ತಿರುಚಿ ಅಫಿಡವಿಟ್ನಲ್ಲಿ ₹224 ಕೋಟಿ.. ಪೆರಂಬೂರಿನಲ್ಲಿ ₹105 ಕೋಟಿ; ಸಂಕಷ್ಟಕ್ಕೆ ಸಿಲುಕಿದರೇ ವಿಜಯ್?
ತಮಿಳುನಾಡು ಚುನಾವಣೆಗೆ ಇನ್ನೇನು ಕ್ಷಣ ಗಣಗಣನೆ ಶುರುವಾಗಿದೆ. ಹೀಗಾಗಿ ಕೊನೆಯ ಹಂತದ ಪ್ರಚಾರ ಚುರುಕುಕೊಂಡಿದೆ. ಮತದಾನಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿವೆ. ಈ ಬೆನ್ನಲ್ಲೇ ಮತ್ತೊಂದು ದಳಪತಿ ವಿಜಯ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಿರಂತರವಾಗಿ ಸಂಕಷ್ಟಗಳನ್ನೇ ಎದುರಿಸುತ್ತಿರುವ ವಿಜಯ್ಗೆ ಮದ್ರಾಸ್ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಹೀಗಾಗಿ ವಿಜಯ್ ಮತ್ತೊಂದು ಸವಾಲನ್ನು ಎದುರಿಸಬೇಕಾಗಿದೆ.
ಇದೇ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿರುವ ವಿಜಯ್ ಈಗಾಗಲೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಈ ಮಧ್ಯೆ ವಿಚ್ಛೇದನ ಪ್ರಕರಣ ಕೂಡ ನಡೆಯುತ್ತಿದೆ. ಇದೆಲ್ಲವನ್ನೂ ನಿಭಾಯಿಸಿಕೊಂಡು ಚುನಾವಣೆಗೆ ರೆಡಿಯಾಗುತ್ತಿರುವ ವಿಜಯ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ವಿಜಯ್ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದಾರೆ. ಅದೇ ಈಗ ಸಮಸ್ಯೆಯಾಗಿ ಪರಿಣಮಿಸಿದೆ.

ಚೆನ್ನೈನ ಪೆರಂಬೂರು ಹಾಗೂ ತಿರುಚಿ ಪೂರ್ವ ಎರಡು ಕಡೆಗಳಲ್ಲಿ ವಿಜಯ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ, ವಿಜಯ್ ಎರಡೂ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸುಮಾರು 119 ಕೋಟಿ ರೂಪಾಯಿಯ ಅಂತರ ಕಂಡಿದೆ. ಹೀಗಾಗಿ ವಿಜಯ್ ವಿರುದ್ಧ ದೂರನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಉತ್ತರಿಸುವಂತೆ ಹೈಕೋರ್ಟ್ ನೋಟೀಸ್ ಜಾರಿಗೆ ಮಾಡಿದೆ. ಅಸಲಿಗೆ ಏನಿದು ಮ್ಯಾಟರ್? ಕೊನೆಯ ಕ್ಷಣದಲ್ಲಿ ಎಡವಿದರೇ ವಿಜಯ್? ತಿಳಿಯುವುದಕ್ಕೆ ಮುಂದೆ ಓದಿ.
ವಿ ವಿಘ್ನೇಶ್ ಎಂಬುವವರು ವಿಜಯ್ ವಿರುದ್ಧ ಕೋರ್ಟ್ಗೆ ದೂರನ್ನು ಸಲ್ಲಿಸಿದ್ದರು. ವಿಜಯ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. ತಿರುಚಿ ಪೂರ್ವದಲ್ಲಿ ವಿಜಯ್ ಸಲ್ಲಿಸಿದ ಅಫಿಡವಿಟ್ನಲ್ಲಿ ಚರ ಆಸ್ತಿ (movable assets) 224 ಕೋಟಿ ರೂಪಾಯಿ ಎಂದು ತೋರಿಸಲಾಗಿದೆ. ಆದರೆ, ಪೆರಂಬೂರು ಕ್ಷೇತ್ರದಲ್ಲಿ ಸಲ್ಲಿಸಿದ ಅಫಿಡವಿಡ್ನಲ್ಲಿ ಇದೇ ಚರ ಆಸ್ತಿ 105 ಕೋಟಿ ರೂಪಾಯಿ ಎಂದು ತೋರಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ದೂರನ್ನು ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಎಸ್ಎ ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರು ನಟ ವಿಜಯ್, ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ. "ಇದರಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. 100 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಒಂದು ಕ್ಷೇತ್ರದಲ್ಲಿ ತೋರಿಸಿಲ್ಲ." ಎಂದು ನ್ಯಾಯಾಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯ್ ಸಲ್ಲಿಸಿದ ತಿರುಚಿ ಪೂರ್ವ ಹಾಗೂ ಪೆರಂಬೂರು ಅಫಿಡವಿಡ್ನಲ್ಲಿ 100 ಕೋಟಿ ರೂಪಾಯಿ ಹೆಚ್ಚು ವ್ಯತ್ಯಾಸ ಕಂಡು ಬಂದಿದೆ. ಇದು ಕೋರ್ಟ್ ಇದನ್ನು ಕ್ರಮ ಸರಿಯಾಗಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ಪಟ್ಟಿದೆ. ಆದರೆ, ಅಂತಿಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ವಿಜಯ್, ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ಪ್ರತಿಕ್ರಿಯಿಸುವವರೆಗೂ ಸಮಯವನ್ನು ನೀಡಿದೆ. ಆನಂತರವೇ ದೂರಿನ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇತ್ತ ವಿಜಯ್ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾದರೂ ಕುಗ್ಗಿಲ್ಲ. ಕೊನೆಯ ಹಂತದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಚೊಚ್ಚಲ ಚುನಾವಣೆಯಲ್ಲಿಯೇ ಒಂಟಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ತಮಿಳುನಾಡಿನ ಪ್ರಬಲ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ವಿರುದ್ಧ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವುದಕ್ಕೆ ಸಾಹಸ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ತಮಿಳುನಾಡಿನ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ನೋಡಬೇಕಿದೆ.


Click it and Unblock the Notifications
