Swathi Mutthina Male Haniye Review: ಪ್ರೇರಣಾ ಬಾಳಲ್ಲಿ ಬರುವ ಮಳೆ ಹನಿ ಮುತ್ತಿನ ಹನಿಯಾಗುತ್ತಾ?
ಮೋಹಕತಾರೆ ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ರಾಜ್ಯಾದ್ಯಂತ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಅಭಿನಯದ ಈ ಸಿನಿಮಾ ಟ್ರೈಲರ್ ಹಾಗೂ ಟೀಸರ್ನಿಂದಲೇ ಕುತೂಹಲ ಕೆರಳಿಸಿತ್ತು. ಅದರಲ್ಲೂ ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ನೆಚ್ಚಿನ ಆಯ್ಕೆಗಳಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಕೂಡ ಇದೆ.
ಹಾಗಂತ 'ಸ್ವಾತಿ ಮುತ್ತಿನ ಮಳೆ ಹನಿಯೇ' ಪಕ್ಕಾ ಕಮರ್ಷಿಯಲ್ ಸಿನಿಮಾ ಅಲ್ಲ. ಮನಸ್ಸಿಗೆ ಮುಟ್ಟುವ ಪಕ್ಕಾ ಭಾವನಾತ್ಮಕ ಸಿನಿಮಾ. ಭಾವನೆಗಳನ್ನು ಹೆಚ್ಚು ಇಷ್ಟ ಪಡುವವರಿಗೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಇಷ್ಟ ಆಗಬಹುದು.

'ಸ್ವಾತಿ ಮುತ್ತಿನ ಮಳೆ ಹನಿಯೇ' ಆಕ್ಷನ್ ಇಲ್ಲ. ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲ. ಹೆಜ್ಜೆ ಹಾಕುವಂತಹ ಸಾಂಗ್ಸ್ ಇಲ್ಲ. ರಾಜ್ ಬಿ ಶೆಟ್ಟಿನೇ ಹೇಳಿರುವ ಹಾಗೆ ಇದು ಎಲ್ಲರಿಗೂ ಇಷ್ಟ ಆಗುವ ಸಿನಿಮಾ ಅಲ್ಲ. ಹಾಗಿದ್ದರೆ, ಈ ಸಿನಿಮಾ ಹೇಗಿದೆ? ಏನು ಇಷ್ಟ ಆಗುತ್ತೆ? ಏನು ಇಷ್ಟ ಆಗಲ್ಲ? ತಿಳಿಯಲು ಮುಂದೆ ಓದಿ..
ಸಿನಿಮಾದ ಕಥೆಯೇನು?
ಇದು ಪ್ರೇರಣಾ ಹಾಗೂ ಅನಿಕೇತ್ ನಡುವಿನ ಭಾವನಾತ್ಮಕ ಜರ್ನಿ. ಪ್ರೇರಣಾ ವಾಸಿ ಮಾಡಲು ಸಾಧ್ಯವಾಗದೇ ಇರುವಂತಹ ಖಾಯಿಲೆಯಿಂದ ಬಳಲುತ್ತಿರುವವರನ್ನು ಸಾಯುವುದಕ್ಕೆ ಸಿದ್ಧಪಡಿಸುವ ಕೌನ್ಸಿಲರ್. ಆಸರೆ ಅನ್ನೋ ಸಂಸ್ಥೆಯಲ್ಲಿ ಪ್ರೇರಣಾ ಸಾಯುವುದಕ್ಕೆ ಮಾಸಿಕವಾಗಿ ಸಿದ್ಧಪಡಿಸುತ್ತಿರುತ್ತಾರೆ. ಈಕೆಯ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಬದಲಾವಣೆ ಇಲ್ಲದೆ ಬಳಲುತ್ತಿರುತ್ತಾರೆ. ಈ ಕೌನ್ಸಿಲ್ ಜೀವನದಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿರುವ ಅನಿಕೇತ್ ಎಂಟ್ರಿ ಆಗುತ್ತೆ. ಇಲ್ಲಿಂದ ಪ್ರೇರಣಾ ಬದುಕು ಹೇಗೆಲ್ಲ ಬದಲಾಗುತ್ತೆ ಅನ್ನೋದು ಸಿನಿಮಾ ಕಥೆ.
ರಾಜ್-ಸಿರಿ ಕಾಂಬಿನೇಷನ್ ಹೇಗಿದೆ?
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಎರಡು ಪ್ರಮುಖ ಪಾತ್ರಗಳು ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್. ಪ್ರೇರಣಾ ಪಾತ್ರದಲ್ಲಿ ಸಿರಿ ರವಿಕುಮಾರ್ ಗಮನ ಸೆಳೆಯುತ್ತಾರೆ. ಈ ಸಿನಿಮಾದ ಇಡೀ ಕಥೆ ಸಿರಿ ರವಿಕುಮಾರ್ ಪಾತ್ರದ ಸುತ್ತವೇ ಸಾಗುತ್ತೆ. ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಇಬ್ಬರ ಪಾತ್ರವೂ ಪ್ರೇಕ್ಷಕರನ್ನು ಕಣ್ಣೀರಲ್ಲಿ ತೇಲಿಸುವುದರಲ್ಲಿ ಅನುಮಾನವೇ ಇಲ್ಲ.

