Ameer Sultan–Rajinikanth: "ರಜನಿಕಾಂತ್ ಆ ಪ್ರಶಸ್ತಿಗೆ ಅರ್ಹರೇ?" ತಮಿಳು ನಿರ್ದೇಶಕ ಅಮೀರ್ ಸುಲ್ತಾನ್ ವಿವಾದಾತ್ಮಕ ಕಮೆಂಟ್
ರಜನಿಕಾಂತ್ ಸಿನಿಮಾಗಳ ಬಗ್ಗೆ ಯಾರಿಗೂ ವಿಶೇಷವಾಗಿ ಹೇಳಬೇಕಿಲ್ಲ. ಸೂಪರ್ಸ್ಟಾರ್ಗೆ ತಮಿಳು ನಾಡಿನಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಒಮದು ಸಿನಿಮಾದಲ್ಲಿ ರಜನಿ ಇದ್ದಾರೆ ಅಂದ್ರೆ, ಆ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸೋದು ಬಹುತೇಕ ಖಚಿತ.
ರಜನಿ ಶೈಲಿ, ಮ್ಯಾನರಿಸಂ ಬೀಟ್ ಮಾಡೋರು ಯಾರೂ ಇಲ್ಲ. ರಜನಿಕಾಂತ್ಗೆ ಸೂಪರ್ ಹಿಟ್ ಕೊಟ್ಟ ಹಲವು ಸಿನಿಮಾಗಳಿವೆ. ಅವುಗಳಲ್ಲೊಂದು ಶಂಕರ್ ನಿರ್ದೇಶಿಸಿದ 'ಶಿವಾಜಿ'. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದರೂ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿತ್ತು.

2007ರಲ್ಲಿ 'ಶಿವಾಜಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿತ್ತು. ರಜನಿಕಾಂತ್ ಅಭಿನಯಕ್ಕೆ ಸಿನಿಪ್ರೇಮಿಗಳು ಮರುಳಾಗಿದ್ದರು. ಹೀಗಾಗಿ ತಲೈವಾಗೆ ತಮಿಳುನಾಡು ಸರ್ಕಾರ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈಗ ಇದೇ ಪ್ರಶಸ್ತಿಯ ಬಗ್ಗೆ ತಮಿಳು ನಿರ್ದೇಶಕರೊಬ್ಬರು ಚಕಾರವೆತ್ತಿದ್ದಾರೆ.
ರಜನಿಕಾಂತ್ಗೆ ರಾಜ್ಯ ಪ್ರಶಸ್ತಿ ಕೊಟ್ಟಿದ್ದೇಕೆ?
'ಶಿವಾಜಿ' ಸಿನಿಮಾದಲ್ಲಿನ ನಟನೆಗೆ ರಜನಿಕಾಂತ್ಗೆ ಅತ್ಯುತ್ತಮ ನಟ ಪ್ರಶಸ್ತಿ ಕೊಟ್ಟಿದ್ದಕ್ಕೆ ತಮಿಳು ನಿರ್ದೇಶಕ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ರಜನಿಕಾಂತ್ ಸಿಕ್ಕ ರಾಜ್ಯ ಪ್ರಶಸ್ತಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ನಿರ್ದೇಶಕ ಮತ್ಯಾರೂ ಅಲ್ಲ ಅಮೀರ್ ಸುಲ್ತಾನ್.

