"ವಿಡಿಯೋ ಕಾನ್ಫರೆನ್ಸ್ ಅನುಮತಿ ನೀಡಲು ಸಾಧ್ಯವಿಲ್ಲ" ಸಿಎಂ ವಿಜಯ್-ಸಂಗೀತ ವಿಚ್ಛೇದನ ವಿಚಾರಣೆ ಮುಂದೂಡಿಕೆ
ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಕ್ರಾಂತಿ ಮಾಡಿದ್ದೇನೋ ನಿಜ. ಆದರೆ, ಅವರ ವೈಯಕ್ತಿಕ ಜೀವನ ಬೀದಿಗೆ ಬಂದಿದೆ. ವಿಜಯ್ ಹಾಗೂ ಪತ್ನಿ ಸಂಗೀತಾ ನಡುವಿನ ಸಂಬಂಧ ಚೆನ್ನಾಗಿಲ್ಲ. ವಿಜಯ್ ಚುನಾವಣೆಗೆ ನಿಲ್ಲುವುದಕ್ಕೂ ಮುನ್ನವೇ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲಿಂದಲೂ ಇವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಲೇ ಇದೆ.
ತಮಿಳುನಾಡು ರಾಜಕೀಯದಲ್ಲಿ ಟಿವಿಕೆ (TVK) ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ವಿಜಯ್ ತೀವ್ರ ಸಂಚಲನ ಸೃಷ್ಟಿಸಿದ್ದಾರೆ. ಯುವ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಹೇಗೆ ಮುನ್ನಡೆಸುತ್ತಾರೆ ಅಂತ ಅಲ್ಲಿನ ಜನರೇ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ಸನ್ನಿದಾನಕ್ಕೆ ಆಗಮಿಸಿ ಬೆಳ್ಳಿ ಖಡ್ಗವನ್ನು ನೀಡಿದ್ದರು. ಅಲ್ಲಿಂದ ಹೊಸದೊಂದು ಸುದ್ದಿ ಹರಿದಾಡುವುದಕ್ಕೆ ಶುರುವಾಗಿತ್ತು.

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಬಳಿಕ ಸಿಎಂ ವಿಜಯ್ ಹಾಗೂ ಸಂಗೀತಾ ಮತ್ತೆ ಒಂದಾಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು (ಆಗಸ್ಟ್ 15) ಇವರಿಬ್ಬರ ವಿಚ್ಛೇದನದ ಅರ್ಜಿ ವಿಚಾರಣೆ ಇತ್ತು. ಈ ವೇಳೆ ಉಭಯ ಪಕ್ಷಗಳ ವಕೀಲರ ವಿನಂತಿಯೊಂದನ್ನು ನ್ಯಾಯಾಲಯ ತಿರಸ್ಕರಿಸಿದೆ. ವಿಜಯ್ ಹಾಗೂ ಪತ್ನಿ ಸಂಗೀತ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ.
ವಿಚ್ಛೇದನ ಕೋರಿ ಅರ್ಜಿ
ವಿಜಯ್ ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಕಳೆದ ವರ್ಷ ಅಂದರೆ, 2025, ಡಿಸೆಂಬರ್ 24ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಂಗೀತಾ ಅವರು ಸಲ್ಲಿಸಿದ ಅರ್ಜಿಯಲ್ಲಿ ಕೇವಲ ವಿಚ್ಛೇದನ ಮಾತ್ರವಲ್ಲದೆ, ತಮಗೆ ಕಾನೂನುಬದ್ಧವಾಗಿ ಶಾಶ್ವತ ಜೀವನಾಂಶ (Permanent Alimony) ಕೊಡಿಸಬೇಕು ಎಂದೂ ನ್ಯಾಯಾಲಯವನ್ನು ಕೋರಿದ್ದರು.
ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ
ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ 2026, ಫೆಬ್ರವರಿ 26ರಂದು ಮೊದಲ ಬಾರಿ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಮುಂದಿನ ಕಾನೂನು ಕ್ರಮಗಳಿಗಾಗಿ ಚೆಂಗಲ್ಪಟ್ಟುವಿನ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶಿಸಿತ್ತು. ಆ ಬಳಿಕ ಮುಂದಿನ ವಿಚಾರಣೆಯನ್ನು ಇಂದು (ಜೂನ್ 15) ನಿಗದಿಪಡಿಸಲಾಗಿತ್ತು.
ಆನ್ಲೈನ್ ವಿಚಾರಣೆಗೆ ಕೋರ್ಟ್ ನಿರಾಕರಣೆ
ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು (ಜೂನ್ 15) ವಿಚಾರಣೆ ಆರಂಭವಾಗುತ್ತಿದ್ದಂತೆ, ಸಿಎಂ ವಿಜಯ್ ಹಾಗೂ ಸಂಗೀತಾ ಪರ ವಕೀಲರು ನ್ಯಾಯಾಧೀಶರಿಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದರು. ಪ್ರಕರಣದ ಸೂಕ್ಷ್ಮತೆ ಹಾಗೂ ಇನ್ನಿತರ ಕಾರಣಗಳಿಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಬ್ಬರೂ ಭಾಗವಹಿಸುವುದಕ್ಕೆ ಅನುಮತಿಯನ್ನು ನೀಡಬೇಕೆಂದು ಕೋರಿಕೊಂಡಿದ್ದರು. ಆದರೆ, ಅದನ್ನು ನ್ಯಾಯಾಧೀಶಯರು ತಿರಸ್ಕರಿಸಿದ್ದಾರೆ.

ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದೇಕೆ?
ಹೈ-ಪ್ರೊಪೈಲ್ ಕೇಸ್ ಆಗಿದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ವಕೀಲರು ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ಸದ್ಯಕ್ಕೆ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡುವುದಕ್ಕೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳು ಲಭ್ಯವಿಲ್ಲ. ಆದ್ದರಿಂದ ಆನ್ಲೈನ್ ಕಲಾಪಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಂದಿನ ವಿಚಾರಣೆ ಆಗಸ್ಟ್ 7ಕ್ಕೆ
ಆನ್ಲೈನ್ ವಿಚಾರಣೆಯ ವಿನಂತಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ಬಳಿಕ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದ್ದಾರೆ. ಅಂದಿನ ವಿಚಾರಣೆಯಲ್ಲಿ ಎರಡೂ ಕಡೆಯ ವಕೀಲರು ಯಾವ ರೀತಿಯ ವಾದ ಮಂಡಿಸಲಿದ್ದಾರೆ? ಏನೆಲ್ಲ ದೋಷಾರೋಪವನ್ನು ಮಾಡುತ್ತಾರೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications
