ರಜನೀಕಾಂತ್ ಕರೆಗೆ ಓಗೊಟ್ಟಿದ್ದು ಬರೀ ಹತ್ತು ಜನ

ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಮುಂಬೈನಲ್ಲಿ ಧರಣಿ ಕೂತಿರುವ ಅಣ್ಣಾ ಹಜಾರೆಗೆ ಬೆಂಬಲ ನೀಡಿ, ಚೆನ್ನೈನಲ್ಲಿ ನಡೆಸಲಾಗಿದ್ದ ಮೂರು ದಿನದ ಉಪವಾಸ ಸತ್ಯಾಗ್ರಹದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಚೆನ್ನೈ ನಲ್ಲಿರುವ ತನ್ನ ಪೋಯಸ್ ಗಾರ್ಡನ್ ಮನೆಯಿಂದ ರಜನೀಕಾಂತ್ ಕರೆ ನೀಡಿದ್ದರು.
ಅಷ್ಟೇ ಅಲ್ಲದೆ ಅಣ್ಣಾ ಹೋರಾಟಕ್ಕೆ ಬೆಂಬಲಿಸಿ, ಅದಕ್ಕಾಗಿ ತನ್ನ ಒಡೆತನದ ಚೆನ್ನೈ ಹೃದಯ ಭಾಗದಲ್ಲಿರುವ ಐಷಾರಾಮಿ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪವನ್ನು ಒಂದು ದಿನದ ಮಟ್ಟಿಗೆ ಉಚಿತವಾಗಿ ನೀಡಿದ್ದರು. ರಜನೀಕಾಂತ್ ಕರೆ ನೀಡಿದ್ದಾರೆಂದು ಅರಿತ ಪೊಲೀಸರು ಅಲ್ಲಿ ಭಾರೀ ಬಂದೋಬಸ್ತ್ ನಡೆಸಿದ್ದೇ ನಡೆಸಿದ್ದು. ಆದರೆ ದಿನದ ಅಂತ್ಯಕ್ಕೆ ಅಲ್ಲಿ ಸೇರಿದ್ದು ಬರೀ ಹತ್ತೇ ಹತ್ತು ಜನ.
ಈ ಹಿಂದಿನಿಂದಲೂ ಅಣ್ಣಾ ಹಜಾರೆ ಹೋರಾಟಕ್ಕೆ ತಮಿಳುನಾಡಿನಲ್ಲಿ ಬೆಂಬಲ ವ್ಯಕ್ತವಾಗಿದ್ದು ಕಮ್ಮಿ. ಒಂದು ವೇಳೆ ರಜನೀಕಾಂತ್ ಮುಲ್ಲೈಪೆರಿಯಾರ್ ಆಣೆಕಟ್ಟು ವಿಚಾರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಕರೆ ನೀಡಿದ್ದರೆ ಅದರ ಕಥೆಯೇ ಬೇರೆ ಎನ್ನುವುದು ರಜನೀಕಾಂತ್ ಅಭಿಮಾನಿಗಳ ಅಂಬೋಣ.
ರಜನೀಕಾಂತ್ ಆ ಕಲ್ಯಾಣ ಮಂಟಪ ಕಟ್ಟಿಸಿದ್ದು ಕಪ್ಪುಹಣದಿಂದ ಈಗ ಕಪ್ಪುಹಣದ ವಿರುದ್ದ ಹೋರಾಟಕ್ಕೆ ಕರೆನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಇಳಂಗೋವನ್ ವ್ಯಂಗ್ಯವಾಡಿದ್ದಾರೆ.


Click it and Unblock the Notifications











