Balaramana Dinagalu Review: ಗ್ಯಾಂಗ್ಸ್ಟರ್ ಕಥೆಯಲ್ಲಿ ವಿಷಾದ.. 'ಆ ದಿನಗಳನ್ನು ನೆನಪಿಸಿತೇ 'ಬಲರಾಮನ ದಿನಗಳು'?
'ಆ ದಿನಗಳು' ಭೂಗತಲೋಕದ ಕಥೆಯನ್ನು ರಕ್ತದ ಶೇಡ್ ಇಲ್ಲದೆಯೂ ಹೇಳಬಹುದು ಎಂದು ತೋರಿಸಿಕೊಟ್ಟ ಸಿನಿಮಾ. 2007ರಲ್ಲಿ ತೆರೆಕಂಡ 'ಆ ದಿನಗಳು' ಇಂದಿಗೂ ಕನ್ನಡ ಚಿತ್ರರಂಗದ ಎವರ್ಗ್ರೀನ್ ಗ್ರ್ಯಾಂಗ್ಸ್ಟರ್ ಲವ್ ಸ್ಟೋರಿ ಎನಿಸಿಕೊಂಡಿದೆ. ಇಷ್ಟು ವರ್ಷಗಳಾದ್ಮೇಲೆ ಮತ್ತೊಂದು ಅದೇ ಶೈಲಿಯಲ್ಲಿಯೇ ಕೆ.ಎಂ. ಚೈತನ್ಯ ಸಿನಿಮಾ ಮಾಡಿದ್ದಾರೆ. ಅದುವೇ 'ಬಲರಾಮನ ದಿನಗಳು'.
'ಆ ದಿನಗಳು' ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿತ್ತು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಕುತೂಹಲ 'ಬಲರಾಮನ ದಿನಗಳು' ಸಿನಿಮಾದ್ದು. ಈ ಸಿನಿಮಾನೂ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಮತ್ತೆ ಅದೇ ಫೀಲ್ ಕೊಡುತ್ತಾ? ವಿನೋದ್ ಪ್ರಭಾಕರ್, ಕೆ.ಎಂ. ಚೈತನ್ಯ ಕಾಂಬಿನೇಷನ್ ವರ್ಕ್ಔಟ್ ಆಗುತ್ತಾ? ಅನ್ನೋ ಕುತೂಹಲಕ್ಕಂತೂ ತೆರೆಬಿದ್ದಿದೆ.

ಈ ಬಾರಿ ಕೆ.ಎಂ. ಚೈತನ್ಯ ಪ್ರೇಕ್ಷಕರು ಇಟ್ಟ ನಿರೀಕ್ಷೆಯನ್ನು ತಲುಪುವಲ್ಲಿ ಯಶಸ್ವಿ ಆದರೇ? 'ಬಲರಾಮ' ಯಾರು? ಅವನ ಕಥೆಯೇನು? ಗ್ಯಾಂಗ್ಸ್ಟರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಜಾದು ಮಾಡಬಹುದೇ? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಫಿಲ್ಮಿಬೀಟ್ ಕನ್ನಡ ರಿವ್ಯೂ ಅನ್ನು ಮುಂದೆ ಓದಿ.
'ಬಲರಾಮ'ನ ಕಥೆಯೇನು?
ಸಿನಿಮಾದ ಇಡೀ ಕತೆ 'ಬಲರಾಮ' ಅಲಿಯಾಸ್ ಬಾಲಾನ ಸುತ್ತವೇ ಸಾಕುತ್ತೆ. 80 ದಶಕದಲ್ಲಿ ನಡೆದ ಈ ನೈಜ ಘಟನೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾ ಕೆ.ಎಂ ಚೈತನ್ಯ. ಹಾಸನದಿಂದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಮಹದಾಸೆ ಇಟ್ಟುಕೊಂಡು ಬೆಂಗಳೂರಿಗೆ ಬರುವ ಬಲರಾಮನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗುತ್ತೆ. ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನವೇ ರೌಡಿಯೊಬ್ಬನನ್ನು ಕೊಲ್ಲುತ್ತಾನೆ. ಈ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಜಾಮೀನಿನ ಮೇಲೆ ಹೊರ ಬಂದು ಗ್ಯಾಂಗ್ಸ್ಟರ್ (ಜಯರಾಮ್) ಗ್ಯಾಂಗ್ ಸೇರುತ್ತಾನೆ. ಇಲ್ಲಿಂದ ಬಲರಾಮ ದಿನಗಳು ಆರಂಭ ಆಗುತ್ತವೆ. 'ಆ ದಿನಗಳು' ಹೇಗೆ ಕೊನೆಗೊಳ್ಳುತ್ತವೆ ಅನ್ನೋದೇ ಸಿನಿಮಾದ ಕಥಾಹಂದರ.
