ನಿರ್ಮಾಪಕರಿಗೆ ಈ ಚಿತ್ರದ ಸಂಪೂರ್ಣ ಸಂಭಾವನೆ ವಾಪಸ್ ನೀಡಿದ್ದಾರಂತೆ ರಜನಿಕಾಂತ್!
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ರಜನಿಕಾಂತ್ ಒಬ್ಬರು. ಸರಾಸರಿ 30 ಕೋಟಿ ರೂ ಸಂಭಾವನೆ ಪಡೆದುಕೊಳ್ಳುವ ರಜನಿ, ಅದನ್ನು 40 ಕೋಟಿಯವರೆಗೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅವರ ಬಹುನಿರೀಕ್ಷಿತ ಚಿತ್ರಕ್ಕೆ ಪಡೆದಿರುವ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಜನಿಕಾಂತ್ ನಟನೆಯ 'ಅನ್ನಾತೆ' ಚಿತ್ರ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅದು ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗುತ್ತಿದೆ. ಶಿವ ನಿರ್ದೇಶನದ ಈ ಚಿತ್ರ, ರಜನಿಕಾಂತ್ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುರುಗದಾಸ್ ನಿರ್ದೇಶನದ 'ದರ್ಬಾರ್' ಬಾಕ್ಸಾಫೀಸ್ನಲ್ಲಿ ಸೋಲು ಕಂಡಿದ್ದರಿಂದ ಈ ಸಿನಿಮಾ ಗೆಲ್ಲಲೇಬೇಕಾದ ಒತ್ತಡ ರಜನಿಕಾಂತ್ ಅವರ ಮೇಲಿದೆ. ಹಾಗೆಯೇ ನಿರ್ದೇಶಕ ಶಿವ ಅವರ ಮೇಲೆಯೂ ಜವಾಬ್ದಾರಿಗಳು ಹೆಚ್ಚಿವೆ. ಈ ನಡುವೆ ಈ ಚಿತ್ರದ ನಿರ್ಮಾಪಕರಿಗೆ ರಜನಿಕಾಂತ್ ಸಂಭಾವನೆ ಮೊತ್ತವನ್ನು ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

ನಿರ್ಮಾಪಕರಿಗೆ ನಷ್ಟ
ಕಳೆದ ವರ್ಷದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಸಾಮಾನ್ಯವಾಗಿ ರಜನಿಕಾಂತ್ ಚಿತ್ರಗಳು ನಿಗದಿತ ಅವಧಿಯಲ್ಲಿ ಆರಂಭವಾಗಿ ಅಂದುಕೊಂಡ ಕಾಲಮಿತಿಯೊಳಗೆ ಮುಗಿಯುತ್ತವೆ. ಬಹುಬಜೆಟ್ ಚಿತ್ರವಾಗಿರುವುದರಿಂದ ಚಿತ್ರೀಕರಣ ಚಟುವಟಿಕೆಗಳು ವಿಳಂಬವಾದಷ್ಟೂ ನಿರ್ಮಾಪಕರಿಗೆ ನಷ್ಟ ಎನ್ನುವುದನ್ನು ರಜನಿಕಾಂತ್ ಗಮನದಲ್ಲಿರಿಸಿಕೊಂಡಿರುತ್ತಾರೆ. ಆದರೆ 'ಅನ್ನಾತೆ' ಈಗ ಸಂಕಷ್ಟದಲ್ಲಿದೆ.

ಸಂಭಾವನೆ ಇಳಿಸಲು ಮನವಿ
ಕೊರೊನಾ ವೈರಸ್ ಹಾವಳಿಯಿಂದ ಐದು ತಿಂಗಳಿನಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಮುಂದೆ ಸಿನಿಮಾ ಮತ್ತೆ ಯಾವಾಗ ಶುರುವಾಗುತ್ತದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಮತ್ತಷ್ಟು ನಷ್ಟದ ಭೀತಿಯಲ್ಲಿರುವ ನಿರ್ಮಾಪಕರು ಸಂಭಾವನೆಯನ್ನು ಶೇ 50ರಷ್ಟು ಇಳಿಸಿಕೊಳ್ಳುವಂತೆ ರಜನಿಕಾಂತ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರವೇ ಸ್ಥಗಿತ?
ಇನ್ನೊಂದೆಡೆ 'ಅನ್ನಾತೆ' ಚಿತ್ರವನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ತಮಗೆ ನೀಡಲಾಗಿದ್ದ ಸಂಭಾವನೆಯ ಪೂರ್ತಿ ಮೊತ್ತವನ್ನು ನಿರ್ಮಾಪಕರಿಗೆ ರಜನಿಕಾಂತ್ ವಾಪಸ್ ನೀಡಿದ್ದಾರೆ. ಹೀಗಾಗಿ ಬಹುನಿರೀಕ್ಷಿತ ಚಿತ್ರ 'ಅನ್ನಾತೆ' ಪೂರ್ಣಗೊಳ್ಳುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಸಿನಿಮಾ ಸೋತಾಗ ರಜನಿಕಾಂತ್ ಸಂಭಾವನೆಯ ಕೆಲವು ಭಾಗವನ್ನು ನಿರ್ಮಾಪಕರು ಮತ್ತು ಹಂಚಿಕೆದಾರರಿಗೆ ನೀಡಿದ ಉದಾಹರಣೆಗಳಿವೆ.

ಶೇ 50ರಷ್ಟು ಚಿತ್ರೀಕರಣ
ಇನ್ನು ಕೆಲವು ಮೂಲಗಳು ಈ ವದಂತಿಯನ್ನು ನಿರಾಕರಿಸಿವೆ. ಈಗಾಗಲೇ ಶೇ 50ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ರಜನಿಕಾಂತ್ ಮತ್ತು ನಿರ್ಮಾಪಕರು ಸಂಭಾವನೆಯ ಕುರಿತು ಇನ್ನೂ ಚರ್ಚೆ ಕೂಡ ಮಾಡಿಲ್ಲ. ಪರಿಸ್ಥಿತಿ ಸುಧಾರಿಸಿದ ನಂತರ ಚಿತ್ರೀಕರಣ ಆರಂಭ ಮಾಡೋಣ ಎಂದು ಮಾತುಕತೆ ನಡೆಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬೂ, ಪ್ರಕಾಶ್ ರೈ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











