"ಸನಾತನ ಧರ್ಮವನ್ನು ಬುಡ ಸಮೇತ ಕಿತ್ತೆಸೆಯಬೇಕು" ಸಿಎಂ ಸ್ಟಾಲಿನ್ ಪುತ್ರನ ವಿವಾದಾತ್ಮಕ ಹೇಳಿಕೆ!
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜನಪ್ರಿಯ ನಟ ಕೂಡ ಹೌದು. ಇಷ್ಟೇ ಅಲ್ಲದೆ ಸದ್ಯ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದಾರೆ. ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ವಿರುದ್ಧ ಮಾತನಾಡಿರುವ ಉದಯನಿಧಿ ಸ್ಟಾಲಿನ್ ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಶನಿವಾರ (ಸೆಪ್ಟೆಂಬರ್ 2)ದಂದು ನಡೆದ 'ಸನಾತನ ನಿರ್ನಾಮ' ಸಭೆಯಲ್ಲಿ ಮಾತನಾಡಿದ ಉದಯ್ ಸನಾತನ ಧರ್ಮವನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. "ಕೆಲವು ವಿಚಾರಗಳನ್ನು ವಿರೋಧಿಸಿದರೆ ಸಾಲೋದಿಲ್ಲ. ಅದನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತೆಸೆಯಬೇಕಾಗುತ್ತದೆ. ಡೆಂಘೀ, ಮಲೇರಿಯಾ, ಕೊರೊನಾ, ಸೊಳ್ಳೆಗಳನ್ನೆಲ್ಲಾ ವಿರೋಧಿಸೋಕೆ ಆಗೋದಿಲ್ಲ. ಅವುಗಳನ್ನು ನಿರ್ನಾಮಗೊಳಿಸಬೇಕು. ಇದೇ ರೀತಿ ಸನಾತನವನ್ನೂ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು." ಎಂದಿದ್ದಾರೆಂದು ಎಎನ್ಐ ವರದಿ ಮಾಡಿದೆ.

"ಸನಾತನ ಎನ್ನುವ ಪದ ಸಂಸ್ಕೃತದ್ದು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವಂಥದ್ದು" ಎಂದು ಉದಯನಿಧಿ ಸ್ಟಾಲಿನ್ ಹೇಳಿರುವುದಾಗಿ ವರದಿಯಾಗಿದೆ. ಈ ಎಲ್ಲಾ ಮಾತುಗಳು ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಕೇಸರಿ ಪಾಳಯದಲ್ಲಿ ಈ ಮಾತುಗಳಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಈ ಕುರಿತು ಟ್ವಿಟರ್ (X) ಸಾಮಾಜಿಕ ಜಾಲತಾಣದಲ್ಲಿ ಉದಯನಿಧಿ ಮಾತುಗಳನ್ನು ಖಂಡಿಸಿದ್ದಾರೆ. "ಉದಯನಿಧಿ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ, ಡಿಎಂಕೆ ಸರ್ಕಾರದ ಒಬ್ಬ ಸಚಿವ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೀಗೆ ಹೋಲಿಸಿದ್ದಾರೆ. ಇದನ್ನು ಕೇವಲ ವಿರೋಧಿಸೋದಲ್ಲ, ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎನ್ನುವುದು ಅವರ ಅಭಿಪ್ರಾಯ. ಸಂಕ್ಷಿಪ್ತವಾಗಿ ಹೇಳೋದಾದ್ರೆ ಸನಾತನ ಧರ್ಮವನ್ನು ಅನುಸರಿಸೋ ಭಾರತದ ಶೇಕಡಾ 80ರಷ್ಟು ಜನಸಂಖ್ಯೆಯ ನಿರ್ನಾಮವಾಗಬೇಕು ಎಂದು ಅವರು ಹೇಳುತ್ತಿದ್ದಾರೆ. ಡಿಎಂಕೆ ಕಾಂಗ್ರೆಸ್ನ ಅತ್ಯಾಪ್ತ ಪಕ್ಷ ಮತ್ತು ಒಂದು ಪ್ರಮುಖ ವಿರೋಧ ಪಕ್ಷವಾಗಿದೆ. ಮುಂಬೈನ ಸಮಾವೇಶದಲ್ಲಿ ಇದನ್ನೇ ಒಪ್ಪಿಕೊಂಡಿದ್ದಾರೆ" ಎಂದು ಅಮಿತ್ ಮಾಲವೀಯ ಟ್ವೀಟ್ (X) ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿತ ಪಕ್ಷಗಳನ್ನು ಹೇಗೆ ವಿರೋಧಿಸಬೇಕು ಎನ್ನುವ ಕುರಿತಾಗಿ ಒಟ್ಟಾರೆ ಚುನಾವಣೆಯ ರೂಪುರೇಷೆ ಚರ್ಚಿಸಲು ಮುಂಬೈನಲ್ಲಿ ಸಭೆ ಸೇರಿದ್ದವು. ಅಮಿತ್ ಮಾಲವೀಯ ಈ ಸಭೆಯ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಬಿಜೆಪಿ ಮುಖಂಡನ ಈ ಮಾತುಗಳಿಗೆ ನಟ-ರಾಜಕಾರಣಿ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಎಂದೂ ಸನಾತನ ಧರ್ಮದ ಅನುಯಾಯಿಗಳಾದ ಜನರ ನಿರ್ಮೂಲನೆ ಮಾಡಬೇಕೆಂದು ತಿಳಿಸಿಯೇ ಇಲ್ಲ. ನಾನು ನನ್ನ ಮಾತುಗಳಿಗೆ ಬದ್ಧವಾಗಿದ್ದೇನೆ. ಸನಾತನ ಧರ್ಮದಿಂದಾಗಿ ಅನುಭವಿಸುತ್ತಿರುವ ಅನೇಕ ಹಿಂದುಳಿದ ಪಂಗಡಗಳ ಪರವಾಗಿ ನಾನು ಮಾತನಾಡಿದ್ದೇನೆ."
"ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನಾತ್ಮಕ ಹೋರಾಟಕ್ಕೆ ತಾನು ತಯಾರಿರೋದಾಗಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಮಾಜ ಸ್ಥಾಪಿಸಲು ಸದಾ ಹೋರಾಡಲು ಸಿದ್ಧವಿರುತ್ತದೆ" ಎಂದೂ ತಿಳಿಸಿದ್ದಾರೆ.
"ಇಂಥಾ ಕೇಸರಿ ಬೆದರಿಕೆಗೆಲ್ಲಾ ನಾವು ಹೆದರೋದಿಲ್ಲ. ನಾವು ಪೆರಿಯಾರ್, ಅಣ್ಣಾ ಮತ್ತು ಕಲೈಗ್ನಾರ್ ಅನುಯಾಯಿಗಳು. ನಮ್ಮ ದ್ರಾವಿಡ ಭೂಮಿಯಿಂದ ಸನಾತನ ಧರ್ಮವನ್ನು ಹೊರಗಟ್ಟುವ ನಿಟ್ಟಿನಲ್ಲಿ ನಮ್ಮ ಹೋರಾಟ ಖಂಡಿತಾ ಮುಂದುವರೆಯುತ್ತದೆ - ಇದನ್ನು ನಾನು ಇಂದು, ನಾಳೆ ಮತ್ತು ಎಂದೆಂದಿಗೂ ಪುನರುಚ್ಛರಿಸುತ್ತೇನೆ" ಎಂದು ಉಯದನಿಧಿ ಗುಡುಗಿದ್ದಾರೆ.


Click it and Unblock the Notifications