ಪಾತ್ರಗಳು ಹೇಗಿವೆ?
ಬಲರಾಮನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ. ಇಡೀ ಸಿನಿಮಾ ಇವರ ಮೇಲೆ ಸಾಗುವುದರಿಂದ ಸುತ್ತಮುತ್ತ ಹಾದು ಹೋಗುವ ಪಾತ್ರಗಳು ಕೂಡ ಅಷ್ಟೇ ಮುಖ್ಯ ಎನಿಸಿಕೊಳ್ಳುತ್ತವೆ. ಬೆಂಗಳೂರಿನ ಗ್ಯಾಂಗ್ಸ್ಟರ್ ಕತೆ ಆಗಿರುವುದರಿಂದ 80ರ ದಶಕಗಳಲ್ಲಿ ಭೂಗತ ಲೋಕದಲ್ಲಿ ಮಿಂಚಿದವರನ್ನು ಎಳೆದು ತರಲಾಗಿದೆ. ಮುತ್ತಪ್ಪ ರೈ ಪಾತ್ರದಲ್ಲಿ ರಮೇಶ್ ಇಂದಿರಾ, ತಮಿಳು ಮಾತಾಡುತ್ತಾ ಬಡಾಯಿ ಕೊಚ್ಚಿಕೊಳ್ಳುವ ಕತ್ತಿ ಪಾತ್ರದಲ್ಲಿ ವಿನಯ್ ಗೌಡ, ಅಗ್ನಿ ಶ್ರೀಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ, ಜಯರಾಮ್ ಅವತಾರದಲ್ಲಿ ಆಶಿಶ್ ವಿದ್ಯಾರ್ಥಿ ಹಾಗೇ ಬಲರಾಮನ ಪ್ರೇಯಸಿ ರೇವತಿಯಾಗಿ ಪ್ರಿಯಾ ಆನಂದ್ ಪ್ರಮುಖ ಎನಿಸಿಕೊಳ್ಳುತ್ತವೆ.
ಟೆಕ್ನಿಕಲಿ ಹೇಗಿದೆ ಸಿನಿಮಾ?
'ಆ ದಿನಗಳು' ಸಿನಿಮಾದಂತೆ 'ಬಲರಾಮನ ದಿನಗಳು' ಸಿನಿಮಾದ ಹೈಲೈಟ್ ಕೂಡ ಕ್ಯಾಮರಾ ವರ್ಕ್. ಹಿರಿಯ ಛಾಯಾಗ್ರಾಹಕ ವೇಣು ಅವರ ಛಾಯಾಗ್ರಹಣ ಸಖತ್ ಆಗಿದೆ. ಈ ಗ್ಯಾಂಗ್ಸ್ಟಾರ್ ಕಥೆಗೆ ಕಿಕ್ ಕೊಡೋದು ಸಂತೋಷ್ ನಾರಾಯಣನ್ ಮ್ಯೂಸಿಕ್. ಹಾಗೇ ಅಲ್ಲಲ್ಲಿ ಸಿನಿಮಾದ ಸಂಕಲನ ವಿಶೇಷವಾಗಿ ಗಮನ ಸೆಳೆಯುತ್ತದೆ.

ಪ್ಲಸ್ ಏನು?
