ಅರ್ಧಕ್ಕೆ ನಿಂತ ವಿಷ್ಣುವರ್ಧನ್ ಚಿತ್ರಕ್ಕೆ ಮರುಜೀವ ಕೊಡ್ತಾರಂತೆ ಕಮಲ್ ಹಾಸನ್
ಸಾಹಸಸಿಂಹ ವಿಷ್ಣುವರ್ಧನ್ ಅಗಲಿ 15 ವರ್ಷಗಳ ಕಳೆದಿದೆ. ದಾದಾ ನಟಿಸಿದ್ದ ಎಲ್ಲಾ ಸಿನಿಮಾಗಳು ಬಿಡುಗಡೆಯಾಗಿದೆ. ಒಂದಷ್ಟು ಹಳೇ ಸಿನಿಮಾಗಳನ್ನು ರೀ-ರಿಲೀಸ್ ಕೂಡ ಮಾಡಲಾಗ್ತಿದೆ. ಇತ್ತೀಚೆಗೆ 'ಯಜಮಾನ' ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ವಿಷ್ಣು ನಟಿಸಿದ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಆ ಸಿನಿಮಾ ತೆರೆಗೆ ಬರಲು ಕಮಲ್ ಹಾಸನ್ ಮನಸ್ಸು ಮಾಡಬೇಕಿದೆ.
ತಮಿಳು ನಟ ಕಮಲ್ ಹಾಸನ್ ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹಲವು ವಿಭಿನ್ನ ಸಿನಿಮಾಗಳಲ್ಲಿ ಕಮಲ್ ನಟಿಸಿದ್ದಾರೆ. ನಾನಾ ವೇಷಗಳಲ್ಲಿ ಅದ್ಭುತವಾಗಿ ನಟಿಸಿ ಮೋಡಿ ಮಾಡಿದ್ದಾರೆ. ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ನಿರ್ದೇಶನ ಕಮ್ಮಿ ಮಾಡಿದ್ದು ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬರ್ತಿದ್ದಾರೆ.

ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟಿಸಿದ್ದ 'ಥಗ್ ಲೈಫ್' ಸಿನಿಮಾ ಹೀನಾಯವಾಗಿ ಸೋತಿತ್ತು. ಕನ್ನಡದ ಭಾಷೆಯ ಬಗ್ಗೆ ಕಮಲ್ ಹೇಳಿಕೆ ವಿವಾದ ಹುಟ್ಟಾಕಿ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾ ಬಿಡುಗಡೆಗೆ ಸಮಸ್ಯೆ ಉಂಟಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಅಭಯ ಸಿಕ್ಕರೂ ಸಿನಿಮಾ ಮಾತ್ರ ತೆರೆಗೆ ಬರಲಿಲ್ಲ.
28 ವರ್ಷಗಳ ಹಿಂದೆ ಕಮಲ್ ಹಾಸನ್ ಆರಂಭಿಸಿ ಅರ್ಧಕ್ಕೆ ಬಿಟ್ಟ 'ಮರುಧನಾಯಗಂ' ಸಿನಿಮಾ ಇವತ್ತಿಗೂ ತೆರೆಗೆ ಬಂದಿಲ್ಲ. ಇದು ಕಮಲ್ ಕನಸಿನ ಸಿನಿಮಾ. ತಾವೇ ನಿರ್ಮಿಸಿ, ನಿರ್ದೇಶಿಸಿ ಈ ಚಿತ್ರದಲ್ಲಿ ನಟಿಸಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಕೂಡ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಮರುಜೀವ ಕೊಡುವ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಐತಿಹಾಸಿಕ ಕಥಾಹಂದರದ 'ಮರುಧನಾಯಗಂ' ಸಿನಿಮಾ ದಶಕಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಅವತ್ತಿನ ಕಾಲಕ್ಕೆ 80 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕಮಲ್ ಮುಂದಾಗಿದ್ದರು. 1997ರಲ್ಲಿ ಚಿತ್ರೀಕರಣ ಆರಂಭವಾಗಿತ್ತು. ವಿವಾದಗಳಿಂದಲೂ ಸುದ್ದಿಯಾಗಿದ್ದ ಸಿನಿಮಾ ಪದೇ ಪದೆ ಸಂಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ ಕಮಲ್ ಸಿನಿಮಾ ನಿಲ್ಲಿಸಿಬಿಟ್ಟಿದ್ದರು. ಆ ಬಳಿಕ ಕೂಡ ಸಾಕಷ್ಟು ಬಾರಿ ಈ ಬಗ್ಗೆ ಮಾತನಾಡಿದ್ದರು. ಸದ್ಯ AI ಜಮಾನ ಶುರುವಾಗಿದೆ. ಹಾಗಾಗಿ ಏನು ಬೇಕಾದರೂ ಮಾಡಬಹುದು ಎನ್ನುವಂತಾಗಿದೆ.
