'ಪಲ್ಲವಿ ಅನು ಪಲ್ಲವಿ'ಗೆ ಕೋಕಿಲಾ ಮೋಹನ್ ಬದಲು ಅನಿಲ್ ಕಪೂರ್ ಬಂದಿದ್ದೇಕೆ? ಕೊನೆಯ ಕ್ಷಣದಲ್ಲಿ ಏನಾಯ್ತು?
'ಪಲ್ಲವಿ ಅನುಪಲ್ಲವಿ' ಕನ್ನಡ ಚಿತ್ರರಂಗ ನಿರ್ಮಾಣ ಮಾಡಿದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಿಡುಗಡೆ ವೇಳೆ ವಿಶೇಷ ಅನಿಸದೇ ಹೋದರೂ, ಇಂದಿಗೆ ಸ್ಪೆಷಲ್ ಎನಿಸಿಕೊಳ್ಳುತ್ತೆ. ಲೆಜೆಂಡರಿ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ ಮೊದಲ ಸಿನಿಮಾವಿದು. ಕನ್ನಡದಿಂದಲೇ ವೃತ್ತಿ ಬದುಕು ಆರಂಭಿಸಿದ್ದ ಮಣಿರತ್ನಂ ಇಂದು ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು.
ಈ ಸಿನಿಮಾ ಅನಿಲ್ ಕಪೂರ್ ನಟಿಸಿದ ಮೊದಲ ಕನ್ನಡ ಹಾಗೂ ಏಕೈಕ ಕನ್ನಡ ಸಿನಿಮಾ. ಈ ಲೋ ಬಜೆಟ್ ಸಿನಿಮಾಗಾಗಿ ಮಣಿರತ್ನಂ ಹಾಗೂ ಬಾಲು ಮಹೇಂದರ್ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದ ಸಿನಿಮಾವಿದು. 1983ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಕಥೆ ಆಗಿನ ಕಾಲಕ್ಕೆ ಫಾರ್ವರ್ಡ್ ಅಂತ ಅನಿಸಿತ್ತು.

ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವೊಂದು ಈಗ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಇನ್ನಿಬ್ಬರು ದಿಗ್ಗಜರು ನಟಿಸಬೇಕಿತ್ತು. ಜನಪ್ರಿಯ ನಟ ಕೋಕಿಲಾ ಮೋಹನ್ ಹಾಗೂ ಸುಹಾಸಿನಿಗೆ ಮೊದಲ ಅಪ್ರೋಚ್ ಮಾಡಲಾಗಿತ್ತು. ಆದರೆ, ಇಬ್ಬರೂ ಆ ಸಿನಿಮಾದಲ್ಲಿ ನಟಿಸುವುದಕ್ಕೆ ಆಗಲಿಲ್ಲ.
ಇತ್ತೀಚೆಗೆ ತಮಿಳಿನ ಸಿನೆಉಳಗಂ ಅನ್ನುವ ಯೂಟ್ಯೂಬ್ ಚಾನೆಲ್ಗೆ ಕೋಕಿಲಾ ಮೋಹನ್ ಸಂದರ್ಶನ ನೀಡಿದ್ದರು. ವಿಶೇಷ ಅಂದರೆ, ಈ ಸಂದರ್ಶನವನ್ನು ಮಾಡಿದ್ದು ದಿ ಗ್ರೇಟ್ ಸುಹಾಸಿನಿ. ಇದರಲ್ಲಿ ಕೋಕಿಲಾ ಮೋಹನ್ 'ಪಲ್ಲವಿ ಅನುಪಲ್ಲವಿ' ಸಿನಿಮಾ ಆಗುವುದಕ್ಕೆ ನಾನು ಒಬ್ಬ ಕಾರಣವೆಂದು ಹೇಳಿದ್ದಾರೆ. ಏನಿದು ಕಹಾನಿ? ತಿಳಿಯುವುದಕ್ಕೆ ಮುಂದೆ ಓದಿ.
ಅನಿಲ್ ಕಪೂರ್ ನಟಿಸಿದ್ದ ಪಾತ್ರದಲ್ಲಿ ಕೋಕಿಲಾ ಮೋಹನ್ ನಟಿಸಬೇಕಿತ್ತು. ಅಸಲಿಗೆ ಈ ಸಿನಿಮಾದ ನಿರ್ಮಾಪಕರನ್ನು ಭೇಟಿ ಮಾಡಿಸಿದ್ದೇ ಕೋಕಿಲಾ ಮೋಹನ್. ಆ ಮೇಲೆ ಏನಾಯ್ತು? ಅನ್ನೋದನ್ನು ವಿವರಿಸಿದ್ದಾರೆ.
ಮಣಿರತ್ನಂ ಮಾಡುವುದಾದರೆ ಓಕೆ
"ಮಣಿರತ್ನಂ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ ಬರೋಕೆ ನಾನು ಒಂದು ಮುಖ್ಯ ಕಾರಣ. ಆ ಚಿತ್ರದಲ್ಲಿ ನೀವು ನಟಿಸಬೇಕು ಎಂದು ನಾನು ಮಣಿರತ್ನಂಗೆ ರೆಕಮಂಡ್ ಮಾಡಿದ್ದೆ. ಆದರೆ ಏನು ಮಾಡುವುದು ನೀವು ಒಪ್ಪಲಿಲ್ಲ. ವೀನಸ್ ಪಿಕ್ಚರ್ ಗೋವಿಂದರಾಜನ್ ನನ್ನ ಕಾಲ್ಶೀಟ್ ಕೇಳುತ್ತಿದ್ದರು. ಆಗ ನಾನು ಮಣಿರತ್ನಂ ನಿರ್ದೇಶನ ಮಾಡುವುದಾದರೆ ಮಾಡ್ತೀನಿ ಎಂದೆ. ಅವರು ಒಪ್ಪಿದರು. ಆ ರೀತಿ ಆ ಸಿನಿಮಾ ಶುರುವಾಯಿತು." ಎಂದು ಕೋಕಿಲಾ ಮೋಹನ್ ಹೇಳಿಕೊಂಡಿದ್ದಾರೆ.

