ಸಿಎಂ ಆಗುತ್ತಿದ್ದಂತೆ ಜೋಸೆಫ್ ವಿಜಯ್ಗೆ ಅಗ್ನಿ ಪರೀಕ್ಷೆ; ಕರ್ನಾಟಕದ ಮೇಕೆದಾಟು ಯೋಜನೆ ನಿಲ್ಲಿಸ್ತಾರಾ?
ಮೇಕೆದಾಟು ಯೋಜನೆ ಕರ್ನಾಟಕದ ಅಗತ್ಯ ಹಾಗೂ ಕನಸು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದಕ್ಕೆ ಮೇಕೆದಾಟು ಯೋಜನೆ ಅತ್ಯಗತ್ಯ. ಆದರೆ, ಕೆಲವು ವರ್ಷಗಳಿಂದ ಇಲ್ಲಿ ಆಣೆಕಟ್ಟು ಕಟ್ಟುವ ವಿಚಾರಕ್ಕೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾನೂನು ಸಮರ ನಡೆಯುತ್ತಲೇ ಇದೆ.
ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. 2025ರ ನವೆಂಬರ್ನಲ್ಲಿ ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಬೆನ್ನಲ್ಲೇ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಅದನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮೇಕೆದಾಟು ಆಣೆಕಟ್ಟು ಕಟ್ಟಲು ಭೂಮಿ ಪೂಜೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಹೋರಾಟ ಹೊಸದೇನು ಅಲ್ಲ. ಇದನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದೇ ಹೆಚ್ಚು. ಜಯಲಲಿತಾ, ಕರುಣಾನಿಧಿ ಅಧಿಕಾರದಲ್ಲಿ ಇದ್ದಾಗ ಕಾವೇರಿ ಹೋರಾಟ ತೀವ್ರ ಮಟ್ಟದಲ್ಲಿ ಇತ್ತು. ಈಗ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದ್ದು, ಮತ್ತೆ ಕಿಚ್ಚು ಹಚ್ಚಿದೆ. ಆದರೆ, ಈ ಬಾರಿ ಎಲ್ಲರ ಕಣ್ಣು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೆಟ್ಟಿದೆ.
ಸಿನಿಮಾದಲ್ಲಿ ಹೀರೋ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಡಿದ್ದು, ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಸುಲಭ. ಅದೇ ಸಿಎಂ ಅಧಿಕಾರ ವಹಿಸಿಕೊಂಡ ಮೇಲೆ ತನಗೆ ಎದುರಾಗಿರುವ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಅನ್ನೋದನ್ನು ತಮಿಳಿಗರು ಎದುರು ನೋಡುತ್ತಿದ್ದಾರೆ. ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎದುರಾಗಿರುವ ಮೊದಲ ಸವಾಲು ಇದು.
ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. "ಮೇಕೆದಾಟು ಯೋಜನೆ ನಿಲ್ಲಿಸುವ ಹಕ್ಕು ತಮಿಳುನಾಡು ಸರ್ಕಾರಕ್ಕೆ ಇಲ್ಲ" ಎಂದ ಡಿಕೆಶಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಮೇಕೆದಾಟು ಯೋಜನೆಗಾಗಿ ಈಗಾಗಲೇ ನಾವು ಡಿಪಿಆರ್ ಸಿದ್ಧ ಮಾಡಿದ್ದೇವೆ. ಜಮೀನುಗಳನ್ನು ಗುರುತಿಸಿದ್ದು, ಹೊಸ ಡಿಪಿಆರ್ ನೀಡಲಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬಳಿಕ ಭೂಮಿ ಪೂಜೆ ಮಾಡುತ್ತೇವೆ ಎಂದಿರೋದು ವಿಜಯ್ ಟೆನ್ಷನ್ ಅನ್ನು ದುಪ್ಪಟ್ಟು ಮಾಡಿದೆ.

ವಿಜಯ್ಗೆ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ ಅನ್ನೋದನ್ನು ಅನ್ನೋ ಸಂದೇಶವನ್ನು ರವಾನೆ ಮಾಡಿದ್ದಾರೆ. ಅಲ್ಲದೇ ಕಾನೂನು ಸಮರವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆಂದು ವರದಿಯಾಗಿದೆ. ಆದರೆ, ವಿಜಯ್ ಅಂದಕೊಂಡಷ್ಟು ಸುಲಭವಿಲ್ಲ. ಒಂದು ವೇಳೆ ಕರ್ನಾಟಕ ಶೀಘ್ರದಲ್ಲಿಯೇ ಮೇಕೆದಾಟು ಯೋಜನೆ ಆರಂಭಿಸಿದರೆ, ವಿಜಯ್ ಸಂಕಷ್ಟಕ್ಕೆ ಸಿಲುಕಬಹುದು.
ಕಾವೇರಿ ನೀರಿನ ಸಮಸ್ಯೆ ತೀರಾ ಸೂಕ್ಷ್ಮ ವಿಷಯವಾಗಿರುವುದರಿಂದ ವಿರೋಧ ಪಕ್ಷಗಳು ವಿಜಯ್ ವಿರುದ್ಧ ಸಮರ ಸಾರಲಿದ್ದಾರೆ. ಒಂದು ಕಡೆ ಕಾನೂನು ಹೋರಾಟ, ಇನ್ನೊಂದು ಕಡೆ ವಿರೋಧ ಪಕ್ಷಗಳ ಟೀಕೆ ಇವುಗಳನ್ನು ಸಮರ್ಥವಾಗಿ ಎದುರಿಸಬಲ್ಲರೇ? ಅನಾನುಭವಿ ವಿಜಯ್ ಮೇಕೆದಾಟು ಯೋಜನೆಯನ್ನು ತಡೆಯುವಲ್ಲಿ ಮಾಸ್ಟರ್ ಪ್ಲಾನ್ ಮಾಡುತ್ತಾರಾ? ಮೊದಲ ರಾಜಕೀಯ ಸವಾಲನ್ನು ಹೇಗೆ ಎದುರಿಸಬಲ್ಲರು ಅನ್ನೋ ಕುತೂಹಲವಿದೆ.
ಇತ್ತ ಜೋಸೆಫ್ ವಿಜಯ್ ಮೊದಲ ಹೆಜ್ಜೆಯಾಗಿ ಪ್ರಧಾನಿ ಮೋದಿಗೆ ಈ ಮೇಕೆದಾಟು ಯೋಜನೆ ಡಿಪಿಆರ್ ಅನ್ನು ತಿರಸ್ಕರಿಸುವಂತೆ ಪತ್ರವನ್ನು ಬರೆದಿದ್ದಾರೆ. ಜೀವನೋಪಾಯಕ್ಕಾಗಿ ಕಾವೇರಿ ನದಿಯನ್ನೇ ನಂಬಿಕೊಂಡಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ಭಾರಿ ಆತಂಕ ಮೂಡಿಸಿದೆ ಎಂದು ಪತ್ರದಲ್ಲಿ ವಿಜಯ್ ಬರೆದಿದ್ದು, ಈ ಯೋಜನೆಯೀಗ ಪ್ರಧಾನಿ ಮೋದಿ ಅಂಗಳಕ್ಕೆ ಬಂದು ಬಿದ್ದಿದೆ.


Click it and Unblock the Notifications