'ಮರುಧನಾಯಗಂ' ಸಿನಿಮಾ ಚಿತ್ರದ ಬಗ್ಗೆ ಇತ್ತೀಚೆಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ "ನನಗೆ ಮತ್ತೆ ಆ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಇವತ್ತು ತಂತ್ರಜ್ಞಾನ ಬಹಳ ಮುಂದುವರೆದಿದ್ದು ಅದು ಸಾಧ್ಯ ಎನ್ನುವುದು ನನ್ನ ನಂಬಿಕೆ" ಎಂದು ಹೇಳಿದ್ದಾರೆ. ಆ ಮೂಲಕ ಮತ್ತೆ 'ಮರುಧನಾಯಗಂ' ಸಿನಿಮಾ ವಿಚಾರ ಪ್ರಸ್ತಾಪಿಸಿದ್ದಾರೆ. ಕಮಲ್ ಹಾಸನ್ AI ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ಈ ಚಿತ್ರಕ್ಕೆ ಮರುಜೀವ ಕೊಟ್ಟರೂ ಅಚ್ಚರಿಪಡಬೇಕಿಲ್ಲ ಎಂದು ಚರ್ಚೆ ಶುರುವಾಗಿದೆ.
ಅಂದಹಾಗೆ 'ಮರುಧನಾಯಗಂ' ಚಿತ್ರದಲ್ಲಿ ವಾಜಿದ್ ಖಾನ್ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಅವರ ಸನ್ನಿವೇಶಗಳ ಚಿತ್ರೀಕರಣ ಕೂಡ ಮುಗಿದಿತ್ತು. ಇನ್ನುಳಿದಂತೆ ಸತ್ಯರಾಜ್, ನಾಸರ್, ಅಮರೀಶ್ ಪುರಿ, ಪಶುಪತಿ ಚಿತ್ರದ ತಾರಾಗಣದಲ್ಲಿದ್ದಾರೆ. ಇಳಯರಾಜಾ ಸಂಗೀತ, ರವಿ ಕೆ ಚಂದ್ರನ್ ಛಾಯಾಗ್ರಹಣ ಚಿತ್ರಕ್ಕಿದೆ. ಒಂದು ಹಾಡು ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ.
'ಮರುಧನಾಯಗಂ' ಚಿತ್ರದಲ್ಲಿ ಕಮಲ್ ಹಾಸನ್ ಗೂಳಿ ಏರಿ ಸವಾರಿ ಮಾಡುವ ವೀಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಇತ್ತೀಚೆಗೆ 'ವಾರಣಾಸಿ' ಚಿತ್ರದ ಟೀಸರ್ನಲ್ಲಿ ಕೂಡ ಮಹೇಶ್ ಬಾಬು ಇದೇ ರೀತಿ ಬಸವನನ್ನು ಏರಿ ಸವಾರಿ ಮಾಡುವಂತೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ 'ಮರುಧನಾಯಗಂ' ಚಿತ್ರದ ವೀಡಿಯೋವನ್ನು ಅಭಿಮಾನಿಗಳು ತೇಲಿಬಿಟ್ಟಿದ್ದರು.


Click it and Unblock the Notifications











