ಡಿಸೆಂಬರ್ನಿಂದ ಇಂಡಿಯನ್2 ಚಿತ್ರೀಕರಣ ಮುಂದುವರೆಸಲಿರುವ ಶಂಕರ್: ಮುನಿಸು ಮರೆತ ನಿರ್ದೇಶಕ ಶಂಕರ್
ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಮತ್ತು ಕಮಲ್ ಹಾಸನ್ ಸಾರಥ್ಯದ ಬಹು ನಿರೀಕ್ಷಿತ ಸಿನಿಮಾ ಇಂಡಿಯನ್ 2 ಚಿತ್ರ ತಂಡದಿಂದ ಹೊಸ ಸುದ್ದಿ ಒಂದು ಹೊರ ಬಂದಿದೆ. ಇದು ಕಮಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಚಿತ್ರದ ನಿರ್ದೇಶಕ ಶಂಕರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮರಳಿ ಸಿನಿಮಾ ತಂಡ ಸೇರಲು ಶಂಕರ್ ಒಪ್ಪಿದ್ದಾರಂತೆ. ಈ ಸುದ್ದಿ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ.
ಇಂಡಿಯನ್ 2 ಸಿನಿಮಾ ಹಲವು ಕಾರಣಕ್ಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲಿನಿಂದ ಕೂಡ ಒಂದಲ್ಲಾ ಒಂದು ಸಮಸ್ಯೆ ಚಿತ್ರ ತಂಡಕ್ಕೆ ಎದುರಾಗುತ್ತಲೇ ಇದೆ. ಈಗಾಗಲೇ ಸಾಕಷ್ಟು ಬಾರಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ. ಹಾಗಾಗಿ ಸಿನಿಮಾದ ಕೆಲಸಗಳು ತುಂಬಾ ತಡವಾಗುತ್ತಲಿವೆ. ಕೆಲವು ತಿಂಗಳಿನಿಂದ ಚಿತ್ರ ತಂಡಕ್ಕೆ ಕಾನೂನಾತ್ಮಕ ಸಮಸ್ಯೆ ಎದುರಾಗಿದೆ. ಚಿತ್ರದ ನಿರ್ದೇಶಕ ಶಂಕರ್ ಮತ್ತು ನಿರ್ಮಾಣ ಸಂಸ್ಥೆಯ ಲೈಕ ಪ್ರೋಡಕ್ಷನ್ಸ್ ನಡುವಿನ ಭಿನ್ನಾಭಿಪ್ರಾಯ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಸದ್ಯ ಚಿತ್ರದ ಶೂಟಿಂಗ್ ನಿಂತು ಹೋಗಿದೆ.
1996 ರಲ್ಲಿ ತೆರೆಕಂಡ ಇಂಡಿಯನ್ ಚಿತ್ರದ ಮುಂದುವರಿದ ಭಾಗ ಇಂಡಿಯನ್2. ಇಂಡಿಯನ್ ಸಿನಿಮಾ ಸೂಪರ್ ಹಿಟ್ ಆಗಿ ಸಾಲು ಸಾಲು ದಾಖಲೆ ಮಾಡಿತ್ತು. ಕಮಲ್ ಹಾಸನ್ ಸಿನಿಮಾ ಜರ್ನಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಹಾಗಾಗಿಯೇ ಇಂಡಿಯನ್ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಇನ್ನೂ ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಮತ್ತು ಪ್ರಿಯ ಭವಾನಿ ಶಂಕರ್ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ ರವಿಚಂದ್ರನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದೀಗ ನಿರ್ದೇಶಕ ಶಂಕರ್ ಇಂಡಿಯನ್ 2 ಚಿತ್ರ ತಂಡಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಶಂಕರ್ ಮತ್ತೆ ಇಂಡಿಯನ್ 2 ಚಿತ್ರ ತಂಡವನ್ನು