ತಮಿಳುನಾಡಿನ 'ಹೃದಯದಿಂದ' ಸ್ಪರ್ಧಿಸಲಿದ್ದಾರೆ ಕಮಲ್ ಹಾಸನ್
ನಟ ಕಮಲ್ ಹಾಸನ್ ಸಕ್ರಿಯ ರಾಜಕೀಯಕ್ಕೆ ಧುಮುಕಿ ಮೂರು ವರ್ಷವಾಯಿತು. ಅವರೇ ಹೇಳಿಕೊಂಡಿದ್ದಂತೆ ರಾಜಕೀಯಕ್ಕೆ ಬರುವ ಮುನ್ನವೂ ಅವರು 'ರಾಜಕೀಯ ಜೀವಿಯೇ' ಆಗಿದ್ದರು.
'ಮಕ್ಕಳ್ ನಿಧಿ ಮಯಂ' ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವ ಕನಸಿನಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ತಮಿಳುನಾಡು ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರದಿಂದಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂದು ಕಮಲ್ ಹಾಸನ್ ಈಗಾಗಲೇ ಹೇಳಿದ್ದಾರೆ. ಇದೀಗ ಸ್ವತಃ ಕಮಲ್ ಹಾಸನ್ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬುದು ಬಹುತೇಕ ಖಾತ್ರಿಯಾಗಿದೆ.

ಚೆನ್ನೈನ ಅಳಂದೂರು ಕ್ಷೇತ್ರದಿಂದ ಸ್ಪರ್ಧೆ
ತಮಿಳುನಾಡಿನ ರಾಜಧಾನಿ ಚೆನ್ನೈನ ಅಳಂದೂರು ವಿಧಾನಸಭಾ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕ್ಷೇತ್ರದಿಂದ 1967 ರಿಂದ 1976 ರ ವರೆಗೆ ಖ್ಯಾತ ನಟ ಎಂಜಿಆರ್ ಸ್ಪರ್ಧೆ ಮಾಡಿ ಗೆದ್ದು ಮುಖ್ಯಮಂತ್ರಿ ಸಹ ಆಗಿದ್ದರು. ಆಗ ಈ ಕ್ಷೇತ್ರಕ್ಕೆ ಪರಂಗಿಮಲೈ ಎಂಬ ಹೆಸರಿತ್ತು. ಎಂಜಿಆರ್ ಅವರ ಪಕ್ಕಾ ಅಭಿಮಾನಿ, ಅನುಯಾಯಿ ಆಗಿರುವ ಕಮಲ್ ಹಾಸನ್ ಇದೇ ಕಾರಣಕ್ಕೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಎರಡನೇ ಕ್ಷೇತ್ರವಾಗಿ ಕೊಯಂಬತ್ತೂರು ಆಯ್ಕೆ?
ಅಳಂದೂರು ಕ್ಷೇತ್ರದ ಜೊತೆಗೆ ಮತ್ತೊಂದು ಕ್ಷೇತ್ರದಿಂದಲೂ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಎರಡನೇ ಕ್ಷೇತ್ರವಾಗಿ ಕೊಯಂಬತ್ತೂರನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ 12 ಮಾರ್ಚ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

ಮಹಿಳಾ ಸಬಲೀಕರಣದ ಗುರಿ
ಮಕ್ಕಳ್ ನಿಧಿ ಮಯಂ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ಅನೇಕ ಸವಲತ್ತುಗಳನ್ನು ನೀಡುವುದಾಗಿ ಕಮಲ್ ಹಾಸನ್ ಭರವಸೆ ನೀಡಿದ್ದಾರೆ. ಗೃಹಿಣಿಯರಿಗೆ ಮಾಸಿಕೆ ಸಂಭಾವನೆ ನೀಡುವ ಪ್ರಮುಖ ಭರವಸೆಯನ್ನು ಕಮಲ್ ಪಕ್ಷ ನೀಡಿದೆ. ಇದರ ಜೊತೆಗೆ ತಮಿಳುನಾಡಿನ ಎಲ್ಲ ಸರ್ಕಾರಿ ಸೇವೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡುವುದಾಗಿಯೂ ಭರವಸೆ ನೀಡಲಾಗಿದೆ. ಜೊತೆಗೆ ಯುವಕರಿಗೆ ಉದ್ಯೋಗದ ಭರವಸೆಯನ್ನು ಸಹ ನೀಡಿದೆ ಪಕ್ಷ.
Recommended Video

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷ
ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷವು ಕಳೆದ ಲೋಕಸಭೆ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಆದರೆ ಒಂದೂ ಕ್ಷೇತ್ರದಲ್ಲಿಯೂ ಗೆಲ್ಲಲಿಲ್ಲ. ಶೇಕಡಾವಾರು 3.72% ಮತವನ್ನು ಮಕ್ಕಳ ನಿಧಿ ಮಯಂ ಪಕ್ಷದ ಅಭ್ಯರ್ಥಿಗಳು ಪಡೆದಿದ್ದರು. ಆದರೆ ನಗರ ಪ್ರದೇಶದಲ್ಲಿ ತುಸು ಉತ್ತಮ ಪ್ರಮಾಣದ ಮತವನ್ನು ಪಕ್ಷದ ಅಭ್ಯರ್ಥಿಗಳು ಪಡೆದಿದ್ದರು.


Click it and Unblock the Notifications











