"ತ್ರಿಶಾ ಯಾರಿಗೂ ಉತ್ತರಿಸುವ ಅಗತ್ಯವಿಲ್ಲ" ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್
ತಮಿಳುನಾಡಿನಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಬಗ್ಗೆ ಚರ್ಚೆಯಾಗುತ್ತಿದೆ. ವಿಜಯ್ ಪತ್ನಿ ಸಂಗೀತಾ ವಿಚ್ಚೇದನಕ್ಕೆ ಮುಂದಾದ ಮೇಲಂತೂ ಇವರಿಬ್ಬರನ್ನೂ ಗುರಿಯಾಗಿಟ್ಟುಕೊಂಡು ತಮಿಳುನಾಡಿನಲ್ಲಿ ಚರ್ಚೆ ಮಾಡಲಾಗುತ್ತಿದೆ. ಇವರು ಎಲ್ಲಿಗೆ ಹೋದರೂ ವಿಚ್ಚೇದನದ ವಿಷಯದ ಬಗ್ಗೆನೇ ಚರ್ಚೆಯಾಗುತ್ತಿದೆ. ತ್ರಿಶಾ ಎಲ್ಲಿಗೆ ಹೋದರೂ, ಇದೇ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳುವುದಕ್ಕೆ ಶುರು ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತ್ರಿಶಾ ಬಗ್ಗೆ ಸಿಕ್ಕಾಪಟ್ಟೆ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ವಿಜಯ್-ತ್ರಿಶಾ ವಿಷಯ ಸದ್ಯ ಮುಂಚೂಣಿಯಲ್ಲಿ ಇದೆ. ತಮಿಳುನಾಡು ಚುನಾವಣೆ ಅನೌನ್ಸ್ ಆದ ಬೆನ್ನಲ್ಲೇ ವಿಜಯ್ಗೆ ಇದೆಲ್ಲ ಬೇಡವಾಗಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ತ್ರಿಶಾರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ತಮಿಳುನಾಡು ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರ ಬೀಳಲಿದೆ. ವಿಶೇಷ ಅಂದರೆ, ಇದೇ ದಿನ ನಟಿ ತ್ರಿಶಾ ಕೃಷ್ಣನ್ ಅವರ ಹುಟ್ಟುಹಬ್ಬ ಕೂಡ ಇದೆ. ಈ ದಿನ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇದೇ ದಿನ ವಿಜಯ್ ರಾಜಕೀಯ ಭವಿಷ್ಯದ ಫಲಿತಾಂಶ ಕೂಡ ಹೊರಬೀಳಲಿದೆ.
ತಮಿಳುನಾಡಿ ಫಲಿತಾಂಶ ಹಾಗೂ ತ್ರಿಶಾ ಕೃಷ್ಣನ್ ಹುಟ್ಟುಹಬ್ಬ ಈ ಎರಡೂ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ತ್ರಿಶಾ ಬಗ್ಗೆ ಆಗುತ್ತಿರೋ ಚರ್ಚೆ, ಹರಡುತ್ತಿರೋ ವದಂತಿಗಳನ್ನು ಗಮನಿಸಿರೋ ನಟಿ ಖುಷ್ಬೂ ಸಂದರ್ಶನವೊಂದರಲ್ಲಿ ತ್ರಿಶಾ ಸಪೋರ್ಟ್ಗೆ ಬಂದಿದ್ದಾರೆ. ಬಹಿರಂಗವಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ನಟ ವಿಜಯ್ ಪತ್ನಿ ಸಂಗೀತಾ ಪತಿಯ ಅಕ್ರಮ ಸಂಬಂಧ ಆರೋಪಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ವಿಜಯ್ ಜೊತೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. ಇದರ ಜೊತೆಗೆ ಎಜಿಎಸ್ ನಿರ್ಮಾಪಕರ ಮದುವೆಯಲ್ಲಿ ವಿಜಯ್-ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದು ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತೆ ಆಗಿತ್ತು. ಇದು ಇನ್ನಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಇದೇ ವಿಷಯದ ಬಗ್ಗೆ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಅದಕ್ಕೆ ತ್ರಿಶಾ ಉತ್ತರ ಕೊಡದೆ ನಿರ್ಗಮಿಸಿದ್ದು ಇನ್ನಷ್ಟು ಚರ್ಚೆಯಾಗುತ್ತಿದೆ.

ಇಷ್ಟೆಲ್ಲ ನಡೆದಿರುವ ವೇಳೆನೇ ಆಂಗ್ಲ ಮಾಧ್ಯಮಕ್ಕೆ ಖುಷ್ಬೂ ಸಂದರ್ಶನ ನೀಡಿದ್ದರು. ಅದರಲ್ಲಿ ತ್ರಿಶಾಗೆ ಬೆಂಬಲ ಸೂಚಿಸಿದ್ದಾರೆ. "ಈ ಕಾಲದಲ್ಲಿ ಸಣ್ಣ ವಿಷಯಕ್ಕೂ ದೂಷಿಸುವವರು ಇದ್ದಾರೆ. ತ್ರಿಶಾ ನನಗೆ ತುಂಬಾನೇ ಆಪ್ತರು. ನಾನು ಭೇಟಿ ಮಾಡಿದವರಲ್ಲಿ ಅವರು ತುಂಬಾನೇ ಮೃದು ಸ್ವಭಾವದವರು. ಹಲವರು ಏನೇ ಮಾತಾಡಿದರೂ, ನಾನು ಅದಕ್ಕೆ ಯಾವುದೇ ಅಭಿಪ್ರಾಯ ನೀಡಲು ಇಚ್ಛೆ ಪಡುವುದಿಲ್ಲ" ಎಂದಿದ್ದಾರೆ.
ಹಾಗೇ "ದುರದೃಷ್ಟವಶಾತ್, ಮುಂಬೈನಿಂದ ಇಲ್ಲಿಗೂ ಅತಿಯಾದ ಟೀಕೆ ಮಾಡುವ ಸಂಸ್ಕೃತಿ ಬಂದು ಬಿಟ್ಟಿದೆ. ಇಂಟರ್ನೆಟ್ನಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವ 99.9% ಜನರು ತಮ್ಮ ಸ್ವಂತ ಜೀವನಕ್ಕಿಂತ ಇನ್ನೊಬ್ಬರ ಬದುಕಿನ ಬಗ್ಗೆ ಚರ್ಚೆ ಮಾಡುವುದಕ್ಕೆ ಇಷ್ಟ ಪಡುತ್ತಾರೆ. ಅಂತಹವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಅದಕ್ಕಾಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ," ಎಂದು ಖುಷ್ಬೂ ತ್ರಿಷಾಗೆ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications











