Dil Bechara Review: ಜೀವನ ಪ್ರೀತಿಯ ಸುತ್ತ ಭಾವುಕತೆಯ ಹೆಣಿಗೆ
ಈ ಸಿನಿಮಾ ಆರಂಭವಾದ ಪ್ರತಿ ಸನ್ನಿವೇಶದಲ್ಲಿಯೂ 'ಛೇ! ಸುಶಾಂತ್ ಬದುಕಿರಬೇಕಿತ್ತು' ಎನಿಸದೆ ಇರದು. ಚಿತ್ರದ ಅಂತ್ಯದಲ್ಲಿ ಆ ಭಾವ ಮತ್ತಷ್ಟು ಗಾಢವಾಗುತ್ತಾ ವಿಷಾದವೊಂದು ಅವರಿಸುತ್ತದೆ. ಕೊನೆಯ ಸಿನಿಮಾದ ಕಥೆಯಲ್ಲಾದರೂ ಅವರನ್ನು ಉಳಿಸಿಕೊಳ್ಳಬೇಕಿತ್ತು ಎಂಬ ನೋವು ಉಳಿಯುತ್ತದೆ. 'ನನ್ನ ಅಂತ್ಯಸಂಸ್ಕಾರದಲ್ಲಿ ನಾನು ಪಾಲ್ಗೊಳ್ಳಬೇಕು' ಎಂದು ತಾನು ಬದುಕಿದ್ದಾಗಲೇ ತನ್ನ ಸಾವಿನ ಕುರಿತು ಸಂತಾಪ ಸೂಚಿಸುವ ಮಾತುಗಳನ್ನು ಕೇಳುವ ದೃಶ್ಯ, ಸಿನಿಮಾದಾಚೆಗಿನ ವಾಸ್ತವ ಘಟನೆಗಳೊಂದಿಗೆ ನಮ್ಮನ್ನು ಬೆರೆಸುತ್ತದೆ.
ಚಿತ್ರ: ದಿಲ್ ಬೇಚಾರಾ
ನಿರ್ದೇಶನ: ಮುಕೇಶ್ ಛಾಬ್ರಾ
ಸಂಗೀತ: ಎ.ಆರ್. ರೆಹಮಾನ್
ತಾರಾಗಣ: ಸುಶಾಂತ್ ಸಿಂಗ್ ರಜಪೂತ್, ಸಂಜನಾ ಸಂಘಿ, ಸಾಹಿಲ್ ವೈದ್, ಸಾಸ್ವತ ಚಟರ್ಜಿ, ಸ್ವಸ್ತಿಕಾ ಮುಖರ್ಜಿ
ಜೀವನ ಪ್ರೀತಿ ಬಿಂಬಿಸುವ ಚಿತ್ರ
'ದಿಲ್ ಬೇಚಾರಾ' ಜೀವನ ಪ್ರೀತಿಯನ್ನು ಸ್ಫುರಿಸುವ ಚಿತ್ರ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಹಿಂದಿನ ಸಿನಿಮಾ 'ಛಿಚೋರೆ' ಕೂಡ ಇಂತಹದೇ ಬದುಕಿನ ಉತ್ಸಾಹವನ್ನು ಬಿತ್ತಿತ್ತು. ಸುಶಾಂತ್ ಅವರ ಆಸಕ್ತಿ, ಅಭಿರುಚಿಗಳು ಉತ್ಸಾಹಕ್ಕೂ ಹಾಗೂ ಅವರ ಜೀವನದ ದುರಂತ ಅಂತ್ಯ ಮತ್ತು ಈ ಸಿನಿಮಾಗಳಿಗೂ ಒಂದು ಆಪ್ತ ನಂಟು ಬೆಸೆದಿರುವಂತೆ ಕಾಣಿಸುವುದು ಕಾಕತಾಳೀಯವೆನಿಸಬಹುದು. 'ದಿಲ್ ಬೇಚಾರಾ' ನಮ್ಮ ಮನಸ್ಸನ್ನು ಅಸಹಾಯಕತೆಯ ಭಾವದೊಳಗೆ ಸಿಲುಕಿಸಿ, ಸುಶಾಂತ್ ಅವರ ನೆನಪನ್ನು ಮತ್ತಷ್ಟು ಕಾಡುವಂತೆ ಮಾಡುತ್ತದೆ.
