ದೇವಸ್ಥಾನದೊಳಗೆ ಮತ್ತೆ ಚಪ್ಪಲಿ ಧರಿಸಿದ ನಯನತಾರಾ; ವಿವಾದ ಮೇಲೆ ವಿವಾದ ಯಾಕೆ ಹೀಗೆ?
ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ನಯನತಾರಾ. ಮದುವೆ ಬಳಿಕವೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಟಿಯೀಕೆ. ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಜೊತೆನೂ ನಯನತಾರಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾಲಿವುಡ್ ಸಿನಿಮಾವೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ನಯನತಾರಾ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿರೋ ಅಭಿಮಾನಿಗಳು ಕಮ್ಮಿಯೇನು ಇಲ್ಲ. ನಯನತಾರಾವನ್ನು ಆರಾಧಿಸುವ ಫ್ಯಾನ್ಸ್ ವಿಶ್ವದ ಮೂಲೆ ಮೂಲೆಯಲ್ಲೂ ಇದ್ದಾರೆ. ಆದರೆ, ಇತ್ತೀಚೆಗ್ಯಾಕೋ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ನಯನತಾರಾ ಸುದ್ದಿಯಲ್ಲಿ ಇದ್ದಾರೆ. ಒಂದರ ಹಿಂದೊಂದು ವಿವಾದಗಳಲ್ಲಿ ನಯನತಾರಾ ಸಿಲುಕುತ್ತಿದ್ದಾರೆ.

ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ನಯನತಾರಾ 'ಟೆಸ್ಟ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದರು. ನಯನತಾರಾ ಜೊತೆ ಮಾಧವನ್ ಹಾಗೂ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಕಾಂಚಿಪುರಂ ದೇವಸ್ಥಾನದಲ್ಲಿ ಶೂಟಿಂಗ್ ನಡೆತಿತ್ತು. ನಿನ್ನೆಯಷ್ಟೇ (ಜನವರಿ 8) ಈ ಸಿನಿಮಾದ ಶೂಟಿಂಗ್ ಮುಗಿದಿದೆ. ಈ ವೇಳೆ ನಯನತಾರಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
'ಟೆಸ್ಟ್' ಸಿನಿಮಾ ಶೂಟಿಂಗ್ ವೇಳೆ ನಯನತಾರಾ ಜೊತೆ ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಈ ವೇಳೆ ನಯನತಾರಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಹೀಗಾಗಿ ನಯನತಾರಾರನ್ನು ಪೊಲೀಸರು ರಕ್ಷಣೆ ನೀಡಿ ಕ್ಯಾರಾವ್ಯಾನ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ನಯನತಾರಾ ಚಪ್ಪಲಿ ಧರಿಸಿ, ದೇವಸ್ಥಾನದಲ್ಲಿರುವುದು ಸೆರೆಯಾಗಿದೆ.
ನಯನತಾರಾ ದೇವಸ್ಥಾನದೊಳಗೆ ಚಪ್ಪಲಿ ಧರಿಸಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ಪದೇ ಪದೆ ಇಂತಹ ತಪ್ಪು ಮಾಡುತ್ತಿರೋದು ಯಾಕೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ನಯನತಾರಾ ನಡೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಯಾಕಂದ್ರೆ, ಈ ಹಿಂದೆ ವಿವಾಹದ ಬಳಿಕ ಪತಿ ವಿಘ್ನೇಶ್ ಜೊತೆ ತಿರುಪತಿಗೆ ತೆರಳಿದ್ದ ವೇಳೆನೂ ನಯನತಾರಾ ಚಪ್ಪಲಿ ಧರಿಸಿ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದರು.
ಆ ಸಂದರ್ಭದಲ್ಲಿಯೂ ಕೂಡ ನಯನತಾರಾ ವಿವಾದಕ್ಕೆ ಸಿಲುಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಯನತಾರಾ ಕ್ಷಮೆಯನ್ನೂ ಕೇಳಿದ್ದರು. ಈಗ ಮತ್ತೆ 'ಟೆಸ್ಟ್' ಶೂಟಿಂಗ್ ವೇಳೆ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ, ಮತ್ತೆ ಅದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂದು ವಿರೋಧಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ನಯನತಾರಾ ನಟಿಸಿದ 'ಅನ್ನಪೂರಣಿ' ಸಿನಿಮಾ ಕೂಡ ವಿವಾದಕ್ಕೆ ಸಿಲುಕಿತ್ತು. ಈ ಸಂಬಂಧ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಓಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಈ ಸಿನಿಮಾ ಧಕ್ಕೆಯನ್ನು ಉಂಟು ಮಾಡಿದೆ ಎಂದು ಶಿವಸೇನೆ ಮುಖಂಡ ರಮೇಶ್ ಸೋಲಾಂಕಿ ಟೀಕಿಸಿದ್ದಾರೆ.
ರಮೇಶ್ ಸೋಲಾಂಕಿ 'ಅನ್ನಪೂರಣಿ' ಸಿನಿಮಾದಲ್ಲಿರುವ ಹಿಂದೂ ವಿರೋಧಿ ದೃಶ್ಯಗಳ ಪಟ್ಟಿ ಮಾಡಿ ಟ್ವೀಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "1. ಹಿಂದೂ ಅರ್ಚಕನ ಮಗಳು ಬಿರಿಯಾನಿ ಅಡುಗೆ ಮಾಡುವ ಮುನ್ನ ನಮಾಜ್ ಮಾಡುತ್ತಾಳೆ. 2. ಈ ಸಿನಿಮಾದಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡಲಾಗಿದೆ. 3. ಫರ್ಹಾನ್ ಎನ್ನುವ ಪಾತ್ರ ಭಗವಾನ್ ಶ್ರೀರಾಮ ಕೂಡ ಮಾಂಸ ತಿನ್ನುತ್ತಿದ್ದರು ಎಂದು ಹೇಳುವ ದೃಶ್ಯವಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ವೇಳೆ ಉದ್ದೇಶ ಪೂರ್ವಕವಾಗಿಯೇ ನೆಟ್ಫ್ಲಿಕ್ಸ್ ಇಂಡಿಯಾ ಮತ್ತು ಝೀ ಸ್ಟುಡಿಯೋಸ್ ಈ ಸಿನಿಮಾ ರಿಲೀಸ್ ಮಾಡಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದರು.


Click it and Unblock the Notifications











