'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್
ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷೆಯ 'ಇಂಡಿಯನ್-2' ಚಿತ್ರೀಕರಣ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ದುರಂತದಲ್ಲಿ ಮೂವರು ಸಹಾಯಕ ನಿರ್ದೇಶಕರು ಮೃತಪಟ್ಟಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಮಲ್ 'ಈ ಘಟನೆ ಚಿತ್ರೋದ್ಯಮದಲ್ಲಿ ಜನರ ಸುರಕ್ಷತೆಯನ್ನು ಪ್ರಶ್ನಾರ್ಹತೆಯನ್ನು ಸೂಚಿಸುತ್ತದೆ' ಎಂದಿದ್ದಾರೆ.
ಇನ್ನು 'ನನ್ನ ಪರವಾಗಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಇದು ನನಗೆ ಮಾಡಲು ಸಾಧ್ಯವಾಗುವ ಕಾರ್ಯ. ಇದು ನಾವು ಕಳೆದುಕೊಂಡ ಜೀವಗಳಿಗೆ ನೀಡುವ ಪರಿಹಾರವಲ್ಲ. ಮೂರು ವರ್ಷಗಳ ಹಿಂದೆ ನನಗೂ ಒಂದು ಅಪಘಾತವಾಗಿತ್ತು. ಇಂತಹ ಅಪಘಾತಗಳ ಆಘಾತದಿಂದ ಗುಣಮುಖರಾಗಲು ಎಷ್ಟು ಕಷ್ಟ ಎಂಬುದು ನನಗೆ ಗೊತ್ತು' ಎಂದು ಹೇಳಿದ್ದಾರೆ.

ನಿನ್ನೆ ಶೂಟಿಂಗ್ ಸಮಯದಲ್ಲಿ ಕ್ರೇನ್ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದರು. ಚೆನ್ನೈನ ಇವಿಪಿ ಸ್ಟೂಡಿಯೋದಲ್ಲಿ ಚಿತ್ರೀಕರಣ ನಡೆಯುವ ವೇಳೆ ಘಟನೆ ನಡೆದಿದೆ. ಸುಮಾರು 150 ಅಡಿ ಎತ್ತರದ ಭಾರಿ ಗಾತ್ರದ ಕ್ರೇನ್ ಕುಸಿದು ಅವಘಡ ಸಂಭವಿಸಿದೆ. ಮೂವರು ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ.
ಘಟನೆಗೆಯ ಬಗ್ಗೆ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದು, ''ನಾನು ಸಾಕಷ್ಟು ಅಪಘಾತಗಳನ್ನು ನೋಡಿದ್ದೇನೆ ಮತ್ತು ಅದರಿಂದ ಹೊರ ಬಂದಿದ್ದೇನೆ. ಆದರೆ, ಇಂದು ನೋಡಿದ ಅಪಘಾತ ನಿಜಕ್ಕೂ ಭೀಕರ. ನಾನು ನನ್ನು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ," ಎಂದು ಸಂತಾಪ ಸೂಚಿಸಿದ್ದರು.
ಅಂದಹಾಗೆ, 'ಇಂಡಿಯನ್ 2' ಶಂಕರ್ ನಿರ್ದೇಶನದ ಸಿನಿಮಾವಾಗಿದೆ. ಸೌತ್ ಇಂಡಿಯಾದ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ.


Click it and Unblock the Notifications











