Jailer: ಜೈಲರ್ ಯಶಸ್ಸಿಗೆ ರಜನಿಕಾಂತ್ಗೆ ನಟ ಕಮಲ್ ಹಾಸನ್ ಅಭಿನಂದನೆ
ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹುತೇಕ ಶೋಗಳು ಹೌಸ್ ಫುಲ್ ಆಗುವುದರೊಂದಿಗೆ ಚಿತ್ರ ಈಗಾಗಲೇ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಮಲ್ ಹಾಸನ್ ಕೂಡ ಚಿತ್ರದ ಯಶಸ್ಸಿನ ಬಗ್ಗೆ ಖುಷಿಯಾಗಿದ್ದಾರೆ.
ನಟ, ನಿರ್ದೇಶಕ ಕಮಲ್ ಹಾಸನ್ ತಲೈವಾ ರಜನಿಕಾಂತ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಕಮಲ್ ಹಾಸನ್ ಚಿತ್ರದ ಯಶಸ್ಸು ಮತ್ತು ಕಲೆಕ್ಷನ್ ವಿಚಾರವಾಗಿ ರಜನಿಕಾಂತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ವಿಕ್ರಮ್ ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ದಾಖಲಿಸಿದಾಗ ರಜನಿ ಕೂಡ ಕಮಲ್ಗೆ ಅಭಿನಂದನೆ ಸಲ್ಲಿಸಿದ್ದರು ಎಂಬುದು ಇಲ್ಲಿ ನೆನಪಿಸಿಕೊಳ್ಳಬೇಕಾದ ಸಂಗತಿ.

ನಿರ್ದೇಶಕ ನೆಲ್ಸನ್ಗೂ ಕಮಲ್ ಅಭಿನಂದನೆ
ನಟ ರಜನಿಕಾಂತ್ ಅವರನ್ನು ಅಭಿನಂದಿಸಿರುವ ಕಮಲ್ ಹಾಸನ್ ಚಿತ್ರದ ನಿರ್ದೇಶಕ ನೆಲ್ಸನ್ ಅವರನ್ನೂ ಸಂಪರ್ಕಿಸಿ ಶುಭಾಶಯ ಸಲ್ಲಿಸಿದ್ದಾರೆ. ನಿರ್ದೇಶಕ ನೆಲ್ಸನ್ ಈಗಾಗಲೇ ಟಿವಿ ಕಾರ್ಯಕ್ರಮ ನಿರ್ಮಾಣದ ಮೂಲಕ ಕಮಲ್ ಹಾಸನ್ಗೆ ಪರಿಚಯವಾಗಿದ್ದರು ಎಂಬುದು ಗಮನಾರ್ಹ.
ತಮಿಳು ಚಿತ್ರರಂಗದಲ್ಲಿ ನಟ, ನಿರ್ದೇಶಕ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುವ ಕಮಲ್ ಹಾಸನ್ ಸಿನಿಪಯಣದಲ್ಲಿ 64 ವರ್ಷ ಪೂರ್ಣಗೊಳಿಸಿದ್ದಾರೆ. ಭಾಷೆಯ ಗಡಿಗಳನ್ನು ದಾಟಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶನಿವಾರ, ಭಾನುವಾರ ಅಭಿನಂದನೆ ಸಲ್ಲಿಸಿದ್ದರು.
ರಜನಿಕಾಂತ್ ಮತ್ತು ಕಮಲ್ ಹಾಸನ್ ಸ್ನೇಹ
ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಮೊದಲಿನಿಂದಲೂ ಸೌಹಾರ್ದತೆ ಮತ್ತು ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಕಳೆದ ವರ್ಷ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದ, ಕಮಲ್ ಹಾಸನ್ ಅಭಿನಯಿಸಿದ್ದ ವಿಕ್ರಮ್ ತಮಿಳು ಸಿನಿರಂಗದಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಈ ವೇಳೆ ರಜನಿಕಾಂತ್ ಕಮಲ್ ಹಾಸನ್ ಅವರಿಗೆ ಕರೆ ಮಾಡಿ ಅಭಿನಂದೆನ ತಿಳಿಸಿದ್ದರು.

ಇಬ್ಬರೂ ನಟರು ಸಾಮಾನ್ಯವಾಗಿ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾ ಪೊನ್ನಿಯಿನ್ ಸೆಲ್ವನ್ ಆಡಿಯೋ ಬಿಡುಗಡೆಯ ಸಮಯದಲ್ಲಿ ಸಿನಿಮಾ ದಂತಕಥೆಗಳು ವೇದಿಕೆ ಮೇಲೆ ಒಂದಾಗಿದ್ದರು. ಹೀಗಾಗಿ ಜೈಲರ್ ಯಶಸ್ಸಿಗೆ ಕಮಲ್ ಹಾಸನ್ ತಮ್ಮ ಸ್ನೇಹಿತ ರಜನಿಕಾಂತ್ ಅವರನ್ನು ಅಭಿನಂದಿಸಿದ್ದಾರೆ.
ಜೈಲರ್ ಬಿಡುಗಡೆ ದಿನ ಹಿಮಾಲಯಕ್ಕೆ ತೆರಳಿದ್ದ ರಜನಿಕಾಂತ್
ಜೈಲರ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಹಿಮಾಲಯಕ್ಕೆ ತೆರಳಿದ ನಟ ರಜನಿಕಾಂತ್ ಚಿತ್ರದ ಯಶಸ್ಸು ಹಾಗೂ ಸಂಭ್ರಮದಲ್ಲಿ ಭಾಗಿಯಾಗದೆ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಆಗಸ್ಟ್ 12 ರಂದು ಬದರಿನಾಥ ಧಾಮಕ್ಕೆ ಆಗಮಿಸಿ ಬದ್ರಿನಾಥನಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ದೇವಾಲಯಕ್ಕೆ ಬಂದಿದ್ದ ಭಕ್ತರು ರಜನಿಕಾಂತ್ ಅವರ ಕೈ ಕುಲುಕಿ, ಫೋಟೋಗೆ ಫೋಸ್ ನೀಡಿದ್ದರು.
ಜೈಲರ್ ಒಂದು ಆಕ್ಷನ್, ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ತಂದೆ, ನಿವೃತ್ತ ಜೈಲರ್ ಆಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಶಿವ ರಾಜ್ ಕುಮಾರ್, ಮಲಯಾಳಂ ನಟ ಮೋಹನ್ಲಾಲ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ಪ್ರಿಯಾಂಕಾ ಮೋಹನ್, ವಸಂತ್ ರವಿ, ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications










