Thug Life Review: ದಿಗ್ಗಜರ ಕಾಂಬೋ ವರ್ಕ್ ಆಯ್ತಾ? ಕಮಲ್ 'ಥಗ್ ಲೈಫ್' ಹೇಗಿದೆ?
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಕನ್ನಡ ಭಾಷೆಯ ಕುರಿತು ಕಮಲ್ ಹಾಸನ್ ಹೇಳಿಕೆ ವಿವಾದ ಬಗೆಹರಿಯದ ಕಾರಣ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಬೇರೆ ಭಾಗಗಳಲ್ಲಿ ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಗೆಲ್ಲೋದು ಅನುಮಾನ ಎನ್ನುವಂತಾಗಿದೆ.
ಅಷ್ಟಕ್ಕೂ 'ಥಗ್ ಲೈಫ್' ಸಿನಿಮಾ ಹೇಗಿದೆ? ಕಮಲ್- ಮಣಿ ಕಾಂಬೋ ಮ್ಯಾಜಿಕ್ ಮಾಡ್ತಾ? ಚಿತ್ರದ ಪ್ಲಸ್ ಹಾಗೂ ಮೈನಸ್ ಏನು? ಎನ್ನುವುದನ್ನು ಫಿಲ್ಮಿಬೀಟ್ ತಮಿಳು ವೆಬ್ ಸೈಟ್ ಪ್ರತಿನಿಧಿ ಮಾರಿ ಎಸ್. ತಮ್ಮ ರಿವ್ಯೂ ರಿಪೋರ್ಟ್ನಲ್ಲಿ ಬರೆದಿದ್ದಾರೆ. ಅವರ 'ಥಗ್ ಲೈಫ್' ಸಿನಿಮಾ ರಿವ್ಯೂ ಮುಂದೆ ಓದಿ.

ಚೆನ್ನೈ: 'ನಾಯಗನ್' ನಂತರ ಕಮಲ್ ಹಾಸನ್ ಹಾಗೂ ಮಣಿರತ್ನಂ ಏಕೆ ಇಷ್ಟು ವರ್ಷಗಳ ಕಾಲ ಒಟ್ಟಿಗೆ ಸಿನಿಮಾ ಮಾಡ್ಲಿಲ್ಲ, ಈಗ ಏಕೆ ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ರು ಎನ್ನುವುದು ಅಭಿಮಾನಿಗಳಿಗೆ ಅರ್ಥವಾಗಲ್ಲ. 'ಇಂಡಿಯನ್- 2' ಸೋಲಿನ ಬಳಿಕ 'ಥಗ್ ಲೈಫ್' ಕಮಲ್ ಹಾಸನ್ಗೆ ಕಂಬ್ಯಾಕ್ ಸಿನಿಮಾ ಆಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ.
ಮಣಿರತ್ನಂ, ಸಿಂಬು, ಎ. ಆರ್ ರಹಮಾನ್ ಎಲ್ಲರೂ ಕಮಲ್ ಹಾಸನ್ ಜೊತೆ ಕೈ ಜೋಡಿಸಿದ್ದು ಸಹಜವಾಗಿಯೇ ನಿರೀಕ್ಷೆ ಹುಟ್ಟಾಕ್ಕಿತ್ತು. ಸಿನಿಮಾ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರದ ಪ್ರಚಾರಕ್ಕೆ ಕಮಲ್ ಹೆಚ್ಚಿನ ಆಸಕ್ತಿ ವಹಿಸಿದ್ದರು. ಸಹ ನಿರ್ಮಾಪಕರನಾಗಿ ಚಿತ್ರಕ್ಕೆ ಹಣ ಹೂಡಿದ್ದರಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದರು. ಇನ್ನು ಚಿತ್ರಕ್ಕೆ ಕಮಲ್ ಹಾಸನ್ ಜೊತೆ ಸೇರಿ ಮಣಿರತ್ನಂ ಕಥೆ ಬರೆದಿದ್ದಾರೆ. ಕಮಲ್ ಕಥೆಯನ್ನು ಮಣಿ ತಮ್ಮ ಶೈಲಿಗೆ ಅಳವಡಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಕಮಲ್ ಬಿಟ್ಟು ಬೇರೆ ಯಾವುದೇ ಪಾತ್ರಕ್ಕೆ ಯಾಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ ಅನ್ನುವ ಪ್ರಶ್ನೆ ಮೂಡುತ್ತದೆ.