ಸುಹಾಸಿನಿ ನಟಿಸಲು ಒಪ್ಪಲಿಲ್ಲ
"ಆಗ ಛಾಯಾಗ್ರಾಹಕ ಬಾಲು ಮಹೇಂದ್ರ ಬಹಳ ಬ್ಯುಸಿ ಇದ್ದರು. ನಾನೇ ಅವರನ್ನು ಕನ್ವಿನ್ಸ್ ಮಾಡಿದೆ. ಬಳಿಕ ನಾನೇ ಮಣಿ ಸರ್ ಹಾಗೂ ಬಾಲು ಮಹೇಂದ್ರ ಅವರನ್ನು ಭೇಟಿ ಮಾಡಿಸಿ ಆ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಲು ಒಪ್ಪುವಂತೆ ಮಾಡಿದೆ. ಹಾಗಾಗಿ ಅವರು ಛಾಯಾಗ್ರಹಕರಾಗುವಂತಾಯಿತು. ನಾನು, ಲಕ್ಷ್ಮಿ ಅಮ್ಮ ಹಾಗೂ ಕಿರಣ್ ವೈರಾಳೆ ನಟಿಸಬೇಕಿತ್ತು. ಆ ಕಿರಣ್ ವೈರಾಳೆ ಮಾಡಬೇಕಿದ್ದ ಪಾತ್ರವನ್ನೇ ನೀನು ಮಾಡಿದರೆ ಚೆನ್ನಾಗಿರುತ್ತದೆ ಎಂದು ನಾನು ಹೇಳಿದ್ದೆ. ಆದರೆ ನೀವು ಮಾಡಲಿಲ್ಲ." ಎಂದಿದ್ದಾರೆ ಕೋಕಿಲಾ ಮೋಹನ್.
ಹಗಲು ರಾತ್ರಿ ಕೆಲಸ ಮಾಡುತ್ತಿದ್ದೆ
"ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಸಮಯದಲ್ಲಿ ಮಣಿರತ್ನಂ ನನ್ನ ಬಳೀ ಬಂದು ಲಕ್ಷ್ಮಿ ಅಮ್ಮ ಲಾಂಗ್ ಕಾಲ್ಶೀಟ್ ಕೊಡೋಕೆ ಸಿದ್ಧರಿದ್ದಾರೆ. ಅವ್ರು ಆಗ ಬಹಳ ಬ್ಯುಸಿ ಇದ್ದರು. ಆದರೂ ಕೊಡೊಕೆ ಸಿದ್ದರಿದ್ದಾರೆ. ಹಾಗಾಗಿ ನೀನು ಬಾ ಸಿನಿಮಾ ಮಾಡೋಣ ಎಂದರು. ಇಲ್ಲ ನಾನು ಬಹಳ ಬ್ಯುಸಿ. ಆಗ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೆ. ಪುರುಸೊತ್ತು ಇರಲಿಲ್ಲ. ನಾನು ಪರವಾಗಿಲ್ಲ, ನೀವು ಮಾಡಿ, ಈ ಅವಕಾಶ ನೀವು ಮಿಸ್ ಮಾಡಿಕೊಳ್ಳುವುದು ಬೇಡ. ಬಹಳ ಒಳ್ಳೆಯ ಸಿನಿಮಾ ಎಂದಿದ್ದೆ." ಎಂದು ಪಲ್ಲವಿ ಅನುಪಲ್ಲವಿ ಕೈ ಬಿಟ್ಟ ಸನ್ನಿವೇಶವನ್ನು ವಿವರಿಸಿದ್ದಾರೆ.
ಮಣಿರತ್ನಂ ನಿರ್ದೇಶಕರಾಗಲು ನಾನೂ ಒಬ್ಬ ಕಾರಣ
"ಇಳಯರಾಜಾ ಸರ್ ಅದಾಗಲೇ ಮ್ಯೂಸಿಕ್ ಮಾಡಿದ್ದರು. ನಾನು ಹಾಡು ಕೇಳಿದ್ದೆ. ಈಗ ನೀವು ಸಿನಿಮಾ ಮಾಡಿ, ಮುಂದೆ ಒಟ್ಟಿಗೆ ಸಿನಿಮಾ ಮಾಡೋಣ ಎಂದು ಹೇಳಿದೆ. ಹಾಗಾಗಿ ಮಣಿರತ್ನಂ ನಿರ್ದೇಶಕರಾಗಲು ನಾನು ಒಬ್ಬ ಕಾರಣ ಎಂದಷ್ಟೆ ಹೇಳುತ್ತೇನೆ." ಎಂದು ಕೋಕಿಲಾ ಮೋಹನ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











