Nayanthara-Dhanush Controversy:8 ವರ್ಷದ ಹಿಂದೆ ನಯನತಾರಾ ಕೊಟ್ಟ ಹೇಳಿಕೆನೇ ಈ ದ್ವೇಷಕ್ಕೆ ಕಾರಣ ಆಯ್ತಾ?
ನೇರ ನುಡಿಯ ನಟಿ ನಯನತಾರಾ ಇತ್ತೀಚೆಗೆ ಧನುಷ್ ವಿರುದ್ಧ ಬಹಿರಂಗ ಪತ್ರವನ್ನು ಬರೆದಿದ್ದರು. ಇದು ತಮಿಳುನಾಡು ಅಷ್ಟೇ ಅಲ್ಲ ಭಾರತದಾದ್ಯಂತ ಸಂಚಲನ ಸೃಷ್ಟಿಸಿತ್ತು. ಇವರಿಬ್ಬರ ನಡುವಿನ ವೈಮನಸ್ಸು ಹೊರಬೀಳುತ್ತಿದ್ದಂತೆ ಒಂದೊಂದು ಕಥೆಗಳು ಹೊರಬರುವುದಕ್ಕೆ ಶುರುವಾಗಿದೆ. ಈ ಜೋಡಿಯ ಕಿತ್ತಾಟ ಎರಡು ವರ್ಷದ ಹಿಂದಿನದಲ್ಲ ಅನ್ನೋದನ್ನು ಸಾಬೀತಾಗುತ್ತಿದೆ.
ನಯನತಾರಾ ಪತ್ರದಲ್ಲಿ ಹೇಳಿಕೊಂಡಂತೆ ಸಿನಿಮಾ ಹಿನ್ನೆಲೆಯೇ ಇಲ್ಲದೆ ಚಿತ್ರರಂಗದಲ್ಲಿ ಬೆಳೆದು ಬಂದ ನಟಿ. ಚಿಕ್ಕದೊಂದು ಪಾತ್ರದಿಂದ ಲೇಡಿ ಸೂಪರ್ಸ್ಟಾರ್ ಆಗಿ ಇಲ್ಲಿವರೆಗೂ ಬೆಳೆದು ನಿಂತಿದ್ದಾರೆ. ವೃತ್ತಿಯಲ್ಲಿ ಹಾಗೂ ವೈಯಕ್ತಿಕವಾಗಿ ಎರಡರಲ್ಲೂ ಏರಿಳಿತಗಳನ್ನು ಕಂಡಿದ್ದಾರೆ. ಪ್ರೀತಿಯ ವಿಚಾರದಲ್ಲಿ ಮೋಸನೂ ಹೋಗಿದ್ದರು. 7 ವರ್ಷಗಳ ಕಾಲ ಪ್ರೀತಿ ನಿರ್ದೇಶಕ ವಿಘ್ನೇಶ್ ಶಿವನ್ ರನ್ನು ಪ್ರೀತಿಸಿ, ಎರಡು ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಹಾಗೂ ಸಿನಿಮಾ ಜರ್ನಿಯನ್ನು ನೆಟ್ಫ್ಲಿಕ್ಸ್ ಸಾಕ್ಷಚಿತ್ರವನ್ನಾಗಿ ನಿರ್ಮಿಸಿ ಪ್ರಸಾರ ಮಾಡುವುದಕ್ಕೆ ಮುಂದಾಗಿತ್ತು. ಆ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದ್ದ 'ನಾನುಂ ರೌಡಿ ಧನ್' ಸಿನಿಮಾದ ಹಾಡುಗಳು ಹಾಗೂ ದೃಶ್ಯವನ್ನು ಬಳಸಿಕೊಳ್ಳುವಂತೆ ಧನುಷ್ ಬಳಿ ಮನವಿ ಮಾಡಿದ್ದರು. ಆದರೆ, ಧನುಷ್ ನಿರಾಕರಿಸಿದ್ದರು. ಹೀಗಾಗಿ 3 ಸೆಕೆಂಡ್ಗಳ ತೆರೆಯ ಹಿಂದಿನ ದೃಶ್ಯವನ್ನು ಬಳಸಿದ್ದಕ್ಕೆ 10 ಕೋಟಿ ರೂಪಾಯಿ ಕೇಳಿ ನೋಟೀಸ್ ಕಳುಹಿಸಿದ್ದರು. ಅದಕ್ಕೆ ನಯನತಾರಾ ಕೋಪಗೊಂಡು ಬಹಿರಂಗ ಪತ್ರ ಬರೆದಿದ್ದರು. ಇಲ್ಲಿಂದ ನಯನತಾರಾ ಹಾಗೂ ಧನುಷ್ ನಡುವಿನ ವೈಮನಸ್ಸಿನ ಗುಟ್ಟು ಹೊರಬಿದ್ದಿತ್ತು.
