ಬಿಜೆಪಿಯಿಂದ ಸಿಡಿದೆದ್ದು ಹೊಸ ಪಕ್ಷ ಕಟ್ಟಲು ಹೊರಟರೇ ಅಣ್ಣಾಮಲೈ ? ರಜನಿಕಾಂತ್ ಬೆಂಬಲ?
2026ರಲ್ಲಿ ತಮಿಳುನಾಡು ರಾಜಕೀಯ ಸಂಪೂರ್ಣವಾಗಿ ಬದಲಾಗಿದೆ. ಡಿಎಂಕೆ, ಎಐಡಿಎಂಕೆ ಪಕ್ಷಗಳ ಪ್ರಾಬಲ್ಯದ ಹೊರತಾಗಿಯೂ ವಿಜಯ್ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಅಧಿಕಾರ ಹಿಡಿದಿದೆ. ಮೊದಲ ಪ್ರಯತ್ನದಲ್ಲಿಯೇ ವಿಜಯ್ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಡಿಎಂಕೆ, ಎಐಡಿಎಂಕೆ ಪಕ್ಷಗಳನ್ನು ಮಣಿಸಿ ಈ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ. ಇದೇ ಬೆನ್ನಲ್ಲೇ ಮತ್ತೊಂದು ಹೊಸ ಪಕ್ಷ ಸ್ಥಾಪನೆಯಾಗುವ ಸಾಧ್ಯತೆಯೂ ಇದೆ.
ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ರಚಿಸುತ್ತಾರೆಂಬ ಸುದ್ದಿ ಹಬ್ಬಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಬಿಜೆಪಿ ನಡೆಯಿಂದ ಬೇಸರಗೊಂಡಿರುವ ಅಣ್ಣಾಮಲೈ ರಾಜಕೀಯ ಪಕ್ಷದ ಕಟ್ಟುವ ನಿರ್ಧಾರಕ್ಕೆ ಬಂದಿದ್ದಾರೆಂಬ ಗುಲ್ಲು ಹಬ್ಬಿದೆ.

ಇಷ್ಟೇ ಆಗಿದ್ದರೆ ಇಷ್ಟೊಂದು ಚರ್ಚೆ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಣ್ಣಾಮಲೈ ರಾಜಕೀಯ ಪಕ್ಷ ಕಟ್ಟುವ ಬಗ್ಗೆ ಸದ್ದು ಮಾಡುತ್ತಿದ್ದಂತೆ ಸೂಪರ್ಸ್ಟಾರ್ ರಜನಿಕಾಂತ್ ಹೆಸರು ಕೂಡ ಕೇಳಿ ಬರುತ್ತಿದೆ. ಒಂದು ವೇಳೆ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಕಟ್ಟಿದರೆ, ಅದಕ್ಕೆ ರಜನಿಕಾಂತ್ ಬೆಂಬಲ ನೀಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ರಾಜಕೀಯ ವಲಯದಲ್ಲಿ ಆಗ್ತಿರೋ ಚರ್ಚೆ ಏನು? ನಿಜಕ್ಕೂ ರಜನಿಕಾಂತ್ ಬೆಂಬಲ ನೀಡುತ್ತಿದ್ದಾರೆಯೇ? ತಿಳಿಯುವುದಕ್ಕೆ ಮುಂದೆ ಓದಿ.
ಅಣ್ಣಾಮಲೈ ಪ್ರತಿಕ್ರಿಯೆ ಏನು?
ಕಳೆದ ಕೆಲವು ದಿನಗಳಿಂದ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಕಟ್ಟುವ ವದಂತಿಗಳು ಹರಿದಾಡುತ್ತಿದೆ. ಈ ಸುದ್ದಿಗಳಿಗೆ ಸ್ವತಃ ಅಣ್ಣಾಮಲೈ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. "ದಯವಿಟ್ಟು ಇನ್ನು ಎರಡು ದಿನ ಕಾಯಿರಿ, ಈ ಬಗ್ಗೆ ಕುಳಿತು ಮಾತನಾಡೋಣ" ಎಂದು ಹೇಳಿದ್ದಾರೆ. ಹೀಗಾಗಿ ಹೊಸ ಪಕ್ಷ ಕಟ್ಟುತ್ತಾರೆಂಬ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ.
ಸೂಪರ್ಸ್ಟಾರ್ ರಜನಿಕಾಂತ್ ಬೆಂಬಲ
ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಅಣ್ಣಾಮಲೈ ಆರಂಭಿಸಲಿರುವ ಹೊಸ ಪ್ರಾದೇಶಿಕ ಪಕ್ಷಕ್ಕೆ ಸೂಪರ್ಸ್ಟಾರ್ ರಜನಿಕಾಂತ್ ಬೆಂಬಲ ನೀಡುತ್ತಿದ್ದಾರೆ. ಆದರೆ, ಮುಖ್ಯವಾಹಿನಿಗೆ ಬಾರದೆ ಹಿಂದಿನಿಂದಲೇ ಸಪೋರ್ಟ್ ಮಾಡುತ್ತಿದ್ದಾರೆಂದು ಹೇಳಲಾಗಿದೆ. ತೆರೆಯ ಹಿಂದೆ ಸಂಪೂರ್ಣ ಬೆಂಬಲ ನೀಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ರಜನಿಕಾಂತ್ ಹೆಸರು ತಳುಕು ಹಾಕಿಕೊಳ್ಳುವುದಕ್ಕೆ ಕಾರಣ ಒಂದು 'ಸೈಕಲ್' ಗುರುತು ಎಂದೂ ವಿಶ್ಲೇಷಕರು ಹೇಳುತ್ತಿದ್ದಾರೆ.

