ತಮಿಳುನಾಡು ಚುನಾವಣಾ ಸಮರಕ್ಕಿಳಿದ ದಳಪತಿ: 2 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದ ವಿಜಯ್.. ಏನಿದು ಲೆಕ್ಕಾಚಾರ?
ತಮಿಳುನಾಡು ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಟಿವಿಕೆ ಪಕ್ಷದ ಚೀಫ್ ನಟ ವಿಜಯ್ ತಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಹೆಸರನ್ನು ಇಂದು (ಮಾರ್ಚ್ 29) ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗೇ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಗೆ ಇಳಿಯುವ ನಿರ್ಧಾರ ಮಾಡಿದ್ದಾರೆ. ಯಾವುದೇ ಮೈತ್ರಿ ಮಾಡಿಕೊಳ್ಳದೆ ಒಂಟಿಯಾಗಿ ಅಖಾಡಕ್ಕೆ ಇಳಿದಿರುವ ವಿಜಯ್ ಅನ್ನು ರಾಜಕೀಯ ವಿಶ್ಲೇಷಕರು ಕುತೂಹಲದಿಂದ ನೋಡುತ್ತಿದ್ದಾರೆ.
ವಿಜಯ್ ತಮ್ಮ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ'ನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹೈಡ್ರಾಮಗಳು ನೋಡುವುದಕ್ಕೂ ಸಿಕ್ಕಿದೆ. ವಿಜಯ್ ಪ್ರತಿಯೊಬ್ಬ ಅಭ್ಯರ್ಥಿಯೊಂದಿಗೂ ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಂಡರೆ, ಇನ್ನೊಂದು ಕಡೆ ಅಭ್ಯರ್ಥಿಗಳು ಕಣ್ಣೀರು, ವಿಜಯ್ ಚುಂಬನದಂತಹ ಘಟನೆಗಳು ಕೂಡ ನಡೆದಿವೆ.

ವಿಜಯ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ದೊಡ್ಡ ಮಟ್ಟಕ್ಕೇನು ಚರ್ಚೆಯಾಗುತ್ತಿಲ್ಲ. ಆದರೆ, ವಿಜಯ್ ಎರಡು ಸ್ಥಾನಗಳಿಂದ ಅಖಾಡಕ್ಕೆ ಇಳಿಯುತ್ತಿರೋದು ಯಾಕೆ? ಆ ಎರಡು ಸ್ಥಾನಗಳನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಅನ್ನೋದನ್ನು ರಾಜಕೀಯ ವಿಶ್ಲೇಷಕರು ಡಿಕೋಡ್ ಮಾಡಿದ್ದಾರೆ. ಇದರಲ್ಲಿ ಡಿಎಂಕೆಗೆ ಟಕ್ಕರ್ ಕೊಡುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿರೋದು ಸ್ಪಷ್ಟವಾಗಿ ಗೊತ್ತಾಗಿದೆ.
ಎನ್ಡಿಟಿವಿ ವರದಿ ಪ್ರಕಾರ, ವಿಜಯ್ ಚೆನ್ನೈನ ಪೆರಂಬೂರು ಹಾಗೂ ತಿರುಚಿರಾಪಲ್ಲಿಯ ಪೂರ್ವದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂದು ನೋಡುವುದಾದರೇ, ಪೆರಂಬೂರು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಅವರ ಕೊಲಥುರ್ ಕ್ಷೇತ್ರಕ್ಕೆ ಸಮೀಪದಲ್ಲಿದೆ. ಈ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯದ ಜನರು ಹೆಚ್ಚಿದ್ದಾರೆ. ಇದು ವಿಜಯ್ ಸಹಜವಾಗಿ ಸಹಾಯಕ್ಕೆ ಬರುತ್ತೆ.
ಇನ್ನೊಂದು ಕಡೆ ಈ ಕ್ಷೇತ್ರದ ಜನರು ಡಿಎಂಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಹಾಲಿ ಎಂಎಲ್ಎ ಆಗಿರುವ ಆರ್ಡಿ ಶೇಖರ್ ಅವರನ್ನು ಡಿಎಂಕೆ ಮತ್ತೆ ಅಖಾಡಕ್ಕೆ ಇಳಿಸಿದೆ. 2021ರ ಚುನಾವಣೆಯಲ್ಲಿ ಇವರು 54,967 ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ವಿಜಯ್ಗೆ ಅವರ ಸಮುದಾಯದ ಬೆಂಬಲ ಇದ್ದರೂ, ಗೆಲ್ಲುವುದು ಅಷ್ಟು ಸುಲಭವಲ್ಲ.
ಇನ್ನು ಪೆರಂಬೂರಿನಿಂದ 300 ಕಿ.ಮೀ ದೂರದಲ್ಲಿರುವ ತಿರುಚಿರಾಪಲ್ಲಿಯ ಪೂರ್ವ ಕ್ಷೇತ್ರದ ಕೂಡ ಸವಾಲಿನಿಂದ ಕೂಡಿದೆ. ಇಲ್ಲೂ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಸಂಸ್ಥೆಗಳು ಇವೆ. ಇಲ್ಲೂ ಕೂಡ ಕ್ರಿಶ್ಚಿಯನ್ ಸಮುದಾಯದ ವೋಟುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಲ್ಲದೆ ಇದೂ ಕೂಡ ಡಿಕೆಎಂ ಪಕ್ಷ ಗೆಲ್ಲುವ ಕ್ಷೇತ್ರವೇ. ಹೀಗಾಗಿ ಡಿಎಂಕೆಯ ಎರಡು ಕ್ಷೇತ್ರಗಳ ಮೇಲೆ ವಿಜಯ್ ಕಣ್ಣಿಟ್ಟಿದ್ದು, ಹೇಗಾದರೂ ಮಣಿಸಲೇಬೇಕು ಅಂತ ನಿರ್ಧರಿಸಿದ್ದಾರೆ.
ಇನ್ನು ತಿರುಚಿರಾಪಲ್ಲಿಯಲ್ಲಿ ವಿಜಯ್ಗೆ ಯುವ ಸಮುದಾಯದ ಬೆಂಬಲ ಸಿಕ್ಕಿದೆ. ಮೊದಲ ಬಾರಿ ಸಮಾವೇಶ ಮಾಡಿದಾಗ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿಯಾಗಿದೆ. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲಿ ವಿಜಯ್ ಡಿಎಂಕೆ ಪಕ್ಷಕ್ಕೆ ಸಿಕ್ಕಾಪಟ್ಟೆ ಪೈಪೋಟಿ ಕೊಡೋದು ಗ್ಯಾರಂಟಿ. ಈಗ ಒಂದು ವೇಳೆ ವಿಜಯ್ ಈ ಎರಡು ಕ್ಷೇತ್ರಗಳಲ್ಲಿ ಗೆದ್ದರೆ ಏನು? ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಸೋತರೆ ಏನು? ಅನ್ನೋ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications















