ಪ್ರಯತ್ನಗಳೆಲ್ಲವೂ ವ್ಯರ್ಥ; ಕೋರ್ಟ್ನಿಂದ ಧನುಷ್-ಐಶ್ವರ್ಯಾ ವಿಚ್ಚೇದನ
ತಮಿಳು ಚಿತ್ರರಂಗದಲ್ಲಿ ಧನುಷ್ ಹೆಸರು ಕಳೆದ ಕೆಲವು ತಿಂಗಳಿನಿಂದ ಚರ್ಚೆಯಲ್ಲಿದೆ. ಇತ್ತೀಚೆಗೆ ನಯನತಾರಾ ವಿಚಾರವಾಗಿ ಧನುಷ್ ಸುದ್ದಿಯಲ್ಲಿ ಇದ್ದರು. ಈಗ ಮತ್ತೆ ಅವರ ಡಿವೊರ್ಸ್ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು ಪ್ರೀತಿಸಿ ಮದುವೆಯಾಗಿದ್ದ ಧನುಷ್ 20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಧನುಷ್ ಹಾಗೂ ಐಶ್ವರ್ಯಾ ದಾಂಪತ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ವೈಮನಸ್ಸು ಮೂಡಿತ್ತು. ಅದನ್ನು ಸರಿಪಡಿಸಿಕೊಂಡು ಹೋಗುವುದಕ್ಕೆ ಶತಪ್ರಯತ್ನಗಳು ನಡೆದಿದ್ದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲವು ತಿಂಗಳ ಹಿಂದೆಯೇ ಬೇರೆಯಾಗುತ್ತಿರುವುದಾಗಿ ತಮ್ಮ ಅಭಿಮಾನಿಗಳು ಮಾಹಿತಿ ನೀಡಿದ್ದರು.

ಈ ಜೋಡಿ ಬೇರೆಯಾಗುತ್ತಿದ್ದೇವೆ ಎಂದು ಹೇಳುತ್ತಿದ್ದಂತೆ ಇವರಿಬ್ಬರನ್ನು ಒಂದು ಮಾಡುವ ಕೆಲಸ ನಡೆಯುತ್ತಿತ್ತು ಎನ್ನಲಾಗಿತ್ತು. ಮಗಳಿಗಾಗಿ ಸ್ವತ: ಸೂಪರ್ಸ್ಟಾರ್ ರಜನಿಕಾಂತ್ ಅಖಾಡಕ್ಕೆ ಇಳಿದಿದ್ದರು ಎನ್ನಲಾಗಿದೆ. ಆದರೆ, ಅದ್ಯಾವುದೂ ವರ್ಕ್ಔಟ್ ಆದಂತೆ ಕಾಣುತ್ತಿಲ್ಲ. ಈಗ ಕೋರ್ಟ್ ಅಧಿಕೃತವಾಗಿ ಧನುಷ್ ಹಾಗೂ ಐಶ್ವರ್ಯಾಗೆ ವಿಚ್ಛೇದನ ನೀಡಿದೆ.
ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು ಧನುಷ್ ಪ್ರೀತಿ ಮದುವೆಯಾಗಿದ್ದರು. 2004ರಲ್ಲಿ ಈ ಜೋಡಿ ಎರಡೂ ಕುಟುಂಬದ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಿತ್ರರಂಗದ ಗಣ್ಯರು ಆಗಮಿಸಿ ಈ ಜೋಡಿಯನ್ನು ಆಶೀರ್ವದಿಸಿದ್ದರು. ಇವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಸದ್ಯ ಮಕ್ಕಳು ತಾಯಿ ಐಶ್ವರ್ಯಾ ಅವರ ಜೊತೆಯಲ್ಲಿ ಇದ್ದಾರೆ ಎನ್ನಲಾಗಿದೆ.
ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಕಾನೂನಾತ್ಮಕವಾಗಿ ಬೇರೆಯಾಗುವುದಕ್ಕೆ ನಿರ್ಧರಿಸಿದ್ದರು. ಅದರಂತೆ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಅಧಿಕೃತವಾಗಿ ಡಿವೋರ್ಸ್ ಸಿಕ್ಕಿರುವ ಬಗ್ಗೆ ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಈ ಜೋಡಿ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಕ್ಕೆ ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ, ರಜನಿಕಾಂತ್ ಹಾಗೂ ಧನುಷ್ ಕುಟುಂಬ ಇಬ್ಬರನ್ನೂ ಒಲೈಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ, ಯಾರ ಮಾತಿನಿಂದಲೂ ಇಬ್ಬರೂ ಒಂದಾಗುವ ಸಾಧ್ಯತೆಯಿರಲಿಲ್ಲ. ಹೀಗಾಗಿ ಅಧಿಕೃತವಾಗಿ ಕೋರ್ಟ್ನಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಧನುಷ್ ಹಾಗೂ ಐಶ್ವರ್ಯಾ ಒಂದಾಗುತ್ತಾರೆ ಎನ್ನುವ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಕಳೆದ 20 ವರ್ಷಗಳಲ್ಲಿ ಧನುಷ್ ಏಳಿಗೆಗೆ ಐಶ್ವರ್ಯಾ ರಜನಿಕಾಂತ್ ಶ್ರಮಿಸಿದ್ದರು. ಅವರು ಸಿನಿಮಾಗಳ ಆಯ್ಕೆಯಲ್ಲಿ ಸಲಹೆ ನೀಡುತ್ತಿದ್ದರು. ಅವರ ಕಾಸ್ಟ್ಯೂಮ್ ಅನ್ನು ಡಿಸೈಡ್ ಮಾಡುತ್ತಿದ್ದರು. ಜೊತೆಗೆ ವೇದಿಕೆಗಳಲ್ಲಿ ಏನು ಮಾತಾಡಬೇಕು ಅನ್ನೋದನ್ನು ಮೊದಲ ಹೇಳಿಕೊಡುತ್ತಿದ್ದರು ಎನ್ನಲಾಗಿದೆ. ಹಾಗೇ ಧನುಷ್ ಕೂಡ ಐಶ್ವರ್ಯಾ ವೃತ್ತಿ ಬದುಕಿಗೆ ನೆರವಾಗಿದ್ದರು. ಅವರು ನಿರ್ದೇಶಿಸಿದ '3' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಸಿನಿಮಾರಂಗದಲ್ಲಿ ಐಶ್ವರ್ಯಾ ಬೆಳೆಯುವುದಕ್ಕೆ ನೆರವು ನೀಡಿದ್ದರು ಎಂದು ಹೇಳಲಾಗುತ್ತಿದೆ.
ಧನುಷ್ ಚಿತ್ರರಂಗಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಕೆಲವು ವರ್ಷ ಡೇಟಿಂಗ್ ಕೂಡ ಮಾಡಿದ್ದರು. ಈ ವಿಷಯ ರಜನಿಕಾಂತ್ಗೆ ಮುಟ್ಟಿದ ಬಳಿಕ ಖುದ್ದಾಗಿ ಸೂಪರ್ಸ್ಟಾರ್ ಮುಂದೆ ನಿಂತು ಧನುಷ್ ಹಾಗೂ ಐಶ್ವರ್ಯಾ ಮದುವೆ ಮಾಡಿಸಿದ್ದರು. ಆಗ ತಾನೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ಧನುಷ್ಗೆ ಐಶ್ವರ್ಯಾ ಮೇಲೆ ಪ್ರೀತಿ ಮೂಡಿದ್ದು ಹೇಗೆ ಅಂತ ಕಾಲಿವುಡ್ ಕೂಡ ಅಚ್ಚರಿ ಪಟ್ಟಿತ್ತು. ಈ ಜೋಡಿ ಈಗ ಬೇರೆಯಾಗಿದ್ದು ವೃತ್ತಿ ಜೀವನದಲ್ಲಿ ತಮ್ಮ ದಾರಿಯನ್ನು ಹಿಡಿದಿವೆ. ಧನುಷ್ ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದರೆ, ಐಶ್ವರ್ಯಾ ಕೂಡ 'ಲಾಲ್ ಸಲಾಂ' ಮತ್ತೊಂದು ಸಿನಿಮಾ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