ಅಣ್ಣಾಮಲೈ-ರಜನಿ.. 'ಸೈಕಲ್' ಗುರುತು
ಹೌದು, ಅಣ್ಣಾಮಲೈ ರಾಜಕೀಯ ಪಕ್ಷ ಘೋಷಣೆಗೆ ಮುಂದಾಗಿದ್ದಾರೆಂಬ ಸುದ್ದಿ ಹಬ್ಬುತ್ತಿದ್ದಂತೆ ರಜನಿಕಾಂತ್ ಹೆಸರು ಕೇಳಿ ಬಂದಿದೆ. ಅದಕ್ಕೆ ಅಣ್ಣಾಮಲೈ ಯೋಚಿಸುತ್ತಿರುವ 'ಸೈಕಲ್' ಸಿಂಬಲ್ ಎನ್ನಲಾಗಿದೆ. ಯಾಕಂದ್ರೆ, ಈ ಹಿಂದೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಯೋಚಿಸುತ್ತಿದ್ದಾಗ ಅವರು 'ಸೈಕಲ್' ಗುರುತನ್ನು ಪಡೆಯುವುದಕ್ಕೆ ಚಿಂತಿಸಿದ್ದರು. ಈಗ ಅದೇ ಚಿಹ್ನೆಯನ್ನೇ ಚುನಾವಣಾ ಆಯೋಗದಿಂದ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಹೀಗಾಗಿ ರಜನಿ ಹೆಸರು ಅಣ್ಣಾಮಲೈ ಹೊಸ ಪಕ್ಷದೊಂದಿಗೆ ತಳುಕು ಹಾಕಿಕೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕ್ಷೇತ್ರಗಳ ಮೇಲೆ ಕಣ್ಣು
ಅಣ್ಣಾಮಲೈ ಪ್ರಸ್ತುತ ತಮಿಳುನಾಡಿನ 5 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ವಿಜಯ್ ಅವರಿಂದ ತೆರವಾಗಿರುವ ತಿರುಚಿರಾಪಳ್ಳಿ ಈಸ್ಟ್ ಸೇರಿದಂತೆ 5 ಕ್ಷೇತ್ರಗಳಿಂದ ತಮ್ಮ ಪಕ್ಷದ ಮುಖಂಡರನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಜೊತೆಗೆ ಇವರೇ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೂ ಅಚ್ಚರಿಯಿಲ್ಲ. ಸದ್ಯ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈ ಹಿಂದೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಇದ್ದ ಪೈಪೋಟಿ, ಈಗ ಡಿಎಂಕೆ ಹಾಗೂ ವಿಜಯ್ ಅವರ ಟಿವಿಕೆ ನಡುವಿನ ಹಣಾಹಣಿಯಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಅಣ್ಣಾಮಲೈ ಹೊಸ ಪ್ರಾದೇಶಿಕ ಪಕ್ಷದೊಂದಿಗೆ ಎಂಟ್ರಿ ನೀಡಿದರೆ ಏನಾಗಬಹುದು? ಮೂರನೇ ಶಕ್ತಿಯ ಉದಯ ಆಗಬಹುದೆಂದು ರಾಜಕೀಯ ವಿಶ್ಲೇಷಕರು ಲೆಕ್ಕ ಹಾಕುತ್ತಿದ್ದಾರೆ.


Click it and Unblock the Notifications