ಬಾಲಾ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಅಭಿನಯ ಗಮನ ಸೆಳೆಯುತ್ತೆ. ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ ಅಂತಹ ದಿಗ್ಗಜರ ಪಾತ್ರಗಳು ಇಷ್ಟ ಆಗುತ್ತವೆ. ಅವರವರಿಗೆ ಕೊಟ್ಟ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಗ್ಯಾಂಗ್ಸ್ಟರ್ ಕತೆಯಲ್ಲಿ ಬಂದು ಹೋಗುವ ಲವ್ ಸ್ಟೋರಿಯಲ್ಲಿ ಪ್ರಿಯಾ ಆನಂದ್ ತಕ್ಕ ಮಟ್ಟಿಗೆ ಸೆಳೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕತ್ತಿ ಪಾತ್ರದಲ್ಲಿ ನಟಿಸಿರುವ ವಿನಯ್ ಗೌಡ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್.ಸಿ. ವೇಣು ಅವರ ಕ್ಯಾಮರಾವರ್ಕ್ ಅದ್ಭುತ ಎನಿಸುತ್ತದೆ.
ಮೈನಸ್ ಏನು?
ಹಾಸನದಿಂದ ಬಾಲಾ ಬೆಂಗಳೂರಿಗೆ ಬಂದಿಳಿಯೋ ಹಿನ್ನೆಲೆ ಪಟ ಪಟ ಅಂತ ಮುಗಿದು ಹೋಗುತ್ತೆ. ಅಪರಾಧ ಜಗತ್ತಿಗೆ ಕಾಲಿಟ್ಟಾಗ ಬಾಲಾನಲ್ಲಾಗುವ ತೊಳಲಾಟವನ್ನು ಕಟ್ಟಿಕೊಡುವಲ್ಲಿ ಕೆ.ಎಂ.ಚೈತನ್ಯ ಯಾಕೋ ಮನಸ್ಸು ಮಾಡಿಲ್ಲ. ಒಬ್ಬ ಗ್ಯಾಂಗ್ಸ್ಟರ್ ಕಥೆಯನ್ನು ಇನ್ನೂ ಚೆನ್ನಾಗಿ ಕಟ್ಟಿಕೊಡಬಹುದಿತ್ತೇನೋ? ಅಂತ ಕೆಲವು ಸನ್ನಿವೇಶಗಳಲ್ಲಿ ಅನಿಸುತ್ತೆ. ಆ ದಿನಗಳು ಸಿನಿಮಾದಲ್ಲಿ ಬಂದ ಪಾತ್ರಗಳನ್ನೇ ಕರೆದುಕೊಂಡು ಬಂದರೂ ಅವರನ್ನು ಎಫೆಕ್ಟಿವ್ ಆಗಿ ಬಳಸಿಕೊಳ್ಳುವಲ್ಲಿ ಸೋತಿದ್ದಾರೆ ಎಂದು ಅನಿಸುತ್ತೆ.
ಕೊನೆಯಲ್ಲಿ
'ಬಲರಾಮನ ದಿನಗಳು' ಸಿನಿಮಾ ಒಬ್ಬ ಗ್ಯಾಂಗ್ಸ್ಟರ್ ಕಥೆ ಅನ್ನೋದೇನೋ ನಿಜ. ಆದರೆ, ಬಲರಾಮನ ಬದುಕನ್ನು ಇನ್ನೂ ಆಳವಾಗಿ ಕಟ್ಟಿಕೊಡಬಹುದಿತ್ತು. ಅದ್ಭುತ ಎನಿಸುವಂತೆ ಗ್ಯಾಂಗ್ಸ್ಟಾರ್ ಆಗಲಿಲ್ಲ ಅನ್ನೋ ಬೇಸರ ಮೂಡಿಸಬಹುದು. ಆದರೂ, 80-90ರ ದಶಕವನ್ನು ತೆರೆ ಮೇಲೆ ಚೆನ್ನಾಗಿ ತೋರಿಸಿದ್ದಾರೆ. ಅದನ್ನು ಕಣ್ತುಂಬಿಕೊಳ್ಳುವುದಕ್ಕೆ ಸಿನಿಮಾ ಒಮ್ಮೆ ನೋಡಬಹುದು.


Click it and Unblock the Notifications