ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮುನ್ನವೇ ನಿರ್ದೇಶಕನ ಸಾವು
ತಮ್ಮ ನಿರ್ದೇಶನದ ಮೊದಲ ಸಿನಿಮಾ 'ಉಡುಕ್ಕೈ' ತೆರೆಕಾಣುವುದನ್ನು ನೋಡುವ ಮೊದಲೇ ತಮಿಳು ನಿರ್ದೇಶಕ ಬಾಲಮಿತ್ರನ್ ನಿಧನರಾಗಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
Recommended Video
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ 'ಉಡುಕ್ಕೈ'ನ ಚಿತ್ರೀಕರಣ ಪೂರ್ಣಗೊಳಿಸಿದ್ದ ಅವರು, ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದ್ದರು. ಕೊರೊನಾ ವೈರಸ್ ಕಾರಣದಿಂದ ಅವರ ಸಿನಿಮಾ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು.
ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರನ್ನು ವಡಪಳನಿ ಎಂಬಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಕಟ್ಟಂಕುಲತೂರ್ನಲ್ಲಿನ ಎಸ್ಆರ್ಎಂ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅವರ ಚಿಕಿತ್ಸೆಗೆ ನಿರ್ದೇಶಕರ ಒಕ್ಕೂಟ ಹಣಕಾಸಿನ ನೆರವು ನೀಡಿತ್ತು.

ಅವರ ಚಿತ್ರದ ಶೇ 95ರಷ್ಟು ಕಾರ್ಯ ಮುಗಿದಿತ್ತು. ತಮ್ಮ ಮೊದಲ ಸಿನಿಮಾ ಇನ್ನೂ ಪೂರ್ಣಗೊಳ್ಳದ ಕಾರಣ ಅವರು ಒತ್ತಡಕ್ಕೆ ಒಳಗಾಗಿದ್ದರು. ಅದರಿಂದಾಗಿ ಅವರಿಗೆ ಪಾರ್ಶ್ವವಾಯು ತಗುಲಿತ್ತು ಎನ್ನಲಾಗಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.
ಉಡುಕ್ಕೈ ಚಿತ್ರದಲ್ಲಿ ವಿಪಿನ್, ಉಮರ್, ಸಂಜನಾ ಸಿಂಗ್, ಅಂಕಿತಾ, ವಲೀನಾ, ಲಕ್ಷ್ಮಿ ಮುಂತಾದವರು ನಟಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ವೆಂಕಟ್ ಪಕ್ಕರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ನಿರ್ದೇಶನದ '4ಜಿ' ಚಿತ್ರ ಬಿಡುಗಡೆಗೆ ಬಾಕಿ ಇದೆ.


Click it and Unblock the Notifications











