ಪ್ರಭಾಕರನ್ಗೆ ಅವಮಾನ ಆರೋಪ: ತಮಿಳಿಗರ ಕ್ಷಮೆ ಕೋರಿದ ನಟ ದುಲ್ಕರ್ ಸಲ್ಮಾನ್
ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಇತ್ತೀಚಿನ ಮಲಯಾಳಂ ಸಿನಿಮಾ 'ವಾರಣೆ ಅವಶ್ಯಮುಂದ್' ಮತ್ತೆ ಸುದ್ದಿಯಲ್ಲಿದೆ. ಆದರೆ ಈಗ ಸುದ್ದಿಯಾಗಿರುವುದು ವಿವಾದದ ಕಾರಣದಿಂದ. ದುಲ್ಕರ್ ಸಲ್ಮಾನ್ ಚೊಚ್ಚಲ ನಿರ್ಮಾಣದ, ಅನೂಪ್ ಸತ್ಯನ್ ನಿರ್ದೇಶನದ 'ವಾರಣೆ ಅವಶ್ಯಮುಂದ್' ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡಿತ್ತು.
Recommended Video
ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈಗ ನೆಟ್ಫ್ಲಿಕ್ಸ್ನಲ್ಲಿಯೂ ಬಿಡುಗಡೆಯಾಗಿದೆ. ಆದರೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ದುಲ್ಕರ್ ಸಲ್ಮಾನ್ ಒಂದಲ್ಲೊಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕೆಲವು ದಿನಗಳ ಹಿಂದೆ ಮುಂಬೈ ಮೂಲದ ಪತ್ರಕರ್ತೆಯೊಬ್ಬರು ದುಲ್ಕರ್ ಸಲ್ಮಾನ್ ವಿರುದ್ಧ ಕಿಡಿಕಾರಿದ್ದರು. ದುಲ್ಕರ್ ಮತ್ತು ಅವರ ತಂಡ ತಮ್ಮ ಅನುಮತಿ ಇಲ್ಲದೆಯೇ ತಮ್ಮ ಚಿತ್ರವನ್ನು ಬಳಸಿಕೊಂಡಿದೆ. ಜತೆಗೆ ಬಾಡಿ ಶೇಮಿಂಗ್ನಂತಹ ಅವಮಾನ ಎಸಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ಕೂಡಲೇ ದುಲ್ಕರ್ ಕ್ಷಮೆ ಕೇಳಿದ್ದರು. ಈಗ ಮತ್ತೊಂದು ಘಟನೆಗೆ ಅವರು ಕ್ಷಮೆ ಕೋರಿದ್ದಾರೆ. ಮುಂದೆ ಓದಿ.

ಹಾಸ್ಯದೃಶ್ಯದ ವಿವಾದ
'ವಾರಣೆ ಅವಶ್ಯಮುಂದ್' ಚಿತ್ರದಲ್ಲಿನ ದೃಶ್ಯವೊಂದಕ್ಕಾಗಿ ದುಲ್ಕರ್ ಸಲ್ಮಾನ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. 'ಪ್ರಭಾಕರ' ಎಂಬ ಹೆಸರಿನಲ್ಲಿ ಬರುವ ಹಾಸ್ಯ ದೃಶ್ಯವೇ ಈ ವಿವಾದದ ಕಿಡಿ ಹೊತ್ತಿರಿಸಿರುವುದು. ಚಿತ್ರದಲ್ಲಿ ಮೇಜರ್ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮುಖ ನಟ ಸುರೇಶ್ ಗೋಪಿ, ತಮ್ಮ ನಾಯಿಯನ್ನು ಪ್ರಭಾಕರ ಎಂದು ಕರೆದಿದ್ದಾರೆ.

ನಾಯಿಗೆ ಪ್ರಭಾಕರನ್ ಹೆಸರು
1988ರಲ್ಲಿ ತೆರೆಕಂಡಿದ್ದ ಮಲಯಾಳಂನ ಹಿಟ್ ಸಿನಿಮಾ 'ಪಟ್ಟಣಪ್ರವೇಶಂ'ನಲ್ಲಿ ನಟ ತಿಲಕನ್ ನಟಿಸಿದ್ದ ಪ್ರಸಿದ್ಧ ಪಾತ್ರವನ್ನು ಈ ಹಾಸ್ಯ ದೃಶ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು. ಆದರೆ ನಾಯಿಯ ಹೆಸರನ್ನು ಪ್ರಭಾಕರ ಎಂದು ಬಳಸಿರುವುದು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಟಿಟಿಇ ಪ್ರಭಾಕರನ್ಗೆ ಅವಮಾನ?
ಚಿತ್ರದಲ್ಲಿ 'ಪ್ರಭಾಕರ' ಎಂದು ಅಪಹಾಸ್ಯವಾಗಿ ಬಳಸಿರುವುದು ಎಲ್ಟಿಟಿಇ ಮುಖ್ಯಸ್ಥ ವೆಲ್ಲುಪಿಳ್ಳೈ ಪ್ರಭಾಕರನ್ ಅವರ ಹೆಸರನ್ನು ಎಂದು ಪರಿಗಣಿಸಿರುವ ಅನೇಕರು ತಮಿಳಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದುಲ್ಕರ್ ಸಲ್ಮಾನ್ ಮತ್ತು ಚಿತ್ರದ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ದುಲ್ಕರ್ ಕುಟುಂಬದ ವಿರುದ್ಧವೂ ಅವಹೇಳನಾಕಾರಿ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಉದ್ದೇಶಪೂರ್ವಕವಾಗಿರುವುದಲ್ಲ
ಇದಕ್ಕೆ ಸ್ಪಷ್ಟೀಕರಣ ನೀಡಿರುವ ದುಲ್ಕರ್ ಸಲ್ಮಾನ್, 'ವಾರಣೆ ಅವಶ್ಯಮುಂದ್ ಚಿತ್ರದ ಪ್ರಭಾಕರ ಜೋಕ್ ತಮಿಳು ಜನರನ್ನು ಅವಮಾನಿಸುವಂತಿದೆ ಎಂಬ ಬಗ್ಗೆ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದಿರುವುದಲ್ಲ' ಎಂದಿದ್ದಾರೆ.