ಪ್ರೇಕ್ಷಕರು ರಮ್ಯಾ ಮಿಸ್ ಮಾಡಿಕೊಂಡ್ರಾ?
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಪ್ರೇರಣಾ ಪಾತ್ರದಲ್ಲಿ ರಮ್ಯಾ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದಿಂದ ಹಿಂದೆ ಸರಿದಿದ್ದರು. ಅದೇ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಎಲ್ಲೂ ರಮ್ಯಾ ಈ ಪಾತ್ರದಲ್ಲಿ ನಟಿಸಬೇಕಿತ್ತು ಅಂತ ಅನಿಸುವುದಿಲ್ಲ. ಆದರೆ, ರಮ್ಯಾ ಇದ್ದಿದ್ದರೆ, ಇನ್ನೊಂದು ದೃಶ್ಯ ಕಾವ್ಯವನ್ನು ನೋಡುವ ಸಾಧ್ಯತೆಯಂತೂ ಇತ್ತು.
ಪ್ಲಸ್ ಏನು?
ಯಾವುದೇ ಕಟ್ಟುಪಾಡುಗಳನ್ನು ಇಟ್ಟುಕೊಳ್ಳದೆ ಮಾಡಿರೋ ಸಿನಿಮಾ. ಏನು ಹೇಳಬೇಕು ಅಂತಿದ್ದರೋ ಅದನ್ನು ಅಚ್ಚು ಕಟ್ಟಾಗಿ ಹೇಳಿದ್ದಾರೆ. ರೈಟಿಂಗ್, ಡೈರೆಕ್ಷನ್ ಎಲ್ಲವೂ ಚೆನ್ನಾಗಿದೆ. ಸಿರಿ ರವಿಕುಮಾರ್ ನೋಡುಗರನ್ನು ಭಾವುಕರನ್ನಾಗಿಸುತ್ತೆ. ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಹಾಗೂ ಎಡಿಟಿಂಗ್ ಅದ್ಭುತ. ಲೋಕೇಶ್ ಅಂತೂ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಮಿಥುನ್ ಮುಕುಂದ್ ಮ್ಯೂಸಿಕ್ ಸಖತ್ ಆಗಿದೆ. ಬಿಜಿಎಂ ಕೂಡ ಕಥೆಗೆ ತಕ್ಕಂತಿದೆ. ಗೋಪಾಲಕೃಷ್ಣ ದೇಶಪಾಂಡೆ ಒಂದೇ ಒಂದು ಪಾತ್ರದಲ್ಲಿ ನಟಿಸಿದ್ದರೂ ಗಮನ ಸೆಳೆಯುತ್ತಾರೆ.
ಮೈನಸ್ ಏನು?
ಸಿನಿಮಾದ ಕಥೆಯೇನು ಅನ್ನೋದು ಮೊದಲ ಭಾಗದಲ್ಲಿಯೇ ಗೊತ್ತಾಗುತ್ತೆ. ಹೀಗಾಗಿ ಸೆಕೆಂಡ್ ಪಾರ್ಟ್ ಚುರುಕಾಗಿರಬೇಕಿತ್ತು. ರಾಜ್ ಹಾಗೂ ಸಿರಿ ನಡುವಿನ ದೃಶ್ಯಗಳು ಇನ್ನಷ್ಟು ಹಾರ್ಟ್ ಟಚ್ಚಿಂಗ್ ಆಗಿರಬೇಕಿತ್ತು. ಆದರೆ, ಒಬ್ಬರಿಗೊಬ್ಬರು ಸಾಂತ್ವಾನ ನೀಡುವ ದೃಶ್ಯಗಳು ಇಷ್ಟ ಆಗುತ್ತೆ.


Click it and Unblock the Notifications