ಥಗ್ ಲೈಫ್ ಕಥೆ
ರಂಗರಾಯ ಶಕ್ತಿವೇಲ್ ನಾಯಕ್ಕರ್ (ಕಮಲ್ ಹಾಸನ್) ಮತ್ತು ಆತನ ಸಹೋದರ ಮಾಣಿಕ್ಕಮ್ (ನಾಸರ್) ಒಂದು ಗ್ಯಾಂಗ್ಸ್ಟರ್ ಸಾಮಾಜ್ಯ ಕಟ್ಟಿರುತ್ತಾರೆ. ಸದಾನಂದಂ (ಮಹೇಶ್ ಮಂಜ್ರೇಕರ್) ಶಕ್ತಿರಾಜು ಮತ್ತು ಅವನ ಗ್ಯಾಂಗ್ ಅನ್ನು ಮಟ್ಟ ಹಾಕಲು ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ದಾಳಿ ನಡೆಸಿದಾಗ ಪೇಪರ್ ಹಾಕುವ ಬಾಲಕ ಅಮರ್(ಸಿಂಬು) ತಂದೆ ಸಾಯುತ್ತಾರೆ. ಅಮರ್ನನ್ನು ತನ್ನ ರಕ್ಷಾಕವಚವಾಗಿ ಬಳಸಿಕೊಂಡು ಶಕ್ತಿವೇಲ್ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾನೆ.
ತನ್ನನ್ನು ಕಾಪಾಡಿನ ಅಮರ್ನನ್ನು ಸ್ವಂತ ಮಗನಂತೆ ಶಕ್ತಿವೇಲ್ ಸಾಕಿ ಸಲಹುತ್ತಾನೆ. ಮುಂದೆ ಶಕ್ತಿವೇಲ್ ಬಲಗೈ ಭಂಟನಂತೆ ಅಮರ್ ಕೂಡ ಗ್ಯಾಂಗ್ಸ್ಟರ್ ಆಗಿ ಬೆಳೆಯುತ್ತಾನೆ. ಬಳಿಕ ಪ್ರಕರಣವೊಂದರಲ್ಲಿ ಶಕ್ತಿವೇಲ್ ಜೈಲು ಸೇರುವಂತಾಗುತ್ತದೆ. ಆಗ ಆ ಮಾಫಿಯಾ ಸಾಮ್ರಾಜ್ಯ ಅಮರ್ ಹಿಡತಕ್ಕೆ ಸಿಗುತ್ತದೆ.
ನಿನ್ನ ತಂದೆಯನ್ನು ಕೊಂದವನು ಶಕ್ತಿವೇಲ್ ಎಂದು ಅಮರ್ ಭಾವಿಸುವಂತೆ ಮಾಣಿಕ್ಯಂ ಮಾಡ್ತಾನೆ. ಮುಂದೆ ಅಮರ್, ಮಾಣಿಕ್ಯಂ, ಪತ್ರೋಸ್(ಜೊಜು ಜಾರ್ಜ್) ಸೇರಿ ಶಕ್ತಿವೇಲ್ ಹತ್ಯೆಗೆ ಯತ್ನಿಸುತ್ತಾರೆ. ಆತ ಸತ್ತುಹೋದ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ತಪ್ಪಿಸಿಕೊಳ್ಳುವ ಶಕ್ತಿವೇಲ್ ಎಲ್ಲರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಅಮರ್ ಸಹೋದರಿಯನ್ನು ಶಕ್ತಿವೇಲ್ ಹುಡುಕಿ ಕರ್ಕೊಂಡು ಬರ್ತಾನಾ? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ?