ಸುಶಾಂತ್ ಗುಣಕ್ಕೆ ಹೋಲಿಕೆ
'ದಿಲ್ ಬೇಚಾರಾ' ಈ ಸಂದರ್ಭದಲ್ಲಿ ನಮ್ಮ ಆಳಕ್ಕೆ ಇಳಿಯಲು ಹಲವು ಕಾರಣಗಳಿವೆ. ಇದು ಸುಶಾಂತ್ ಸಿಂಗ್ ನಟನೆಯ ಕೊನೆಯ ಸಿನಿಮಾ ಎಂಬ ಸಂಗತಿ ಆರಂಭದಲ್ಲಿಯೇ ನಮ್ಮನ್ನು ಭಾವುಕರನ್ನಾಗಿಸಿ ಅದರ ಒಳಗೆ ಎಳೆದುಕೊಳ್ಳುವಂತೆ ಮಾಡುತ್ತದೆ. ಸುಶಾಂತ್ ಪಾತ್ರದ ತುಂಟಾಟಗಳು, ಗಣಿತದ ಸೂತ್ರದಂತಹ ಮಾತುಗಳು, ಆ ಪಾತ್ರ ತನ್ನೊಳಗೆ ನುಂಗಿಕೊಂಡಿರುವ ನೋವು, ತನಗೆ ಯಾವ ಸಮಸ್ಯೆಯೂ ಇಲ್ಲ ಎಂಬಂತೆ ನಟಿಸುವ ಸನ್ನಿವೇಶಗಳು ಸುಶಾಂತ್ ಸಿಂಗ್ ಅವರ ವಾಸ್ತವದ ಗುಣಕ್ಕೂ ಇದ್ದ ಸಾಮ್ಯತೆಯನ್ನು ಹುಡುಕುತ್ತವೆ. ಆದರೆ ಅಂತ್ಯ ಅದರ ವೈರುಧ್ಯದಂತಿದೆ.
ಕ್ಯಾನ್ಸರ್ ಕಾಯಿಲೆಯ ಸುತ್ತ ಖುಷಿಯ ಜಗತ್ತು
ವಿಭಿನ್ನ ಬಗೆಯ ಕ್ಯಾನ್ಸರ್ಗೆ ತುತ್ತಾದ ಮೂರು ಜೀವಗಳ ಕಥೆ 'ದಿಲ್ ಬೇಚಾರಾ' ಚಿತ್ರದ್ದು. ಸಾವು ಎನ್ನುವುದು ಯಾವಾಗ ಬೇಕಾದರೂ ಎದುರಾಗಬಹುದು ಎಂಬ ಕಹಿ ವಾಸ್ತವ ಅವರಿಗೆ ಅರಿವಿದೆ. ಈ ಜೋಡಿಯ ಸುತ್ತ ಅವರನ್ನು ಪ್ರೀತಿಸುವ ಮನಸುಗಳಿವೆ. ಹೇಗೂ ಸಾವು ಸನಿಹದಲ್ಲಿದೆ ಎಂದು ಖುಷಿಯ ಮೂಟೆಗಳನ್ನು ಕಟ್ಟಿ ಬದುಕುತ್ತಿರುವ ಕಿಜಿ ಬಸು (ಸಂಜನಾ ಸಂಘಿ) ಬದುಕನ್ನು ನೋಡುವ ದೃಷ್ಟಿಯನ್ನೇ ಬದಲಿಸುವುದು ಮ್ಯಾನಿ (ಸುಶಾಂತ್ ಸಿಂಗ್).
ಮನರಂಜನೆ, ಭಾವುಕತೆ
ಈ ಚಿತ್ರ ಯಾವ ಸಿನಿಮಾ ತೋರಿಸದ ವಿಶೇಷ ಕಥೆಯನ್ನೇನೂ ಹೇಳುವುದಿಲ್ಲ. ಅದ್ಭುತ ಎನಿಸುವ ಸನ್ನಿವೇಶಗಳಿಲ್ಲ. ಆದರೆ ಸಿನಿಮಾವೊಂದು ಪ್ರೇಕ್ಷಕ ಬಯಸುವ ಮನರಂಜನೆ, ಭಾವುಕತೆಯ ಜತೆಗೆ ಒಳ್ಳೆಯದೊಂದು ಪಾಠವನ್ನು ನೀಡುತ್ತದೆ. ಕಿಜಿ ಬಸು, ಸಂಗೀತಗಾರ ಅಭಿಮನ್ಯು ವೀರ್ (ಸೈಫ್ ಅಲಿ ಖಾನ್) ಅಭಿಮಾನಿ. ಅತ್ತ ಮ್ಯಾನಿ ನಟ ರಜನಿಕಾಂತ್ ಅಭಿಮಾನಿ. ಈ ಇಬ್ಬರ ಅಭಿಮಾನದ ವಿನಿಮಯ ಪ್ರೀತಿಯನ್ನು ಚಿಗುರಿಸುತ್ತದೆ.
