ನಟ ವಿಜಯ್ ದಳಪತಿ ಮನೆಗೆ ಬಾಂಬ್ ಬೆದರಿಕೆ ಕರೆ
ಕೆಲವು ದಿನಗಳ ಹಿಂದಷ್ಟೇ ನಟ ರಜನಿಕಾಂತ್ ಅವರ ಮನೆಗೆ ಹುಸಿ ಬಾಂಬ್ ಬೆದರಿಕೆ ಕರೆಬಂದಿತ್ತು. ಅದರ ಮೂಲವನ್ನು ಹುಡುಕಿದ್ದ ಪೊಲೀಸರಿಗೆ ಆತ ಎಂಟನೆಯ ತರಗತಿ ವಿದ್ಯಾರ್ಥಿ ಎನ್ನುವುದು ಗೊತ್ತಾಗಿತ್ತು. ಆದರೆ ಈ ಘಟನೆ ರಜನಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈಗ ತಮಿಳುನಾಡಿನಲ್ಲಿ ಮತ್ತೊಂದು ಘಟನೆ ವರದಿಯಾಗಿದ್ದು, ನಟ ವಿಜಯ್ ದಳಪತಿ ಮನೆಗೆ ಹುಸಿ ಬಾಂಬ್ ಕರೆ ಬಂದಿದೆ.
Recommended Video
ಶನಿವಾರ ಮಧ್ಯರಾತ್ರಿ ವೇಳೆ ಪೊಲೀಸ್ ಕಂಟ್ರೋಲ್ ರೂಮ್ಗೆ ಅನಾಮಧೇಯ ಕರೆ ಬಂದಿದ್ದು, ಚೆನ್ನೈನ ಸಾಲಿಗ್ರಾಮಮ್ನಲ್ಲಿರುವ ನಟ ವಿಜಯ್ ಅವರ ಮನೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ವಿಜಯ್ ಮನೆಗೆ ಧಾವಿಸಿದ ಪೊಲೀಸರು ಮಧ್ಯರಾತ್ರಿ ಸುಮಾರು ಎರಡು ಗಂಟೆ ಸತತ ಪರಿಶೀಲನೆ ನಡೆಸಿದ್ದಾರೆ. ನಂತರ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತೀರ್ಮಾನಿಸಿದ್ದಾರೆ. ಮುಂದೆ ಓದಿ...

ಈ ಹಿಂದೆಯೂ ಕರೆ ಮಾಡಿದ್ದ
ಕರೆ ಮಾಡಿದ ವ್ಯಕ್ತಿಯನ್ನು ಕೂಡ ಪತ್ತೆ ಹಚ್ಚಿದ್ದು, ಆತ ವಿಲ್ಲುಪುರಂನ 21 ವರ್ಷದ ಯುವಕ. ಮಾನಸಿಕ ಸಮಸ್ಯೆಯಿಂದ ಆತ ಬಳಲುತ್ತಿದ್ದಾನೆ. ಈ ಹಿಂದೆ ಕೂಡ ಆತ ಇಂತಹ ಕರೆಗಳನ್ನು ಮಾಡಿದ್ದ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ, ಪುದುಚೆರಿ ಮುಖ್ಯಮಂತ್ರಿಯಾಗಿದ್ದ ನಾರಾಯಣಸ್ವಾಮಿ ಮತ್ತು ಗವರ್ನರ್ ಕಿರಣ್ ಬೇಡಿ ಅವರ ಮನೆಗಳಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಆತ 100 ಸಂಖ್ಯೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಇರಿಸಿ ಸುಮ್ಮನಾಗುತ್ತಾನೆ ಎಂದು ಮರಕ್ಕಳಂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮನೆಯವರ ಮೊಬೈಲಿಂದ ಫೋನ್
ಆತನ ಕರೆಯನ್ನು ಟ್ರೇಸ್ ಮಾಡಿ ಸ್ಥಳ ಪತ್ತೆಹಚ್ಚಲಾಯಿತು. ತಾನೇ ಕರೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಆತನ ಬಳಿ ಸೆಲ್ ಫೋನ್ ಇಲ್ಲದಿದ್ದರೂ ಮನೆಯವರ ಒಂದು ಮೊಬೈಲ್ ಫೋನ್ ಮೂಲಕ ಕರೆ ಮಾಡಿದ್ದಾನೆ. ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಒಳಗೆ ಬಿಟ್ಟಿರಲಿಲ್ಲ
ಕಳೆದ ತಿಂಗಳು ಕೂಡ ಚೆನ್ನೈನ ಪೋಯೆಸ್ ಗಾರ್ಡನ್ನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೊರೊನಾ ವೈರಸ್ ಸೋಂಕಿನ ಭಯದ ಕಾರಣದಿಂದ ರಜನಿ ಕುಟುಂಬದವರು ಆರಂಭದಲ್ಲಿ ಬಾಂಬ್ ಸ್ಕ್ವಾಡ್ ಮನೆಯೊಳಗೆ ಬರಲು ಅವಕಾಶ ನೀಡಿರಲಿಲ್ಲ. ಕೊನೆಗೆ ಈ ಬೆದರಿಕೆ ಸುಳ್ಳು ಎನ್ನುವುದು ಖಚಿತವಾಗಿತ್ತು.

8ನೇ ತರಗತಿ ಬಾಲಕ
ರಜನಿಕಾಂತ್ ಮನೆಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾತ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತ ಕಲಿಕೆಯಲ್ಲಿ ಅಸಮರ್ಥನಾಗಿದ್ದ. ಬಾಲಕನಾಗಿದ್ದ ಕಾರಣ ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ರಜನಿಕಾಂತ್ ಅವರ ಮನೆಗೆ ಹಲವಾರು ಬಾರಿ ಈ ರೀತಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು.


Click it and Unblock the Notifications











