಾರ್ಯದ ನೆಪದಲ್ಲಿ ಮೊದಲ ಬಾರಿಗೆ ಅತ್ತೆಯ ಮನೆಗೆ ಪ್ರವೇಶ ಮಾಡುತ್ತಾಳೆ. ಎಲ್ಲರ ಪ್ರೀತಿಯನ್ನು ಗಳಿಸುವುದಕ್ಕೆ ಪ್ರಯತ್ನ ಪಡುತ್ತಾಳೆ. ಈ ವೇಳೆ ಆಕೆಯ ಜೀವನದಲ್ಲಿ ನಡೆದ ಹಳೆಯ ಘಟನೆಗಳು ಬೆನ್ನಟ್ಟಿ ಬರುತ್ತವೆ. ಈ ಹಂತದಲ್ಲಿ ಸಿಗುವ ಕರುಣ್ (ಗುಲ್ಶನ್ ದೇವಯ್ಯ) ಯಾರು? 'ಬಂಗಾರ'ದಂತಹ ಮಗಳಾಗಲು ಬಂದ ಸಮಂತಾ 'ಕಾಳಿ'ಯಾಗುವುದೇಕೆ? ಅನ್ನುವುದೇ ಕಥೆ.
ಹೇಗಿದೆ ಸಿನಿಮಾ?
'ಮಾ ಇಂಟಿ ಬಂಗಾರಂ' ಇಡೀ ಕುಟುಂಬ ಕೂತು ನೋಡಬಹುದಾದ ಸಿನಿಮಾ. ಆರಂಭದಿಂದಲೇ ಪ್ರೇಕ್ಷಕರನ್ನು ಹಿಡಿದಿಡುತ್ತಾ ಮುಂದೆ ಸಾಗುತ್ತೆ. ಸಿನಿಮಾ ಇನ್ನೇನು ಸಖತ್ ಇಂಟ್ರೆಸ್ಟಿಂಗ್ ಅನ್ನುವಾಗಲೇ ಇಂಟರ್ವಲ್ ಬರುತ್ತೆ. ಇಲ್ಲಿಂದ ಇನ್ನೂ ಇಂಟ್ರೆಸ್ಟಿಂಗ್ ಆಗಬಹುದು ಎಂದು ಕೂತವರಿಗೆ ನಿಧಾನವಾಗಿ ನಿರಾಸೆಯಾಗುತ್ತೆ. ಯಾಕಂದ್ರೆ, ಮೊದಲಾರ್ಧ ಸ್ಕ್ರೀನ್ಪ್ಲೇ ಇಂಟ್ರೆಸ್ಟಿಂಗ್ ಆಗಿದ್ದಷ್ಟು ದ್ವಿತೀಯಾರ್ಧ ಇಲ್ಲ. ಚಿತ್ರಕಥೆ ಇನ್ನಷ್ಟು ಚುರುಕಾಗಿದ್ದರೆ, ನಿಜಕ್ಕೂ ಬಂಗಾರದಂತಹ ಸಿನಿಮಾ ಆಗಿರುತ್ತಿತ್ತು.
ಪ್ಲಸ್ ಪಾಯಿಂಟ್ ಏನು?
