ಕಮಲ್ ಹಾಸನ್ 'ಉತ್ತಮ ವಿಲನ್' ಬೆಳಗಿನ ಆಟ ರದ್ದು
ಅದ್ವಿತೀಯ ಕಲಾವಿದ ಕಮಲ್ ಹಾಸನ್ ಚಿತ್ರಗಳೆಂದರೆ ವಿವಾದ ತಪ್ಪಿದ್ದಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಕಾರ್ಮಿಕರ ದಿನದಂದು (ಮೇ.1) ತೆರೆಕಂಡಿರುವ ಅವರ ಉತ್ತಮ ವಿಲನ್ ಚಿತ್ರದ ಬೆಳಗಿನ ಆಟ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ರದ್ದಾಗಿದೆ.
ಸಾಕಷ್ಟು ಮುಂಗಡವಾಗಿಯೇ ಕಮಲ್ ಅಭಿಮಾನಿಗಳು ಟಿಕೆಟ್ ಗಳನ್ನು ಕಾದಿರಿಸಿದ್ದರು. ರಜೆ ಇದ್ದ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಥಿಯೇಟರ್ ಗೆ ಹೋದ ಚಿತ್ರ ರಸಿಕರಿಗೆ ನಿರಾಸೆ ಕಾದಿತ್ತು. ಬೆಳಗಿನ ಶೋ ಕ್ಯಾನ್ಸಲ್ ಆಗಿದ್ದು ಅಭಿಮಾನಿಗಳು ಮುಂದಿನ ಶೋಗಾಗಿ ಕಾಯುವಂತಾಯಿತು. [ಆರ್ಥಿಕ ಬಿಕ್ಕಟ್ಟಿನಲ್ಲಿ ಕಮಲ್ ಹಾಸನ್ 'ಉತ್ತಮ ವಿಲನ್']

ಕಳೆದ ಕೆಲ ತಿಂಗಳಿಂದ ಚಿತ್ರದ ನಿರ್ಮಾಪಕರು ಹಾಗೂ ಫೈನಾನ್ಸಿಯರ್ ಗಳ ನಡುವಿನ ಹಣಕಾಸು ಸಮಸ್ಯೆಯೇ ಶೋ ರದ್ದಾಗಲು ಕಾರಣ ಎಂದು ಊಹಿಸಲಾಗಿದೆ. ಬಹುಶಃ ಈ ಸಮಸ್ಯೆ ಶೀಘ್ರ ಇತ್ಯರ್ಥವಾಗಿ ಶೋ ಆರಂಭವಾಗುವ ಸಾಧ್ಯತೆಗಳಿವೆ ಎಂದು ಚಿತ್ರದ ವಿತರಕರೊಬ್ಬರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರ ಹಲವಾರು ಕಾರಣಗಳಿಗಾಗಿ ನಿರೀಕ್ಷಿಸುವಂತೆ ಮಾಡಿತ್ತು. ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 8ನೇ ಶತಮಾನದ ಒಬ್ಬ ಕಲಾವಿದ ಹಾಗೂ ಇಂದಿನ ಸೂಪರ್ ಸ್ಟಾರ್ ಒಬ್ಬನ ಕಥೆಯನ್ನು ಚಿತ್ರ ಒಳಗೊಂಡಿದೆ. (ಏಜೆನ್ಸೀಸ್)


Click it and Unblock the Notifications











