'ಇಂಡಿಯನ್-2' ವಿಳಂಬವಾಗಲು ಕಮಲ್ ಹಾಸನ್ ಸಹ ಕಾರಣ: ಶಂಕರ್ ಆರೋಪ
ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ 'ಇಂಡಿಯನ್-2' ಅನೇಕ ಕಾರಣದಿಂದ ವಿಳಂಬವಾಗುತ್ತಿದೆ. ಕಮಲ್ ಹಾಸನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇಂಡಿಯನ್-2 ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ ಲೈಕಾ ಪ್ರೊಡಕ್ಷನ್ ಮತ್ತು ನಿರ್ದೇಶಕ ಶಂಕರ್ ನಡುವಿನ ಭಿನ್ನಾಭಿಪ್ರಾಯದಿಂದ ಸಿನಿಮಾ ಅರ್ಧದಲ್ಲೇ ನಿಂತುಹೋಗಿದೆ.
ಇಂಡಿಯನ್-2 ಸಿನಿಮಾ ಮುಗಿಸುವುದರೊಳಗೆ ಮತ್ತೆರಡು ಸಿನಿಮಾ ಅನೌನ್ಸ್ ಮಾಡಿದ ಶಂಕರ್ ವಿರುದ್ಧ ಲೈಕಾ ಸಂಸ್ಥೆ ಹೈ ಕೋರ್ಟ್ ಮೆಟ್ಟಿಲೇರಿತ್ತು. ಶಂಕರ್, ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯ ಚಿತ್ರ ಮತ್ತು ರಣ್ವೀರ್ ಸಿಂಗ್ ಜೊತೆ ಅನ್ನಿಯನ್ ರಿಮೇಕ್ ಮಾಡಲು ಮುಂದಾಗಿದ್ದಾರೆ. ಶಂಕರ್ ಮುಂದಿನ ನಡೆ ನೋಡಿ ಎಚ್ಚೆತ್ತುಕೊಂಡ ಲೈಕಾ ಸಂಸ್ಥೆ ಇಂಡಿಯನ್-2 ಮುಗಿಯುವವರೆಗೂ ಶಂಕರ್ ಬೇರೆ ಸಿನಿಮಾ ಕೈಗೆತ್ತಿಕೊಳ್ಳಬಾರದು ಎಂದು ಕೋರಿ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಶಂಕರ್ ಸಿನಿಮಾ ವಿಳಂಬವಾಗಲು ಕಮಲ್ ಹಾಸನ್ ಮತ್ತು ಲೈಕಾ ಸಂಸ್ಥೆಯೇ ಕಾರಣ ಎಂದು ದೂರಿದ್ದಾರೆ. ಲೈಕಾ ಸಂಸ್ಥೆ ಜುಲೈ ಒಳಗೆ ಸಿನಿಮಾ ಮುಗಿಸಿಕೊಡುವುದಾಗಿ ಕೇಳಿಕೊಂಡಿತ್ತು. ಆದರೆ ಶಂಕರ್ ಅಕ್ಟೋಬರ್ ವರೆಗೂ ಸಮಯ ಕೇಳಿದ್ದಾರೆ. ಚಿತ್ರದಲ್ಲಿ ಇತ್ತೀಚಿಗೆ ನಿಧನಹೊಂದಿದ ನಟ ವಿವೇಕ್ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ವಿವೇಕ್ ಪಾತ್ರವನ್ನು ಮತ್ತೆ ಚಿತ್ರೀಕರಿಸಬೇಕಾಗಿರುವುದಾಗಿ ಶಂಕರ್ ಹೇಳಿದ್ದಾರೆ.

ಇನ್ನು ಚಿತ್ರೀಕರಣ ವಿಳಂಬವಾಗಿರುವುದಕ್ಕೆ ಕಾರಣ ನೀಡಿರುವ ನಿರ್ದೇಶಕ ಶಂಕರ್, ಕಮಲ್ ಹಾಸನ್ ಕೂಡ ಪ್ರಮುಖ ಕಾರಣರಾಗಿದ್ದಾರೆ ಎಂದಿದ್ದಾರೆ. ಮೇಕಪ್ ಅಲರ್ಜಿಯಿಂದ ಕಮಲ್ ಹಾಸನ್ ಚಿತ್ರೀಕರಣ ತಡವಾಗಿದೆ. ಬಳಿಕ ಕ್ರೇನ್ ಅಪಘಾತವಾಗಿ ತಂಡದ ಮೂವರು ನಿಧನ ಹೊಂದಿದ್ದಾರೆ. ಬಳಿಕ ಕೋವಿಡ್ ಕಾರಣದಿಂದ ಚಿತ್ರೀಕರಣವನ್ನು ಮತ್ತಷ್ಟು ಮುಂದೂಡಲಾಗಿದೆ. ಇದರಿಂದ ಆದ ನಷ್ಟಕ್ಕೆ ನಾನು ಜವಾಬ್ದಾರನಲ್ಲ ಎಂದು ಶಂಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸದ್ಯ ಈ ಪ್ರಕರಣದ ವಿಚಾರಣೆಯನ್ನು ಜುನ್ 4ಕ್ಕೆ ಮುಂದೂಡಲಾಗಿದೆ. ಇಂಡಿಯನ್-2 ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ಅನಿರುದ್ಧ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


Click it and Unblock the Notifications