ಹಾಲಿವುಡ್ ರೀಮೇಕ್
ನಿರ್ದೇಶಕ ಮುಕೇಶ್ ಛಾಬ್ರಾ ಬಹು ಸಂಯಮದಿಂದ ಸಿನಿಮಾ ಸಾಗಿಸಿದ್ದಾರೆ. 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಚಿತ್ರದ ಹಿಂದಿ ಅವತರಣಿಕೆ ಇದು. ಸಂಭಾಷಣೆ ಮತ್ತು ಭಾವನಾತ್ಮಕ ದೃಶ್ಯಗಳ ನೆಲೆಗಟ್ಟು ಗಟ್ಟಿಯಾಗಿದೆ. ಹೀಗಾಗಿ ಅಲ್ಲಲ್ಲಿ ಸಡಿಲ ಎನಿಸುವ ಚಿತ್ರಕಥೆಯನ್ನು ಸರಿದೂಗಿಸಿಕೊಂಡು ಹೋಗುತ್ತದೆ.
ಕಾಡುವ ಅಭಿನಯ
ಮೊದಲ ಚಿತ್ರದಲ್ಲಿಯೇ ಸಂಜನಾ ಸಂಘಿ, ಪಾತ್ರದ ಮಿತಿಯೊಳಗೆ ಹದವಾದ ಅಭಿನಯ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ತಾವೊಬ್ಬ ಅದ್ಭುತ ನಟ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಆದರೆ ಸಿನಿಮಾ ಪ್ರೇಮಿಗಳ ಈ ಮೆಚ್ಚುಗೆ ಪಡೆದುಕೊಳ್ಳಲು ಅವರಿಲ್ಲ ಎಂಬ ನೋವು ಬಾಧಿಸುತ್ತದೆ. ಸಾಹಿಲ್ ವೈದ್, ಸಾಸ್ವತ ಚಟರ್ಜಿ, ಸ್ವಸ್ತಿಕಾ ಮುಖರ್ಜಿ ಅಭಿನಯ ಕೂಡ ಮನದಲ್ಲಿ ಉಳಿಯುತ್ತದೆ. ಎ.ಆರ್. ರೆಹಮಾನ್ ಸಂಗೀತ ಚಿತ್ರದ ಮತ್ತೊಂದು ಶಕ್ತಿ.
ಅಂತ್ಯದಲ್ಲಿ ಉಳಿಯುವ ಗಾಢ ವಿಷಾದ
ಸಾವು-ಬದುಕಿನ ನಡುವಿನ ಜೀವನದ ಸೊಗಡನ್ನು ನವಿರಾಗಿ ಬಿಂಬಿಸುವ ಚಿತ್ರ, ಸುಶಾಂತ್ ಕಾರಣದಿಂದ ಪ್ರೇಕ್ಷಕನನ್ನು ಆರ್ದ್ರಗೊಳಿಸುತ್ತದೆ. ಬಹುಶಃ ಸುಶಾಂತ್ ಬದುಕಿದ್ದರೂ, ಈ ಭಾವದಿಂದ ಪ್ರೇಕ್ಷಕ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಅವರ ಅಗಲುವಿಕೆ ಕಣ್ಣೀರಿನ ತೀವ್ರತೆಯನ್ನು ದುಪ್ಪಟ್ಟಾಗಿಸುತ್ತದೆ. ಗಾಢ ವಿಷಾದದೊಂದಿಗೆ ಅವರು ಬದುಕಿನ ಸಂಭ್ರಮ, ಜೀವನ ಪ್ರೀತಿಯನ್ನು ಉಳಿಸಿ ಹೋಗುತ್ತದೆ.


Click it and Unblock the Notifications