ಪಟ್ಟಣಪ್ರವೇಶಂ ಚಿತ್ರದ ಪಾತ್ರ
'ಈ ಸನ್ನಿವೇಶ ಮಲಯಾಳಂ ಹಾಸ್ಯ ಸಿನಿಮಾ 'ಪಟ್ಟಣಪ್ರವೇಶಂ'ನ ಪ್ರಮುಖ ಪಾತ್ರದ ಪ್ರಭಾಕರ ಹೆಸರಿನಿಂದ ಸ್ಫೂರ್ತಿ ಪಡೆದಿರುವುದು. ಇದು ಕೇರಳದಲ್ಲಿ ಸರ್ವೇಸಾಮಾನ್ಯವಾಗಿರುವ ಮೀಮ್. ಅಷ್ಟೇ ಹೊರತು ಇದು ಯಾವುದೇ ಸತ್ತ ಅಥವಾ ಬದುಕಿರುವ ವ್ಯಕ್ತಿಯನ್ನು ಸಂಬಂಧಿಸಿರುವುದಲ್ಲ, ಇದರ ಬಗ್ಗೆ ಸಿನಿಮಾದ ಆರಂಭದಲ್ಲಿನ ಡಿಸ್ಕ್ಲೈಮರ್ನಲ್ಲಿಯೇ ಹೇಳಿದ್ದೇವೆ' ಎಂದು ತಿಳಿಸಿದ್ದಾರೆ.

ನಮ್ಮ ತಂದೆಯರನ್ನು ಬೈಯುವುದೇಕೆ?
ತಮ್ಮ ಹಾಗೂ ನಿರ್ದೇಶಕರ ಮೇಲೆ ಮಾತ್ರವಲ್ಲದೆ, ತಮ್ಮ ತಂದೆ ಮಮ್ಮೂಟಿ ಹಾಗೂ ನಿರ್ದೇಶಕರ ತಂದೆ ಸತ್ಯನ್ ಅಂತಿಕಾಡ್ ವಿರುದ್ಧವೂ ಕೆಟ್ಟ ಪದಗಳ ನಿಂದನೆ ಕಂಡುಬರುತ್ತಿವೆ. ನನ್ನನ್ನು ಹಾಗೂ ಅನೂಪ್ ಸತ್ಯನ್ ಅವರನ್ನು ದ್ವೇಷಿಸುವುದನ್ನು ಬೇಕಾದರೆ ನಾವು ಸಹಿಸುತ್ತೇವೆ. ಆದರೆ ನಮ್ಮ ತಂದೆಯವರು ಅಥವಾ ಚಿತ್ರದ ಹಿರಿಯ ನಟರನ್ನು ನಿಂದಿಸುವುದನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.
ಇದಕ್ಕಾಗಿ ಕ್ಷಮೆ ಕೋರುತ್ತೇನೆ
'ಈ ದೃಶ್ಯದಿಂದ ಬೇಸರಗೊಂಡಿರುವ ತಮಿಳಿನ ಎಲ್ಲ ಒಳ್ಳೆಯ ಜನರನ್ನು ಕ್ಷಮೆ ಕೋರುತ್ತೇನೆ. ನನ್ನ ಸಿನಿಮಾ ಅಥವಾ ಮಾತುಗಳ ಮೂಲಕ ಯಾರನ್ನೂ ನೋಯಿಸುವ ಉದ್ದೇಶವನ್ನು ನಾನು ಹೊಂದಿರಲಿಲ್ಲ. ಇದು ಖಂಡಿತವಾಗಿಯೂ ತಪ್ಪು ತಿಳಿವಳಿಕೆ' ಎಂದು ದುಲ್ಕರ್ ವಿವರಿಸಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಅವರು 'ಪಟ್ಟಣಪ್ರವೇಶಂ' ಚಿತ್ರದಲ್ಲಿನ ಪ್ರಭಾಕರ ಹೆಸರಿನ ಉಲ್ಲೇಖದ ದೃಶ್ಯವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