ಅಮೀರ್ ಸುಲ್ತಾನ್ ತಮಿಳಿನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. 'ಪರುತ್ತಿವೀರನ್', 'ಆದಿ ಭಗವಾನ್' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ನಿರ್ದೇಶಕ ಈಗ ರಜನಿಕಾಂತ್ಗೆ 2007ರಲ್ಲಿ ತೆರೆಕಂಡ 'ಶಿವಾಜಿ' ಸಿಕ್ಕ ರಾಜ್ಯ ಪ್ರಶಸ್ತಿ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಇತ್ತೀಚೆಗೆ ಅಮೀರ್ ಸುಲ್ತಾನ್ ಮಾಧ್ಯಮಗಳ ಜೊತೆ ಮಾತಾಡುವಾಗ, "ರಜನಿಕಾಂತ್ ಅವರಿಗೆ ಶಿವಾಜಿ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಹೇಗೆ ಕೊಟ್ಟರು?" ಎಂದು ಪ್ರಶ್ನೆ ಮಾಡಿದ್ದಾರೆ. "ರಜನಿಕಾಂತ್ ಅಂತಹ ಅಧ್ಬುತ ಪ್ರತಿಭೆಯನ್ನೇನು ತೋರಿಸಲಿಲ್ಲ. ಆದರೆ, ಅದೇ ವರ್ಷ ಇನ್ನೂ ಉತ್ತಮವಾದ ಸಿನಿಮಾಗಳನ್ನು ಕೊಟ್ಟ ಹೀರೋಗಳು ಇದ್ದರು" ಎಂದು ಕಮೆಂಟ್ ಮಾಡಿದ್ದಾರೆ.
ಈಗ ರಜನಿ ವಿರುದ್ಧ ತಿರುಗಿಬಿದ್ದಿದ್ದೇಕೆ?
ಅಷ್ಟಕ್ಕೂ ರಜನಿಕಾಂತ್ಗೆ ಅದೆಷ್ಟೋ ಪ್ರಶಸ್ತಿಗಳು ಸಿಕ್ಕಿವೆ. ರಾಜ್ಯ ಪ್ರಶಸ್ತಿಗಿಂತ ದೊಡ್ಡ ಅವಾರ್ಡ್ ಸೂಪರ್ಸ್ಟಾರ್ ಮನೆಯಲ್ಲಿ ಇದೆ. ಹೀಗಿದ್ದರೂ 2007ರಲ್ಲಿ ಶಿವಾಜಿ ಸಿನಿಮಾಗೆ ಸಿಕ್ಕ ಪ್ರಶಸ್ತಿ ಬಗ್ಗೆನೇ ಯಾಕೆ ಚಕಾರವೆತ್ತಿದ್ದಾರೆ? ಇದರ ಹಿಂದಿನ ಅಸಲಿ ಗುಟ್ಟೇನು? ಅನ್ನೋದು ಚರ್ಚೆಯಾಗುತ್ತಿದೆ.
ಅಮೀರ್ ಸುಲ್ತಾನ್ 2007ರಲ್ಲಿ ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ 'ಪರುತ್ತಿವೀರನ್'. ಇದು ತಮಿಳಿನಲ್ಲಿ ಬಂದಿರೋ ಕಲ್ಟ್ ಸಿನಿಮಾಗಳಲ್ಲೊಂದು. ಈ ಸಿನಿಮಾದಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಇದೇ ನಿರ್ದೇಶಕನಿಗೆ ತಮಿಳು ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತ್ತು. ಈ ಸಿನಿಮಾಗಾಗಿ ರಾಜ್ಯ ಪ್ರಶಸ್ತಿ ಸಿಗದೇ ಇದ್ದಿದ್ದಕ್ಕೆ ಹೀಗೆ ಕಮೆಂಟ್ ಮಾಡುತ್ತಿದ್ದಾರೆ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ರಜನಿಕಾಂತ್ ಪ್ರಶಸ್ತಿ ಬಗ್ಗೆ ಕಮೆಂಟ್ ಮಾಡುತ್ತಿದ್ದಂತೆ ತಲೈವಾ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಮೀರ್ ಸುಲ್ತಾನ್ ವಿರುದ್ಧ ಕೆಮೆಂಟ್ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಸದ್ಯ ಸೂಪರ್ಸ್ಟಾರ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ 'ಜೈಲರ್' ಸೆಟ್ಟೇರಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮೋಹನ್ ಲಾಲ್, ರಮ್ಯಾ ಕೃಷ್ಣ ಕೂಡ ನಟಿಸಿರೋದು ವಿಶೇಷ.


Click it and Unblock the Notifications