ಸೇರಲಿದ್ದಾರೆ. ಶಂಕರ್ ಮತ್ತು ನಿರ್ಮಾಣ ಸಂಸ್ಥೆಯ ನಡುವೆ ಒಮ್ಮತದ ಒಪ್ಪಂದ ಆಗಿದೆ. ಈ ಹೊಸ ಒಪ್ಪಂದದ ಪ್ರಕಾರ ಇಂಡಿಯನ್ 2 ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭ ಆಗಲಿದೆ. ಮಾಹಿತಿಯ ಪ್ರಕಾರ ಇಂಡಿಯನ್ 2 ಚಿತ್ರದ ನೂರು ದಿನದ ಚಿತ್ರೀಕರಣ ಬಾಕಿ ಇದೆ. ಇದನ್ನು ನಿರ್ದೇಶಕ ಶಂಕರ್ ಮಾತ್ರವೇ ಪೂರ್ಣ ಮಾಡಲು ಸಾಧ್ಯ. ಏಕೆಂದರೆ ಮೊದಲು ಬಂದ ಇಂಡಿಯನ್ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರವನ್ನು ಬಹುತೇಕ ಅವರೇ ಮಾಡಿ ಮುಗಿಸಿದ್ದಾರೆ. ಹಾಗಾಗಿ ಬೇರೊಬ್ಬ ನಿರ್ದೇಶಕ ಈ ಚಿತ್ರವನ್ನು ಮುಂದುವರೆಸಲು ಸಾಧ್ಯ ಆಗುವುದಿಲ್ಲ. ಬೇರೆ ನಿರ್ದೇಶಕ ಬಂದರೆ ಸಿನಿಮಾ ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಮತ್ತೆ ನಿರ್ದೇಶಕ ಶಂಕರ್ ಸಿನಿಮಾವನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ತೆರಿಗೆ ಬರುವ ಸಾಧ್ಯತೆ ಇದೆ ಹಾಗಾಗಿ 100 ದಿನದ ಚಿತ್ರೀಕರಣವನ್ನು ಆದಷ್ಟು ಬೇಗ ಮಾಡಲು ತಯಾರಿ ನಡೆಸಲಾಗುತ್ತಿದೆ.

ಇಂಡಿಯನ್2 ಸಿನಿಮಾ ಮುಗಿಸದೆ ಶಂಕರ್ ಹೊಸ ಸಿನಿಮಾ ಮಾಡಬಾರದು ಎಂದು ನಿರ್ಮಾಣ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ಈ ಕೇಸ್ನಲ್ಲಿ ನಿರ್ದೇಶಕ ಶಂಕರ್ ಜಯಗಳಿಸಿದ್ದರು. ಹಾಗಾಗಿ ಶಂಕರ್ ಬೇರೆ ಸಿನಿಮಾಗಳನ್ನು ಪ್ರಕಟ ಮಾಡಿದ್ದಾರೆ. ನಿರ್ದೇಶಕ ಶಂಕರ್ ಇಂಡಿಯನ್ 2 ಸಿನಿಮಾದಿಂದ ಹೊರ ಬಂದ ಬಳಿಕ ರಾಮ್ ಚರಣ್ ತೇಜ ಅವರ ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನು ಕೂಡ ಮಾಡಲಾಗಿದೆ. ರಾಮ್ ಚರಣ್ ಸಿನಿಮಾಗಾಗಿ ಇದೇ ವರ್ಷ ಇನ್ನು ಎರಡು ಹಂತದ ಚಿತ್ರೀಕರಣ ಹಮ್ಮಿ ಕೊಂಡಿದೆ ಚಿತ್ರ ತಂಡ. ಆದರೆ ಡಿಸೆಂಬರ್ನಿಂದ ನಿಂದ ಶಂಕರ್ ಇಂಡಿಯನ್ 2 ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆದರೆ, ರಾಮ್ ಚರಣ್ ಸಿನಿಮಾದ ಶೂಟಿಂಗ್ ತಡ ಆಗಲಿದೆ. ಆದರೆ ರಾಮ್ ಚರಣ್ ಮತ್ತು ಶಂಕರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ತರಲು ನಿರ್ಧರಿಸಲಾಗಿದೆ. ಆದರೆ ಇಂಡಿಯನ್2 ಚಿತ್ರಕ್ಕಾಗಿ ಶಂಕರ್ ಈ ಚಿತ್ರದಿಂದ ಬ್ರೇಕ್ ತೆಗೆದುಕೊಂಡರೆ ಸಿನಿಮಾ ಪೂರ್ಣಗೊಳಿಸುವುದು ಒಂದಷ್ಟು ದಿನಗಳ ಕಾಲ ತಡ ಆಗುವುದು ಖಚಿತ.


Click it and Unblock the Notifications