ರಂಗರಾಯ ಶಕ್ತಿವೇಲ್ ನಾಯಕರ್ ಪಾತ್ರದಲ್ಲಿ ಕಮಲ್ ಹಾಸನ್ ಪರಕಾಯ ಪ್ರವೇಶ ಮಾಡಿದ್ದಾರೆ. ವಿಭಿನ್ನ ಮುಖಭಾವಗಳಿಂದ ಹುಬ್ಬೇರಿಸುತ್ತಾರೆ. ಆರಂಭದಲ್ಲಿ ಬರುವ ಆ ಯೌವ್ವನದ ಕಮಲ್ ಭಾಗವು ಚೆನ್ನಾಗಿದೆ. ಸಿಂಬು ಅವರ ಆಕ್ಷನ್-ಪ್ಯಾಕ್ಡ್ ಎಂಟ್ರಿ ಮಜವಾಗಿದೆ. ಆದರೆ ಆ ಬಳಿಕ ಸಿಂಬುಗೆ ಹೆಚ್ಚು ಕೆಲಸವಿಲ್ಲ. ಜೋಜು ಜಾರ್ಜ್ ಅವರನ್ನು ಕಮಲ್ ಜೊತೆಗಿನ ಹೋರಾಟದ ಸನ್ನಿವೇಶಗಳಿಗೆ ಮಾತ್ರ ಬಳಸಿಕೊಳ್ಳಲಾಗಿದೆ. ನಾಸರ್, ತ್ರಿಶಾ, ಅಭಿರಾಮಿ ಅವರಿಗೆ ಹೆಚ್ಚಿನ ಸ್ಕೋಪ್ ಇಲ್ಲ. ಎ.ಆರ್. ರೆಹಮಾನ್ ಸಂಗೀತದಲ್ಲಿ ಹಾಡುಗಳು ಹೀಗೆ ಬಂದು ಹಾಗೆ ಹೋಗುತ್ತದೆ. 'ಜಿಂಗುಚಾ' ಹಾಡು ಮಾತ್ರ ನಿಮ್ಮನ್ನು ಕುಣಿಸುತ್ತದೆ. ದ್ವಿತೀಯಾರ್ಧಕ್ಕೆ ಹೋಲಿಸಿದರೆ, ಮೊದಲಾರ್ಧ ಚೆನ್ನಾಗಿದೆ. ರವಿ ಕೆ ಚಂದ್ರನ್ ಅವರ ಛಾಯಾಗ್ರಹಣ ಚಿತ್ರದ ಜೀವಾಳ. ರಾಜ್ಕಮಲ್ ಕಂಪನಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.
ಎ.ಆರ್. ರೆಹಮಾನ್ ಹಾಡುಗಳು ಚಿತ್ರಕ್ಕೆ ಬಲ ತುಂಬಿದರೂ ಹಿನ್ನೆಲೆ ಸಂಗೀತ ಅಷ್ಟೇನು ವರ್ಕ್ ಆಗಿಲ್ಲ. ಕಮಲ್ ಹಾಸನ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕೊನೆಯವರೆಗೂ ಅದನ್ನು ಉಳಿಸಲು ಹೋರಾಡಿದ್ದಾರೆ. ಕಮಲ್ ಹಾಸನ್ ಇಲ್ಲದ ಸ್ಥಳಗಳಲ್ಲಿ ಸಿಂಬು ಅವರ ನಟನೆ ಚಿತ್ರದ ದೊಡ್ಡ ಶಕ್ತಿಯಾಗಿದೆ. ಅದ್ಧೂರಿ ಮೇಕಿಂಗ್ ಕಾರಣಕ್ಕೆ ನೀವು 'ಥಗ್ ಲೈಫ್' ಚಿತ್ರವನ್ನು ನೋಡಬಹುದು. ಸ್ಟಂಟ್ ಮಾಸ್ಟರ್ಸ್ ಅನ್ಬರಿವ್ ಬಹಳ ವಿಭಿನ್ನವಾಗಿ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಕಮಲ್ ಹಾಸನ್ ಮತ್ತು ಸಿಂಬು ನಡುವಿನ ಕ್ಲೈಮ್ಯಾಕ್ಸ್ ಫೈಟ್ ಸಕತ್ತಾಗಿದೆ.
ಚಿತ್ರದ ಮೈನಸ್: ಶಂಕರ್ ರೀತಿ ನಿರ್ದೇಶಕ ಮಣಿರತ್ನಂ ಕೂಡ ಔಟ್ ಡೇಟೆಡ್ ಆಗಿಬಿಟ್ಟಿದ್ದಾರೆ. 'ಇಂಡಿಯನ್- 2' ನಂತರ ಕಮಲ್ ಹಾಸನ್ ನಟನೆಯ ಈ ಸಿನಿಮಾ ಕೂಡ ದೊಡ್ಡದಾಗಿ ಗೆಲ್ಲುವುದು ಕಷ್ಟ ಎನಿಸುತ್ತದೆ. ಕಮಲ್ ಹಾಸನ್ ಇಷ್ಟೆಲ್ಲಾ ಪ್ರಚಾರ ಮಾಡಿದ್ಯಾಕೆ? ಅಷ್ಟೆಲ್ಲಾ ಬಿಲ್ಡಪ್ ಕೊಟ್ಟಿದ್ದು ಯಾಕೆ? ಎಂದು ಸಿನಿಮಾ ನೋಡಿದಾಗ ಅನ್ನಿಸದೇ ಇರದು.


Click it and Unblock the Notifications











