"ನಾನು ಯಾವುದೇ ಸ್ಥಳದಲ್ಲಿ ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ"; ದೇಗುಲ ಪ್ರವೇಶ ನಿರಾಕರಣೆಗೆ ಇಳಯರಾಜ ಸ್ಪಷ್ಟನೆ
ಭಾರತದ ಖ್ಯಾತ ಸಂಗೀತ ಮಾಂತ್ರಿಕ ಇಳಯರಾಜ ಕುರಿತ ಸುದ್ದಿಯೊಂದು ಕೆಲವು ದಿನಗಳ ಹಿಂದಷ್ಟೇ ಹರಿದಾಡಿತ್ತು. ತಮಿಳುನಾಡಿನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಇಳಯರಾಜಗೆ ಅವಮಾನ ಮಾಡಲಾಗಿದೆ ಎಂದು ವರದಿಯಾಗಿತ್ತು. ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಹೋಗಿದ್ದರು. ಆದರೆ, ಇಳಯರಾಜ ಅವರನ್ನು ದೇಗುಲದ ಒಳಗೆ ಬಿಡಲಿಲ್ಲ ಅನ್ನೋ ಸುದ್ದಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಈ ವಿವಾದದ ಬಗ್ಗೆ ಸಂಗೀತ ನಿರ್ದೇಶಕ ಇಳಯರಾಜ ಸ್ಪಷ್ಟನೆ ಕೊಟ್ಟಿದ್ದಾರೆ. ದೇವಸ್ಥಾನದ ಒಳಗೆ ಅವರಿಗೆ ಪ್ರವೇಶ ನಿರಾಕರಣೆ ಮಾಡಿದೆ ಎನ್ನಲಾದ ವಿಡಿಯೋ ಕೂಡ ಹರಿದಾಡಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಳಯರಾಜ ಬೆಂಬಲಕ್ಕೆ ನಿಂತಿದ್ದರು. ಈಗ ಇದೇ ವಿಷಯವಾಗಿ ಹಬ್ಬಿರುವ ಎಲ್ಲಾ ಸುದ್ದಿಗಳ ಬಗ್ಗೆ ಇಳಯರಾಜ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯರೂ ಆಗಿರುವ ಇಳಯರಾಜ ವಿಷಯ ದೇಶಾದ್ಯಂತ ಚರ್ಚೆಗೆ ಒಳಪಟ್ಟಿತ್ತು. ಆದರೆ, ಅಂತಹದ್ದು ಏನು ನಡೆದಿಲ್ಲ. ತನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಸಂಗೀತ ಮಾಂತ್ರಿಕ ಇಳಯರಾಜ ಹೇಳಿದ್ದಾರೆ. ಅಷ್ಟಕ್ಕೂ ಇಳಯರಾಜ ಮಾಡಿದ ಟ್ವೀಟ್ನಲ್ಲಿ ಅಂತಹದ್ದೇನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಇಳಯರಾಜ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟು ಸಂದೇಶವನ್ನು ರವಾನೆ ಮಾಡಿದ್ದಾರೆ. ದೇವಸ್ಥಾನದ ಒಳಗೆ ಪ್ರವೇಶ ನಿರಾಕರಣೆ ಮಾಡಿದ್ದಾರೆ ಎನ್ನಲಾದ ವಿಷಯಕ್ಕೆ ತಮಿಳಿನದಲ್ಲಿ ಕ್ಲಾರಿಟಿ ಕೊಟ್ಟು ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಸಂಗೀತಲೋಕದ ದಿಗ್ಗಜನ ಪೋಸ್ಟ್ ನೋಡಿದ ಬಳಿಕ ಅವರ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ.
"ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ, ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ನನ್ನ ವಿಚಾರದಲ್ಲಿ ನಡೆಯದೇ ಇದ್ದ ಘಟನೆಯನ್ನು ನಡೆದಿರುವಂತೆ ಬಿಂಬಿಸಲಾಗಿದೆ. ನನ್ನ ಅಭಿಮಾನಿಗಳು ಹಾಗೂ ಜನರು ಇಂತಹ ಸುಳ್ಳು ಸುದ್ದಿಗಳನ್ನು ನಂಬುವುದು ಬೇಡ" ಎಂದು ಸಂಗೀತ ನಿರ್ದೇಶಕ ಇಳಯರಾಜ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ಇಳಯರಾಜ ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಗುಣದವರು. ಇವರಿಗೆ ವಿವಾದವೇನು ಹೊಸತಲ್ಲ. ಭಾರತದ ಪ್ರಮುಖ ಭಾಷೆಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹಿರಿಯ ಸಂಗೀತ ನಿರ್ದೇಶಕನಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇದೆ. ಅವರ ಸಂಗೀತವನ್ನು ಆರಾಧಿಸುವ ಮಂದಿ ಇದ್ದಾರೆ. ಇಂದಿಗೂ ಇಳಯರಾಜ ಸಂಗೀತಕ್ಕೆ ಸಿನಿಮಾ ಕ್ಷೇತ್ರದಲ್ಲಿ ಬೇಡಿಕೆಯಿದೆ.
ಇನ್ನು ಈ ವಿವಾದದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಸ್ಪಷ್ಟನೆ ನೀಡಿದೆ. ದೇವಸ್ಥಾನದ ಅರ್ಥಮಂಟಪದವರೆಗೂ ಕೇವಲ ಅರ್ಚಕರಿಗೆ, ಮಠಾಧೀಶರಿಗೆ ಸೇರಿದಂತೆ ಅಲ್ಲಿನ ಕೆಲವೇ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಹೀಗಾಗಿ ಶಿಷ್ಟಾಚಾರದ ಕಾರಣದಿಂದ ಇಳಯರಾಜ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದ ಅಧಿಕಾರಿಗಳು ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದರು.


Click it and Unblock the Notifications











