"ನೀನು, ಧನುಷ್ ಆ ರೀತಿ ಅಂತೆ ಹೌದಾ? ಅಂತ ಕಾರ್ತಿಕ್ನ ಕೇಳ್ದೆ.. ಕಮಲ್ ಬಗ್ಗೆ ಆರೋಪಗಳೆಲ್ಲಾ ಸುಳ್ಳು": ಕಸ್ತೂರಿ
ತಮಿಳು ಗಾಯಕಿ ಸುಚಿತ್ರಾ ಇತ್ತೀಚಿಗೆ ಹಲವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮಾಜಿ ಪತಿ ಕಾರ್ತಿಕ್, ನಟರಾದ ಧನುಷ್, ಕಮಲ್ ಹಾಸನ್, ಶಾರುಖ್ ಖಾನ್ ಹಾಗೂ ನಟಿ ತ್ರಿಶಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಇದೀಗ ನಟಿ ಕಸ್ತೂರಿ ಪ್ರತಿಕ್ರಿಯಿಸಿದ್ದಾರೆ.
ಸುಚೀ ಲೀಕ್ಸ್ ಪ್ರಕರಣದಿಂದ ಏಳೆಂಟು ವರ್ಷಗಳ ಹಿಂದೆ ಗಾಯಕಿ ಸುಚಿತ್ರಾ ಹೆಸರು ಸದ್ದು ಮಾಡಿತ್ತು. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದ ಒಂದಷ್ಟು ಹಾಡುಗಳಿಗೆ ಆಕೆ ದನಿಯಾಗಿದ್ದಾರೆ. ಕಂಠದಾನ ಕಲಾವಿದೆಯಾಗಿಯೂ ಒಂದಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಆಕೆ ಹಲವು ವರ್ಷಗಳಿಂದ ಮಾನಸಿಕವಾಗಿ ದುರ್ಬಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಸ್ಟ್ಯಾಂಡಪ್ ಕಾಮೆಡಿಯನ್, ತಮಿಳು ನಟ ಕಾರ್ತಿಕ್ ಕುಮಾರ್ ಜೊತೆ 2005ರಲ್ಲಿ ಸುಚಿತ್ರಾ ಮದುವೆ ನಡೆದಿತ್ತು. 2017ರಲ್ಲಿ ಇಬ್ಬರೂ ಡಿವೋರ್ಸ್ ಪಡೆದಿದ್ದರು. ಅದೇ ಸಮಯದಲ್ಲಿ ಸುಚೀ ಲೀಕ್ಸ್ ವಿಚಾರ ಸದ್ದು ಮಾಡಿತ್ತು. ಕೆಲ ನಟ-ನಟಿಯರು ಖಾಸಗಿ ಫೋಟೊ, ವಿಡಿಯೋ ಲೀಕ್ ಆಗಿ ವೈರಲ್ ಆಗಿತ್ತು. ಆಕೆಯ ಟ್ವಿಟ್ಟರ್ ಖಾತೆಯಿಂದ ಅದು ಪೋಸ್ಟ್ ಆಗಿದ್ದಾಗಿ ವರದಿಯಾಗಿತ್ತು. ಆದರೆ ಇತ್ತೀಚೆಗೆ ನೀಡಿದ ಸಂದರ್ಶನಗಳಲ್ಲಿ ಅದು ನಾನು ಮಾಡಿದಲ್ಲ ಎಂದಿದ್ದರು.
ಕಾರ್ತಿಕ್, ಧನುಷ್ ಅವರ ಸ್ನೇಹಿತರ ಗ್ರೂಪ್ ಇದೆ. ಫ್ರಾಂಕ್ ಮಾಡಲು ಆ ಗ್ರೂಪ್ನವರೇ ಇದನ್ನೆಲ್ಲಾ ಮಾಡಿದ್ರು. ಅದನ್ನು ನನ್ನ ತಲೆಗೆ ಕಟ್ಟಿದ್ದರು. ಧನುಷ್- ಕಾರ್ತಿಕ್ ಸಲಿಂಗ ಕಾಮಿಗಳು ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದರು. ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್ ಮಾಡುತ್ತಿದ್ದಾರೆ ಹಾಗಾಗಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.