ಅಸಲಿಗೆ ಧನುಷ್ ವಿರುದ್ಧ ನಯನತಾರಾ ತಿರುಗಿ ಬೀಳುವುದಕ್ಕೆ ಇದೊಂದೇ ಕಾರಣವೇ? ಈ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಈಗ ಒಂದೊಂದು ಸಂಗತಿಗಳು ಹೊರಬೀಳುತ್ತಿವೆ. 'ನಾನುಂ ರೌಡಿ ಧನ್' ಸಿನಿಮಾ ಬಿಡುಗಡೆ ವೇಳೆನೇ ನಯನತಾರಾ ಹಾಗೂ ಧನುಷ್ ಸ್ನೇಹದಲ್ಲಿ ಒಡಕು ಮೂಡಿತ್ತು. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಹೇಳಲಾಗಿದೆ. ಮೊದಲನೆಯದ್ದು, ಇದೇ ಸಿನಿಮಾದ ನಟನೆಗೆ ಪ್ರಶಸ್ತಿ ಪಡೆದ ವೇಳೆ ವೇದಿಕೆ ಮೇಲೆ ನಯನತಾರಾ ಆಡಿದ ಮಾತು.

ಹೌದು, ನಯನತಾರಾಗೆ 'ನಾನುಂ ರೌಡಿ ಧನ್' ದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ಆ ವೇಳೆ ವೇದಿಕೆ ಮೇಲೆ ನಯನತಾರಾ ಅದೇ ಸಿನಿಮಾದ ನಿರ್ಮಾಪಕರಾಗಿದ್ದ ಧನುಷ್ ಬಗ್ಗೆ ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಅದೇ ಹೇಳಿಕೆ ಇಂದಿನ ಕಿತ್ತಾಟಕ್ಕೆ ಪ್ರಮುಖ ಕಾರಣ ಅನ್ನುವ ಅಭಿಪ್ರಾಯ ಎಲ್ಲಾ ಕಡೆಗಳಿಂದ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಏನು ಹೇಳಿದ್ದರು ಅನ್ನೋದನ್ನು ನೋಡುವುದಾದರೇ..
"ನಾನುಂ ರೌಡಿ ಧನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಕ್ಕೆ ಧನುಷ್ಗೆ ಧನ್ಯವಾದಗಳು. ಹಾಗೇ ನಾನು ಅವರಿಗೆ ಕ್ಷಮೆಯನ್ನೂ ಕೇಳಬೇಕಿದೆ. ನಾನುಂ ರೌಡಿ ಧನ್ ಸಿನಿಮಾದಲ್ಲಿ ನನ್ನ ನಟನೆಯನ್ನು ಅವರು ದ್ವೇಷ ಮಾಡಿದ್ದರು. ನನ್ನ ನಟನೆಯಿಂದ ನಿಮ್ಮನ್ನು ನಿರಾಸೆ ಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಮುಂದಿನ ಸಾರಿ ನಾನು ಇನ್ನೂ ಅದ್ಭುತವಾಗಿ ನಟಿಸುತ್ತೇನೆ." ಎಂದು ಹೇಳಿದ್ದರು. ಇದು ಧನುಷ್ಗೆ ಅವಮಾನ ಆದಂತೆ ಆಗಿತ್ತು ಎನ್ನಲಾಗಿದೆ.
ಇನ್ನು ನಯನತಾರಾ ಇದೇ ವಿಷಯವನ್ನು ಇಟ್ಟುಕೊಂಡು ಬರೆದ ಬಹಿರಂಗ ಪತ್ರದಲ್ಲಿ ಬರೆದಿದ್ದರು " ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದಾಗ ನಿಮಗೆ ಸಿಕ್ಕಾಪಟ್ಟೆ ಬೇಸರ ಆಗಿತ್ತು ಅನ್ನೋದನ್ನು ಸಿನಿಮಾ ಸರ್ಕಲ್ನಿಂದ ತಿಳಿಕೊಂಡಿದ್ದೇನೆ" ಎಂದಿದ್ದರು. ಇನ್ನೊಂದು ಕಡೆ ಧನುಷ್ಗೆ ಈ ಸಿನಿಮಾಗಾಗಿ 10 ಕೋಟಿ ರೂಪಾಯಿ ಹೆಚ್ಚು ಖರ್ಚು ಮಾಡಿಸಿದ್ದರು. ಅದರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











