ನನ್ನ ಸೂಪರ್ ಸ್ಟಾರ್ ರಜನಿಗೆ ಇಷ್ಟವಾಗುವ ಕಥೆ ಬೇಕು ; ತಲೈವರ್ 173 ನಿಂತು ಹೋಯ್ತಾ ? ಕಮಲ್ ಹಾಸನ್ ಅಚ್ಚರಿ ಹೇಳಿಕೆ
ಹೆಚ್ಚೇನು ಇಲ್ಲ... ಕಳೆದ ಕೆಲ ದಿನಗಳ ಹಿಂದೆ ಕಮಲ್ ಹಾಸನ್ ಮತ್ತು ರಜನಿಕಾಂತ್.. ದಕ್ಷಿಣದ ಎರಡು ಪ್ರಖ್ಯಾತ ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಸಹಜವಾಗಿ ಈ ಸುದ್ದಿಯನ್ನು ಕೇಳಿ ಎರಡು ಕಡೆಯ ಬಣ ಹುಚ್ಚೆದ್ದು ಕುಣಿದಿತ್ತು. ಆ ನಂತರ ... ಚಿತ್ರ ಶುರು ಕೂಡ ಆಗಿತ್ತು. ಚಿತ್ರಕ್ಕೆ ಕಮಲ್ ಹಾಸನ್ ಅವರದ್ದೇ....
ಬಂಡವಾಳ ಎನ್ನುವ ವಿಚಾರ ಜಗಜ್ಜಾಹೀರಾಗಿತ್ತು. ಖುಷ್ಬೂ ಅವರ ಗಂಡ ಸುಂದರ್ ಅವರಿಗೆ ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಕೂಡ ವಹಿಸಲಾಗಿತ್ತು. ಆದರೆ.. ಅದೇನಾಯ್ತು. ಅದ್ಯಾರ ಮಸಣಿ ಕಣ್ಣು ಬಿತ್ತೋ .. ಮೊನ್ನೆ .. ಮೊನ್ನೆ .. ಸುಂದರ್ ಚಿತ್ರದಿಂದ ಹೊರ ಬಂದಿದ್ದರು.

ಏಕಾಏಕಿ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ಅಸಂಖ್ಯಾತ, ಅಗಣಿತ ಅಭಿಮಾನಿಗಳ ಮೇಲೆ ಬಾಂಬ್ ಎಸೆದಿದ್ದ ಸುಂದರ್, ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ಸಿನಿಮಾ ನಿಜಕ್ಕೂ ನನಗೆ ಒಂದು ಕನಸು ನನಸಾದಂತೆ ಆಗಿತ್ತು. ಜೀವನದಲ್ಲಿ, ನಮ್ಮ ಕನಸುಗಳಿಂದ ಭಿನ್ನವಾಗಿದ್ದರೂ ಸಹ, ನಮಗಾಗಿ ನಿಗದಿಪಡಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾದ ಕ್ಷಣಗಳಿವೆ ಎಂದು ಹೇಳಿದ್ದರು.
ಇಷ್ಟೇ ಅಲ್ಲ ಇವರಿಬ್ಬರ ಒಡನಾಟವು ಬಹಳ ಹಿಂದಿನದು. ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ. ಅವರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ನಾನು ಅವರ ಮಾರ್ಗದರ್ಶನವನ್ನು ಪಡೆಯುತ್ತಲೇ ಇರುತ್ತೇನೆ. ಈ ಮಹೋನ್ನತ ಕೃತಿಗಾಗಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ಇಂತಹದ್ದೊಂದು ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಈ ಸುದ್ದಿ ನಿರಾಸೆ ಮೂಡಿಸುತ್ತಿರುವುದಕ್ಕೆ ಕ್ಷಮಿಸಿ ಎಂದು ನಿರ್ದೇಶಕ ಸುಂದರ್ ಸಿ. ಮನವಿ ಮಾಡಿಕೊಂಡಿದ್ದರು. ಈ ಮೂಲಕ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಸುಂದರ್ ಸಿಡಿಸಿದ ಈ ಬಾಂಬ್ದಿಂದ ಹಲವರು ಈ ಚಿತ್ರ ನಿಂತು ಹೋಯ್ತು ಎಂದುಕೊಂಡಿದ್ದರು. ಹಲವರು ನಾನಾ ರೀತಿಯ ಮಾತುಗಳನ್ನಾಡಲು ಶುರು ಮಾಡಿದ್ದರು. ಹಾಗಂತೆ-ಹೀಗಂತೆ.. ಕಮಲ್ ಹಾಸನ್ ಮತ್ತು ಸುಂದರ್ ನಡುವೆ ಕಿರಿಕ್ ಆಯ್ತಂತೆ ಎಂದೆಲ್ಲಾ ಪುಕಾರು ಹಬ್ಬಿಸತೊಡಗಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಕಮಲ್ ಹಾಸನ್, ಈಗಾಗಲೇ ಚಿತ್ರದಿಂದ ಹೊರ ಬಂದಿರುವ ವಿಚಾರವನ್ನುಸುಂದರ್ ನಿಮಗೆ ಈಗಾಗಲೇ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಕುರಿತು ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ಧಾರೆ.
ಮುಂದುವರೆದು ಒಬ್ಬ ನಿರ್ಮಾಪಕನಾಗಿ ನಾನು ನನ್ನ ಚಿತ್ರದ ಆಕ್ಟರ್ಗೆ ಇಷ್ಟವಾಗುವಂತಹ ಕಥೆಯನ್ನು ಹುಡುಕಲು ಬಯಸುತ್ತೇನೆ ಎಂದು ಹೇಳಿರುವ ಕಮಲ್ ಹಾಸನ್, ನನ್ನ ಸೂಪರ್ ಸ್ಟಾರ್ಗೆ ( ರಜನಿಕಾಂತ್) ತೃಪ್ತಿಯಾಗುವಂತಹ ಚಿತ್ರವನ್ನು ನಿರ್ಮಾಣ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ನಮ್ಮ ಇಬ್ಬರಿಗೂ ಖುಷಿ ನೀಡುವಂತಹ, ತೃಪ್ತಿ ಕೊಡುವಂತಹ ಕಥೆಗಳನ್ನು ನಾವು ಹುಡುಕುತ್ತಿದ್ದೇವೆ, ಉತ್ತಮವಾದ ಕಥೆ ಸಿಗಲಿ ಎಂದು ಹೇಳಿರುವ ಕಮಲ್ ಅನಿರೀಕ್ಷಿತವಾದದ್ದನ್ನೇ ನೀವೆಲ್ಲಾ ನಿರೀಕ್ಷೆ ಮಾಡಿ ಎಂದು ಹೇಳಿದ್ದಾರೆ. ಈ ಮೂಲಕ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಹೀಗೆ ಸದ್ಯ ರಜನಿಕಾಂತ್ ಅಭಿನಯದಲ್ಲಿ ತಮ್ಮ ನಿರ್ಮಾಣದಡಿ ಸಿದ್ಧವಾಗಬೇಕಿದ್ದ ಚಿತ್ರ ಸದ್ಯಕ್ಕೆ ನಿಂತು ಹೋಗಿರುವ ಕುರಿತು ಕಮಲ್ ಹಾಸನ್ ಸ್ಪಷ್ಟೀಕರಣ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಕೆಲಸಗಳಿಗೆ ಬ್ರೇಕ್ ಹಾಕಲಾಗಿದೆ. ಆದರೆ ನಿಂತಿಲ್ಲ. ಪ್ರಯತ್ನ ಮುಂದುವರೆದಿದೆ ಎಂದು ಹೇಳಿದ್ಧಾರೆ. ಮತ್ತೊಂದು ಉತ್ತಮ ಕಥೆಯ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ಧಾರೆ. ಇವರ ಈ ಹುಡುಕಾಟ ಯಾವಾಗ ಮುಗಿಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