ಇನ್ನು ಬಾಲಿವುಡ್ ನಟ ಶಾರುಖ್ ಖಾನ್, ನಿರ್ದೇಶಕ ಕರಣ್ ಜೋಹರ್ ಸಹ ಸಲಿಂಗ ಕಾಮಿಗಳಂತೆ. ಅದನ್ನು ಕಾರ್ತಿಕ್ ನನಗೆ ಹೇಳಿದ್ದ ಎಂದಿದ್ದಾರೆ. ಇನ್ನು ನಟ ಕಮಲ್ ಹಾಸನ್ ಪಾರ್ಟಿಗಳಲ್ಲಿ ಕೊಕೇನ್ ಸಪ್ಲೇ ಆಗುತ್ತಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ತಮಿಳು ನಟಿ ಕಸ್ತೂರಿ ಮಾತನಾಡಿದ್ದಾರೆ. ಇದೆಲ್ಲಾ ಆಧಾರಗಳಿಲ್ಲದ ಕೇವಲ ಆರೋಪಗಳು ಮಾತ್ರ. ನನಗೆ ಗೊತ್ತಿರುವಂತೆ ಇದೆಲ್ಲಾ ಶುದ್ಧ ಸುಳ್ಳು ಎಂದಿದ್ದಾರೆ.

ನಾನು ಕಾರ್ತಿಕ್ ಬಳಿ ಈ ಬಗ್ಗೆ ಪ್ರಶ್ನಿಸಿದೆ. ನಿನ್ನ, ಧನುಷ್ ಬಗ್ಗೆ ಸುಚಿತ್ರಾ ಆ ರೀತಿ ಹೇಳಿದ್ದಾರೆ. ಅದೆಲ್ಲಾ ನಿಜವೇ? ನೀವಿಬ್ಬರು ಆ ರೀತಿನಾ? ಎಂದು ಕೇಳಿದೆ. ಆತ ಇಲ್ಲ ಎಂದ. ತಮ್ಮ ಮೇಲಿನ ಆರೋಪಗಳ ಬಗ್ಗೆ ಆತ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ. ಆತನ ವಕೀಲರ ಬಗ್ಗೆ ನನಗೂ ಗೊತ್ತು. ಹಾಗಾಗಿ ಈ ಬಗ್ಗೆ ನನಗೆ ಗೊತ್ತಾಯಿತು. ಇನ್ನು ಕಮಲ್ ಹಾಸನ್ ಬಗ್ಗೆ ಆಕೆಯ ಆರೋಪ ಸತ್ಯಕ್ಕೆ ದೂರವಾದುದು ಎಂದು 'ಜಾಣ' ಚಿತ್ರನಟಿ ಹೇಳಿದ್ದಾರೆ.
ಕಮಲ್ ಹಾಸನ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಯಾಕಂದರೆ ಅವರೊಟ್ಟಿಗೆ ನಾನು ನಟಿಸಿದ್ದೀನಿ. ಇನ್ನು 6 ವರ್ಷ ಹುಡುಗನಾಗಿದ್ದ ಸಮಯದಿಂದ ಅವರು ಚಿತ್ರರಂಗದಲ್ಲಿದ್ದಾರೆ. ಇದನ್ನೆಲ್ಲಾ ಅವರು ಮಾಡುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ. ಒಂದು ವೇಳೆ ನಿಜವೇ ಆಗಿದ್ದರೆ ಅದು ಬಹಿರಂಗವಾಗಲು ಇಷ್ಟು ವರ್ಷಗಳು ಬೇಕಿತ್ತಾ? ಮೇಲಾಗಿ ಈಗ ಅವರು ರಾಜಕೀಯರಂಗದಲ್ಲಿದ್ದಾರೆ. ಶತ್ರುಗಳು ಹೆಚ್ಚು. ಹಾಗಾಗಿ ನಿಜವಾಗಿದ್ದರೆ ಈ ವಿಚಾರ ಯಾವಾಗಲೋ ಹೊರಬರುತ್ತಿತ್ತು ಎಂದು ಕಸ್ತೂರಿ ವಿವರಿಸಿದ್ದಾರೆ.
ನನಗೆ ಗೊತ್ತಿರುವಂತೆ ಗಾಯಕಿ ಸುಚಿತ್ರಾ ಅವರು ಮಾನಸಿಕವಾಗಿ ಬಹಳ ನೊಂದಿದ್ದಾರೆ. ಮಾನಸಿಕವಾಗಿ ಆಘಾತಕ್ಕೀಡಾಗಿ ಈ ರೀತಿ ಎಲ್ಲಾ ಆರೋಪ ಮಾಡುತ್ತಿದ್ದಾರೆ. ಮೊದಲಿಗೆ ಪತಿ ಜೊತೆಗಿದ್ದರು. ಈಗ ಆತ ಇಲ್ಲ. ಬಳಿಕ ಮತ್ತೊಬ್ಬರು ಜೊತೆಯಾಗಿದ್ದರು. ಈಗ ಆತನೂ ಇಲ್ಲ ಎನ್ನುವ ಕಾರಣಕ್ಕೆ ಆಕೆ ಮಾನಸಿಕವಾಗಿ ನೊಂದಿರುವ ಸಾಧ್ಯತೆಯಿದೆ ಎಂದಿದ್ದಾರೆ.


Click it and Unblock the Notifications










