"ಟೈಟಲ್ ಕೆಳಗೆ 'ಸತ್ಯಕಥೆ' ಅಂತ ಬರೆದ್ರೆ ಸಾಕಗಲ್ಲ.. ನಿಜಕ್ಕೂ ಸತ್ಯ ಆಗಿರಬೇಕು": ಕಮಲ್ ಹಾಸನ್
ಕೆಲವರ ವಿರೋಧದ ನಡುವೆಯೂ 'ದಿ ಕೇರಳ ಸ್ಟೋರಿ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 3 ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆವಿನಾಯಿತಿ ಘೋಷಿಸಿದರೆ 2 ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೀತು. ಇದೀಗ ತಮಿಳು ನಟ ಕಮಲ್ ಹಾಸನ್ 'ದಿ ಕೇರಳ ಸ್ಟೋರಿ' ಸಿನಿಮಾ ಬಗ್ಗೆ ಮಾತನಾಡಿದ್ಧಾರೆ.
ಅಬುಧಾಬಿಯಲ್ಲಿ ನಡೆಯುತ್ತಿರುವ 'ಐಫಾ ಅವಾರ್ಡ್ಸ್' ಉಳಗ ನಾಯಗನ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ 'ದಿ ಕೇರಳ ಸ್ಟೋರಿ' ಸಿನಿಮಾ ಕುರಿತ ಮಾಧ್ಯಮದವರ ಪ್ರಶ್ನೆಗೆ ಕಮಲ್ "ಅದು ಪ್ರೊಪಗಾಂಡ ಸಿನಿಮಾ" ಎಂದಿದ್ದಾರೆ. ಕಮಲ್ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಿಂದೆ ಸಾಕಷ್ಟು ಜನ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಈ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದವು. ಸಿನಿಮಾ ರಿಲೀಸ್ ತಡೆಯುವಂತೆ ಕೋರ್ಟ್ ಮೆಟ್ಟಿಲೇರಿದ್ದವು.

ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ರಿಲೀಸ್ಗೆ ರದ್ದುಗೊಳಿಸಲಾಗಿತ್ತು. ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿಲ್ಲ ಎನ್ನುವ ಕಾರಣ ನೀಡಿ ತಮಿಳುನಾಡಿನಲ್ಲಿ ಮಲ್ಟಿಪ್ಲೆಕ್ಸ್ಗಳು ಸಿನಿಮಾ ಪ್ರದರ್ಶನ ಮಾಡಿರಲಿಲ್ಲ. ಇತ್ತೀಚೆಗೆ ಇದೇ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ 2 ರಾಜ್ಯಗಳಿಗೆ ನೋಟಿಸ್ ಸಹ ನೀಡಿತ್ತು.
ಕಮಲ್ ಏನಂದ್ರು?
"ನಾನು ಈಗಾಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ ಅಂತ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಟೈಟಲ್ ಕೆಳಗೆ ಸತ್ಯ ಘಟನೆ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ" ಎಂದು ಕಮಲ್ ಹಾಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳು ನಟನ ಹೇಳಿಕೆಯನ್ನು ಹಲವರು ಟೀಕಿಸುತ್ತಿದ್ದಾರೆ.

ಸಿನಿಮಾ ಕಥೆಯೇನು?
ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ನೂಕಲಾಗುತ್ತಿದೆ ಎನ್ನುವ ವಿಚಾರದ ಹಿನ್ನೆಲೆಯಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಮೂಡಿ ಬಂದಿದೆ. ಸುದೀಪ್ತೊ ಸೇನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಇದೊಂದು ನೈಜ ಘಟನೆ ಆಧರಿತ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ನಿಧಾನವಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಸಿನಿಮಾ ಗಳಿಕೆ 200 ಕೋಟಿ ರೂ. ಗಡಿ ದಾಟಿದೆ.
ನಿರ್ದೇಶಕರು ಆಸ್ಪತ್ರೆಗೆ ದಾಖಲು
'ದಿ ಕೇರಳ ಸ್ಟೋರಿ' ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದೆ. ಈ ನಡುವೆ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇನ್ಫೆಕ್ಷನ್ ಮತ್ತು ಡಿಹೈಡ್ರೇಷನ್ ಕಾರಣದಿಂದ ಸಮಸ್ಯೆ ಆಗಿ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಓಟಿಟಿಗೆ ಸಿನಿಮಾ
ಮೇ 5ರಂದು 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ್ದಕ್ಕಿಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೀ 5 ಸಂಸ್ಥೆ ಚಿತ್ರದ ಡಿಜಿಟಲ್ ಹಕ್ಕು ಖರೀದಿಸಿರುವುದಾಗಿ ಹೇಳಲಾಗ್ತಿದೆ. ಮುಂದಿನ ತಿಂಗಳೇ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ. ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಓಟಿಟಿಯಲ್ಲೂ ಸದ್ದು ಮಾಡುವ ಸುಳಿವು ಸಿಗ್ತಿದೆ.


Click it and Unblock the Notifications











