ಇಳಯರಾಜ ಹಾಡುಗಳನ್ನು ಕದ್ದ ಆರೋಪ; ಅಜಿತ್ ಸಿನಿಮಾ ಪ್ರಸಾರ ಮಾಡದಂತೆ ತಡ ನೀಡಿದ ಹೈಕೋರ್ಟ್
ತಮಿಳುನಾಡಿನ ಮ್ಯೂಸಿಕ್ ಮಾಂತ್ರಿಕ ಇಳಯರಾಜ ಮತ್ತೊಂದು ಸಿನಿಮಾ ತಂಡದ ವಿರುದ್ಧ ದೂರನ್ನು ದಾಖಲಿಸಿದ್ದರು. ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾತಂಡ ಅವರ ಅನುಮತಿಯನ್ನು ಪಡೆಯದೇ ಮೂರು ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದರು. ಈಗ ಈ ಕೇಸ್ಗೆ ಸಂಬಂಧಿಸಿದಂತೆ ಮದ್ರಾಸ್ ಹೈ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಇಳಯರಾಜಾ ಅವರ ಹಾಡುಗಳನ್ನು ಅವರ ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಅಜಿತ್ ಕುಮಾರ್ ಅಭಿನಯದ'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗೆ ಮದ್ರಾಸ್ ಹೈಕೋರ್ಟ್ ನಿರ್ಬಂಧ ಹೇರಿದೆ. ಮುಂದೇಶ ಆದೇಶ ಬರುವವರೆಗೂ ಈ ಸಿನಿಮಾದ ಹಾಡುಗಳನ್ನು ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ನ ನ್ಯಾಯಾಧೀಶರು ಹೇಳಿದ್ದು, ಸಿನಿಮಾ ತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಅಜಿತ್ ಕುಮಾರ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗೆ ಆದಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್ ಕುಮಾರ್ ಟ್ಯೂನ್ ಹಾಕಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಅಜಿತ್ ಸಿನಿಮಾ 'ವಿಡಾಮುಯಾರ್ಚಿ' ಸಿನಿಮಾದಿಂದ 'ಗುಡ್ ಬ್ಯಾಕ್ ಅಗ್ಲಿ' ಸಂಪೂರ್ಣವಾಗಿ ಭಿನ್ನವಾಗಿತ್ತು. ಈ ಸಿನಿಮಾ ಅಭಿಮಾನಿಗಳಲ್ಲಿ ಸಾಧಾರಾಣ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಿದ್ದರೂ ಅಜಿತ್ 64ನೇ ಸಿನಿಮಾವನ್ನು ಆದಿಕ್ ರವಿಚಂದ್ರನ್ ಅವರೇ ನಿರ್ದೇಶಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ.
'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ "ಎನ್ ಜೋಡಿ ಮಂಜಕ್ಕುರುವಿ", "ಇಲಮೈ ಇದೋ ಇದೋ" ಮತ್ತು "ಒತ್ತಾ ರೂಪಾಯುಂ ತಾರೆನ್" ಮೂರು ಹಾಡುಗಳು ಇವೆ. ಈ ಹಾಡುಗಳಲ್ಲಿ ಇಳಯರಾಜ ಟ್ಯೂನ್ಗಳನ್ನು ಬಳಸಿಕೊಳ್ಳಲಾಗಿದ್ದು, ಮ್ಯೂಸಿಕ್ ಮಾಂತ್ರಿಕ ಇಳಯರಾಜಾ ಅವರ ಅನುಮತಿ ಪಡೆಯದೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ನಲ್ಲಿ 'ಗುಡ್ ಬ್ಯಾಕ್ ಅಗ್ಲಿ' ವಿರುದ್ಧ ದೂರನ್ನು ದಾಖಲಿಸಲಾಗಿತ್ತು.

ಈ ದೂರಿನ ವಿಚಾರಣೆ ನಡೆಯುತ್ತಿರುವಾಗಲೇ, ಮದ್ರಾಸ್ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಇದರ ಪ್ರಕಾರ, ಇಳಯರಾಜಾ ಅವರ ಹಾಡುಗಳನ್ನು ಸಿನಿಮಾಗಳಲ್ಲಿ ಬಳಸುವಂತಿಲ್ಲ. ಸದ್ಯಕ್ಕೆ 'ಗುಡ್ ಬ್ಯಾಕ್ ಅಗ್ಲಿ' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ವಿಚಾರಣೆ ಮುಗಿಯುವವರೆಗೂ ಈ ಹಾಡುಗಳನ್ನು ಸಿನಿಮಾಗಳಲ್ಲಿ ಬಳಸುವಂತಿಲ್ಲ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ, ಅದನ್ನು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಅದೇಶದಲ್ಲಿ ಹೇಳಲಾಗಿದೆ.
ಇಳಯರಾಜಾ ಅವರು ಅನುಮತಿ ಪಡೆದು ಅವರು ಕಂಪೋಸ್ ಮಾಡಿದ ಹಾಡುಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಹಿಂದೆ ಇಳಯರಾಜ ಕೆಲವು ಸಿನಿಮಾಗಳಿಗೆ ಅನುಮತಿ ನೀಡಿದ್ದರೆಂದು ಹೇಳಲಾಗಿದೆ. ಅಂತಹ ಸಂದರ್ಭಗಳಲ್ಲಿ ಅವರು ಯಾವುದೇ ರಾಯಲ್ಟಿ ಶುಲ್ಕವನ್ನು ಪಡೆಯುವುದಿಲ್ಲ ಎಂದೂ ಹೇಳಲಾಗುತ್ತೆ. ಉದಾಹರಣೆಗೆ, 'ಲಬ್ಬರ್ ಪಂದೂ' ಚಿತ್ರದಲ್ಲಿ 'ನೀ ಪೊಟ್ಟು ವೆಚ್ಚ ತಂಗಕುಡಂ', 'ಮೆಯ್ಯಳಗನ್' ಚಿತ್ರದಲ್ಲಿ 'ಕೋಡೈ ಕಾಲ ಕಾತ್ರೆ' ಮತ್ತು 'ಇಂದ ಮಾನ್ ಉಂದನ್ ಸೊಂತ ಮಾನ್' ಹಾಡುಗಳನ್ನು ಬಳಸಲಾಗಿತ್ತು. ಇತ್ತೀಚೆಗೆ ರವಿ ಮೋಹನ್ ಅವರ 'ಪ್ರೋ ಕೋಡ್' ಪ್ರೋಮೋದಲ್ಲಿ 'ಕಲ್ಯಾಣ ಮಾಲೈ' ಹಾಡನ್ನು ಬಳಸಲಾಗಿದೆ. ಈ ಸಿನಿಮಾ ತಂಡಗಳ ವಿರುದ್ಧ ಇಳಯರಾಜಾ ಅವರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.


Click it and Unblock the Notifications