ಸಮಂತಾ ಸಿನಿಮಾದ ಪ್ರಮುಖ ಆಕರ್ಷಣೆ. ಇಡೀ ಸಿನಿಮಾದಲ್ಲಿ ಅವರು ತಮ್ಮ ಪಾತ್ರಕ್ಕೆ ಹಾಕಿರುವ ಶ್ರಮ ಎದ್ದು ಕಾಣುತ್ತೆ. ತನ್ನ ರಹಸ್ಯವನ್ನು ಮುಚ್ಚಿಟ್ಟು ಗಂಡನ ಮನೆಯವರ ಪ್ರೀತಿ ಗಳಿಸಲು ಯತ್ನಿಸುವ ದೃಶ್ಯಗಳು ಇಷ್ಟ ಆಗುತ್ತವೆ. ಈಕೆಯ ರಹಸ್ಯಗಳು ಮನೆಯವರಿಗೆ ತಿಳಿದರೆ ಏನಾಗಬಹುದು? ಅನ್ನೋದನ್ನು ಪ್ರೇಕ್ಷಕರು ಫೀಲ್ ಮಾಡುವಂತೆ ಮಾಡುವಲ್ಲಿ ನಿರ್ದೇಶಕಿ ನಂದಿನಿ ರೆಡ್ಡಿ ಗೆದ್ದಿದ್ದಾರೆ. ಹಾಗೇ ಕುಟುಂಬಕ್ಕೆ ಅಪಾಯ ಎದುರಾದಾಗ ಬಂಗಾರದಂತಿರುವ ಸೊಸೆ ಹೇಗೆ ಕಾಳಿ ಅವತಾರ ತಾಳುತ್ತಾಳೆ ಅನ್ನೋದು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಇನ್ನು ದಿಗಂತ್ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆಯನ್ನು ನೀಡಬೇಕಿತ್ತು ಎಂದು ಅನಿಸಿದರೂ ತಪ್ಪಾಗುವುದಿಲ್ಲ. ಹಾಗೇ ಸಂತೋಷ್ ನಾರಾಯಣನ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.

ಮೈನಸ್ ಪಾಯಿಂಟ್ ಏನು?
'ಮಾ ಇಂಟಿ ಬಂಗಾರಂ' ಸಿನಿಮಾದ ಮೈನಸ್ ಪಾಯಿಂಟ್ ಅಂದರೆ, ಸೆಕೆಂಡ್ ಹಾಫ್. ಸಮಂತಾರ ಫ್ಲ್ಯಾಶ್ಬ್ಯಾಕ್ ದೃಶ್ಯಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡಬೇಕಿತ್ತು. ಈ ಕಾರಣಕ್ಕೆ ಸೆಕೆಂಡ್ ಹಾಫ್ ಡಲ್ ಅನಿಸುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಗುಲ್ಶನ್ ದೇವಯ್ಯ ಅವರ ಪಾತ್ರಕ್ಕೆ ಪ್ರಾಮುಖ್ಯತೆ ನೀಡಬೇಕಿತ್ತು. ನೆಗೆಟಿವ್ ಶೇಡ್ನಲ್ಲಿ ನಟಿಸಿರುವ ಇವರ ಪಾತ್ರ ದ್ವಿತೀಯಾರ್ಧವನ್ನು ಹಿಡಿದಿಡುವಲ್ಲಿ ಕೆಲಸ ಮಾಡುತ್ತಿತ್ತು. ಅದನ್ನು ನಿರ್ದೇಶಕರು ಕೈ ಬಿಟ್ಟಿದ್ದಾರೆ. ರಾಜ್ ನಿಡಿಮೋರು ಬರೆದ ಸ್ಟೋರಿ ಚೆನ್ನಾಗಿದ್ದರೂ ಸ್ಕ್ರೀನ್ ಪ್ಲೇ ಮಾಡುವಲ್ಲಿ ಎಡವಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನ ಮೊದಲಾರ್ಧ ಚೆನ್ನಾಗಿದ್ದು, ಸೆಕೆಂಡ್ ಹಾಫ್ ವೀಕ್ ಆಗಿದೆ.
ಕೊನೆಯಲ್ಲಿ..
ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಇಡೀ ಕುಟುಂಬ ಒಮ್ಮೆ ನೋಡಬಹುದಾದ ಸಾಧಾರಣ ಕೌಟುಂಬಿಕ ಸಿನಿಮಾ ಎನ್ನಬಹುದು. ನೀವೇನಾದರೂ ಸಮಂತಾ ಅಭಿಮಾನಿಯಾಗಿದ್ದು, ಕುಟುಂಬ ಸಮೇತ ಸಿನಿಮಾ ನೋಡಬೇಕು ಅನ್ನೋ ಮೂಡ್ನಲ್ಲಿ ಇದ್ದರೆ ಥಿಯೇಟರ್ಗೆ ಹೋಗಿ ಒಮ್ಮೆ ಆರಾಮಾಗಿ ನೋಡಿ ಬರಬಹುದು.


Click it and Unblock the Notifications
